ರಾಜ್ಯದಲ್ಲಿ ಧರ್ಮದಂಗಲ್ ಮಧ್ಯೆಯೂ ಮುಸ್ಲಿಂ ಕುಟುಂಬ ಆಂಜನೇಯನ ದರ್ಶನ ಮಾಡಿದ್ದಾರೆ. ಇಂದು ಬೆಳಗ್ಗೆಯೇ ಅಂಜನಾದ್ರಿಗೆ ಸಿಂಧನೂರು ತಾಲೂಕಿನ ಗಂಜಹಳ್ಳಿಯಿಂದ ಬಂದ ಮುಸ್ಲಿಂ ಕುಟುಂಬ 580 ಮೆಟ್ಟಲು ಹತ್ತಿ ಆಂಜನೇಯನ ದರ್ಶನ ಪಡೆದಿದ್ದಾರೆ. 

ಕೊಪ್ಪಳ (ಡಿ.09): ರಾಜ್ಯದಲ್ಲಿ ಧರ್ಮದಂಗಲ್ ಮಧ್ಯೆಯೂ ಮುಸ್ಲಿಂ ಕುಟುಂಬ ಆಂಜನೇಯನ ದರ್ಶನ ಮಾಡಿದ್ದಾರೆ. ಇಂದು ಬೆಳಗ್ಗೆಯೇ ಅಂಜನಾದ್ರಿಗೆ ಸಿಂಧನೂರು ತಾಲೂಕಿನ ಗಂಜಹಳ್ಳಿಯಿಂದ ಬಂದ ಮುಸ್ಲಿಂ ಕುಟುಂಬ 580 ಮೆಟ್ಟಲು ಹತ್ತಿ ಆಂಜನೇಯನ ದರ್ಶನ ಪಡೆದಿದ್ದಾರೆ. ಸುಮಾರು 8 ಜನರ ತಂಡ ಆಂಜನೇಯನ ದರ್ಶನಕ್ಕಾಗಿ ಆಗಮಿಸಿದ್ದರು.

Add Asianetnews Kannada as a Preferred SourcegooglePreferred

ಅಂಜನಾದ್ರಿಗೆ ಲಕ್ಷಕ್ಕೂ ಅಧಿಕ ಆಂಜನೇಯ ಭಕ್ತರ ಭೇಟಿ: ಹನುಮದ್‌ ವ್ರತ ದಿನವಾಗಿರುವ ಸೋಮವಾರ ಹನುಮನ ಜನ್ಮಸ್ಥಳವಾದ ಇಲ್ಲಿಗೆ ಸಮೀಪದ ಅಂಜನಾದ್ರಿ ಬೆಟ್ಟಕ್ಕೆ ಲಕ್ಷಾಂತರ ಹನುಮ ಭಕ್ತರು ಹರಿದು ಬಂದಿದ್ದು, ಅಂಜನಾದ್ರಿ ಬೆಟ್ಟಸಂಪೂರ್ಣವಾಗಿ ಕೇಸರಿಮಯವಾಗಿತ್ತು. ರಾಜ್ಯದ ವಿವಿಧೆಡೆಗಳಿಂದ ಆಗಮಿಸಿದ್ದ ಹನುಮಮಾಲಾಧಾರಿಗಳು ಆಂಜನೇಯಸ್ವಾಮಿ ದೇವಾಲಯದಲ್ಲಿ ಮಾಲೆ ವಿಸರ್ಜಿಸಿ ವ್ರತಾಚರಣೆ ಅಂತ್ಯಗೊಳಿಸಿದರು.

Koppal: ರಾಜ್ಯಪಾಲರ ಆಗಮನದ ವೇಳೆ ಅಂಜನಾದ್ರಿಯಲ್ಲಿ ಪೂಜೆಗೆ ಪಟ್ಟು ಹಿಡಿದ ಅರ್ಚಕ ವಿದ್ಯಾದಾಸ ಬಾಬಾ

ಬೆಳಗ್ಗೆ 4 ಗಂಟೆಯಿಂದಲೇ ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿದ್ದ ಭಕ್ತರು ಬೆಟ್ಟ ಹತ್ತಿ ಆಂಜನೇಯನ ದರ್ಶನ ಮಾಡಿ ಪೂಜೆ ಸಲ್ಲಿಸಿ ಮಾಲೆ ವಿಸರ್ಜಿಸಿದರು. ದೇವಸ್ಥಾನದ ಮುಂದೆ ಇರುವ ಪಾದಗಟ್ಟೆಯಲ್ಲಿ ಗುರುಸ್ವಾಮಿಯವರು ಮಾಲಾಧಾರಿಗಳಿಂದ ಮಾಲೆ ವಿಸರ್ಜಿಸಿದರು. ಸುಮಾರು ಒಂದು ಲಕ್ಷಕ್ಕೂ ಹೆಚ್ಚು ಭಕ್ತರು ಆಗಮಿಸಿದ್ದರೆಂದು ಅಂದಾಜಿಸಲಾಗಿದೆ. ಅಂಜನಾದ್ರಿ ಬೆಟ್ಟದ ಹನುಮನ ದೇವಾಲಯದಲ್ಲಿ ಬೆಳಗ್ಗೆಯಿಂದಲೇ ಪವಮಾನ ಹೋಮ, ಹನುಮಾನ್‌ ಚಾಲೀಸ್‌ ಪಠಣ, ಭಜನೆ, ಸಂಗೀತ ಕಾರ್ಯಕ್ರಮಗಳು ಜರುಗಿದವು. ಇದಕ್ಕಿಂತ ಪೂರ್ವದಲ್ಲಿ ಆಂಜನೇಯ ಸ್ವಾಮಿಗೆ ವಿಶೇಷ ಪಂಚಾಮೃತಾಭಿಷೇಕ ನಡೆಯಿತು. ದೇಗುಲಕ್ಕೆ ವಿಶೇಷ ಹೂವಿನ ಅಲಂಕಾರ ಮಾಡಲಾಗಿತ್ತು.

ಜೈ ಶ್ರೀರಾಮ್‌, ಜೈ ಹನುಮಾನ್‌: ಅಂಜನಾದ್ರಿ ಬೆಟ್ಟ ಏರುತ್ತಿರುವ ಭಕ್ತರು ಜೈ ಶ್ರೀರಾಮ್‌, ಜೈ ಹನುಮಾನ್‌ ಎಂಬ ಘೋಷಣೆ ಹಾಕಿದರು. ಬೆಟ್ಟದ ಕೆಳಗೆ ಇರುವ ದ್ವಾರದಿಂದ ಬೆಟ್ಟದ ಮೇಲೆ ಆಂಜನೇಯ ದೇಗುಲದ ವರಿಗೂ ಭಕ್ತರು ಜಯಘೋಷ ಹಾಕಿದರು. ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಭಕ್ತರು ತುಂಗಭದ್ರಾ ನದಿಯಲ್ಲಿ ಸ್ನಾನ ಮಾಡಿ ಕೇಸರಿವಸ್ತ್ರಗಳನ್ನು ಉಟ್ಟುಕೊಂಡು ಮುನ್ನಡೆದರು.

ಹರಿದು ಬಂದ ಭಕ್ತ ಸಾಗರ: ಕಳೆದ ಮೂರು ದಿನಗಳಿಂದ ರಾಜದಾದ್ಯಂತದಿಂದ ಹನುಮಮಾಲಾಧಾರಿಗಳು ಸಾಗರೋಪಾದಿಯಲ್ಲಿ ಆಗಮಿಸಿದರು. ಬರುವ ಭಕ್ತರಿಗೆ ತಾಲೂಕು ಆಡಳಿತ ಎಲ್ಲ ಏರ್ಪಾಡು ಮಾಡಿತ್ತು. ಸನಿಹದಲ್ಲಿರುವ ದೇವಸ್ಥಾನಗಳು ಮತ್ತು ಮಂಟಪಗಳಲ್ಲಿ ವಾಸ್ತವ್ಯ ಹೂಡಲು ತಾಲೂಕು ಆಡಳಿತದ ಸಿಬ್ಬಂದಿ ವ್ಯವಸ್ಥೆ ಮಾಡಿದ್ದರು. ಸ್ಥಳೀಯರು ಕೆಲವರಿಗೆ ತಮ್ಮ ಮನೆಗಳನ್ನು ತಂಗಲು ಅವಕಾಶ ನೀಡಿ ಉಪಚಾರ ಮಾಡಿರುವುದು ವಿಶೇಷವಾಗಿದೆ.

ವಿಜಯಪುರದಲ್ಲೂ ಶುರುವಾಯ್ತು ಧರ್ಮ ಸಂಘರ್ಷ: ಧರ್ಮ ದಂಗಲ್‌ಗೆ ಸಾಕ್ಷಿಯಾಗುತ್ತಾ ಸಂಕ್ರಾಂತಿ ಜಾತ್ರೆ

ಪ್ರಸಾದ ವಿತರಣೆ: ಅಂಜನಾದ್ರಿ ಬೆಟ್ಟದ ಕೆಳಗೆ ವೇದಪಾಠ ಶಾಲೆ ಬಳಿ ಬರುವ ಭಕ್ತರಿಗೆ ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು. ಶಾಸಕ ಪರಣ್ಣ ಮುನವಳ್ಳಿ ಅವರು ಸ್ವತಃ ಭಕ್ತರಿಗೆ ಪ್ರಸಾದ ವಿತರಿಸಿದರು. ಅಲ್ಲದೇ ಹಿಂದೂಪರ ಸಂಘಟನೆ ಕಾರ್ಯಕರ್ತರು ಸ್ವಯಂ ಸೇವಕರಾಗಿ ಕಾರ್ಯನಿರ್ವಹಿಸಿದರು. ಅವರ ಜತೆಗೆ ತಾಲೂಕು ಆಡಳಿತ, ನಗರಸಭೆ ಸೇರಿದಂತೆ ವಿವಿಧ ಇಲಾಖೆಯ ಸಿಬ್ಬಂದಿ ಸೇವೆ ಸಲ್ಲಿಸಿದರು.