ಆನೇಕಲ್ ತಾಲೂಕಿನ ಮರಸೂರು ಪಂಚಾಯ್ತಿಗೆ ಸೇರಿದ ಎಂಟು ಗ್ರಾಮಗಳ ಕಂದಾಯ ದಾಖಲೆಗಳು 1956ರಿಂದ ತಮಿಳುನಾಡಿನ ಹೊಸೂರು ಕಡತಗಳಲ್ಲಿದ್ದವು. ಒಂದು ವರ್ಷದ ಸತತ ಪ್ರಯತ್ನದ ನಂತರ, ಈ ದಾಖಲೆಗಳನ್ನು ಅಧಿಕೃತವಾಗಿ ಕರ್ನಾಟಕದ ದಾಖಲೆಗಳಿಗೆ ಸೇರ್ಪಡೆ ಮಾಡಲಾಗಿದ್ದು, ಇದರಿಂದ ಸುಮಾರು 3000 ರೈತರಿಗೆ ಅನುಕೂಲವಾಗಿದೆ.
ಬೆಂಗಳೂರು: ಆನೇಕಲ್ ತಾಲೂಕಿನ ಮರಸೂರು ಪಂಚಾಯ್ತಿಗೆ ಸೇರಿದ್ದ ಎರಡು ಕಂದಾಯ ಗ್ರಾಮಗಳು ಮತ್ತು ಆರು ದಾಖಲೆ ಗ್ರಾಮಗಳ ರೆವೆನ್ಯೂ ದಾಖಲೆಗಳು 1956ನೆಯ ಇಸವಿಯಿಂದಲೂ ತಮಿಳುನಾಡಿನ ಹೊಸೂರು ಕಡತಗಳಲ್ಲಿದ್ದು ಇಂದು ಅಧಿಕೃತವಾಗಿ ಕರ್ನಾಟಕದ ದಾಖಲೆಗಳಲ್ಲಿ ಸೇರ್ಪಡೆ ಆಗಿದೆ ಎಂದು ಎಡಿಎಲ್ಆರ್ ಮದನ್ ಸಿ. ತಿಳಿಸಿದರು.
ತಾಲೂಕಿನ ಮರಸೂರು ಗ್ರಾಮದಲ್ಲಿ ಏರ್ಪಡಿಸಿದ್ದ ಅಧಿಕೃತ ದಾಖಲೆ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಭಾಷಾವಾರು ಪ್ರಾಂತ್ಯ ವಿಂಗಡಣೆ ವೇಳೆ ಈ ಎಂಟೂ ಹಳ್ಳಿಗಳು ಅಂದಿನ ಮೈಸೂರು ಪ್ರಾಂತ್ಯಕ್ಕೆ ಸೇರ್ಪಡೆಯಾಗಿ ದಾಖಲೆಗಳು ರಾಜ್ಯ ವಶಕ್ಕೆ ಬಂದರೂ ಆಕಾರ್ ಬಂದ್ ದಾಖಲೆ ಲಭ್ಯವಿಲ್ಲದೆ ನಮ್ಮ ರೈತರ ಪಹಣಿಯಲ್ಲಿ ನಮೂದು ಮಾಡಲಾಗಲಿಲ್ಲ. ಈಗ ಲಭ್ಯವಿರುವ ತಂತ್ರಜ್ಞಾನ ಆಧರಿಸಿ ಎಲ್ಲವನ್ನೂ ಸರಿಪಡಿಸಲಾಗಿದೆ ಎಂದರು.
50ಕ್ಕೂ ಹೆಚ್ಚು ನುರಿತ ಸಿಬ್ಬಂದಿ 1 ವರ್ಷಕಾಲ ಕೆಲಸ
ಆನೇಕಲ್ ತಹಸೀಲ್ದಾರ್ ಶಶಿಧರ್ ಮಾಡ್ಯಾಳ್ ಮಾತನಾಡಿ, ಈ ಮಹಾನ್ ಕಾರ್ಯಕ್ಕೆ 50ಕ್ಕೂ ಹೆಚ್ಚು ನುರಿತ ಸಿಬ್ಬಂದಿ 1 ವರ್ಷಕಾಲ ತೊಡಗಿಸಿದ್ದು ಸತತ ಪ್ರಯತ್ನದ ಫಲವಾಗಿದೆ. ಇನ್ನು ಮುಂದೆ ನಮ್ಮ ರೈತರು ರಿವೆನ್ಯು ದಾಖಲೆಗಳನ್ನು ಮ್ಯುಟೇಟ್ ಮಾಡಿಕೊಂಡು ಅಭಿವೃದ್ಧಿ ಕಾಣಬಹುದು.
ಆನೇಕಲ್ ಶಾಸಕ ಬಿ. ಶಿವಣ್ಣ ಅವರು ಈ ಬಗ್ಗೆ ಸದನದಲ್ಲಿ ಪ್ರಸ್ತಾಪಿಸಿ, ಉನ್ನತ ಅಧಿಕಾರಿಗಳಾದ ಮಂಜುನಾಥ್, ಡಾ.ವೆಂಕಟೇಶ್, ನಿಸಾರ್ ಅಹಮದ್ ಅವರ ಮಾರ್ಗದರ್ಶನ ದಲ್ಲಿ ಸಾಧ್ಯವಾಯಿತು. ಈ ಭಾಗದ 3000 ರೈತರ 270 ದಾಖಲೆಗಳ ಪುನರ್ ನಿರ್ಮಾಣ ಮಾಡಿದ್ದು ಬಹಳ ವರ್ಷಗಳ ಕನಸು ನನಸಾಗಿದೆ ಎಂದರು. ವೇದಿಕೆಯಲ್ಲಿ ಶಾಸಕ ಬಿ. ಶಿವಣ್ಣ, ತಾಲೂಕು ಗ್ಯಾರಂಟಿ ಸಮಿತಿಯ ಅಧ್ಯಕ್ಷ ಪುರುಷೋತ್ತಮ್, ಇನ್ಸ್ಪೆಕ್ಟರ್ ಚಂದ್ರಪ್ಪ, ಸರ್ವೇ ಹಾಗೂ ಕಂದಾಯ ಅಧಿಕಾರಿಗಳಿದ್ದರು.
ಇದನ್ನೂ ಓದಿ: KPSC ಮೇಲೆ ಇಡಿ ದಾಳಿ ಬೆನ್ನಲ್ಲೇ ಐಎಎಸ್ ಅಧಿಕಾರಿ ಜ್ಞಾನೇಂದ್ರ ‘ನಾ’ ಪತ್ತೆ ಹೈಡ್ರಾಮ! ಗೃಹ ಸಚಿವ ಖರ್ಗೆ ಹೇಳಿದ್ದೇನು?


