ಬೆಂಗಳೂರಿನ ಮೆಜೆಸ್ಟಿಕ್ ಬಳಿ ಮಾಜಿ ಸಿಎಂ ದಿ.ಗುಂಡೂರಾವ್ ಅವರ ಪ್ರತಿಮೆಯನ್ನು ಕುಡಿದ ಮತ್ತಿನಲ್ಲಿ ಪಿಕಾಸಿಯಿಂದ ಧ್ವಂಸಕ್ಕೆ ಯತ್ನಿಸಿದ ವ್ಯಕ್ತಿಯನ್ನು ಬಂಧಿಸಲಾಗಿದೆ. ಪೊಲೀಸ್ ಸಿಬ್ಬಂದಿ ಮೇಲೂ ಹಲ್ಲೆ ನಡೆಸಿದ್ದು, ಸಾರ್ವಜನಿಕರ ಸಹಾಯದಿಂದ ಆರೋಪಿಯನ್ನ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

-ಬೆಂಗಳೂರು (ಏ.16): ಮೆಜೆಸ್ಟಿಕ್ ಸಮೀಪದ ಶಾಂತಲಾ ಸರ್ಕಲ್‌ ಬಳಿಯಿರುವ ಮಾಜಿ ಸಿಎಂ ದಿ.ಗುಂಡೂರಾವ್ ಅವರ ಪ್ರತಿಮೆಯನ್ನು ಕುಡಿದ ಮತ್ತಿನಲ್ಲಿ ಧ್ವಂಸಗೊಳಿಸಲು ಮುಂದಾಗಿದ್ದ ವ್ಯಕ್ತಿಯನ್ನು ಬಂಧಿಸಿದ ಕಾಟನ್‌ಪೇಟೆ ಪೊಲೀಸರು ಆತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಬಳ್ಳಾರಿ ಜಿಲ್ಲೆಯ ವೀರಭದ್ರಪ್ಪ (35) ಬಂಧಿತ. ಆರೋಪಿ ಏ.13 ರಂದು ಬೆಳಗ್ಗೆ 11.30ರ ಸುಮಾರಿಗೆ ದಿ.ಗುಂಡೂರಾವ್ ಅವರ ಪ್ರತಿಮೆ ಇರುವ ಜಾಗದ ಮೇಲೆ ಹತ್ತಿ ಪಿಕಾಸಿಯಿಂದ ಧ್ವಂಸಗೊಳಿಸಲು ಮುಂದಾಗಿದ್ದ. ಸ್ಥಳೀಯ ಸಾರ್ವಜನಿಕರು, ಕರ್ತವ್ಯದಲ್ಲಿದ್ದ ಹೊಯ್ಸಳ ಪೊಲೀಸ್ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ.

ಸ್ಥಳಕ್ಕೆ ಪೊಲೀಸರು ಆಗಮಿಸಿದ್ದರೂ ವ್ಯಕ್ತಿಯು ಹುಚ್ಚಾಟ ಮುಂದುವರಿಸಿದ್ದ. ಕಾಟನ್‌ಪೇಟೆ ಎಎಸ್‌ಐ, ಆ ವ್ಯಕ್ತಿಗೆ ಕೆಳಗೆ ಇಳಿಯುವಂತೆ ಸೂಚಿಸಿದರು. ಆದರೆ, ಅವರ ಮೇಲೆ ಪಿಕಾಸಿಯಿಂದ ಹಲ್ಲೆಗೆ ಯತ್ನಿಸಿದ್ದ. ಈ ವೇಳೆ ಎಎಸ್‌ಐ ಕೈಗೆ ಗಾಯವಾಗಿದೆ. ಅಲ್ಲದೆ, ಸಾರ್ವಜನಿಕರು ಮತ್ತು ಪೊಲೀಸ್ ಸಿಬ್ಬಂದಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದ. ಪ್ರತಿಮೆ ಧ್ವಂಸ ಮಾಡುತ್ತೇನೆ ಎಂದು ಪಟ್ಟು ಹಿಡಿದಿದ್ದ. ನಂತರ ಸ್ಥಳೀಯರು ಕಟ್ಟಿಗೆ, ಹಗ್ಗದ ಸಹಾಯದಿಂದ ಆರೋಪಿಯನ್ನು ಹಿಡಿದಿದ್ದು, ಬಳಿಕ ಪೊಲೀಸರು ಠಾಣೆಗೆ ಕರೆದೊಯ್ದರು.

ಪಿಕಾಸಿಯಿಂದ ನಡೆಸಿದ ಹಲ್ಲೆಯಿಂದ ಗಾಯಗೊಂಡಿದ್ದ ಎಸ್‌ಎಸ್‌ಐ ವೆಂಕಟಸ್ವಾಮಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಪಡೆದಿದ್ದಾರೆ. ಬಳಿಕ ಆರೋಪಿ ವಿರುದ್ಧ ಪೊಲೀಸರ ಕರ್ತವ್ಯಕ್ಕೆ ಅಡ್ಡಿ ಹಾಗೂ ಮಾಜಿ ಸಿಎಂ ದಿ.ಗುಂಡೂರಾವ್ ಪ್ರತಿಮೆಗೆ ಹಾನಿಯುಂಟು ಮಾಡಲು ಯತ್ನಿಸಿದ ಆರೋಪದ ಮೇಲೆ ದೂರು ನೀಡಿದ್ದಾರೆ. ದೂರಿನ್ವಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.