ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿ ಅವೈಜ್ಞಾನಿಕವಾಗಿದೆ. ಹೆದ್ದಾರಿಗೆ ಅಗತ್ಯವಾದ ಯಾವುದೇ ಸೌಲಭ್ಯ ಕಲ್ಪಿಸದೇ ನಿರ್ಲಕ್ಷ್ಯ ಮಾಡಲಾಗಿದೆ. ಹೆದ್ದಾರಿ ಕಾಮಗಾರಿ ತನಿಖೆ ಕುರಿತು ಅಧಿಕಾರಿಗಳ ಜತೆಗೆ ಚರ್ಚೆ ನಡೆಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್‌.ಚಲುವರಾಯಸ್ವಾಮಿ ಹೇಳಿದರು.

ಮಂಡ್ಯ (ಜೂ.11): ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿ ಅವೈಜ್ಞಾನಿಕವಾಗಿದೆ. ಹೆದ್ದಾರಿಗೆ ಅಗತ್ಯವಾದ ಯಾವುದೇ ಸೌಲಭ್ಯ ಕಲ್ಪಿಸದೇ ನಿರ್ಲಕ್ಷ್ಯ ಮಾಡಲಾಗಿದೆ. ಹೆದ್ದಾರಿ ಕಾಮಗಾರಿ ತನಿಖೆ ಕುರಿತು ಅಧಿಕಾರಿಗಳ ಜತೆಗೆ ಚರ್ಚೆ ನಡೆಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್‌.ಚಲುವರಾಯಸ್ವಾಮಿ ಹೇಳಿದರು. ಶನಿವಾರ ಮಾಧ್ಯಮ ಸಂವಾದದಲ್ಲಿ ಮಾತನಾಡಿದ ಅವರು, ದೇಶದ ಹಲವು ರಾಷ್ಟ್ರೀಯ ಹೆದ್ದಾರಿಗಳು ಗುಣಮಟ್ಟದಿಂದ ಕೂಡಿವೆ. ಆದರೆ ಬೆಂಗಳೂರು- ಮೈಸೂರು ರಾಷ್ಟ್ರೀಯ ಹೆದ್ದಾರಿ ಕಳಪೆ ಗುಣಮಟ್ಟದಲ್ಲಿದೆ. ಈ ರಸ್ತೆಯಲ್ಲಿ ವೇಗವಾಗಿ ಸಂಚರಿಸುವುದೇ ದುಸ್ತರವಾಗಿದೆ ಎಂದರು.

Add Asianetnews Kannada as a Preferred SourcegooglePreferred

ಹೆದ್ದಾರಿಯಲ್ಲಿ ಎಷ್ಟುಕಿ.ಮೀ. ವೇಗದಲ್ಲಿ ಸಾಗಬೇಕು ಸೇರಿದಂತೆ ಯಾವ ಮಾರ್ಗಸೂಚಿಗಳನ್ನೂ ಅಳವಡಿಸಿಲ್ಲ, ಎಕ್ಸ್‌ಪ್ರೆಸ್‌ ಕಾರಿಡಾರ್‌ ಎನ್ನುವ ಹೆಸರಿಗೆ ಈ ರಸ್ತೆ ಕಳಂಕಪ್ರಾಯ. ಹೆದ್ದಾರಿ ನಡುವೆ ಎಲ್ಲೂ ಶೌಚಾಲಯಗಳನ್ನು ನಿರ್ಮಿಸಿಲ್ಲ. ಆಂಬ್ಯುಲೆನ್ಸ್‌ ಸೌಲಭ್ಯ ಕಲ್ಪಿಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಭೂಸ್ವಾಧೀನ ಪ್ರಕ್ರಿಯೆಯಲ್ಲಿ ಸಾಕಷ್ಟುಅವ್ಯವಹಾರಗಳ ಬಗ್ಗೆ ದೂರುಗಳು ಬಂದಿವೆ. ನಿತ್ಯ ಒಂದಲ್ಲ ಒಂದು ದೂರು ಬರುತ್ತಲೇ ಇದೆ. ಕೆಳ ಸೇತುವೆಗಳೂ ಸಹ ಸಮಸ್ಯೆಗಳಿಂದ ಕೂಡಿವೆ. ಹೆದ್ದಾರಿಯಲ್ಲಿ ಓಡಾಡುವುದು ಎಷ್ಟುಆತಂಕಕಾರಿಯೋ ಅಷ್ಟೇ ಪ್ರಮಾಣದಲ್ಲಿ ಕೆಳ ಸೇತುವೆ ಮತ್ತು ಸವೀರ್‍ಸ್‌ ರಸ್ತೆಗಳಲ್ಲೂ ಕಂಡುಬರುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಜೀವಜಲವೇ ವಿಷವಾಗುತ್ತಿರೋದು ಏಕೆ?: ಕಲ್ಯಾಣ ಕರ್ನಾಟಕದ ಜಿಲ್ಲೆಗಳಲ್ಲೇ ಈ ಸಮಸ್ಯೆ ಹೆಚ್ಚು

ಹೆದ್ದಾರಿ ಕಾಮಗಾರಿ ಪೂರ್ಣವಾಗದಿದ್ದರೂ ಸಹ ಕೇವಲ ರಾಜಕೀಯಕ್ಕಾಗಿ ಲೋಕಾರ್ಪಣೆ ಮಾಡಲಾಯಿತು. ಸಂಸದ ಡಿ.ಕೆ.ಸುರೇಶ್‌ ಪ್ರಾರಂಭದಲ್ಲೇ ಇದನ್ನು ವಿರೋಧಿಸಿದರು. ಆದರೂ ಆಳುವ ಸರ್ಕಾರ ರಸ್ತೆ ಲೋಕಾರ್ಪಣೆ ಮಾಡಿತು. ಹೆದ್ದಾರಿ ವಿರುದ್ಧ ತನಿಖೆ ನಡೆಸಿ ತಪ್ಪಿತಸ್ಥರು ಯಾರೇ ಆಗಿದ್ದರೂ ಅವರ ವಿರುದ್ಧ ಕ್ರಮವಾಗಬೇಕು. ಅದಕ್ಕೆ ತಗುಲಿರುವ ಹಣವನ್ನು ಅವರಿಂದಲೇ ಕಟ್ಟಿಸುವಂತಹ ಪ್ರಕ್ರಿಯೆ ಆಗಬೇಕು ಎಂದು ಹೇಳಿದರು. ತನಿಖೆ ಕುರಿತಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳೊಂದಿಗೆ ಸಭೆ ನಡೆಸಲಾಗುವುದು. ಯಾವ ರೀತಿ ತನಿಖೆ ಆಗಬೇಕು ಎಂಬುದರ ಬಗ್ಗೆ ವರದಿ ಪಡೆದು ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

3 ವರ್ಷಗಳಿಂದ ಜಿಲ್ಲೆಯ ರಸ್ತೆಗಳು ಅಭಿವೃದ್ಧಿ ಕಂಡಿಲ್ಲ: ಕಳೆದ 3 ವರ್ಷಗಳಿಂದ ಜಿಲ್ಲಾದ್ಯಂತ ಯಾವುದೇ ರಸ್ತೆಗಳು ಅಭಿವೃದ್ಧಿ ಕಂಡಿಲ್ಲ. ಜಿಲ್ಲೆಯ ಜನ 7 ಮಂದಿ ಜೆಡಿಎಸ್‌ ಶಾಸಕರನ್ನು ಆಯ್ಕೆ ಮಾಡಿದ ಫಲವನ್ನು ಅನುಭವಿಸಿದ್ದಾರೆ ಎಂದು ಮಾಜಿ ಶಾಸಕರ ವಿರುದ್ಧ ಜಿಲ್ಲಾ ಉಸ್ತುವಾರಿ ಸಚಿವ ಎನ್‌.ಚಲುವರಾಯಸ್ವಾಮಿ ಕಿಡಿಕಾರಿದರು. ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಅಧಿಕಾರಿಗಳ ಸಭೆ ನಂತರ ಮಾತನಾಡಿ, ಜಿಲ್ಲೆಯಲ್ಲಿ ಮುಂಗಾರು ಆರಂಭವಾಗಿದೆ. ಮಳೆಗೆ ರಸ್ತೆಗಳು ಹಾಳಾಗುವ ಸಾಧ್ಯತೆ ಇದ್ದು, ಅವುಗಳನ್ನು ಕಾಲಕಾಲಕ್ಕೆ ದುರಸ್ತಿ ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದರು. ಮಳೆ ಸಮರ್ಪಕವಾಗಿ ಆಗದಿದ್ದರೆ ಈಗಾಗಲೇ ನೀರಾವರಿ ಇಲಾಖೆ ಅಧಿಕಾರಿಗಳಿಗೆ ನೀರು ಹರಿಸುವಂತೆ ಸೂಚಿಸಿದ್ದೇನೆ. ರೈತರಿಗೆ ಯಾವುದೇ ತೊಂದರೆ ಆಗದಂತೆ ನೀರನ್ನು ಹರಿಸುವಂತೆ ತಿಳಿಸಲಾಗಿದೆ. 

ಎಚ್‌ಡಿಕೆಗೆ ಯಾವ ಹುದ್ದೆಗೆ ಎಷ್ಟು ರೇಟ್‌ ಅಂತ ಗೊತ್ತಿದೆ: ಸಚಿವ ಚಲುವರಾಯಸ್ವಾಮಿ

ರಾಜ್ಯಾದ್ಯಂತ ಗುಣಮಟ್ಟದ ಬಿತ್ತನೆ ಬೀಜಗಳನ್ನ ನೀಡುವಂತೆ ಸೂಚಿಸಿ ಅನುಷ್ಠಾನ ಮಾಡಲಾಗಿದೆ ಎಂದರು. ಮದ್ದೂರಿನಲ್ಲಿ ಚೆಸ್ಕಾಂನ ಉಪ ಕಚೇರಿ ಮಾಡಲು ಸ್ಥಳ ಒದಗಿಸಿ ಕೊಡದೆ ಮೀನಮೇಷ ಎಣಿಸಿದ್ದಾರೆ ಎಂದು ಹೆಸರನ್ನು ಹೇಳದೆ ಮಾಜಿ ಸಚಿವ ಡಿಸಿ ತಮ್ಮಣ್ಣ ವಿರುದ್ಧ ಕಿಡಿಕಾರಿದರು. ಬಜೆಟ್‌ನಲ್ಲಿ ಅದನ್ನು ಸೇರಿಸಿ ಅನುಷ್ಠಾನ ಮಾಡುವ ಬಗ್ಗೆ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಲಾಗುವುದು ಎಂದರು. ಟೀ ಅಂಗಡಿ ಹಾಗೂ ಪೆಟ್ಟಿಅಂಗಡಿಗಳಲ್ಲಿ ಪರವನಾಗಿ ಪಡೆಯದೆ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದಾರೆ ಎಂಬುದು ನನ್ನ ಗಮನಕ್ಕೆ ಬಂದಿದ್ದು, ಈಗಾಗಲೇ ಅಧಿಕಾರಿಗಳಿಗೆ ಅವುಗಳನ್ನು ಪತ್ತೆ ಹಚ್ಚಿ ದೂರು ಪ್ರಕರಣದ ಕಲಿಸಿ ಅಕ್ರಮ ಮದ್ಯ ಮಾರಾಟವನ್ನು ತಡೆಗಟ್ಟುವಂತೆ ಸೂಚಿಸಲಾಗಿದೆ ಎಂದರು.