Asianet Suvarna News Asianet Suvarna News

ದಸರೆಗೆ ತವರಿಗೆ ತೆರಳುವವರಿಗೆ ಭರ್ಜರಿ ಬಿಸಿ

ದಸರೆಗೆ ತವರಿನತ್ತ ತೆರಳುವವರಿಗೆ ಶಾಕ್ ಕಾದಿದೆ. ರಾಜಧಾನಿಯಿಂದ ತಮ್ಮೂರಿಗೆ ತೆರಳುವವರಿಗೆ ಬಸ್ ಗಳ ದರ ಏರಿಕೆ ಭರ್ಕರಿ ಬಿಸಿ ಮುಟ್ಟಿಸುತ್ತಿದೆ. 

Ahead Of Dasara Bus Fares Hike
Author
Bengaluru, First Published Oct 17, 2018, 9:07 AM IST

ಬೆಂಗಳೂರು: ಆಯುಧ ಪೂಜೆ ಹಾಗೂ ದಸರಾ ಹಿನ್ನೆಲೆಯಲ್ಲಿ ಸಾಲು ರಜೆಗಳು ಸಿಕ್ಕಿರುವುದರಿಂದ ಬುಧವಾರ ರಾತ್ರಿಯಿಂದಲೇ ರಾಜಧಾನಿಯ  ಮಂದಿ ಭಾರಿ ಸಂಖ್ಯೆಯಲ್ಲಿ ನಗರದಿಂದ ವಿವಿಧ ಸ್ಥಳಗಳಿಗೆ ತೆರಳಲಿದ್ದಾರೆ. ಆದರೆ ಅಗತ್ಯ ಪ್ರಮಾಣದಲ್ಲಿ ಬಸ್‌ಗಳು ಲಭ್ಯವಿಲ್ಲದ ಹಿನ್ನೆಲೆಯಲ್ಲಿ ಪರಿಸ್ಥಿತಿಯ ದುರ್ಲಾಭ ಮಾಡಿಕೊಳ್ಳಲು ಬಹುತೇಕ ಖಾಸಗಿ ಬಸ್ ಆಪರೇಟರ್‌ಗಳು ಎಂದಿನಂತೆ ಎರಡು-ಮೂರು ಪಟ್ಟು ಪ್ರಯಾಣ ದರ ಏರಿಸಿ ಪ್ರಯಾಣಿಕರ ಸುಲಿಗೆ ಮುಂದುವರಿಸಿದ್ದಾರೆ.

ಉದ್ಯೋಗ ಸೇರಿದಂತೆ ನಾನಾ ಕಾರಣಗಳಿಂದ ರಾಜ್ಯ ಹಾಗೂ ಹೊರರಾಜ್ಯದ ಲಕ್ಷಾಂತರ ಮಂದಿ ಐಟಿ ನಗರ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಇದೀಗ ಗುರುವಾರದಿಂದ ಭಾನುವಾರದವರೆಗೆ ನಾಲ್ಕು ದಿನಗಳ ಕಾಲ ಸಾಲು ರಜೆಗಳು ಸಿಕ್ಕಿರುವುದರಿಂದ ಊರುಗಳತ್ತ ಮುಖ ಮಾಡಿದ್ದಾರೆ. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ(ಕೆಎಸ್ಸಾರ್ಟಿಸಿ) ಈ ಸಾಲು ರಜೆಗಳ ಹಿನ್ನೆಲೆಯಲ್ಲಿ ಬೆಂಗಳೂರಿನಿಂದ ವಿವಿಧೆಡೆ ಪ್ರಯಾಣಿಕರು ತೆರಳಲು ಬುಧವಾರದಿಂದ 2500 ಹೆಚ್ಚುವರಿ ಬಸ್ ವ್ಯವಸ್ಥೆ ಕಲ್ಪಿಸಿದೆ. 

ದೂರದ ಊರುಗಳಿಗೆ ತೆರಳುವವರು ವಾರದ ಹಿಂದೆಯೇ ಕೆಎಸ್ಸಾರ್ಟಿಸಿ ಮುಂಗಡ ಟಿಕೆಟ್ ಕಾಯ್ದಿರಿಸಿರುವುದರಿಂದ ನಿಗಮದ ಬಸ್‌ಗಳ ಬಹುತೇಕ ಆಸನಗಳು ಭರ್ತಿಯಾಗಿವೆ. ಜತೆಗೆ ನಗರದಿಂದ ಸಂಚರಿಸುವ ರೈಲುಗಳ ಮುಂಗಡ ಟಿಕೆಟ್ ಬುಕ್ಕಿಂಗ್ ಮುಕ್ತಾಯವಾಗಿದೆ. ಖಾಸಗಿ ಬಸ್‌ಗಳಲ್ಲಿ ಮಂಗಳವಾರದ ವೇಳೆಗೆ ಶೇ.95ರಷ್ಟು ಆಸನಗಳು ಭರ್ತಿಯಾಗಿವೆ.

ಖಾಸಗಿ ಬಸ್‌ಗಳ ದರ್ಬಾರ್: ಇಷ್ಟಾದರೂ ಬಸ್‌ಗಳ ಸಂಖ್ಯೆ ಕೊರತೆ ಜಾಸ್ತಿಯಾಗಿದೆ, ಇಂತಹ ಪರಿಸ್ಥಿತಿಯ ಲಾಭ ಪಡೆಯಲು ಬಹುತೇಕ ಖಾಸಗಿ ಬಸ್ ಆಪರೇಟರ್‌ಗಳು ಪ್ರಯಾಣ ದರವನ್ನು ಮನ ಬಂದಂತೆ ಹೆಚ್ಚಳ ಮಾಡಿದ್ದು, ಗ್ರಾಹಕರ ಸುಲಿಗೆಗೆ ಮುಂದಾಗಿದ್ದಾರೆ. ಖಾಸಗಿಯವರ ಈ ಹಗಲು ದರೋಡೆ ಮರುಕಳಿಸುತ್ತಿದ್ದರೂ ಪೊಲೀಸ್ ಇಲಾಖೆ ಅಥವಾ ಸಾರಿಗೆ ಇಲಾಖೆ ಕಡಿವಾಣ ಹಾಕುವಲ್ಲಿ ವಿಫಲವಾಗುತ್ತಿದೆ. ಸಾಮಾನ್ಯ ದಿನಗಳಲ್ಲಿ ಪ್ರಯಾಣಿಕರ ಕೊರತೆ ಇರುತ್ತದೆ. 

ನಷ್ಟದ ನಡುವೆಯೂ ನಿಗದಿತ ಮಾರ್ಗದಲ್ಲಿ ಬಸ್ ಕಾರ್ಯಾಚರಣೆ ಮಾಡುತ್ತೇವೆ. ಸಾಲು ರಜೆಗಳ ಸಂದರ್ಭದಲ್ಲಿ ಪ್ರಯಾಣದ ಏರಿಸಿ ನಷ್ಟ ಸರಿದೂಗಿಸಲು ಪ್ರಯತ್ನಿಸುತ್ತೇವೆ. ದರ ಏರಿಸದಿದ್ದರೆ ಬಸ್ ಕಾರ್ಯಾಚರಣೆ ಮಾಡುವುದು ಕಷ್ಟ. ದರ ಏರಿಕೆ ಪ್ರಯಾಣಿಕರಿಗೆ ಹೊರೆಯಾಗುತ್ತದೆ. ಆದರೆ, ಎಲ್ಲ ದಿನಗಳಲ್ಲೂ ಇದೇ ದರ ಇರುವುದಿಲ್ಲ ಎನ್ನುತ್ತಾರೆ ಖಾಸಗಿ ಬಸ್ ಸಿಬ್ಬಂದಿಯೊಬ್ಬರು.

Follow Us:
Download App:
  • android
  • ios