-ಅರ್ಜಿದಾರರ ವಿರುದ್ಧದ ಕ್ರಿಮಿನಲ್‌ ಪ್ರಕರಣ ರದ್ದು ಪಡಿಸಿ ಆದೇಶ-ಕೊಪ್ಪಳದ ದಂಪತಿ ವಿರುದ್ಧ ಎಂದು ದೂರು ದಾಖಲಿಸಿದ್ದ ಪೊಲೀಸರು-ಮಗು ದತ್ತು ಪಡೆದು ಸಾಕಿದ  ಜರೀನಾ ಬೇಗಂ 

ಬೆಂಗಳೂರು(ಮೇ.12): ಪೋಷಕರಿಂದ ನೇರವಾಗಿ ಮಗುವನ್ನು ದತ್ತು ಪಡೆದು ಪೋಷಿಸುವುದು ಬಾಲ ನ್ಯಾಯ ಕಾಯ್ದೆಯಡಿ ಅಪರಾಧವಾಗುವುದಿಲ್ಲ ಎಂದು ಹೈಕೋರ್ಚ್‌ ಆದೇಶಿಸಿದೆ.

Add Asianetnews Kannada as a Preferred SourcegooglePreferred

ಮಗುವನ್ನು ದತ್ತು ಪಡೆದ ವೇಳೆ ಬಾಲ ನ್ಯಾಯ ಕಾಯ್ದೆಯ ನಿಯಮ ಪಾಲಿಸಿಲ್ಲ ಎಂಬ ಆರೋಪ ಸಂಬಂಧ ತಮ್ಮ ವಿರುದ್ಧದ ಪ್ರಕರಣ ರದ್ದುಪಡಿಸುವಂತೆ ಕೋರಿ ಕೊಪ್ಪಳದ ಝರೀನಾ ಬೇಗಂ ಮತ್ತಿತರರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಧಾರವಾಡ ಪೀಠದ ನ್ಯಾಯಮೂರ್ತಿ ಹೇಮಂತ್‌ ಚಂದನಗೌಡರ್‌ ಈ ಆದೇಶ ಮಾಡಿದ್ದಾರೆ.

ಅನಾಥ ಮಗುವೆಗೆ ತಾಯಿಯಾಗಲು ಬಯಿಸಿದ್ದ ಪಿಗ್ಗಿ, ನೋ ಎಂದ್ರಂತೆ ತಾಯಿ ಮಧು ಚೋಪ್ರಾ!

ಮೆಹಬೂಬ್‌ ಸಾಬ್‌ ನಬಿಸಾಬ್‌ ಮತ್ತು ಅವರ ಪತ್ನಿ ಬಾನು ಬೇಗಂ ಎಂಬುವರಿಗೆ 2018ರ ಸೆ.18ರಂದು ಅವಳಿ ಹೆಣ್ಣು ಮಕ್ಕಳು ಜನಿಸಿದ್ದವು. ಝರೀನಾ ಬೇಗಂ ಮತ್ತು ಅಬ್ದುಲ್‌ ಸಾಬ್‌ ಹುಡೇದಮನಿ ಅವರಿಗೆ ಮಕ್ಕಳು ಇರಲಿಲ್ಲ. ಇದರಿಂದ ಬಾನು ಬೇಗಂ ಅವರಿಂದ ಒಂದು ಮಗುವನ್ನು ಜರೀನಾ ಬೇಗಂ ದಂಪತಿ ದತ್ತು ಪಡೆದು ಸಾಕುತ್ತಿದ್ದರು. ಈ ಕುರಿತು .20 ಛಾಪಾ ಖಾಗದದ ಮೇಲೆ ಒಪ್ಪಂದ ಮಾಡಿಕೊಳ್ಳಲಾಗಿತ್ತು.

ಆದರೆ, ಪ್ರಕರಣದಲ್ಲಿ ಬಾಲ ನ್ಯಾಯ ಕಾಯ್ದೆ ಸೆಕ್ಷನ್‌-80 ಉಲ್ಲಂಘಿಸಲಾಗಿದೆ ಎಂದು ಆರೋಪಿಸಿ ಆರ್‌.ಜಯಶ್ರೀ ನರಸಿಂಹ ಎಂಬುವರು ದೂರು ದಾಖಲಿಸಿದ್ದರು. ಗಂಗಾವತಿ ಠಾಣಾ ಪೊಲೀಸರು ತನಿಖೆ ನಡೆಸಿ ಅರ್ಜಿದಾರರ ವಿರುದ್ಧ ದೋಷಾರೋಪ ಪಟ್ಟಿಸಲ್ಲಿಸಿದ್ದರು. ಅದನ್ನು ಆಧರಿಸಿ ಮ್ಯಾಜಿಸ್ಪ್ರೇಟ್‌ ಕೋರ್ಚ್‌ ಸಮನ್ಸ್‌ ಜಾರಿ ಮಾಡಿದ್ದನ್ನು ಪ್ರಶ್ನಿಸಿ ಅರ್ಜಿದಾರರು ಹೈಕೋರ್ಚ್‌ಗೆ ಅರ್ಜಿ ಸಲ್ಲಿಸಿದ್ದರು.

ಅರ್ಜಿ ಪುರಸ್ಕರಿಸಿರುವ ಹೈಕೋರ್ಚ್‌, ಬಾಲ ನ್ಯಾಯ ಕಾಯ್ದೆ (ಆರೈಕೆ ಮತ್ತು ಮಕ್ಕಳ ರಕ್ಷಣಾ)-2015ರ ಸೆಕ್ಷನ್‌ 80ರಲ್ಲಿ ಮಗು ಅನಾಥವಾಗಿದ್ದರೆ, ನಿರಾಶ್ರಿತವಾಗಿದ್ದರೆ ಅಥವಾ ಬಾಲಮಂದಿರಗಳಿಗೆ ಒಪ್ಪಿಸಿರುವ ಮಗುವಾಗಿದ್ದರೆ ಆ ಮಗುವನ್ನು ದತ್ತು ಪಡೆದ ಸಂದರ್ಭಗಳಲ್ಲಿ ಕಾಯ್ದೆಯ ನಿಯಮಗಳು ಅನ್ವಯವಾಗುತ್ತವೆ ಎಂದು ಅಭಿಪ್ರಾಯಪಟ್ಟಿತು.

ಹೊಟ್ಟೆಕಿಚ್ಚು ಪಡುವ ಮಕ್ಕಳ ಪಾಲಕರಿಗೆ ಕಿವಿಮಾತು

ಈ ಪ್ರಕರಣದಲ್ಲಿ ಮಗು ಅನಾಥ ಅಥವಾ ನಿರಾಶ್ರಿತರ ಮಗುವಲ್ಲ. ಇಲ್ಲವೇ ಬಾಲ ನ್ಯಾಯ ಕಾಯ್ದೆಯ ಸೆಕ್ಷನ್‌ 2(1),2(42) ಮತ್ತು 2(60)ರಡಿ ಬಾಲಮಂದಿರಗಳ ವಶಕ್ಕೆ ಒಪ್ಪಿಸಿರುವ ಮಗುವಲ್ಲ. ಮಗುವನ್ನು ಸ್ವಂತ ಪೋಷಕರು ಅಥವಾ ದತ್ತು ಪಡೆದಿರುವವರು ಅಥವಾ ಪಾಲಕರು ನಿರಾಶ್ರಿತ ಎಂದು ಘೋಷಿಸಿಲ್ಲ. ಸೆಕ್ಷನ್‌ 80 ಪ್ರಕಾರ ಮಕ್ಕಳನ್ನು ದತ್ತು ಪಡೆಯುವಾಗ ಯಾರು ಬಾಲ ನ್ಯಾಯ ಕಾಯ್ದೆ ನಿಯಮಗಳನ್ನು ಪಾಲಿಸುವುದಿಲ್ಲವೋ ಅಥವಾ ಉಲ್ಲಂಘಿಸುತ್ತಾರೋ ಅಂತಹವರ ವಿರುದ್ಧ ದಂಡನಾ ಕ್ರಮ ಕೈಗೊಳ್ಳಬಹುದು ಎಂದು ಅಭಿಪ್ರಾಯಪಟ್ಟಿತು.

ಅಲ್ಲದೆ, ಈ ಪ್ರಕರಣದಲ್ಲಿ ಜರೀನಾ ಬೇಗಂ ಅವರು ಮಗುವನ್ನು ಸ್ವತಃ ಪೋಷಕರಿಂದ ನೇರವಾಗಿ ದತ್ತು ಪಡೆದು ಪೋಷಿಸುತ್ತಿದ್ದಾರೆ. ಆದ್ದರಿಂದ ಅವರ ವಿರುದ್ಧ ಪ್ರಕರಣ ದಾಖಲಿಸಿರುವುದು ಸರಿಯಲ್ಲ ಎಂದು ಅಭಿಪ್ರಾಯಪಟ್ಟು ಅರ್ಜಿದಾರರ ವಿರುದ್ಧದ ಕ್ರಿಮಿನಲ್‌ ಪ್ರಕರಣ ರದ್ದುಪಡಿಸಿ ಆದೇಶಿಸಿದೆ.