ಹುಬ್ಬಳ್ಳಿ ಕೇಸ್‌ ಓಪನ್‌ ಮಾಡಿರುವ ಸಂಬಂಧಪಟ್ಟಂತೆ ರಾಜ್ಯಾದ್ಯಂತ ಹಿಂದು ಕಾರ್ಯಕರ್ತರ ಆಕ್ರೋಶದ ನಡುವೆ ಸಿದ್ಧರಾಮತ್ಯ ಅವರ ಸರ್ಕಾರ ದತ್ತಪೀಠ ಕೇಸ್‌ ರೀ ಓಪನ್‌ ಮಾಡುವ ನಿಟ್ಟಿನಲ್ಲಿ ಸಮನ್ಸ್‌ ನೀಡಿದೆ. ಇದಕ್ಕೆ ಬಿಜೆಪಿ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೆಂಗಳೂರು (ಜ.4): 31 ವರ್ಷಗಳ ಬಳಿಕ ಹಿಂದು ಕಾರ್ಯಕರ್ತನ ಮೇಲಿನ ಕೇಸ್‌ಅನ್ನು ಓಪನ್‌ ಮಾಡಿ ವ್ಯಕ್ತಿಯನ್ನು ಬಂಧಿಸಿದ ಸಂಬಂಧಪಟ್ಟಂತೆ ರಾಜ್ಯಾದ್ಯಂತ ಆಕ್ರೋಶ ವ್ಯಕ್ತವಾಗಿರುವ ನಡುವೆಯೇ ರಾಜ್ಯ ಸರ್ಕಾರ ಮತ್ತೊಂದು ಪ್ರಚೋದನಕಾರಿ ನಿರ್ಧಾರವನ್ನು ತೆಗೆದುಕೊಂಡಿದ್ದಾಗಿ ವರದಿಯಾಗಿದೆ. 2017ರ ದತ್ತಪೀಠ ಹೋರಾಟಗಾರ ಮೇಲಿನ ಕೇಸ್ ರೀ ಓಪನ್ ಮಾಡುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಸಮನ್ಸ್‌ ನೀಡಿದ್ದಾಗಿ ಹಿಂದು ಕಾರ್ಯಕರ್ತರು ತಿಳಿಸಿದ್ದಾರೆ. 7 ವರ್ಷದ ಬಳಿಕ ದತ್ತಪೀಠ ಹೋರಾಟಗಾರ ವಿರುದ್ಧ ತನಿಖೆ ನಡೆಯುವ ಸಾಧ್ಯತೆ ಇದೆ. 2017ರಲ್ಲಿ ದತ್ತಪೀಠದ ಗೋರಿ ಒಡೆದಿರುವ ಪ್ರಕರಣಕ್ಕೆ ಸಂಬಂದಪಟ್ಟಂತೆ ಜನವರಿ 8ಕ್ಕೆ ವಿಚಾರಣೆಗೆ ಹಾಜರಾಗಲು ಕೋರ್ಟ್‌ ಸಮನ್ಸ್‌ ನೀಡಿದೆ. ಬಿಜೆಪಿ ಹಿಂಪಡೆದ ಕೇಸ್​​ಗೆ ಕಾಂಗ್ರೆಸ್ ಮರು ಜೀವ ನೀಡಿದಂತಾಗಿದೆ. 14 ಹಿಂದೂ ಕಾರ್ಯಕರ್ತರ ಮೇಲಿನ ಕೇಸ್​ ಮರು ತನಿಖೆ ನಡೆಸುವ ಸಾಧ್ಯತೆ ಇದೆ.

Add Asianetnews Kannada as a Preferred SourcegooglePreferred

2017ರಲ್ಲಿ ದತ್ತಪೀಠದಲ್ಲಿ ಗೋರಿ ಒಡೆದಿದ್ದ ಕಾರಣಕ್ಕೆ ಇವರ ಮೇಲೆ ಕೇಸ್‌ ದಾಖಲು ಮಾಡಲಾಗಿತ್ತು. ಬಳಿಕ ಬಿಜೆಪಿ ಸರ್ಕಾರ ಈ ಕೇಸ್‌ಗಳನ್ನು ಹಿಂಪಡೆದುಕೊಂಡಿತ್ತು ಈಗ ಜ.8ಕ್ಕೆ ಇದೇ ಪ್ರಕರಣದ ವಿಚಾರಣೆಗೆ ಒಳಗಾಗುವಂತೆ ಕೋರ್ಟ್‌ ಸಮನ್ಸ್‌ ನೀಡಿದೆ. ಹಿಂದೂ ಕಾರ್ಯಕರ್ತರಿಂದ ಸರ್ಕಾರದ ವಿರುದ್ಧ ಆರೋಪ ಮಾಡಲಾಗಿದೆ.

ಈ ವಿಚಾರವಾಗಿ ಆಕ್ರೋಶ ವ್ಯಕ್ತಪಡಿಸಿರುವ ಶಾಸಕ ಪಿ ರಾಜೀವ್, ವಿನಾಶಕಾಲೇ ವೀಪರಿತ ಬುದ್ಧಿ ಎನ್ನುವಂತೆ ಈ ಸರ್ಕಾರ ಆಡುತ್ತಿದೆ. ದತ್ತಪೀಠದ ಕೇಸ್ ಗಳು ರೀ ಓಪನ್ ಮಾಡುವ ಮೂಲಕ ಹಿಂದುಗಳ ಮೇಲೆ ಎಷ್ಟು ಅಸೂಯೇ ಎಂದು ತೋರಿಸಿಕೊಟ್ಟಿದೆ. ಸರ್ಕಾರ ಯಾಕೆ ಚೆಲ್ಲಾಟ ಆಡುತ್ತಿದೆ. ಜನತೆ ಭಾವನೆಗಳ ಜೊತೆಯ ಈ ರೀತಿ ಹುಚ್ಚಾಟದ ನಿರ್ಣಯ ಕೈಗೊಳ್ಳಬೇಡಿ. ದೀಪ ಆರುವ ಮುನ್ನ ಹೆಚ್ಚು ಉರಿಯುತ್ತದೆ. ಕಾಂಗ್ರೆಸ್ ಅಂದ್ರೆ ಹಿಂದುಗಳ ಭಯ ಪಡೆಬೇಕು ಆ ರೀತಿ ಮಾಡುತ್ತಿದ್ದೀರಿ. ಯಾವ ಶಾಸಕರಿಗೆ,ಕ್ಷೇತ್ರಕ್ಕೆ ಒಂದು ಪೈಸೆ ಹಣ ಬಿಡುಗಡೆ ಮಾಡುವುದಕ್ಕೆ ಆಗುತ್ತಿಲ್ಲ. ಶಾಸಕರಿಗೆ ಕ್ಷೇತ್ರದಲ್ಲಿ ಒಡಾಡುವುದಕ್ಕೆ ಬಿಡುತ್ತಿಲ್ಲ. ಅನುದಾನ ವಿಚಾರವನ್ನ ಮರೆಮಾಚುವ ಸಲುವಾಗಿ ಈ ಕೆಲಸ ಮಾಡುತ್ತಿದ್ದಿರಿ. ತಕ್ಷಣ ಸರ್ಕಾರ ಎಚ್ಚೆತ್ತುಕೊಳ್ಳಬೇಕು. ನಮ್ಮ ಸರ್ಕಾರದಲ್ಲಿ ಹಿಂದುಗಳ ಸಹ ಬಾಳ್ವೆಯಿಂದ ಇರಲು ಬಿಡುವುದಿಲ್ಲ ಎಂದು ಎದೆ ಮೇಲೆ ಬರೆದುಕೊಂಡು ಬಿಡಿ. ಎಲ್ಲಾ ಶಾಸಕರು,ಸಚಿವರು ಒಂದು ಲೇಬಲ್ ಹಾಕಿಕೊಂಡು ಓಡಾಡಲಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸ್ಪಷ್ಟೀಕರಣ ನೀಡಿದ ಸರ್ಕಾರ: ಕೆಲವು ದೃಶ್ಯ ಮಾಧ್ಯಮಗಳಲ್ಲಿ ಬಾಬಾಬುಡನ್ ಗಿರಿ ಯಲ್ಲಿ ಗೋರಿ ದ್ವಂಸ ಪ್ರಕರಣವನ್ನು ರೀ ಓಪನ್ ಮಾಡಲಾಗಿದೆ ಎನ್ನುವ ಸುದ್ದಿ ಪ್ರಸಾರವಾಗುತ್ತಿದ್ದು ಇದು ಅಪ್ಪಟ ತಪ್ಪು ಮಾಹಿತಿ ಹಾಗೂ ಸುಳ್ಳಿನಿಂದ ಕೂಡಿದ್ದಾಗಿದೆ. 2017 ರಲ್ಲಿ ದಾಖಲಾಗಿದ್ದ ಪ್ರಕರಣದ ಸಹಜ ಕಾನೂನು ಪ್ರಕ್ರಿಯೆಯ ಭಾಗವಾಗಿ ಆರೋಪಿಗಳಿಗೆ ನ್ಯಾಯಾಲಯದ ಸಮನ್ಸ್ ಜಾರಿ ಆಗಿದೆ ಅಷ್ಟೆ. 2017 ರಲ್ಲಿ ದಾಖಲಾಗಿದ್ದ ಪ್ರಕರಣಕ್ಕೆ ಸಂಬಂಧಪಟ್ಟಂತೆ 2020 ರ ಮಾರ್ಚ್ 19 ರಂದು ವಿಚಾರಣೆಗೆ ಅನುಮತಿಗಾಗಿ ಸರ್ಕಾರಕ್ಕೆ ಮನವಿ ಮಾಡಲಾಗಿದೆ. ಅದರ ಆಧಾರದಲ್ಲಿ 2023 ರ ಸೆಪ್ಟೆಂಬರ್ 7 ರಂದು ಸರ್ಕಾರ ಅನುಮತಿ ನೀಡಿತ್ತು. 2023 ರ ಅಕ್ಟೋಬರ್ 24 ರಂದು ಆರೋಪಿಗಳ ವಿರುದ್ಧ ಆರೋಪಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿತ್ತು. ಬಳಿಕ ಈ ಕಾನೂನು ಪ್ರಕ್ರಿಯೆಯ ಮುಂದುವರೆದ ಭಾಗವಾಗಿ ನ್ಯಾಯಾಲಯದಿಂದ ಸಮನ್ಸ್ ಜಾರಿಯಾಗಿದ್ದು ಜನವರಿ 8 ರಂದು ನ್ಯಾಯಾಲಯಕ್ಕೆ ಹಾಜರಾಗುವಂತೆ ನ್ಯಾಯಾಲಯದಿಂದಲೇ ಸಮನ್ಸ್ ಜಾರಿಯಾಗಿದೆ. ಇದಿಷ್ಟೂ ಕೂಡ ಯಾವುದೇ ಒಂದು ಪ್ರಕರಣದಲ್ಲಿ ಸಹನವಾಗಿ ನಡೆಯುವ ಕಾನೂನು ಪ್ರಕ್ರಿಯೆಯಾಗಿದೆ. ಆದ್ದರಿಂದ ಪ್ರಕರಣದ ಮರು ತನಿಖೆಗೆ ಸರ್ಕಾರ ಮುಂದಾಗಿದೆ ಎನ್ನುವುದು ತಪ್ಪು ಮತ್ತು ದುರುದ್ದೇಶಪೂರಿತ ಸುಳ್ಳು ಸಂಗತಿಯಾಗಿದೆ.