Asianet Suvarna News Asianet Suvarna News

Metro: ಕನ್ನಡಿಗರ ವಿರೋಧ ನಡುವೆಯೂ ಹೊಸೂರಿಗೆ ಮೆಟ್ರೋ ವಿಸ್ತರಣೆ: ಚನ್ನೈ ಮೆಟ್ರೋದಿಂದ ವರದಿ ತಯಾರಿ

ಕನ್ನಡಿಗರ ವಿರೋಧದ ನಡುವೆಯೂ ಬಿಎಂಆರ್‌ಸಿಎಲ್‌ ಮೆಟ್ರೋ ರೈಲನ್ನು ಹೊಸೂರುವರೆಗೆ ವಿಸ್ತರಣೆ ಮಾಡುವಂತೆ ಸಂಸದ ಚಲ್ಲಕುಮಾರ್ ಸಂಸತ್‌ನಲ್ಲಿ ಮನವಿ ಮಾಡಿದ್ದರು. ಈಗ ಚನ್ನೈ ಮೆಟ್ರೋ ಸಂಸ್ಥೆ ಕಾರ್ಯಸಾಧ್ಯತೆ ಅಧ್ಯಯನ ವರದಿ ಸಿದ್ಧಪಡಿಸಲು ಮುಂದಾಗಿದೆ. 

Attempt by Chennai Metro to connect Bengaluru Hosur Metro Kannadigas oppose sat
Author
First Published Feb 21, 2023, 7:18 PM IST | Last Updated Feb 21, 2023, 7:19 PM IST

ಬೆಂಗಳೂರು (ಫೆ.21): ಈಗಾಗಲೇ ತಮಿಳುನಾಡಿನ ಸಂಸದ ಚೆಲ್ಲಕುಮಾರ್ ಬೆಂಗಳೂರು ನಗರದಲ್ಲಿ ಸಂಚಾರ ಮಾಡುವ ಬಿಎಂಆರ್‌ಸಿಎಲ್‌ ಮೆಟ್ರೋ ರೈಲನ್ನು ಹೊಸೂರುವರೆಗೆ ವಿಸ್ತರಣೆ ಮಾಡುವಂತೆ ಸಂಸತ್‌ನಲ್ಲಿ ಮನವಿ ಮಾಡಿದ್ದರು. ಇದರ ಬೆನ್ನಲ್ಲೇ ನೀಲನಕ್ಷೆ ರಚಿಸಿ ಕಾರ್ಯಸಾಧ್ಯತೆಯ ಬಗ್ಗೆ ಅಧ್ಯಯನ ವರದಿ ಸಿದ್ಧಪಡಿಸಲು ಅನುಮತಿ ಕೇಳಿದ್ದರು. ಆದರೆ, ಇದಕ್ಕೆ ಕನ್ನಡಿಗರಿಂದ ಭಾರಿ ವಿರೋಧ ವ್ಯಕ್ತವಾಗಿತ್ತು.

ಆದರೆ, ಈಗ ಪುನಃ ಹೊಸೂರು ಮತ್ತು ಬೆಂಗಳೂರು ನಡುವೆ ಮೆಟ್ರೋ ಸಂಪರ್ಕ ಕಲ್ಪಿಸುವಲ್ಲಿ ಮತ್ತೊಂದು ಹೆಜ್ಜೆ ಮುಂದಿಟ್ಟಿರುವ ಚೆನ್ನೈ ಮೆಟ್ರೋ ರೈಲು ನಿಗಮವು (ಸಿಎಂಆರ್‌ಎಲ್‌) ಬೊಮ್ಮಸಂದ್ರದಿಂದ ರೈಲು ಸಂಪರ್ಕ ನಿರ್ಮಾಣಕ್ಕೆ ಕಾರ್ಯಸಾಧ್ಯತೆ ಅಧ್ಯಯನ ನಡೆಸಲು ಅನುಮತಿ ಕೋರಿ ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯಕ್ಕೆ ಪತ್ರ ಬರೆದಿದೆ. ಸಚಿವಾಲಯ ಪ್ರಸ್ತಾವನೆಯನ್ನು ಅನುಮೋದಿಸಿದ ನಂತರ ಸಿಎಂಆರ್‌ಎಲ್‌, ಹೊಸೂರಿನಿಂದ ಕರ್ನಾಟಕದ ಬೊಮ್ಮಸಂದ್ರದವರೆಗಿನ 20.5 ಕಿ.ಮೀ. ಉದ್ದದ ಮೆಟ್ರೋ ರೈಲು ಸಂಪರ್ಕದ ನಿರ್ಮಾಣದ ಅಧ್ಯಯನ ನಡೆಸಲು ಟೆಂಡರ್‌ ಕರೆಯಲಿದೆ. 

Bengaluru: ಮೈಸೂರು ರಸ್ತೆಯ ಮೆಟ್ರೋ ಟ್ರ್ಯಾಕ್‌ನಲ್ಲಿ ಬಿರುಕು: ತಪ್ಪಿದ ಭಾರೀ ಅನಾಹುತ

ತಮಿಳುನಾಡಿನಿಂದ ಸಿಎಂಆರ್‌ಎಲ್‌ 75 ಲಕ್ಷ ರೂ. ವೆಚ್ಚ ಪಾವತಿ: ಈ ಕುರಿತು ತಮಿಳುನಾಡು ಸರ್ಕಾರ ಸಿಎಂಆರ್‌ಎಲ್‌ಗೆ 75 ಲಕ್ಷ ರೂ. ಮಂಜೂರು ಮಾಡಿ ಕಾರ್ಯ ಸಾಧ್ಯತೆ ಅಧ್ಯಯನ ನಡೆಸುವಂತೆ ಸೂಚಿಸಿತ್ತು. ಬಿಎಂಆರ್‌ಸಿಎಲ್‌ಗೆ ಈ ಮೆಟ್ರೋ ಯೋಜನೆಯನ್ನು ಬೊಮ್ಮಸಂದ್ರದಿಂದ ಹೊಸೂರುವರೆಗೆ ವಿಸ್ತರಿಸಲು ಕರ್ನಾಟಕ ಸರ್ಕಾರ ಈಗಾಗಲೇ ಅನುಮೋದನೆ ನೀಡಿ 2022 ರಲ್ಲಿ ಪ್ರಸ್ತಾವನೆಯನ್ನು ಕೇಂದ್ರಕ್ಕೆ ಕಳುಹಿಸಿತ್ತು. 'ಬೊಮ್ಮಸಂದ್ರ-ಹೊಸೂರು ಮೆಟ್ರೋ ರೈಲು ಸಂಪರ್ಕದ ಕಾರ್ಯ ಸಾಧ್ಯತೆಯ ಅಧ್ಯಯನ ನಡೆಸಲು ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯಕ್ಕೆ ಪತ್ರ ಬರೆದಿದ್ದೇವೆ. ಸಚಿವಾಲಯದ ಒಪ್ಪಿಗೆಗಾಗಿ ಕಾಯುತ್ತಿದ್ದೇವೆ. ಗ್ರೀನ್‌ ಸಿಗ್ನಲ್‌ ದೊರೆತ ನಂತರ ನಾವು ನಮ್ಮ ಕೆಲಸ ಪ್ರಾರಂಭಿಸುತ್ತೇವೆ' ಎಂದು ಸಿಎಂಆರ್‌ಎಲ್‌ ವ್ಯವಸ್ಥಾಪಕ ನಿರ್ದೇಶಕ ಎಂ.ಎ. ಸಿದ್ದಿಕ್‌ ತಿಳಿಸಿದ್ದಾರೆ.

ಮೆಟ್ರೋ ಮಾರ್ಗದ ವಿವರ ಹೀಗಿದೆ.?: ಇನ್ನು ಹೊಸೂರು-ಬೊಮ್ಮಸಂದ್ರ ನಡುವೆ 20.5 ಕಿಲೋ ಮೀಟರ್‌ ಮಾರ್ಗದಲ್ಲಿ11.7 ಕಿಲೋಮೀಟರ್‌ ಕರ್ನಾಟಕದಲ್ಲಿದೆ. ಉಳಿದಂತೆ 8.8 ಕಿ.ಮೀ. ತಮಿಳುನಾಡಿನಲ್ಲಿದೆ. 2021ರಲ್ಲಿ ನಡೆದ ಎಲ್ಲಾ ಮೆಟ್ರೋ ರೈಲು ನಿಗಮಗಳ ವ್ಯವಸ್ಥಾಪಕ ನಿರ್ದೇಶಕರ ಸಭೆಯಲ್ಲಿ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದ ಕಾರ್ಯದರ್ಶಿ, ಬೊಮ್ಮಸಂದ್ರ-ಹೊಸೂರು ಮೆಟ್ರೋ ಸಂಪರ್ಕದ ಸಾಧ್ಯತೆ ಕುರಿತು ವರದಿ ನೀಡುವಂತೆ ಬಿಎಂಆರ್‌ಸಿಎಲ್‌ಗೆ ಒತ್ತಾಯಿಸಿದ್ದರು. ಕರ್ನಾಟಕದಲ್ಲಿ ಬರುವ ಮಾರ್ಗವನನ್ನು ಬಿಎಂಆರ್‌ಸಿಎಲ್‌ ಮತ್ತು ತಮಿಳುನಾಡಿನ ಮಾರ್ಗವನ್ನು ಸಿಎಂಆರ್‌ಎಲ್‌ ನಿರ್ಮಿಸಲಿದೆ.

100 ಕಿ.ಮೀ. ದೂರದ ನಗರಗಳ ಮಧ್ಯೆ ವಂದೇ ಮೆಟ್ರೋ ರೈಲು: ಬೆಂಗಳೂರು, ತುಮಕೂರು, ರಾಮನಗರಕ್ಕೆ ಲಭ್ಯ..?

ಹಲವು ಕಂಪನಿ ಉದ್ಯೋಗಿಗಳಿಗೆ ಸುವರ್ಣಾವಕಾಶ: ದೇಶದ ಐಟಿ ರಾಜಧಾನಿಯೊಂದಿಗೆ ಗಡಿ ಹಂಚಿಕೊಂಡಿರುವ ಕೈಗಾರಿಕಾ ಪಟ್ಟಣ ಹೊಸೂರಿನಲ್ಲಿ ಟಿವಿಎಸ್‌, ನಿಪ್ಪೋನ್‌, ಎಲೆಕ್ಟ್ರಿಕಲ್ಸ್‌, ಅಶೋಕ್‌ ಲೈಲ್ಯಾಂಡ್‌, ಟೈಟಾನ್‌ ಸೇರಿ ಹಲವು ಪ್ರತಿಷ್ಠಿತ ಕಂಪನಿಗಳಿವೆ. ಲೋಕಸಭೆಯಲ್ಲಿ ಮೆಟ್ರೊ ಸಂಪರ್ಕ ಕುರಿತು ಪ್ರಸ್ತಾಪಿಸಿದ ಕೃಷ್ಣಗಿರಿ ಸಂಸದ ಡಾ.ಎ.ಚೆಲ್ಲಕುಮಾರ್‌ 'ಹೊಸೂರಿನಿಂದ ಬೆಂಗಳೂರಿಗೆ ನಿತ್ಯ ಸಂಚರಿಸುವ ಸಾವಿರಾರು ಪ್ರಯಾಣಿಕರ ಪಾಲಿಗೆ ಇದೊಂದು ಕನಸಿನ ಯೋಜನೆಯಾಗಿದೆ. ಈ ಯೋಜನೆ ಜಾರಿಯಾದರೆ ಉಭಯ ರಾಜ್ಯಗಳ ಜನರಿಗೆ ಸಾಮಾಜಿಕ ಮತ್ತು ಆರ್ಥಿಕವಾಗಿ ಅನುಕೂಲವಾಗಲಿದೆ' ಎಂದು ಹೇಳಿದ್ದರು.

Latest Videos
Follow Us:
Download App:
  • android
  • ios