ಬೆಂಗಳೂರಿಗರೇ ಎಚ್ಚರ: ಇನ್ನೂ ಒಂದು ವಾರಗಳ ಕಾಲ ಮುಂದುವರೆಯಲಿದೆ ವರುಣನ ಆರ್ಭಟ
ಕಳೆದೊಂದು ತಿಂಗಳಿನಿಂದ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಸುರಿಯುತ್ತಿರುವ ಮಹಾಮಳೆಯೂ ಇನ್ನೂ ಒಂದು ವಾರಗಳ ಕಾಲ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಸೂಚನೆ ನೀಡಿದೆ.
ಬೆಂಗಳೂರು (ಸೆ.11): ಕಳೆದೊಂದು ತಿಂಗಳಿನಿಂದ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಸುರಿಯುತ್ತಿರುವ ಮಹಾಮಳೆಯೂ ಇನ್ನೂ ಒಂದು ವಾರಗಳ ಕಾಲ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಸೂಚನೆ ನೀಡಿದೆ. ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಹಾಗೂ ಮೇಲ್ಮೈ ಸುಳಿಗಾಳಿ ಹಿನ್ನಲೆಯಲ್ಲಿ ನವೆಂಬರ್ವರೆಗೂ ವರುಣನ ಆರ್ಭಟ ಫಿಕ್ಸ್ ಆಗಿದೆ. ಈಗಾಗಲೇ ಬೆಂಗಳೂರು ಈ ಮಹಾಮಳೆಗೆ ತತ್ತರಿಸಿದ್ದು, ಕರಾವಳಿಗೆ ಮುಂದಿನ ಐದು ದಿನ ಯಲ್ಲೋ ಅಲರ್ಟ್ ನೀಡಲಾಗಿದೆ. ಉತ್ತರ ಒಳನಾಡಿನ ಕೆಲ ಜಿಲ್ಲೆಗಳಿಗೆ ಮುಂದಿನ 3 ದಿನ ಯಲ್ಲೋ ಅಲರ್ಟ್ ಕೊಡಲಾಗಿದೆ. ಬೆಳಗಾವಿ, ಬೀದರ್, ಗುಲ್ಬರ್ಗಾ, ಯಾದಗಿರಿ ಭಾಗದಲ್ಲಿ ಭಾರೀ ಮಳೆಯಾಗಲಿದ್ದು, ದಕ್ಷಿಣ ಒಳನಾಡಿಗೆ ಇಂದು ಯಲ್ಲೋ ಅಲರ್ಟ್ ಕೊಡಲಾಗಿದೆ.
ಹಾಸನ, ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು, ಬೆಂಗಳೂರು ನಗರ, ಗ್ರಾಮಾಂತರ, ಕೋಲಾರ, ಚಿಕ್ಕಮಗಳೂರಿನಲ್ಲಿ ಇಂದು ಮತ್ತು ನಾಳೆ ಗುಡುಗು ಮಿಂಚು ಸಹಿತ ಭಾರೀ ಮಳೆಯಾಗುವ ಸಾಧ್ಯತೆಯಿದ್ದು, ಮೂರು ದಿನದ ಬಳಿಕ ಮಳೆ ಪ್ರಮಾಣದಲ್ಲಿ ಕೊಂಚ ಇಳಿಕೆಯಾಗುವ ಸಾಧ್ಯತೆಯಿದೆ. ಅಲ್ಲದೇ ಬೆಂಗಳೂರಿನಲ್ಲಿ ಮೂರು ತಿಂಗಳು ಮಳೆಯಾಗಲಿದ್ದು, ಮಳೆ ಎದುರಿಸಲು ಜನ ಸಿದ್ಧರಾಗಿರಬೇಕೆಂದು ಹವಾಮಾನ ತಜ್ಞ ಪ್ರಸಾದ್ ಎಚ್ಚರಿಕೆ ನೀಡಿದ್ದಾರೆ. ಇನ್ನು ಈ ವರ್ಷ ವಾಡಿಕೆಗಿಂತ ಹೆಚ್ಚು ಮಳೆಯಾಗಿದ್ದು, ಸೆ.1ರಿಂದ ಇಲ್ಲಿಯವರೆಗೂ 211 ಎಂ.ಎಂ ಮಳೆಯಾಗಿದೆ.
Bengaluru Rain: ಮುಳುಗಿದ ಐಟಿ ಸಿಟಿ; ಹೋಟೆಲ್ ರೂಮಿಗೆ 40 ಸಾವಿರ ಬಾಡಿಗೆ..!
ನೀರು ಇಳಿದರೂ ಗುಂಡಿ ಬಿದ್ದ ರಸ್ತೆಗಳೇ ಸಮಸ್ಯೆ: ಭಾರೀ ಮಳೆಗೆ ನಲುಗಿದ್ದ ಮಹದೇವಪುರ ವ್ಯಾಪ್ತಿಯ ಬಡಾವಣೆಗಳು, ಅಪಾರ್ಟ್ಮೆಂಟ್ಗಳಲ್ಲಿ ಪರಿಹಾರ ಕೈಗೊಂಡಿದ್ದು, ಜನಜೀವನ ಸಹಜ ಸ್ಥಿತಿಯತ್ತ ಮರಳುತ್ತಿದೆ. ಜೊತೆಗೆ ಪ್ರಮುಖ ರಸ್ತೆಗಳು ಮತ್ತು ವಾರ್ಡ್ ರಸ್ತೆಗಳು ಸೇರಿ 27 ರಸ್ತೆಗಳಲ್ಲಿ ತುಂಬಿಕೊಂಡಿದ್ದ ನೀರು ಬಹುತೇಕ ಇಳಿಕೆಯಾಗಿದೆ. ಆದರೆ, ಮಳೆಯಿಂದ ಬಿದ್ದಿರುವ ರಸ್ತೆ ಗುಂಡಿಗಳಿಂದ ವಾಹನ ಸವಾರರು ಸುಗಮ ಸಂಚಾರಕ್ಕೆ ಉಂಟಾಗಿರುವ ಸಮಸ್ಯೆ ಮುಂದುವರೆದಿದೆ.
ಮಳೆ ನೀರು ನುಗ್ಗಿ ಭಾರೀ ಪ್ರಮಾಣದಲ್ಲಿ ಹಾನಿಯುಂಟಾಗಿದ್ದ ಬಡಾವಣೆಗಳು, ಅಪಾರ್ಟ್ಮೆಂಟ್ಗಳು ಹಾಗೂ ವಸತಿ ಪ್ರದೇಶಗಳ ಸುಮಾರು 136 ಪ್ರದೇಶಗಳ ಪೈಕಿ 130 ಜಾಗಗಳಲ್ಲಿ ಶುಕ್ರವಾರವೇ ನೀರು ಹೊರಹಾಕಲಾಗಿತ್ತು. ಎಲ್ಲೆಡೆ ಸಾಂಕ್ರಾಮಿಕ ರೋಗ ಹರಡದಂತೆ ಔಷಧಿಗಳನ್ನು ಸಿಂಡಪಿಸಲಾಗಿದೆ. ಜತೆಗೆ ಅಪಾರ್ಟ್ಮೆಂಟ್ಗಳ ನೆಲಮಹಡಿಯಲ್ಲಿದ್ದ ನೀರು ಪಂಪ್ಗಳ ಮೂಲಕ ತೆಗೆದಿದ್ದು, ತುಂಬಿಕೊಂಡಿದ್ದ ಕೆಸರನ್ನು ಕೂಡಾ ಹೊರ ಹಾಕಲಾಗಿದೆ.
ರೋನ್ಬೋ ಡ್ರೈವ್ ಲೇಔಟ್, ಸರ್ಜಾಪುರ ಮುಖ್ಯರಸ್ತೆಯಲ್ಲಿರುವ ದಿ ಕಂಟ್ರಿಸೈಡ್ ಲೇಔಟ್ ಸೇರಿದಂತೆ ಇತರೆ ಕಡೆಗಳಲ್ಲಿ ಸಂಪ್ಗಳಲ್ಲಿ ತುಂಬಿಕೊಂಡಿದ್ದ ಕೊಳಚೆ ನೀರು, ಕೆಸರನ್ನು ತೆರವು ಮಾಡುವ ಕಾರ್ಯ ಮುಂದುವರೆದಿದೆ. ಹಾಗೆಯೇ ಯಮಲೂರಿನ ಎಪ್ಸಿಲಾನ್ ಲೇಔಟ್, ಬೆಳ್ಳತ್ತೂರು ಕೀರ್ತಿ ಹೈಟ್ಸ್ ಅಪಾರ್ಟ್ಮೆಂಟ್, ದಿವ್ಯಶ್ರೀ ಅಪಾರ್ಟ್ಮೆಂಟ್, ಯಮಲೂರಿನ ಕೋಡಿ ಸಮೀಪದ ವಿಲ್ಲಾಗಳು, ಮುನೇನಕೊಳಲು ಅಪಾರ್ಟ್ಮೆಂಟ್ ಸೇರಿದಂತೆ ಏಳೆಂಟು ಅಪಾರ್ಟ್ಮೆಂಟ್ಗಳು, ಒಂದೆರಡು ಲೇಔಟ್ಗಳಲ್ಲಿ ಸ್ವಲ್ಪ ನೀರು ಹಾಗೆಯೇ ಇದ್ದು ಶನಿವಾರವೂ ಪರಿಹಾರ ಕಾರ್ಯ ಮುಂದುವರೆದಿತ್ತು.
ಜಲಮಂಡಳಿಯು ಅಪಾರ್ಟ್ಮೆಂಟ್ಗಳ ನೆಲಮಹಡಿ, ರಸ್ತೆಗಳು, ಲೇಔಟ್ಗಳಲ್ಲಿ ತುಂಬಿಕೊಂಡಿರುವ ಕೆಸರು ತೆರವುಗೊಳಿಸುವ ಕಾರ್ಯ ಕೈಗೊಂಡಿತ್ತು. ಸಂಪ್ಗಳಲ್ಲಿ ಸಂಗ್ರಹವಾಗಿರುವ ಕೊಳಚೆ ನೀರನ್ನು ತೆಗೆಯಲು 15ಕ್ಕೂ ಹೆಚ್ಚು ಸಕ್ಕಿಂಗ್ ಯಂತ್ರಗಳನ್ನು ಬಳಕೆ ಮಾಡಲಾಗುತ್ತಿದೆ. ಜಲಮಂಡಳಿ, ಬಿಬಿಎಂಪಿ ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಪರಿಹಾರ ಕಾರ್ಯದಲ್ಲಿ ನಿರತರಾಗಿದ್ದರು. ಬೆಸ್ಕಾಂನಿಂದಲೂ ವಿದ್ಯುತ್ ವ್ಯವಸ್ಥೆ ಕಲ್ಪಿಸುವ ಕಾರ್ಯಾಚರಣೆ ನಡೆಯುತ್ತಿದೆ ಎಂದು ಬಿಬಿಎಂಪಿ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದರು.
ಮಳೆ ಅವಾಂತರಕ್ಕೆ ಯಳಂದೂರು ತತ್ತರ: ಪೊಲೀಸ್ ಠಾಣೆ, ಶಾಲಾ-ಕಾಲೇಜು ಮುಳುಗಡೆ
ಈ ಹಿಂದೆ ಪ್ರವಾಹದ ಹಿನ್ನೆಲೆಯಲ್ಲಿ ಸಿದ್ಧಾರ್ಥ ಲೇಔಟ್, ಕೊರಲೂರು ರಸ್ತೆ, ರಾಮಯ್ಯ ಗಾರ್ಡನ್ನಿಂದ ಸುಮಾರು 250 ಜನರಿಗೆ ಆರೈಕೆ ಕೇಂದ್ರ ಸ್ಥಾಪಿಸಿ, ಊಟ ಮತ್ತು ವಸತಿ ವ್ಯವಸ್ಥೆ ಮಾಡಲಾಗಿತ್ತು. ಇದೀಗ ಬಹುತೇಕ ಸಹಜ ಸ್ಥಿತಿಯತ್ತ ಮರಳುತ್ತಿರುವ ಹಿನ್ನೆಲೆಯಲ್ಲಿ ಹಲವರು ಪುನಃ ತಮ್ಮ ಮನೆಗಳಿಗೆ ತೆರಳಿದ್ದು, ಸ್ವಚ್ಛತಾ ಕಾರ್ಯ ಕೈಗೊಂಡಿದ್ದಾರೆ. ಆದರೂ ಅಗತ್ಯ ಇರುವವರಿಗೆ ಊಟದ ವ್ಯವಸ್ಥೆ ಮತ್ತು ಕುಡಿಯುವ ನೀರು ಕೊಡುವುದನ್ನು ಮುಂದುವರೆಸಲಾಗಿದೆ.