ಕೇಂದ್ರ ಸರ್ಕಾರವು ದೀರ್ಘಾವಧಿ ವೀಸಾಗಳಿಗೆ ವಿನಾಯ್ತಿ ನೀಡಿದ ಹಿನ್ನೆಲೆಯಲ್ಲಿ ಗಡೀಪಾರು ಸಂಕಷ್ಟಕ್ಕೆ ತುತ್ತಾಗಿದ್ದ 108 ಪಾಕಿಸ್ತಾನಿ ಪ್ರಜೆಗಳ ಪೈಕಿ ಸುಮಾರು 88 ಮಂದಿ ನಿರಾಳರಾಗಿದ್ದಾರೆ. 

ಬೆಂಗಳೂರು (ಏ.27): ಕೇಂದ್ರ ಸರ್ಕಾರವು ದೀರ್ಘಾವಧಿ ವೀಸಾ (ಲಾಂಗ್ ಟರ್ಮ್‌ ವೀಸಾ-ಎಲ್‌ಟಿವಿ)ಗಳಿಗೆ ವಿನಾಯ್ತಿ ನೀಡಿದ ಹಿನ್ನೆಲೆಯಲ್ಲಿ ಗಡೀಪಾರು ಸಂಕಷ್ಟಕ್ಕೆ ತುತ್ತಾಗಿದ್ದ ರಾಜ್ಯದಲ್ಲಿ ನೆಲೆಸಿರುವ 108 ಪಾಕಿಸ್ತಾನಿ ಪ್ರಜೆಗಳ ಪೈಕಿ ಸುಮಾರು 88 ಮಂದಿ ನಿರಾಳರಾಗಿದ್ದಾರೆ. ಕಾಶ್ಮೀರದ ಪಹಲ್ಗಾಂನಲ್ಲಿ ಪ್ರವಾಸಿಗರ ನರಮೇಧ ಘಟನೆ ಬಳಿಕ ಪಾಕಿಸ್ತಾನ ಪ್ರಜೆಗಳ ಗಡೀಪಾರಿಗೆ ಕೇಂದ್ರ ಸರ್ಕಾರ ಸೂಚಿಸಿದೆ. 

Add Asianetnews Kannada as a Preferred SourcegooglePreferred

ಅಲ್ಲದೆ ಪಾಕಿಸ್ತಾನ ಪ್ರಜೆಗಳ ಎಲ್ಲಾ ರೀತಿಯ ವೀಸಾ ರದ್ದುಪಡಿಸಿದ್ದ ಸರ್ಕಾರ, ಲಾಂಗ್ ಟರ್ಮ್ ವೀಸಾ (ಬಹುಕಾಲ ನೆಲೆಸಿರುವ)ಗಳಿಗೆ ವಿನಾಯ್ತಿ ನೀಡಿ ಶುಕ್ರವಾರ ಆದೇಶಿಸಿದೆ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಬೆಂಗಳೂರು, ಉತ್ತರ ಕನ್ನಡ ಜಿಲ್ಲೆಯ ಭಟ್ಕಳ, ಮೈಸೂರು, ಮಂಗಳೂರು ಹಾಗೂ ಧಾರವಾಡ ಸೇರಿ ಇತರೆಡೆ ಎಲ್‌ಟಿವಿ ಆಧಾರದ ಮೇರೆಗೆ ನೆಲೆಸಿರುವ 88 ಪಾಕಿಸ್ತಾನಿ ಪ್ರಜೆಗಳಲ್ಲಿದ್ದ ಆತಂಕ ಕೊನೆಯಾಗಿದೆ ಎಂದು ತಿಳಿದು ಬಂದಿದೆ.

ಪಹಲ್ಗಾಂನಲ್ಲಿ ಧರ್ಮ ಕೇಳಿ ಮಾರಣಹೋಮ ಮಾಡಲಾಯಿತು: ಮಲ್ಲಿಕಾರ್ಜುನ ಖರ್ಗೆ

ದಶಕಗಳಿಂದ ಪಾಕಿಸ್ತಾನದ ಜತೆ ರಾಜ್ಯದ ಕೆಲ ಕುಟುಂಬಗಳು ವೈವಾಹಿಕ ಸಂಬಂಧ ಹೊಂದಿವೆ. ಹೀಗೆ ವೈವಾಹಿಕ ನಂಟು ಹೊಂದಿರುವವರು ಎಲ್‌ಟಿವಿ ಪಡೆದಿದ್ದಾರೆ. ಹೀಗಾಗಿ ಪ್ರಸುತ ವಿಷಮ ಸನ್ನಿವೇಶದಲ್ಲಿ ಅವರು ಗಡಿಪಾರಿನಿಂದ ಪಾರಾಗಿದ್ದಾರೆ. ಭಾರತದಲ್ಲಿ ಬಹುಕಾಲ ನೆಲೆಸುವ ವೀಸಾವನ್ನು ಆ ದೇಶವಾಸಿಗಳಿಗೆ ಕಾನೂನು ಪ್ರಕಾರ ನೀಡಲಾಗಿದೆ. ಈ ವೀಸಾಗಳು ನವೀಕರಣವಾಗುತ್ತವೆ. ಅಕ್ರಮ ಚಟುವಟಿಕೆಗಳಲ್ಲಿ ಆ ಪ್ರಜೆಗಳು ಪಾಲ್ಗೊಂಡರೆ ಮಾತ್ರ ಕ್ರಮ ಜರುಗಿಸಬಹುದು ಎಂದು ಮೂಲಗಳು ಹೇಳಿವೆ.

ಪ್ರವಾಸಿಗರ ಮೇಲೆ ದಾಳಿ, ಖಂಡನೆ: ಜಮ್ಮು-ಕಾಶ್ಮೀರದಲ್ಲಿ ಪ್ರವಾಸಿಗರ ಮೇಲೆ ಗುಂಡಿನ ದಾಳಿ ನಡೆದಿರುವುದನ್ನು ಕರವೇ ಕಾರ್ಯಕರ್ತರು ತೀವ್ರವಾಗಿ ಖಂಡಿಸಿದ್ದಾರೆ. ಈ ಕುರಿತು ತಹಸೀಲ್ದಾರರಿಗೆ ಮನವಿ ಸಲ್ಲಿಸಿದ ಕರವೇ ಜಿಲ್ಲಾಧ್ಯಕ್ಷ ಪಂಪಣ್ಣನಾಯಕ ಮಾತನಾಡಿ, ದೇಶದಲ್ಲಿ ಸಂಪೂರ್ಣವಾಗಿ ಉಗ್ರ ಸಂಘಟನೆಗಳನ್ನು ನಿಷೇಧಿಸಬೇಕು. ನಮ್ಮ ರಾಜ್ಯದಲ್ಲಿ ಅಕ್ರಮ ವಲಸಿಗರು, ವಿಶೇಷವಾಗಿ ಬಾಂಗ್ಲಾದೇಶದ ವಲಸಿಗರ ಸಂಖ್ಯೆ ಅತಿ ಹೆಚ್ಚು ಇದ್ದು, ಅವರನ್ನು ಗುರುತಿಸಿ ದೇಶ ಮತ್ತು ರಾಜ್ಯದಿಂದ ಗಡಿಪಾರು ಮಾಡಬೇಕು ಎಂದು ಒತ್ತಾಯಿಸಿದರು.

ಈಗ ಏನ್ಮಾಡಿದರೂ 26 ಜೀವ ವಾಪಸ್ ತರಲಾದೀತೆ?: ಸಿದ್ದರಾಮಯ್ಯ

ಜಮ್ಮು-ಕಾಶ್ಮೀರದಲ್ಲಿ ಪಹಲ್ಗಾಮ್ ಜಿಲ್ಲೆಯಲ್ಲಿ ಪ್ರವಾಸಿಗರನ್ನು ಗುರಿಯಾಗಿಸಿಕೊಂಡು ನಡೆಸಿದ ದಾಳಿ ದೇಶವನ್ನು ಬೆಚ್ಚಿಬೀಳಿಸಿದೆ. ಶಾಂತವಾಗಿದ್ದ ಕಾಶ್ಮೀರದಲ್ಲಿ ಮತ್ತೆ ರಕ್ತಪಾತ ನಡೆದಿದೆ. ಉಗ್ರರ ವಿರುದ್ಧ ಆಕ್ರೋಶ, ಭಯೋತ್ಪಾದನೆ ವಿರುದ್ಧದ ಸಮರವನ್ನು ಮತ್ತಷ್ಟು ತೀವ್ರಗೊಳಿಸುವುದು ಸರ್ಕಾರದ ಜವಾಬ್ದಾರಿಯಾಗಿದೆ ಎಂದರು. ಕರ್ನಾಟಕದ ಇಬ್ಬರು ಸೇರಿದಂತೆ ಒಟ್ಟು 26 ಜನರು ಮೃತಪಟ್ಟಿರುವುದು ದೊಡ್ಡ ದುರಂತರವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.