ಕೊರೋನಾದಿಂದ ಅನಾಥವಾದ ಪ್ರತಿ ಮಗುವಿಗೂ 10 ಲಕ್ಷ ರೂ. ಎಫ್ಡಿ: ಸಿಎಂ ಆದೇಶ!
* ಅನಾಥ ಮಕ್ಕಳ ಪರ ಸರ್ಕಾರದ ಕಾಳಜಿ
* ಕೊರೋನಾದಿಂದ ಹೆತ್ತವರನ್ನು ಕಳೆದುಕೊಂಡ ಮಕ್ಕಳ ಭವಿಷ್ಯ ಸುಭದ್ರಗೊಳಿಸಲು ಸರ್ಕಾರದ ದಿಟ್ಟ ನಡೆ
* ಕೊರೋನಾದಿಂದ ಅನಾಥವಾದ ಪ್ರತಿ ಮಗುವಿಗೂ 10 ಲಕ್ಷ ರೂ. ಎಫ್ಡಿ: ಸಿಎಂ ಜಗನ್ ಆದೇಶ
ಅಮರಾವತಿ(ಮೇ.18): ಕೊರೋನಾದಿಂದಾಗಿ ತಂದೆ ತಾಯಿ ಕಳೆದುಕೊಂಡು ಅನಾಥರಾದ ಮಕ್ಕಳ ನೆರವಿದೆ ದೆಹಲಿ ಹಾಗೂ ಮಧ್ಯಪ್ರದೇಶ ತೆಗೆದುಕೊಂಡ ನಿರ್ಧಾರ ಇಡೀ ದೇಶದ ಗಮನ ಸೆಳೆದಿತ್ತು. ಸದ್ಯ ಇದೇ ವಿಚಾರವಾಗಿ ಆಂಧ್ರ ಪ್ರದೇಶ ಸರ್ಕಾರವೂ ದಿಟ್ಟ ಹೆಜ್ಜೆ ಇಟ್ಟಿದೆ. ಹೌದು ಮಹಾಂಮಾರಿಯಿಂದಾಗಿ ತನ್ನ ತಂದೆ ಹಾಗೂ ತಾಯಿ ಇಬ್ಬರನ್ನೂ ಕಳೆದುಕೊಂಡು ಅನಾಥವಾದ ರಾಜ್ಯದ ಪ್ರತಿಯೊಬ್ಬ ಮಗುವಿನ ಹೆಸರಲ್ಲೂ ಹತ್ತು ಲಕ್ಷ ರೂಪಾಯಿ ಠೇವಣಿ ಇಡುವಂತೆ ಸಿಎಂ ಜಗನ್ ಮೋಹನ್ ರೆಡ್ಡಿ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಕೊರೋನಾದಿಂದ ಅನಾಥರಾದ ಮಕ್ಕಳ ಪುನರ್ವಸತಿಗೆ ಕೇಂದ್ರದ ನಿಯಮ!
ಈ ಬಗ್ಗೆ ಸರ್ಕಾರದ ವತಿಯಿಂದ ಪ್ರಕಟಣೆಯೊಂದನ್ನು ಹೊರಡಿಸಲಾಗಿದ್ದು, ಕೋವಿಡ್-19 ಎರಡನೇ ಅಲೆಯ ವಿರುದ್ಧ ಹಲವು ಮಕ್ಕಳು ಅಸುರಕ್ಷಿತರಾಗಿದ್ದಾರೆ ಹಾಗೂ ದುರ್ಬಲಗೊಂಡಿದ್ದಾರೆ. ಅದರಲ್ಲೂ ಈ ಭೀಕರ ವೈರಸ್ನಿಂದ ಪೋಷಕರನ್ನು ಕಳೆದುಕೊಂಡವರ ಸ್ಥಿತಿ ಕರುಣಾಜನಕವಾಗಿದೆ. ಈ ಮಕ್ಕಳ ಭವಿಷ್ಯದ ಬಗ್ಗೆ ಕಾಳಜಿ ಹೊಂದಿರುವ ಆಂಧ್ರಪ್ರದೇಶ ಮುಖ್ಯಮಂತ್ರಿ ವೈ.ಎಸ್. ಜಗನ್ ಮೋಹನ್ ರೆಡ್ಡಿ ಪ್ರತಿ ಅನಾಥ ಮಗುವಿನ ಭದ್ರತೆ ದೃಷ್ಟಿಯಿಂದ 10 ಲಕ್ಷ ರೂಪಾಯಿ ಫಿಕ್ಸೆಡ್ ಡೆಪಾಸಿಟ್ ಮಾಡಿಸುವ ನಿರ್ಧಾರ ಕೈಗೊಂಡಿದ್ದಾರೆ ರಾಜ್ಯ ಸರ್ಕಾರದ ಹೇಳಿಕೆಯಲ್ಲಿ ತಿಳಿಸಲಾಗಿದೆ.
ಕೊರೋನಾ ಅಬ್ಬರ: ಅನಾಥರಾದ ಮಕ್ಕಳಿಗೆ 5 ಸಾವಿರ ರೂ. ಪಿಂಚಣಿ!
ಕೋವಿಡ್ನಿಂದ ಹೆತ್ತವರನ್ನು ಕಳೆದುಕೊಂಡ ಮಕ್ಕಳ ಹೆಸರಿಗೆ ಬ್ಯಾಂಕಿನಲ್ಲಿ ಸರ್ಕಾರ 10 ಲಕ್ಷ ರೂ. ಮೊತ್ತ ಠೇವಣಿ ಇಡಲಿದೆ. ಮಕ್ಕಳಿಗೆ 25 ವರ್ಷ ತುಂಬುವವರೆಗೂ 10 ಲಕ್ಷ ಹಣ ಹಾಗೇ ಬ್ಯಾಂಕ್ನಲ್ಲಿ ಇರಲಿದೆ. ಆದರೆ ಪ್ರತಿ ತಿಂಗಳು ಇದರ ಬಡ್ಡಿ ಮೊತ್ತವನ್ನು ಪಡೆಯಬಹುದಾಗಿದೆ. ಇನ್ನು ಈ ಎಫ್.ಡಿ. ಮೇಲೆ ಆ ಮಗುವನ್ನು ಸಾಕುವ ಪಾಲಕರಿಗೆ ಹೆಚ್ಚಿನ ಬಡ್ಡಿ ಸಿಗುವಂತಹ ವ್ಯವಸ್ಥೆ ಆಗಬೇಕು ಮತ್ತು ಆ ಕಾರ್ಯಕ್ಕೆ ಯೋಜನೆ ರೂಪಿಸಿ ಬ್ಯಾಂಕ್ ಜತೆ ಮಾತುಕತೆ ನಡೆಸುವಂತೆ ಅಧಿಕಾರಿಗಳಿಗೆ ಸಿಎಂ ರೆಡ್ಡಿ ಸೂಚಿಸಿದ್ದಾರೆ.
ಅಮೆರಿಕ ಸಾವಿನ ಸಂಖ್ಯೆ 6 ಲಕ್ಷಕ್ಕೆ, 45000 ಮಕ್ಕಳು ಅನಾಥ!
ಕೊರೋನಾ ಸಂಕಷ್ಟಕ್ಕೆ ನಲುಗಿರುವ ಅದೆಷ್ಟೋ ಮಕ್ಕಳ ಬದುಕಿಗೆ ಈ ಯೋಜನೆ ದಾರಿದೀಪವಾಗಿದ್ದು, ಜನರಪರ ಕಾಳಜಿಗೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ. ಸದ್ಯ ಆಂಧ್ರಪ್ರದೇಶದಲ್ಲಿ ಕೊರೋನಾ ಪ್ರಕರಣಗಳನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಲಾಕ್ಡೌನ್ ಹೇರಲಾಗಿದ್ದು, ಕಟ್ಟು ನಿಟ್ಟಿನ ಕ್ರಮಗಳನ್ನು ಜಾರಿಗೊಳಿಸಲಾಗಿದೆ. ಮೇ ಕೊನೆಯ ತನಕ ಭಾಗಶಃ ಕರ್ಫ್ಯೂ ವಿಸ್ತರಣೆಯಾಗುವ ಸಾಧ್ಯತೆಗಳಿವೆ.
ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್ ನ್ಯೂಸ್ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona