ಐಟಿ ಸಿಟಿ ಬೆಂಗಳೂರಿನಲ್ಲಿ ತೀವ್ರ ಮಳೆಯಿಂದಾಗಿ ಹಲವು ಪ್ರದೇಶಗಳು ಮುಳುಗಡೆಯಾಗಿವೆ. ಇದರಿಂದಾಗಿ ಹೋಟೆಲ್‌ಗಳಲ್ಲಿ ಬೇಡಿಕೆ ಹೆಚ್ಚಾಗುತ್ತಿದ್ದು , ಹೋಟೆಲ್‌ ದರ 2 - 3 ಪಟ್ಟು ಏರಿಕೆಯಾಗಿದೆಯಂತೆ. 

ಬೆಂಗಳೂರಿನಲ್ಲಿ ಕಳೆದ ಹಲವು ದಿನಗಳಿದ ಭಾರಿ ಮಳೆ ಸುರಿಯುತ್ತಿದೆ. ಇದರಿಂದಾಗಿ ಬೆಳ್ಳಂದೂರು (Bellandur), ವರ್ತೂರು (Varthur), ವೈಟ್‌ಫೀಲ್ಡ್‌(WhiteField), ಔಟರ್‌ ರಿಂಗ್ ರೋಡ್‌ (Outer Ring Road) (ORR) ನಂತಹ ಪ್ರದೇಶಗಳು ಹೆಚ್ಚು ಮುಳುಗಡೆಯಾಗಿದ್ದವು. ಆ ಪ್ರದೇಶದ ಮನೆ, ಅಪಾರ್ಟ್‌ಮೆಂಟ್‌ ನಿವಾಸಿಗಳೂ ಭಾಗಶ: ಮುಳುಗಿದ್ದು, ಅಲ್ಲಿನ ನಿವಾಸಿಗಳಿಗೆ ತೀವ್ರ ತೊಂದರೆಯಾಗಿದೆ. ಇದರಿಂದ ತೊಂದರೆಗೊಳಗಾಗಿರುವ ಕುಟುಂಬಗಳು ಕೆಲ ದಿನಗಳ ಕಾಲ ಹೋಟೆಲ್‌ನಲ್ಲಿರಲು ರೂಮ್‌ಗಳನ್ನು ಬುಕ್‌ ಮಾಡುತ್ತಿದ್ದಾರೆ. ಈ ಹಿನ್ನೆಲೆ ಹೋಟೆಲ್‌ ರೂಮ್‌ಗಳ ದರವೂ ಸಿಕ್ಕಾಪಟ್ಟೆ ಹೆಚ್ಚಾಗಿದೆ. ಆ ಪ್ರದೇಶಗಳಲ್ಲಿ ಒಂದು ದಿನಕ್ಕೆ 10 ಸಾವಿರ ರೂ. - 20 ಸಾವಿರ ರೂ. ಗೆ ದೊರೆಯುವ ಹೋಟೆಲ್‌ ರೂಂಗಳ ಬೆಲೆ ಈಗ 30 - 40 ಸಾವಿರ ರೂ. ಆಗಿದೆ ಎಂದು ತಿಳಿದುಬಂದಿದೆ. ಇದನ್ನು ನೀವು ನಂಬಲಿಕ್ಕೆ ಕಷ್ಟವಾದರೂ, ಇದು ಸತ್ಯ. 

Add Asianetnews Kannada as a Preferred SourcegooglePreferred

ಇದಕ್ಕೊಂದು ಉದಾಹರಣೆ ಹೀಗಿದೆ ನೋಡಿ.. ಪರ್ಪಲ್‌ಫ್ರಂಟ್‌ ಟೆಕ್ನಾಲಜೀಸ್‌ (Purple Front Technologies) ಸಂಸ್ಥಾಪಕಿ ಹಾಗೂ ಸಿಇಒ ಮೀನಾ ಗಿರಿಸಾಬಲ್ಲಾ ಅವರು ತನ್ನ ಕುಟುಂಬದ ನಾಲ್ವರಿಗಾಗಿ ಹೋಟೆಲ್‌ವೊಂದರಲ್ಲಿ 1 ರಾತ್ರಿ ತಂಗಲು 42 ಸಾವಿರ ರೂ. ನೀಡಿರುವ ಬಗ್ಗೆ ಮಾಹಿತಿ ನೀಡಿದ್ದಾರೆ. ಯಮಲೂರು (Yamalur) ಭಾಗದ ಗೇಟೆಡ್‌ ಕಮ್ಯೂನಿಟಿಯಲ್ಲಿ (Gated Community) ಅವರು ವಾಸವಿದ್ದರು. ಆದರೆ, ಆ ಪ್ರದೇಶ ಇತ್ತೀಚಿನ ಮಳೆಗೆ ಮುಳುಗಡೆಯಾಗಿರುವುದರಿಂದ ಓಲ್ಡ್‌ ಏರ್‌ಪೋರ್ಟ್‌ ರಸ್ತೆಯ(Old Airport Road) ಹೋಟೆಲ್‌ವೊಂದರಲ್ಲಿದ್ದರಂತೆ.

ಇದನ್ನು ಓದಿ: Bengaluru Rain: ಕಾರು ಮುಳುಗಿದರೆ ಏನು ಮಾಡಬೇಕು?

ಇನ್ನು, ಹೋಟೆಲ್‌ ದರಗಳು ಗಗನಕ್ಕೇರಿದ್ದರೂ ರೂಮುಗಳು ದೊರೆಯುತ್ತಿಲ್ಲ ಎಂದೂ ಗೇಟೆಡ್‌ ಕಮ್ಯೂನಿಟಿಯ ಮತ್ತೊಬ್ಬರು ನಿವಾಸಿ ತಮ್ಮ ಕಷ್ಟ ತೋಡಿಕೊಂಡಿದ್ದಾರೆ. ಅವರು ವಾಸಿಸುತ್ತಿದ್ದ ವಿಲ್ಲಾದ (Villa) ಬಳಿ ಅಪಾರ ಪ್ರಮಾಣದ ನೀರು ನಿಂತಿದ್ದು, ಜತೆಗೆ ವಿದ್ಯುತ್‌ ಸಮಸ್ಯೆ ಎದುರಾಗಿದೆ. ಯುಪಿಎಸ್‌ ಸಹ ಕೆಲಸ ಮಾಡುತ್ತಿಲ್ಲ. ಈ ಹಿನ್ನೆಲೆ ಎಷ್ಟು ಬೆಲೆಯಾದರೂ ಸರಿ ಹೋಟೆಲ್‌ನಲ್ಲಿ ತಂಗಲು ರೂಮು ಹುಡುಕುತ್ತಿದ್ದೇವೆ ಎಂದು ಅವರು ಹೇಳಿಕೊಂಡಿದ್ದಾರೆ. ಅಲ್ಲದೆ, ಈ ಕಾರಣಕ್ಕೆ ಹೋಟೆಲ್‌ ಬೆಲೆಗಳು ತೀವ್ರ ಹೆಚ್ಚಾಗಿರುವುದು ಅಚ್ಚರಿ ತಂದಿಲ್ಲ ಎಂದೂ ತಿಳಿಸಿದ್ದಾರೆ. 

ಪ್ರಾಣಿಗಳಿಗೆ ಹೋಟೆಲ್‌ಗಳಿಗೆ ಎಂಟ್ರಿ ಇಲ್ಲ..!

ಇನ್ನೊಂದೆಡೆ, ಹೋಟೆಲ್‌ ಬೆಲೆಗಳು ಹೆಚ್ಚಾಗಿರುವ ಜತೆಗೆ ರೂಮುಗಳಲ್ಲಿ ಶ್ವಾನಗಳಿಗೆ ಎಂಟ್ರಿ ಕೊಡುತ್ತಿಲ್ಲ ಎಂಬ ಮಾಹಿತಿಯೂ ತಿಳಿದುಬಂದಿದೆ. ಇದರಿಂದಲೂ ಹೋಟೆಲ್‌ಗಳಿಗೆ ಡಿಮ್ಯಾಂಡ್‌ ಹಾಗೂ ಬೆಲೆ ಹೆಚ್ಚಾಗಿದೆ. ಈ ಮಧ್ಯೆ, ಕೆಲವು ಸ್ಟಾರ್‌ ಹೋಟೆಲ್‌ಗಳಲ್ಲಿ (Star Hotels) ಕೆಲ ಬೆಂಗಳೂರಿಗರು 10 - 15 ದಿನಗಳ ಕಾಲ ತಂಗಲು ಸಹ ಹೋಟೆಲ್ ಕೊಠಡಿಗಳನ್ನು ಬುಕ್‌ ಮಾಡುತ್ತಿದ್ದಾರೆ ಎಂದು ತಿಳಿದುಬಂದಿದೆ. ಪ್ರವಾಹ ಕಡಿಮೆಯಾದ ಬಳಿಕ, ತಮ್ಮ ಲಕ್ಷುರಿ ಮನೆಗಳನ್ನು ಶುಚಿಗೊಳಿಸಲು ಸಹ ಅಷ್ಟು ಸಮಯ ಬೇಕು ಎಂದು ಅವರು ಹೇಳಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ: Bengaluru rain : ಬೊಮ್ಮನಹಳ್ಳಿಯಲ್ಲಿ 2000 ಜನ ಸಂಕಷ್ಟದಲ್ಲಿ!

ಆಸ್ಪತ್ರೆಗಳಿಗೂ ಹೆಚ್ಚಿದ ಡಿಮ್ಯಾಂಡ್‌
ಬೆಂಗಳೂರಿನಲ್ಲಿ ಮಳೆಯಿಂದಾಗಿ ಹೋಟೆಲ್‌ಗಳಲ್ಲಿ ಮಾತ್ರವಲ್ಲ, ಆಸ್ಪತ್ರೆಗಳಿಗೂ (Hospitals) ಡಿಮ್ಯಾಂಡ್‌ ಹೆಚ್ಚಾಗಿದೆಯಂತೆ. ಟೆಕ್‌ ಕಾರಿಡಾರ್‌ (Tech Corridor) ಬಳಿ ಇರುವ ಆಸ್ಪತ್ರೆಗಳಲ್ಲಿ ದಾಖಲಾತಿಗಳು ಹೆಚ್ಚಾಗುತ್ತಿದ್ದು,. ಹಿರಿಯ ನಾಗರಿಕರು (Senior Citizens) ಬಿಪಿ, ಶುಗರ್‌ ಮಟ್ಟದಲ್ಲಿ ಹೆಚ್ಚಳ ಮುಂತಾದ ತೊಂದರೆಗಳಿಂದ ಆಸ್ಪತ್ರೆಗೆ ಸೇರುತ್ತಿದ್ದಾರೆ.