Asianet Suvarna News Asianet Suvarna News

Job promotion ಕೋರ್ಟ್‌ನಲ್ಲಿ ಹೋರಾಡಿ ಉದ್ಯೋಗ ಬಡ್ತಿ ಪಡೆದ ಅರ್ಜುನ ಪುರಸ್ಕೃತ ಅಥ್ಲೀಟ್!

-ನಿವೃತ್ತಿಗೆ 1 ತಿಂಗಳು ಮೊದಲು ಗೆಲುವು
- ಬಡ್ತಿ, ಹಣಕಾಸು ಸೌಲಭ್ಯ ನೀಡುವಂತೆ ಸೂಚನೆ
- ತಕರಾರು ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್

Arjuna awardee athlete gets Job promotion aftet fights in karnataka High Court against BEL ckm
Author
Bengaluru, First Published May 12, 2022, 5:04 AM IST

ಬೆಂಗಳೂರು(ಮೇ.12): ನಿವೃತ್ತಿಗೆ ಒಂದು ತಿಂಗಳು ಬಾಕಿ ಹೊಂದಿರುವ ‘ಅರ್ಜುನ’ ಪ್ರಶಸ್ತಿ ಪುರಸ್ಕೃತ ಪ್ಯಾರಾ ಅಥ್ಲೀಟ್‌ ಉದ್ಯೋಗಿಗೆ ಬಡ್ತಿ ಸೇರಿದಂತೆ ಇತರೆ ಎಲ್ಲ ಸೌಲಭ್ಯ ಕಲ್ಪಿಸಲು ಭಾರತ್‌ ಎಲೆಕ್ಟ್ರಾನಿಕ್ಸ್‌ ಲಿಮಿಟೆಡ್‌ಗೆ (ಬಿಇಎಲ್‌) ಹೈಕೋರ್ಚ್‌ ನಿರ್ದೇಶಿಸಿದೆ.

ಭಾರತ್‌ ಎಲೆಕ್ಟ್ರಾನಿಕ್ಸ್‌ ಲಿಮಿಟೆಡ್‌ ಸಲ್ಲಿಸಿದ್ದ ತಕರಾರು ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ವಿಭಾಗೀಯ ನ್ಯಾಯಪೀಠ ಈ ಆದೇಶ ಮಾಡಿದೆ.

ಸಂಸ್ಥೆಯಲ್ಲಿರುವ ಕ್ರೀಡಾಪಟುಗಳನ್ನು ಉತ್ತೇಜಿಸುವ ಉದ್ದೇಶದಿಂದ ಬಿಇಎಲ್‌ 2011ರ ಡಿ.9ರಂದು ಪ್ರತ್ಯೇಕ ನೀತಿ ರೂಪಿಸಿ ಜಾರಿಗೆ ತಂದಿದೆ. ಖೇಲ್‌ ರತ್ನ ಹಾಗೂ ಅರ್ಜುನ ಪ್ರಶಸ್ತಿ ಸೇರಿದಂತೆ ಅಥ್ಲೆಟಿಕ್‌ ಪ್ರಶಸ್ತಿ ಪುರಸ್ಕೃತರಿಗೆ ಬಡ್ತಿ, ಹಣಕಾಸು ಸೌಲಭ್ಯ ಕಲ್ಪಿಸುವ ಬಗ್ಗೆ ನೀತಿ ಒಳಗೊಂಡಿದೆ. ಆದರೆ, ನೀತಿ ಜಾರಿಗೆ ಬಂದ ನಂತರ ಪ್ರಶಸ್ತಿ ಪಡೆದವರಿಗೆ ಸೌಲಭ್ಯ ಕಲ್ಪಿಸುವುದಾಗಿ ನೀತಿಯಲ್ಲಿ ಷರತ್ತು ವಿಧಿಸಲಾಗಿದೆ. ಆದರೆ, ಅದಕ್ಕೂ ಮುನ್ನ ಅರ್ಜುನ ಪ್ರಶಸ್ತಿ ಪಡೆದಿರುವ ಕಾರಣಕ್ಕೆ ಉದ್ಯೋಗಿ ಹಾಗೂ ಪ್ಯಾರಾ ಅಥ್ಲೀಟ್‌ ವೆಂಕಟರವಣ್ಣಪ್ಪಗೆ ಬಡ್ತಿ, ಹಣಕಾಸು ಸೌಲಭ್ಯ ಸೇರಿದಂತೆ ಇತರೆ ಸೌಲಭ್ಯ ಕಲ್ಪಿಸಲು ನಿರಾಕರಿಸಿರುವ ಬಿಇಎಲ್‌ ಕ್ರಮ ಸರಿಯಿಲ್ಲ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.

76 ಮಕ್ಕಳ ರಕ್ಷಿಸಿದ ಮಹಿಳಾ ಪೊಲೀಸ್ ಕಾನ್ಸ್ಟೇಬಲ್‌ಗೆ ಭರ್ಜರಿ ಗಿಫ್ಟ್!

ಅಲ್ಲದೆ, ವೆಂಕಟರವಣ್ಣಪ್ಪ ಜೂನ್‌ 2022ರಲ್ಲಿ ನಿವೃತ್ತರಾಗಲಿದ್ದಾರೆ. ಅವರು ಮತ್ತಷ್ಟುಕ್ರೀಡಾಕೂಟಗಳಲ್ಲಿ ಭಾಗವಹಿಸುವ ಸಾಧ್ಯತೆ ಕಡಿಮೆ ಇದೆ. ಹಾಗಾಗಿ ಅವರಿಗೆ ಬಡ್ತಿ, ಹಣಕಾಸು ಸೌಲಭ್ಯ ಸೇರಿದಂತೆ ಇತರೆ ಸೌಲಭ್ಯ ಕಲ್ಪಿಸಬೇಕು ಎಂದು ಬಿಇಎಲ್‌ಗೆ ಹೈಕೋರ್ಚ್‌ ನಿರ್ದೇಶಿಸಿದೆ.

ಅಂಗವಿಕಲ ಕೋಟಾದಡಿಯಲ್ಲಿ 1988ರಲ್ಲಿ ಬಿಇಎಲ್‌ ಉದ್ಯೋಗಕ್ಕೆ ವೆಂಕಟರವಣ್ಣಪ್ಪ ಸೇರಿದ್ದಾರೆ. ಬ್ರಿಸ್ಬೇನ್‌, ಬ್ಯಾಂಕಾಕ್‌, ಫ್ರಾನ್ಸ್‌, ಬುಸಾನ್‌, ಗ್ರೀಸ್‌ ಮತ್ತು ಕೌಲಾಲಂಪುರ್‌ ಸೇರಿದಂತೆ ಅನೇಕ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಪ್ಯಾರಾ-ಅಥ್ಲೆಟಿಕ್‌ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದಾರೆ. ಅರ್ಜುನ ಪ್ರಶಸ್ತಿ, ಏಕಲವ್ಯ ಪ್ರಶಸ್ತಿ ಮತ್ತು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಅರ್ಜುನ ಅಥವಾ ಖೇಲ್‌ ರತ್ನ ಪ್ರಶಸ್ತಿ ಪಡೆದ ಉದ್ಯೋಗಿಗಳಿಗೆ ಸೇವಾ ಆರ್ಹತೆ ಲೆಕ್ಕಿಸದೆ ಬಡ್ತಿ ನೀಡಬೇಕು. ಹೆಚ್ಚುವರಿ ಹಣಕಾಸು ಸೌಲಭ್ಯ ಹಾಗೂ ಭತ್ಯೆ ನೀಡುವ ಸಂಬಂಧ ಎಚ್‌ಎಎಲ್‌ ಸೇರಿದಂತೆ ಇತರೆ ಕೇಂದ್ರ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳು ನೀತಿ ರೂಪಿಸಿವೆ. ಬಿಇಎಲ್‌ ಸಹ ಇದೇ ಮಾದರಿಯ ನೀತಿ ರೂಪಿಸಬೇಕು ಎಂದು ಒತ್ತಾಯಿಸಿ ವೆಂಕಟರವಣ್ಣಪ್ಪ ಕೇಂದ್ರ ಕೈಗಾರಿಕಾ ನ್ಯಾಯಾಧಿಕರಣ ಮತ್ತು ಹೈಕೋರ್ಚ್‌ನಲ್ಲಿ ಕಾನೂನು ನಡೆಸಿದ್ದರು.

ಪದವೀಧರ ಶಿಕ್ಷಕರ ಬಡ್ತಿ ಪ್ರಮಾಣ ಶೇ.40ಕ್ಕೆ ಏರಿಕೆ

ಕ್ರೀಡಾಪಟುಗಳನ್ನು ಪ್ರೋತ್ಸಾಹಿಸಲು ಬಿಇಎಲ್‌ ನೀತಿ ರೂಪಿಸಬೇಕು ಮತ್ತು ವೆಂಕಟರವಣ್ಣಪ್ಪಗೆ ಬಡ್ತಿ ನೀಡಬೇಕು ಎಂದು 2009ರಲ್ಲಿ ನ್ಯಾಯಾಧೀಕರಣ ಆದೇಶ ಮಾಡಿತ್ತು. ಅದರಂತೆ ಬಿಇಎಲ್‌ 2011ರಲ್ಲಿ ನೀತಿ ರೂಪಿಸಿತ್ತಾದರೂ ವೆಂಕಟರವಣ್ಣಪ್ಪಗೆ ಹಣಕಾಸು ಸೇರಿದಂತೆ ಇನ್ನಿತರ ಸೌಲಭ್ಯ ನಿರಾಕರಿಸಿತ್ತು. ಇದನ್ನು ಪ್ರಶ್ನಿಸಿ ವೆಂಕಟರವಣ್ಣಪ್ಪ ಪುನಃ ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿದ ಕೇಂದ್ರ ಕೈಗಾರಿಕಾ ನ್ಯಾಯಾಧಿಕರಣ ಬಡ್ತಿ, ಹಣಕಾಸು ಸೌಲಭ್ಯ ಕಲ್ಪಿಸುವಂತೆ 2020ರ ಫೆ.27ರಂದು ಆದೇಶಿಸಿತ್ತು. ಅದನ್ನು ರದ್ದುಪಡಿಸಲು ಕೋರಿ ಬಿಇಎಲ್‌ ಹೈಕೋರ್ಚ್‌ಗೆ ಅರ್ಜಿ ಸಲ್ಲಿಸಿತ್ತು.

Follow Us:
Download App:
  • android
  • ios