Krishi Mela Bengaluru: ಕೃಷಿ ಮೇಳಕ್ಕೆ 17.35 ಲಕ್ಷ ಜನ ಭೇಟಿ ದಾಖಲೆ
- ಕೃಷಿ ಮೇಳಕ್ಕೆ 17.35 ಲಕ್ಷ ಜನ ಭೇಟಿ ದಾಖಲೆ
- 5 ವರ್ಷದಲ್ಲೇ ಅತ್ಯಧಿಕ ಜನರ ಭೇಟಿ ನೀಡಿ
- ಒಂದೇ ದಿನ 7.16 ಲಕ್ಷ ಜನ ಭೇಟಿಯೂ ದಾಖಲೆ
- 4 ದಿನದಲ್ಲಿ 9 ಕೋಟಿ ವ್ಯವಹಾರ
ಬೆಂಗಳೂರು (ನ.7) : ಬೆಂಗಳೂರು ಕೃಷಿ ವಿಶ್ವವಿದ್ಯಾಲಯವು ಹೆಬ್ಬಾಳದ ಜಿಕೆವಿಕೆಯಲ್ಲಿ ಆಯೋಜಿಸಿದ್ದ ‘ಕೃಷಿ ಮೇಳ’ಕ್ಕೆ ಭಾನುವಾರ ಸಂಜೆ ವಿದ್ಯುಕ್ತ ತೆರೆ ಬಿತ್ತು. ನಾಲ್ಕು ದಿನಗಳಲ್ಲಿ ದಾಖಲೆಯ 17.35 ಲಕ್ಷ ಜನ ಭೇಟಿ ನೀಡಿದ್ದು, .9.01 ಕೋಟಿ ವಹಿವಾಟು ನಡೆದಿದೆ.
ಎಲ್ಲ ಪೌರ ಕಾರ್ಮಿಕರ ಕಾಯಂಗೆ ಕ್ರಮ: ಸಿಎಂ
ಕೃಷಿ ಯಂತ್ರೋಪಕರಣ, ಗೃಹೋಪಯೋಗಿ ವಸ್ತುಗಳು, ಸಾವಯವ ಮತ್ತು ಸಿರಿಧಾನ್ಯದಿಂದ ತಯಾರಿಸಿದ ತಿನಿಸು, ಬೇಕರಿ ಪದಾರ್ಥ, ಕಳೆ ನಾಶಕ, ಅಲಂಕಾರಿಕ ವಸ್ತುಗಳು ಹೆಚ್ಚಿನ ಪ್ರಮಾಣದಲ್ಲಿ ಮಾರಾಟವಾದವು. ದುಬಾರಿ ಬೆಲೆಯ ಕುರಿ, ಕೋಳಿ, ಆಡು, ಅಲಂಕಾರಿಕ ಮೀನುಗಳು ಕೃಷಿ ಇಲಾಖೆ ಹೊರತಂದ ಹೊಸ ತಳಿಗಳು, ತಾಂತ್ರಿಕ ಆವಿಷ್ಕಾರಗಳು ವಿಶೇಷ ಗಮನ ಸೆಳೆದವು.
ಹಲವು ಜಿಲ್ಲೆಗಳಿಂದ ರೈತರು ಆಗಮಿಸಿ ಮೇಳದ ಉಪಯೋಗ ಪಡೆದರು. ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳೂ ಗಣನೀಯವಾಗಿ ಪಾಲ್ಗೊಂಡಿದ್ದರು. ನಾಲ್ಕು ದಿನವೂ ವಿವಿಧ ಜಿಲ್ಲೆಗಳ ಸಾಧಕ ರೈತರನ್ನು ಗೌರವಿಸಲಾಯಿತು. ಮೊದಲನೇ ದಿನವಾದ ಗುರುವಾರ 1.60 ಲಕ್ಷ ಜನ ಭೇಟಿ ನೀಡಿದ್ದು .1.12 ಕೋಟಿ ವಹಿವಾಟು ನಡೆದಿತ್ತು. ಶುಕ್ರವಾರ 2.45 ಲಕ್ಷ ಜನ ಭೇಟಿ ನೀಡಿದ್ದು .2.10 ಕೋಟಿ, ಮೂರನೇ ದಿನವಾದ ಶನಿವಾರ ಕೃಷಿ ಮೇಳದ ಇತಿಹಾಸದಲ್ಲೇ ದಾಖಲೆಯ 7.16 ಲಕ್ಷ ಜನ ಭೇಟಿ ನೀಡಿದ್ದು, .2.85 ಕೋಟಿ ವಹಿವಾಟು ನಡೆದಿತ್ತು.
5 ವರ್ಷದಲ್ಲೇ ದಾಖಲೆ
ಭಾನುವಾರ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸಬಹುದು ಎಂದು ನಿರೀಕ್ಷಿಸಲಾಗಿತ್ತಾದರೂ ಮೋಡ ಮುಸುಕಿದ ವಾತಾವರಣದಿಂದಾಗಿ ಹೆಚ್ಚಿನ ಸಂಖ್ಯೆಯಲ್ಲಿ ಜನತೆ ಜಿಕೆವಿಕೆಯತ್ತ ಆಗಮಿಸಲಿಲ್ಲ. 6.14 ಲಕ್ಷ ಜನ ಭೇಟಿ ನೀಡಿದ್ದು ವಹಿವಾಟು ಮಾತ್ರ 2.94 ಕೋಟಿ ರುಪಾಯಿಗಳಾಗಿದೆ. ಕೃಷಿ ವಿವಿ ನೀಡಿದ ರಿಯಾಯಿತಿ ದರದ ಮುದ್ದೆ ಊಟವನ್ನು 4 ದಿನದಲ್ಲಿ 43,500 ಜನ ಸವಿದಿದ್ದಾರೆ.
ಕಳೆದ ಐದು ವರ್ಷದಲ್ಲೇ ದಾಖಲೆಯ ಸಂಖ್ಯೆಯಲ್ಲಿ ಜನತೆ ಈ ಬಾರಿ ಕೃಷಿ ಮೇಳಕ್ಕೆ ಆಗಮಿಸಿದ್ದು, ವಿಶೇಷವಾಗಿದೆ. 2018-19ರಲ್ಲಿ 13.10 ಲಕ್ಷ ಜನ, 2019-20 ರಲ್ಲಿ 14.50 ಲಕ್ಷ, 2020-21ರಲ್ಲಿ ಕೊರೋನಾ ಹಿನ್ನೆಲೆಯಲ್ಲಿ ಸೀಮಿತ ಸಂಖ್ಯೆಗೆ ಮಾತ್ರ ಪ್ರವೇಶ ಮಿತಿಗೊಳಿಸಲಾಗಿತ್ತು. 2021-22ರಲ್ಲಿ 8.10 ಲಕ್ಷ ಜನ ಮಾತ್ರ ಮೇಳಕ್ಕೆ ಭೇಟಿ ನೀಡಿದ್ದರು. ಈಗ ಅದು 17.35 ಲಕ್ಷ ಜನರನ್ನು ತಲುಪಿದೆ.
ನರ್ಸರಿಯಲ್ಲಿ ಖರೀದಿ ಜೋರು
ಪ್ರತಿ ಬಾರಿ ನಡೆದ ಕೃಷಿ ಮೇಳಕ್ಕಿಂತ ಈ ಸಲ ನರ್ಸರಿಗಳಲ್ಲಿ ಸಸಿಗಳ ಮಾರಾಟ ಜೋರಾಗಿತ್ತು. ಮಾವು, ಹಲಸಿನ ಸಸಿ ಸೇರಿದಂತೆ ಅಲಂಕಾರಿಕ ಸಸಿಗಳನ್ನು ಸಾರ್ವಜನಿಕರು ಹೆಚ್ಚಿನ ಪ್ರಮಾಣದಲ್ಲಿ ಖರೀದಿಸಿದರು. ಕಟ್ಟಿಗೇನಹಳ್ಳಿಯ ಬೆಂಗಳೂರು ನರ್ಸರಿ, ಬೆಂಗಳೂರು ಉತ್ತರ ತಾಲೂಕಿನ ಮುತ್ತುಗದ ಹಳ್ಳಿಯ ಹಿತಕಾರಿ ನರ್ಸರಿ, ಕೋಲಾರದ ಬೂರಗನಹಳ್ಳಿಯ ಶಿವಾ ನರ್ಸರಿ ಸೇರಿದಂತೆ ಹಲವು ನರ್ಸರಿಗಳಲ್ಲಿ ಉತ್ತಮ ವ್ಯಾಪಾರವಾಗಿದೆ.
ಪುತ್ತೂರಿನ ನಿನ್ನಿಕಲ್ಲು ನರ್ಸರಿಯ ಅನಿಲ್ ಮಾತನಾಡಿ, ‘ಒಂದೂವರೆ ವರ್ಷಕ್ಕೇ ಫಲ ಕೊಡುವ ನಿನಿತಾಯ್ ಹಲಸಿನ ಸಸಿಗಳನ್ನು .200ಕ್ಕೆ ಒಂದರಂತೆ ಮಾರಾಟ ಮಾಡಿದೆ. ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಭಾನುವಾರ ಮಧ್ಯಾಹ್ನವೇ ಹಲಸಿನ ಸಸಿಗಳು ಖಾಲಿ ಆದವು. 800 ತೆಂಗಿನ ಸಸಿಗಳ ವ್ಯಾಪಾರವೂ ಆಗಿದ್ದು, ಕಳೆದ ಬಾರಿಗೆ ಹೋಲಿಸಿದರೆ ಈ ಸಲ ಉತ್ತಮ ವಹಿವಾಟಾಗಿದೆ’ ಎಂದು ಸಂತಸ ವ್ಯಕ್ತಪಡಿಸಿದರು.
Bengaluru News: 2 ಸಮಾರಂಭಗಳಿಂದಾಗಿ ನಲುಗಿದ ಬಳ್ಳಾರಿ ರಸ್ತೆ!
ಕೃಷಿ ಮೇಳಕ್ಕೆಂದೇ ಆಂಧ್ರದ ಗುಂಟೂರಿನಿಂದ ನಾಟಿ ಬೀಜಗಳನ್ನು ಮಾರಾಟ ಮಾಡಲು ಕೃಷಿ ಮೇಳಕ್ಕೆ ಆಗಮಿಸಿದ್ದ ರಾಮಿರೆಡ್ಡಿ ಮಾತನಾಡಿ, ‘ಒಳ್ಳೆಯ ವ್ಯಾಪಾರವಾಯಿತು. ಮೆಂತ್ಯ, ಕೊತ್ತಂಬರಿ, ಪುಂಡಿ, ದಂಟು, ಹಾಗಲಕಾಯಿ ಬೀಜಗಳು ಹೆಚ್ಚು ಮಾರಾಟವಾದವು’ ಎಂದು ಖುಷಿ ಹಂಚಿಕೊಂಡರು.