Bengaluru News: 2 ಸಮಾರಂಭಗಳಿಂದಾಗಿ ನಲುಗಿದ ಬಳ್ಳಾರಿ ರಸ್ತೆ!
- 2 ಸಮಾರಂಭಗಳಿಂದಾಗಿ ನಲುಗಿದ ಬಳ್ಳಾರಿ ರಸ್ತೆ!
- ಪ್ರಯಾಣಿಕರು ಹೈರಾಣ
- ಕೃಷಿ ಮೇಳ, ಕಾಂಗ್ರೆಸ್ನ ಸರ್ವೋದಯ ಕಾರ್ಯಕ್ರಮ ಹಿನ್ನೆಲೆ
- ತಾಸುಗಟ್ಟಲೇ ಕಿ.ಮೀ. ಉದ್ದ ವಾಹನ ದಟ್ಟಣೆ
ಬೆಂಗಳೂರು (ನ.7) : ನಗರದಲ್ಲಿ ನಡೆಯುತ್ತಿರುವ ‘ಕೃಷಿ ಮೇಳ’ ಹಾಗೂ ಕಾಂಗ್ರೆಸ್ ಪಕ್ಷದ ಸರ್ವೋದಯ ಸಮಾವೇಶದ ಹಿನ್ನೆಲೆಯಲ್ಲಿ ಭಾನುವಾರ ಬಳ್ಳಾರಿ ರಸ್ತೆಯಲ್ಲಿ ತಾಸುಗಟ್ಟಲೇ ಕಿಲೋ ಮೀಟರ್ನಷ್ಟುಉದ್ದಕ್ಕೆ ವಾಹನ ಸಂಚಾರ ದಟ್ಟಣೆ ಉಂಟಾಗಿ ವಾಹನ ಸವಾರರು ಹಾಗೂ ಸಾರ್ವಜನಿಕರು ಕಿರಿಕಿರಿ ಅನುಭವಿಸಿದರು.
ಮಲ್ಲಿಕಾರ್ಜುನ ಖರ್ಗೆ ಒಗ್ಗಟ್ಟಿನ ಟಾನಿಕ್: ಬೆಂಗಳೂರಲ್ಲಿ ಕಾಂಗ್ರೆಸ್ ಸರ್ವೋದಯ ಸಮಾವೇಶ
ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಜಿಕೆವಿಕೆ ಆವರಣದಲ್ಲಿ ನಡೆಯುತ್ತಿರುವ ಕೃಷಿ ಮೇಳಕ್ಕೆ ಭಾನುವಾರ ಲಕ್ಷಾಂತರ ಜನರು ಭೇಟಿ ನೀಡಿದ್ದರು. ಇದರ ಜತೆಗೆ ಎಐಸಿಸಿ ನೂತನ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ರೋಡ್ ಶೋ ಮುಖಾಂತರ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಅರಮನೆ ಮೈದಾನಕ್ಕೆ ಬಂದಿದ್ದರು. ಅರಮನೆ ಮೈದಾನದಲ್ಲಿ ನಡೆದ ಕಾಂಗ್ರೆಸ್ನ ಸರ್ವೋದಯ ಸಮಾವೇಶದಲ್ಲಿ ಭಾಗವಹಿಸಲು ರಾಜ್ಯದ ವಿವಿಧೆಡೆಯಿಂದ ಸಾವಿರಾರು ಸಂಖ್ಯೆಯ ಕಾರ್ಯಕರ್ತರು ವಾಹನಗಳಲ್ಲಿ ಅರಮನೆ ಮೈದಾನಕ್ಕೆ ಬಂದಿದ್ದರು. ಹೀಗಾಗಿ ಭಾನುವಾರ ಬೆಳಗ್ಗೆ 11ರಿಂದ ಸಂಜೆ 8ರವರೆಗೆ ಬಳ್ಳಾರಿ ರಸ್ತೆಯಲ್ಲಿ ವಾಹನ ಸಂಚಾರ ದಟ್ಟಣೆ ಉಂಟಾಗಿತ್ತು. ಸಂಜೆ ವೇಳೆ ಬಳ್ಳಾರಿ ರಸ್ತೆಯಲ್ಲಿ ಕಿಲೋ ಮೀಟರ್ನಷ್ಟುಉದ್ದಕ್ಕೆ ವಾಹನಗಳು ಸಾಲುಗಟ್ಟಿನಿಂತಿದ್ದವು.
ಬಳ್ಳಾರಿ ರಸ್ತೆಯಲ್ಲಿ ಅರಮನೆ ಸುತ್ತಮುತ್ತಲ ರಸ್ತೆಗಳು, ಸದಾಶಿವ ನಗರ, ಕಾವೇರಿ ಜಂಕ್ಷನ್, ಮೇಖ್ರಿ ವೃತ್ತ, ಹೆಬ್ಬಾಳ ಸೇರಿದಂತೆ ಹಲವು ರಸ್ತೆಗಳಲ್ಲಿ ವಾಹನ ಸಂಚಾರ ದಟ್ಟಣೆ ಉಂಟಾಗಿತ್ತು. ಇನ್ನು ಜಿಕೆವಿಕೆ ಆವರಣದಲ್ಲಿ ನಡೆದ ಕೃಷಿ ಮೇಳ ಭಾನುವಾರ ಕಡೆಯ ದಿನ ಹಾಗೂ ವಾರದ ರಜೆ ಹಿನ್ನೆಲೆಯಲ್ಲಿ ಭಾರೀ ಸಂಖ್ಯೆಯಲ್ಲಿ ಜನರು ಕೃಷಿ ಮೇಳಕ್ಕೆ ಬಂದಿದ್ದರು. ಹೀಗಾಗಿ ಹೆಬ್ಬಾಳ, ಬ್ಯಾಟರಾಯನಪುರ, ಯಲಹಂಕ ಸೇರಿದಂತೆ ಸುತ್ತಮುತ್ತಲ ರಸ್ತೆಗಳಲ್ಲಿ ವಾಹನ ವಾಹನ ಸಂಚಾರ ದಟ್ಟಣೆ ಹೆಚ್ಚಳವಾಗಿತ್ತು.
ಬಿಜೆಪಿ ಸೋಲಿಸಿ ಮಲ್ಲಿಕಾರ್ಜುನ ಖರ್ಗೆಗೆ ಅಭಿನಂದನೆ: ಸಿದ್ದರಾಮಯ್ಯ
ಏರ್ಪೋರ್ಚ್ ತಲುಪಲು ಪ್ರಯಾಣಿಕರ ಹರಸಾಹಸ
ಇನ್ನು ನಗರದಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಹಾಗೂ ಅಲ್ಲಿಂದ ನಗರಕ್ಕೆ ಬರುವ ಪ್ರಯಾಣಿಕರು ಈ ಸಂಚಾರ ದಟ್ಟಣೆಯಲ್ಲಿ ಸಿಲುಕಿ ಸುಸ್ತು ಹೊಡೆದರು. ಕಾವೇರಿ ಜಂಕ್ಷನ್ನಿಂದ ಸಾದಹಳ್ಳಿ ಗೇಟ್ವರೆಗೆ ಅಲ್ಲಲ್ಲಿ ವಾಹನಗಳು ಕಿಲೋ ಮೀಟರ್ನಷ್ಟುಉದ್ದಕ್ಕೆ ನಿಂತಿದ್ದವು. ಮಳೆ, ಟ್ರಾಫಿಕ್ ಜಾಮ್: ಮಧ್ಯಾಹ್ನದ ವೇಳೆ ಕೆಲ ಕಾಲ ನಗರದಲ್ಲಿ ಸುರಿದ ಮಳೆಯಿಂದಾಗಿ ಬೈಕ್ ಸವಾರರು ನಡು ರಸ್ತೆಯಲ್ಲಿ ದೊಡ್ಡ ವಾಹನಗಳ ನಡುವೆ ಸಿಲುಕೊಂಡ ಮಳೆಯಲ್ಲೇ ನೆನೆದರು.