ನಂಜನಗೂಡಿನಲ್ಲಿ ಪುನೀತ್ ರಾಜ್‌ಕುಮಾರ್ ಕ್ರಿಕೆಟ್ ಕಪ್‌ಗೆ ಚಾಲನೆ ನೀಡಿದ ಅಶ್ವಿನಿ ಪುನೀತ್ ರಾಜ್‌ಕುಮಾರ್, ಪುನೀತ್ ಅವರ ಆಶಯಗಳನ್ನು ಮುಂದುವರೆಸುವುದಾಗಿ ಹೇಳಿದರು. ಯುವಕರಿಗೆ ಸ್ಫೂರ್ತಿ ನೀಡುವ ಚಿತ್ರಗಳನ್ನು ನಿರ್ಮಿಸಲಾಗುವುದು ಎಂದರು.

ನಂಜನಗೂಡು (ಮಾ.7): ಪುನೀತ್ ರಾಜ್ ಕುಮಾರ್ ಕ್ರೀಡಾಭಿಮಾನಿಯಾಗಿದ್ದರು, ಯುವಕರಿಗೆ ಸ್ಫೂರ್ತಿಯಾಗಿ, ಸಾಮಾಜಿಕ ಕಳಕಳಿ ಹೊಂದಿದ್ದ ಅವರ ಆಶಯಗಳನ್ನು ಅವರ ಕುಟುಂಬ ಮುಂದುವರೆಸಿಕೊಂಡು ಹೋಗುತ್ತದೆ ಎಂದು ಪುನೀತ್ ರಾಜ್ ಕುಮಾರ್ ಪತ್ನಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಹೇಳಿದರು.

ತಾಲೂಕಿನ ತಾಂಡವಪುರದ ಮಹಾರಾಜ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಗುರುವಾರ ಪುನೀತ್ ರಾಜ್ ಕುಮಾರ್ ಕ್ರಿಕೆಟ್ ಕಪ್ ಕ್ರಿಕೆಟ್ ಪಂದ್ಯಾವಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.

ದೊಡ್ಮನೆ ಕುಟುಂಬ ಶಿಕ್ಷಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸಬೇಕೆಂಬ ಹಂಬಲದೊಂದಿಗೆ ಶೈಕ್ಷಣಿಕ ಸಂಸ್ಥೆ ತೆರೆಯಲಾಗಿದೆ, ಪುನೀತ್ ರಾಜ್ ಕುಮಾರ್ ಆರಂಭಿಸಿದ PRK ಪ್ರೊಡಕ್ಷನ್ ಅಡಿಯಲ್ಲಿ ಹೊಸ ಪ್ರತಿಭೆಗಳಿಗೆ ಅವಕಾಶ ನೀಡಿ, ಉತ್ತಮ ಕಥೆ, ಯುವಕರಿಗೆ ಸ್ಫೂರ್ತಿ ತುಂಬುವಂತಹ ಚಿತ್ರಗಳನ್ನು ತಯಾರಿಸಲಾಗುವುದು, ಯುವ ರಾಜ್ ಕುಮಾರ್ ನಾಯಕತ್ವದಲ್ಲಿ ಎಕ್ಕ ಚಿತ್ರವನ್ನು ನಿರ್ಮಿಸಲಾಗುತ್ತಿದೆ, ರಾಜ್ಯದ ನಮ್ಮ ಜನರ ಅಭಿಲಾಶೆಗೆ ತಕ್ಕಂತೆ ಪುನೀತ್ ಕುಟುಂಬ ಸಾಮಾಜಿಕ ಸೇವೆಯನ್ನು ಮುಂದುವರಿಸುತ್ತದೆ ಎಂದು ಹೇಳಿದರು. 

ಇದನ್ನೂ ಓದಿ: ನೋಡಲು ಚೆನ್ನಾಗಿಲ್ಲ, ಕಲರ್​ ಇಲ್ಲ ಎಂದು ತುಂಬಾ ಫೀಲಿಂಗ್​ ಇತ್ತು: ಮನದ ಮಾತು ಹೇಳಿದ್ದ ಅಪ್ಪು ವಿಡಿಯೋ ವೈರಲ್​!

ಡಾ. ಪುನೀತ್ ರಾಜ್ ಕುಮಾರ್ ಚಿನ್ನದ ಪದಕ ಎಂಐಟಿ ಕಾಲೇಜಿನ ಉಪಾಧ್ಯಕ್ಷ ಡಾ.ಜಿ. ಹೇಮಂತ್‌ ಕುಮಾರ್ ಮಾತನಾಡಿ, ಪುನೀತ್ ರಾಜ್‌ ಕುಮಾರ್ ಅವರ ಆದರ್ಶ ಕ್ರೀಡಾ ಸ್ಫೂರ್ತಿಯನ್ನು ಯುವಕರಲ್ಲಿ ಜಾಗೃತಿಗೊಳಿಸುವ ಸಲುವಾಗಿ ಕಳೆದ ನಾಲ್ಕು ವರ್ವಷಗಳಿಂದ ಸಂಸ್ಥೆ ಪುನೀತ್ ರಾಜ್ ಕುಮಾರ್ ಕಪ್ ಕ್ರಿಕೆಟ್ ಪಂದ್ಯ ಆಯೋಜಿಸುತ್ತಿದೆ, ಪುನೀತ್ ರಾಜ್ ಕುಮಾರ್ ಅವರ ಹೆಸರಿನಲ್ಲಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯ ಬಿಇ ಪದವಿಗಳಲ್ಲಿನ ಕೋರ್ಸ್ ಗಳಲ್ಲಿ ಅತ್ಯಂತ ಹೆಚ್ಚು ಅಂಕ ಗಳಿಸುವ ವಿದ್ಯಾರ್ಥಿಗಳಿಗೆ ಚಿನ್ನದ ಪದಕ ನೀಡಲಾಗುವುದು, ಮುಂದಿನ ಘಟಿಕೋತ್ಸವದಲ್ಲಿ ಡಾ. ಪುನೀತ್ ರಾಜ್ ಕುಮಾರ್ ಚಿನ್ನದ ಪದಕ ನೀಡಲಾಗುವುದು ಎಂದು ಹೇಳಿದರು.

ಇದನ್ನೂ ಓದಿ: ಈ ಕಾರಣಕ್ಕಾಗಿ ಅಣ್ಣಾವ್ರಿಗೆ ಅಪ್ಪು ಮೇಲೆ ವಿಶೇಷ ಅಕ್ಕರೆ ಇತ್ತು..; ಸೀಕ್ರೆಟ್ ಹೊರಬಿತ್ತು!

ಮಕ್ಕಳಿಂದ ಮುದುಕರವರೆಗೆ ಇಷ್ಟಪಡುವ ನಟನಿದ್ದರೆ ಅದು ಪುನೀತ್ ರಾಜ್‌ಕುಮಾರ್

ಕಾಲೇಜಿನ ಪ್ರಾಂಶುಪಾಲ ಡಾ. ವೈ.ಟಿ. ಕೃಷ್ಣೇಗೌಡ ಮಾತನಾಡಿ, ನಾನು ಕೂಡ ಪುನೀತ್‌ ರಾಜ್‌ ಕುಮಾರ್ ಅಭಿಮಾನಿ. ಪುಟ್ಟ ಮಗುವಿನಿಂದ 70 ವರ್ಷದ ವಯೋವೃದ್ಧರು ಇಷ್ಟಪಡುವ ಉತ್ತಮ ನಟನಿದ್ದರೆ ಅದು ಪುನೀತ್ ರಾಜಕುಮಾರ್. ದೊಡ್ಡಮನೆ ಸೊಸೆಯಾಗಿ ಅಶ್ವಿನಿ ಪುನೀತ್ ರಾಜಕುಮಾರ್ ಆ ಮನೆಗೆ ಗೌರವ ತಂದು ಕೊಟ್ಟವರಾಗಿದ್ದಾರೆ, ಪುನೀತ್ ರಾಜ್ ಕುಮಾರ್ ಎಲ್ಲ ಕಾಲಕ್ಕೂ ಯುವಕರಿಗೆ ಸ್ಫೂರ್ತಿಯಾಗಿ ಜನ ಮನದಲ್ಲಿ ಚಿರಸ್ಥಾಯಿಯಾಗಿರುತ್ತಾರೆ ಎಂದು ಹೇಳಿದರು. ರಿಷಿ ಫ್ಯಾಬ್ರಿಕೇಶನ್ ನ ಜೋಷಿ ಬಸಿಲ್, ನಂಜುಂಡೇಶ್ವರ, ಪ್ರೊ.ಎಚ್.ಕೆ. ಚೇತನ್, ಡಾ. ರಂಜಿತಾ, ಪ್ರೊ. ಮೊಹಮ್ಮದ್ ಸಲಾಮತ್, ಪ್ರೊ.ಬಿ.ಸಿ. ನಾಗೇಂದ್ರಕುಮಾರ್, ನವೀನ್, ಮನು ಎಸ್. ಗೌಡ, ಗಣೇಶ್ ಇದ್ದರು.