ರಾಜ್ಯದಲ್ಲಿರುವ ಪಾಕಿಸ್ತಾನದ ಪ್ರಜೆಗಳನ್ನು ವಾಪಸ್ ಕಳುಹಿಸಲು ಕ್ರಮ ಕೈಗೊಳ್ಳುವಂತೆ ಕೇಂದ್ರ ಸರ್ಕಾರ ನೀಡಿರುವ ಸೂಚನೆಯನ್ನು ನಾವು ಪಾಲಿಸುತ್ತೇವೆ. 

ಮೈಸೂರು (ಏ.27): ಜಮ್ಮು-ಕಾಶ್ಮೀರದ ಪಹಲ್ಗಾಂನಲ್ಲಿ ನಡೆದ ಉಗ್ರರ ದಾಳಿಗೆ ಪ್ರತೀಕಾರವಾಗಿ ಪಾಕಿಸ್ತಾನದ ಜೊತೆ ಯುದ್ಧ ಅನಗತ್ಯ. ಅದರ ಬದಲು ಭದ್ರತೆಯನ್ನು ಬಿಗಿಗೊಳಿಸಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ರಾಜ್ಯದಲ್ಲಿರುವ ಪಾಕಿಸ್ತಾನದ ಪ್ರಜೆಗಳನ್ನು ವಾಪಸ್ ಕಳುಹಿಸಲು ಕ್ರಮ ಕೈಗೊಳ್ಳುವಂತೆ ಕೇಂದ್ರ ಸರ್ಕಾರ ನೀಡಿರುವ ಸೂಚನೆಯನ್ನು ನಾವು ಪಾಲಿಸುತ್ತೇವೆ. ಈ ನಿಟ್ಟಿನಲ್ಲಿ ಕೇಂದ್ರಕ್ಕೆ ನಾವು ಅಗತ್ಯ ಸಹಕಾರ ಕೊಡುತ್ತೇವೆ. ರಾಜ್ಯದಲ್ಲಿ ಎಷ್ಟು ಜನ ಪಾಕಿಸ್ತಾನದ ಪ್ರಜೆಗಳಿದ್ದಾರೆ ಎಂಬ ಬಗ್ಗೆ ನನಗೆ ಮಾಹಿತಿ ಇಲ್ಲ. 

ಬೆಂಗಳೂರಿನಲ್ಲಿ ಅತಿ ಹೆಚ್ಚು ಜನರು ಇರುವ ಸಾಧ್ಯತೆ ಇದೆ. ಇದರ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುತ್ತೇವೆ‌ ಎಂದು ಅವರು ತಿಳಿಸಿದರು. ಉಗ್ರರ ದಾಳಿಗೆ ಪ್ರತೀಕಾರ ತೆಗೆದುಕೊಳ್ಳುವ ಕುರಿತು ಪ್ರತಿಕ್ರಿಯಿಸಿದ ಸಿಎಂ, ಪಾಕಿಸ್ತಾನದ ಜೊತೆ ಯುದ್ಧದ ಅನಿರ್ವಾಯತೆ ಇಲ್ಲ. ನಾವು ಯಾವತ್ತೂ ಯುದ್ಧದ ಪರ ಇಲ್ಲ. ನಾವು ಯಾವಾಗಲೂ ಶಾಂತಿಯ ಪರ. ಯುದ್ಧದ ಬದಲು ಭದ್ರತೆಯನ್ನು ಬಿಗಿಗೊಳಿಸಬೇಕಿದೆ. ಯುದ್ಧದ ಬಗ್ಗೆ ಯೋಚನೆ ಬೇಡ. ಅದರ ಬದಲು ಭದ್ರತೆಯನ್ನು ಬಿಗಿ ಮಾಡಿ ಎಂದು ಸಲಹೆ ನೀಡಿದರು. ಕಾಶ್ಮೀರದ ಭದ್ರತೆ ವಿಚಾರದಲ್ಲಿ ಕೇಂದ್ರ ಸರ್ಕಾರ ಜನರಿಗೆ ಟೋಪಿ ಹಾಕಿದೆ. ಅಲ್ಲಿ ಭದ್ರತೆ ಇದೆ ಎಂದು ನಂಬಿಕೊಂಡು ಜನ ಕಾಶ್ಮೀರಕ್ಕೆ ಹೋದರು. 

ಆದರೆ, ಅಲ್ಲಿ ಭದ್ರತೆಯ ವೈಫಲ್ಯ ಉಂಟಾಗಿದೆ. ಹಾಗಾದರೆ, ಇವರು ಇಷ್ಟು ದಿನ ಮಾಡಿದ್ದು ಬರಿ ಭಾಷಣನಾ? ಈಗ ಏನೇ ಕ್ರಮ ಕೈಗೊಂಡರೂ ಹೋದ 26 ಜೀವಗಳನ್ನು ವಾಪಸ್ ತರಲು ಸಾಧ್ಯನಾ? ಎಂದು ಅವರು ಪ್ರಶ್ನಿಸಿದರು. ಪುಲ್ವಾಮಾ ಘಟನೆ ವಿಚಾರದಲ್ಲಿ ಮುಂದೆ ಏನಾಯಿತು ಎಂಬುದು ಯಾರಿಗೆ ಗೊತ್ತಿದೆ ಹೇಳಿ ಎಂದು ಪ್ರಶ್ನಿಸಿದರು. ಸರ್ವಪಕ್ಷ ಸಭೆಗೆ ಪ್ರಧಾನಿ ನರೇಂದ್ರ ಮೋದಿ ಗೈರಾದ ವಿಚಾರಕ್ಕೆ ಪ್ರತಿಕ್ರಿಯಿಸಿ, ಇಂತಹ ಸಭೆಗಿಂತ ಮಹತ್ವದ ಸಭೆ ಯಾವುದು ಇದೆ ಹೇಳಿ?. ಚುನಾವಣಾ ಪ್ರಚಾರದ ಭಾಷಣ ಮುಖ್ಯನಾ? ದೇಶದ ಭದ್ರತೆ ಕುರಿತ ಸಭೆ ಮುಖ್ಯಾನಾ? ಇವರಿಗೆ ಪರಿಸ್ಥಿತಿಯ ಗಂಭೀರತೆ ಗೊತ್ತಿದ್ಯಾ ಎಂದು ಕಿಡಿಕಾರಿದರು.

ಚಾಮರಾಜನಗರ ಭೇಟಿಯಿಂದ ಸಿಎಂ ಸ್ಥಾನ ಗಟ್ಟಿ: ಸಿದ್ದರಾಮಯ್ಯ

ಒಂದು ಧರ್ಮದ ಪರ ಇಲ್ಲ: ನಾನು ಸಿಎಂ ಆಗಿರುವವರೆಗೆ ಎಲ್ಲಾ ವರ್ಗದ ಜನರ ಪರವಾಗಿ ಇರುತ್ತೇನೆ. ನಾನು ಒಂದು ಧರ್ಮದ ಪರವಾಗಿ ಇಲ್ಲ. ಜಾತಿಗೆ ಅಂಟಿಕೊಂಡಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ತಾಲೂಕಿನ ಮಂಗಲ ಗ್ರಾಮದ ಸಮೀಪ ಜಿಲ್ಲಾ ಕುರುಬರ ಸಂಘದ ವತಿಯಿಂದ ನಡೆದ ಜಿಲ್ಲಾ ಕನಕ ಸಮುದಾಯ ಭವನದ ಭೂಮಿಪೂಜೆ ನೇರವೇರಿಸಿ ನಂತರ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಜಾತಿ ಗಣತಿ ವರದಿಯನ್ನು ಹಿಂದೆ ಸಿಎಂ ಆಗಿದ್ದ ಕುಮಾರಸ್ವಾಮಿ, ಯಡಿಯೂರಪ್ಪ, ಬೊಮ್ಮಾಯಿ ಜಾರಿ ಮಾಡಲಿಲ್ಲ. ಹಾಗಾಗಿ ಸಚಿವ ಸಂಪುಟದಲ್ಲಿ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳುವ ಪ್ರಯತ್ನ ಮಾಡಿದ್ದೇನೆ ಎಂದರು. ಇದು ಯಾರ ವಿರುದ್ಧವೂ ಅಲ್ಲ. ನಮ್ಮ ರಾಜ್ಯದಲ್ಲಿ ಹಿಂದುಳಿದವರನ್ನು ಸಾಮಾಜಿಕ, ಆರ್ಥಿಕ, ಶೈಕ್ಷಣಿಕವಾಗಿ ಮೇಲೆತ್ತುವ ಕೆಲಸವಷ್ಟೇ. ಆದರೆ ಈ ಸಮೀಕ್ಷೆಯನ್ನು ಕೆಲವರು ತಪ್ಪಾಗಿ ಅರ್ಥೈಸಿಕೊಂಡು ಏನೇನೋ ಹೇಳುತ್ತಿದ್ದಾರೆ ಎಂದು ಸಿಎಂ ಅಸಮಾಧಾನ ವ್ಯಕ್ತಪಡಿಸಿದರು.