ಸಮಾಜ ಸೇವಕ ಹಾಗೂ ಜ್ಯೋತಿಷಿ ಎಂದು ಹೆಸರಾಗಿದ್ದ ಸಿದ್ದಾಪುರದ ಕಮಲಾಕರ್ ಭಟ್ ಅವರ ಕರಾಳ ಮುಖ ಬಯಲಾಗಿದೆ. ಕೌಟುಂಬಿಕ ಕಲಹದಲ್ಲಿ ಹಸ್ತಕ್ಷೇಪ ಮಾಡಿ, ಮಹಿಳೆಯೊಬ್ಬಳ ಕುಟುಂಬದ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಕೊಲೆ ಮಾಡಿದ ಆರೋಪ ಅವರ ಮೇಲಿದೆ. 'ಸೇವ್ ಮೀ' ಎಂಬ ಮಗಳ ಸಂದೇಶವೇ ಈ ಘಟನೆಗೆ ತಿರುವು ನೀಡಿದೆ.
ಉತ್ತರ ಕನ್ನಡ (ಫೆ.03): ಸಮಾಜ ಸೇವಕ, ಹಸಿದವರ ಪಾಲಿನ ಅನ್ನದಾತ, ವೇದ-ಶಾಸ್ತ್ರಗಳ ವಿದ್ವಾಂಸ.. ಹೀಗೆ ಸಾಲು ಸಾಲು ಬಿರುದುಗಳನ್ನು ಹೊತ್ತಿದ್ದ ಸಿದ್ದಾಪುರದ ಜ್ಯೋತಿಷಿ ಕಮಲಾಕರ್ ಭಟ್ ಅವರ ಇನ್ನೊಂದು ಕರಾಳ ಮುಖ ಇದೀಗ ಬಯಲಾಗಿದೆ. ಅಂದು ಬಡತನದ ಕಾರಣಕ್ಕೆ ವೇದ ಕಲಿತು, ಇಂದು ದಿನಕ್ಕೆ 700 ಜನರಿಗೆ ಉಚಿತ ಅನ್ನದಾನ ಮಾಡುತ್ತಿದ್ದ ವ್ಯಕ್ತಿಯೊಬ್ಬ, ಕೌಟುಂಬಿಕ ಕಲಹಕ್ಕೆ ತುಪ್ಪ ಸುರಿದು ಕೊಲೆ ಮಾಡುವ ಹಂತಕ್ಕೆ ಇಳಿದಿರುವುದು ಇಡೀ ಜಿಲ್ಲೆಯನ್ನು ಸ್ತಬ್ದಗೊಳಿಸಿದೆ.
ಬಡತನದ ಹಾದಿಯಿಂದ ಭಿಕ್ಷಾ ಪಾತ್ರೆಯವರೆಗೆ
ಬಡ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದ ಕಮಲಾಕರ್ ಭಟ್, ಒಂದು ಹೊತ್ತಿನ ಊಟಕ್ಕೂ ಸಂಕಷ್ಟ ಅನುಭವಿಸಿದವರು. ಕೇರಳದಲ್ಲಿ 14 ವರ್ಷ ವೇದ ಮತ್ತು ಜ್ಯೋತಿಷ್ಯ ಅಧ್ಯಯನ ಮಾಡಿ, ಹಾಸನದ ಅರಸೀಕೆರೆಯ ಮುಸ್ಲಿಂ ಕಾಲೇಜಿನಲ್ಲಿ ಸಂಸ್ಕೃತ ಕಲಿಸಿದ ಹಿನ್ನೆಲೆ ಇವರದ್ದು. ಅನಾಥಾಶ್ರಮಗಳಿಗೆ, ಸ್ಲಂಗಳಿಗೆ 4 ಓಮ್ನಿ ವ್ಯಾನ್ಗಳ ಮೂಲಕ ಊಟ ಸಾಗಿಸುವ ಇವರ "ನಿತ್ಯಪೂಜೆ ಭಿಕ್ಷಾ ಪಾತ್ರೆ" ಅಭಿಯಾನ ಅದೆಷ್ಟೋ ಜನರಿಗೆ ಮಾದರಿಯಾಗಿತ್ತು. ಕ್ಯಾನ್ಸರ್ ರೋಗಿಗಳ ಚಿಕಿತ್ಸೆ, ವೃಕ್ಷಾಭಿಯಾನದಂತಹ ಪುಣ್ಯದ ಕೆಲಸಗಳಿಂದಾಗಿ ಸಮಾಜ ಇವರನ್ನು 'ಗುರೂಜಿ' ಎಂದು ಗೌರವಿಸಿತ್ತು.
ಬೆಳ್ಳಂಬೆಳ್ಳಗೆ ಬಯಲಾದ ಕರಾಳ ಲೀಲೆ!
ಆದರೆ, ಈ ಪುಣ್ಯದ ಕೆಲಸಗಳ ಹಿಂದಿದ್ದ ಸಮಾಜ ಸೇವಕನ ಮುಖವಾಡ ಕಳಚಿದ್ದು ಸುಚಿತ್ರಾ ಎಂಬುವವರ ಸುಂದರ ಸಂಸಾರಕ್ಕೆ ಕೈ ಹಾಕಿದಾಗ. ಬೆಂಗಳೂರಿನಲ್ಲಿ ದುಡಿಯುತ್ತಿದ್ದ ಪತಿ ಮಹೇಶ್ ನಾಯ್ಕ್ ಅವರ ಅನುಪಸ್ಥಿತಿಯಲ್ಲಿ, ಸುಚಿತ್ರಾರನ್ನು ಜ್ಯೋತಿಷ್ಯದ ಹೆಸರಲ್ಲಿ ತನ್ನ ಮರುಳಾಗಿಸಿದ ಈ ಜ್ಯೋತಿಷಿ, ಅವರ ಸಂಸಾರದಲ್ಲಿ ಬಿರುಗಾಳಿ ಎಬ್ಬಿಸಿದ್ದಾನೆ. ತನ್ನ ಸ್ವಂತ ಮಕ್ಕಳಿಗಿಂತ ಈ ಗುರೂಜಿಯೇ ಮುಖ್ಯವೆಂಬಂತೆ ಮಹಿಳೆ ಸಿದ್ದಾಪುರದಿಂದ ಶಿವಮೊಗ್ಗಕ್ಕೆ ಓಡಿ ಹೋಗಿ ಈತನ ಮನೆಯಲ್ಲಿ ಆಶ್ರಯ ಪಡೆದಿದ್ದಳು.
ಮಗಳ ‘ಸೇವ್ ಮೀ’ ಮೆಸೇಜ್ ರಕ್ತಪಾತಕ್ಕೆ ನಾಂದಿ
ಗುರೂಜಿಯ ಮನೆಯಲ್ಲಿ ತಾಯಿ ಮತ್ತು ಜ್ಯೋತಿಷಿ ಒಟ್ಟಿಗಿದ್ದರೆ, ಮಕ್ಕಳು ಅನಾಥರಾಗಿದ್ದರು. ಮಕ್ಕಳನ್ನು ಪ್ರಶ್ನಿಸಿದಾಗ ‘ವಿಷ ಹಾಕುತ್ತೇವೆ’ ಎಂದು ಬೆದರಿಕೆ ಹಾಕಲಾಗಿತ್ತು. ಆತಂಕಗೊಂಡ ಮಗಳು ಸುಮಶ್ರೀ, ತನ್ನ ತಂದೆಗೆ ‘ಅಪ್ಪಾ ಸೇವ್ ಮೀ’ ಎಂದು ರಹಸ್ಯ ಸಂದೇಶ ಕಳುಹಿಸಿದ್ದು ಈ ಪ್ರಕರಣದ ಅತಿ ದೊಡ್ಡ ತಿರುವು. ಮಗಳನ್ನು ರಕ್ಷಿಸಿ ಅಣ್ಣ ವಸಂತ್ ನಾಯ್ಕ್ ಮನೆಯಲ್ಲಿ ಇರಿಸಿದ ತಂದೆಯ ವಿರುದ್ಧ ರೊಚ್ಚಿಗೆದ್ದ ಜ್ಯೋತಿಷಿ ಕಮಲಾಕರ್ ಭಟ್ ಮತ್ತು ಪತ್ನಿ ಸುಚಿತ್ರಾ, 'ಡೆತ್ ಸ್ಕ್ವಾಡ್'ನಂತೆ ದಾಳಿ ನಡೆಸಿದ್ದಾರೆ.
ಅನ್ನ ನೀಡುವ ಕೈಗಳಿಂದ ರಕ್ತದ ಓಕುಳಿ
ದಿನವೂ 700 ಮಂದಿಗೆ ಅನ್ನ ನೀಡುತ್ತಿದ್ದ ಅದೇ ಜ್ಯೋತಿಷಿ, ಅಂದು ಸಂಜೆ ಐವರು ಗೂಂಡಾಗಳನ್ನು ಕರೆತಂದು ರಣರಂಗ ಸೃಷ್ಟಿಸಿದ್ದಾನೆ. ಈ ಭೀಕರ ಹಲ್ಲೆಯಲ್ಲಿ ವಸಂತ್ ನಾಯ್ಕ್ (43) ಪ್ರಾಣ ಕಳೆದುಕೊಂಡರೆ, ಮಹೇಶ್ ನಾಯ್ಕ್ ಮತ್ತು ಜಗಳ ಬಿಡಿಸಲು ಬಂದ ಪಕ್ಕದ ಮನೆಯ ಕುಮಾರ್ ಎನ್ನುವ ಯುವಕ ಆಸ್ಪತ್ರೆಯಲ್ಲಿ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾರೆ. ಸದ್ಯ ಜ್ಯೋತಿಷಿ ಕಮಲಾಕರ್ ಭಟ್, ಸುಚಿತ್ರಾ ಮತ್ತು ಮತ್ತು ಮಹಿಳೆಯ ತಂದೆ ಲೋಕನಾಥ್ ಸೇರಿ ಏಳು ಮಂದಿ ಆರೋಪಿಗಳು ಸಿದ್ದಾಪುರ ಪೊಲೀಸರ (FIR: 23/26) ಅತಿಥಿಯಾಗಿದ್ದಾರೆ. ಸಮಾಜ ಸೇವೆಯನ್ನು ಮಾಡಿಕೊಂಡು ಪ್ರಸಿದ್ಧಿ ಗಳಿಸಿದ್ದ ಗುರೂಜಿ ಮಹಿಳೆಯೊಂದಿಗೆ ಬೆಳೆಸಿಕೊಂಡ ಈ ಅಕ್ರಮ ಸಂಬಂಧ ಮತ್ತು ಹಠಮಾರಿ ವರ್ತನೆ ಒಂದು ಹಸನಾದ ಸಂಸಾರವನ್ನು ಸ್ಮಶಾನವಾಗಿಸಿದೆ. ಒಂದು ಕುಟುಂಬದಲ್ಲಿ ಸ್ಮಶಾನ ಮೌನ ಆವರಿಸಿದ್ದು, ಮಕ್ಕಳು ಅಪ್ಪ-ಅಮ್ಮನ ಸ್ಥಿತಿ ಕಂಡು ಕಂಗಾಲಾಗಿದ್ದಾರೆ.

