ಉಪನಗರ ರೈಲು ಶಂಕು ನೆರವೇರಿ ತಿಂಗಳಾದರೂ ಇನ್ನೂ ಇಲ್ಲ ಪ್ರಗತಿ ಕಂಡಿಲ್ಲ. 40 ತಿಂಗಳಲ್ಲಿ ಕಾಮಗಾರಿ ಎಂದಿದ್ದ ಪ್ರಧಾನಿ. ಆದರೂ ಸ್ಪಂದಿಸದ ಅಧಿಕಾರಿಗಳು 

 ಬೆಂಗಳೂರು(ಜು.23): ಉಪನಗರ ರೈಲು ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಶಂಕುಸ್ಥಾಪನೆ ನೆರವೇರಿಸಿ ಒಂದು ತಿಂಗಳು ಪೂರ್ಣಗೊಂಡಿದ್ದು, ಈವರೆಗೂ ಯೋಜನೆಯಲ್ಲಿ ಯಾವುದೇ ಪ್ರಗತಿ ಕಂಡು ಬಂದಿಲ್ಲ ಎಂದು ಸಿಟಿಜನ್‌ ಫಾರ್‌ ಸಿಟಿಜನ್‌ ಸಂಚಾಲಕ ಮತ್ತು ನಗರದ ಯೋಜನೆ ತಜ್ಞ ರಾಜಕುಮಾರ್‌ ದುಗರ್‌ ಆರೋಪಿಸಿದ್ದಾರೆ. ಉಪ ನಗರ ರೈಲು ಯೋಜನೆ ಘೋಷಣೆಯಾಗಿ ಹಲವು ವರ್ಷಗಳ ಬಳಿಕ ಪ್ರಸಕ್ತ ವರ್ಷ ಜೂನ್‌ 20ರಂದು ಸ್ವತಃ ಪ್ರಧಾನಿ ನರೇಂದ್ರ ಮೋದಿ ಬೆಂಗಳೂರಿಗೆ ಆಗಮಿಸಿ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಿದ್ದರು. ಅಲ್ಲದೆ, 40 ತಿಂಗಳಲ್ಲಿ ಪೂರ್ಣಗೊಳಿಸುವುದಾಗಿ ಪ್ರಧಾನಿಯವರೇ ಘೋಷಿಸಿದ್ದರು. ಸದ್ಯ ಜುಲೈ 20ಕ್ಕೆ ಒಂದು ತಿಂಗಳಾಗಿದ್ದು, ಪ್ರಧಾನಿ ಭೇಟಿ ಪೂರ್ವ ಮತ್ತು ನಂತರದ ಯೋಜನೆ ಪ್ರಗತಿಯಲ್ಲಿ ಯಾವುದೇ ವ್ಯತ್ಯಾಸ ಅಥವಾ ಪ್ರಗತಿ ಕಂಡುಬಂದಿಲ್ಲ. ಇದು ನಗರದ ಜನತೆಯ ದೃಷ್ಟಿಯಿಂದ ತುಂಬಾ ಬೇಸರದ ಸಂಗತಿ ಎಂದಿದ್ದಾರೆ.

ಪ್ರಧಾನಮಂತ್ರಿಗಳು ಶಂಕುಸ್ಥಾಪನೆ ನೆರವೇರಿಸಿದ ನಂತರ ಸಮರೋಪಾದಿಯಲ್ಲಿ ಕಾಮಗಾರಿಗಳು ಸಾಗಲಿವೆ ಎಂದು ನಿರೀಕ್ಷಿಸಲಾಗಿತ್ತು. ಆದರೆ, ಅಧಿಕಾರಿಗಳ ನೀರಸ ಸ್ಪಂದನೆಯು ಆ ನಿರೀಕ್ಷೆಗಳನ್ನು ಹುಸಿಗೊಳಿಸುವಂತಿದೆ. ಯೋಜನೆ ಅನುಷ್ಠಾನ ಜವಾಬ್ದಾರಿ ಹೊತ್ತಿರುವ ಕರ್ನಾಟಕ ರೈಲ್ವೆ ಮೂಲಸೌಕರ್ಯ ಅಭಿವೃದ್ಧಿ ನಿಯಮಿತ(ಕೆಆರ್‌ಐಡಿಇ) ತನ್ನ ವೆಬ್‌ಸೈಟ್‌ನಲ್ಲಿ ಯೋಜನೆ ಗಡುವು ಕೂಡ ಪರಿಷ್ಕರಣೆ ಮಾಡುವ ಗೋಜಿಗೆ ಹೋಗಿಲ್ಲ. ವೆಬ್‌ಸೈಟ್‌ನಲ್ಲಿ ಈಗಲೂ ಆರಂಭದಲ್ಲಿ ನಿಗದಿಪಡಿಸಿದ 2,190 ದಿನಗಳಲ್ಲಿ ಅಂದರೆ 2026ರ ಅಕ್ಟೋಬರ್‌ 21ರೊಳಗೆ ಪೂರ್ಣಗೊಳಿಸುವುದಾಗಿ ತಿಳಿಸಿದೆ. ಇದು ಯೋಜನೆ ಬಗ್ಗೆ ಸಂಸ್ಥೆಗೆ ಇರುವ ಬದ್ಧತೆಯನ್ನು ತೋರಿಸುತ್ತದೆ ಎಂದು ತಿಳಿಸಿದ್ದಾರೆ.

ಮೆಟ್ರೋ ಉತ್ತಮ: ಉಪನಗರ ರೈಲು ಯೋಜನೆಯಗೂ ಎಂಟು ತಿಂಗಳ ನಂತರ ಮಂಜೂರಾಗಿದ್ದ ನಮ್ಮ ಮೆಟ್ರೋ ರೈಲು ಯೋಜನೆ ಉತ್ತಮವಾಗಿ ಸಾಗುತ್ತಿದ್ದು, ಎರಡನೇ ಹಂತದ ಕಾಮಗಾರಿ ತಲುಪಿದೆ. ಆದರೆ, ಉಪನಗರ ರೈಲು ಯೋಜನೆಗೆ ಸೂಕ್ತ ಪೂರ್ವಸಿದ್ಧತಾ ಕಾರ್ಯ ಮಾಡದಿರುವುದೇ ಯೋಜನೆ ತಡವಾಗಲು ಕಾರಣವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ದೇಶದಲ್ಲೇ ಮೊದಲು ಬೆಂಗಳೂರು ಮೆಟ್ರೋದಲ್ಲಿ 5ಜಿ ಪ್ರಯೋಗ ಯಶಸ್ವಿ

ಜು. 25ರಿಂದ ಸುರತ್ಕಲ್‌ ರೈಲು ನಿಲ್ದಾಣದಲ್ಲಿ ಪಿಆರ್‌ಎಸ್‌ ಕೌಂಟರ್‌ ಕಾರ್ಯಾರಂಭ
ಮಂಗಳೂರು: ಕೊಂಕಣ ಮಾರ್ಗದ ಸುರತ್ಕಲ್‌ ರೈಲು ನಿಲ್ದಾಣದಲ್ಲಿ ಜು.25ರಿಂದ ಪಿಆರ್‌ಎಸ್‌(ಪ್ಯಾಸೆಂಜರ್‌ ರಿಸರ್ವೇಷನ್‌ ಸಿಸ್ಟಮ್‌)ಮುಂಗಡ ಟಿಕೆಟ್‌ ಬುಕ್ಕಿಂಗ್‌ ಕೌಂಟರ್‌ ಕಾರ್ಯಾಚರಿಸಲಿದೆ.

ಪ್ರತಿದಿನ ಬೆಳಗ್ಗೆ 8ರಿಂದ ಮಧ್ಯಾಹ್ನ 2 ಗಂಟೆ ವರೆಗೆ ಈ ಕೌಂಟರ್‌ ತೆರೆದಿರುತ್ತದೆ. ಇದುವರೆಗೆ ಕೊಂಕಣ ಮಾರ್ಗದಲ್ಲಿ 17 ಪಿಆರ್‌ಎಸ್‌ ಕೌಂಟರ್‌ಗಳು ಕಾರ್ಯನಿರ್ವಹಿಸಿದಂತಾಗುತ್ತದೆ ಎಂದು ಕೊಂಕಣ ರೈಲ್ವೆ ಪ್ರಕಟಣೆ ತಿಳಿಸಿದೆ.