Asianet Suvarna News Asianet Suvarna News

ಕರ್ನಾಟಕದ ಆಶಾ ಕಾರ‍್ಯಕರ್ತರಿಗೆ ಕೇಂದ್ರ ಭೇಷ್‌!

ಕರ್ನಾಟಕದ ಆಶಾ ಕಾರ‍್ಯಕರ್ತರಿಗೆ ಕೇಂದ್ರ ಭೇಷ್‌| ಕೊರೋನಾ ನಿಯಂತ್ರಿಸುವಲ್ಲಿ ಯಶಸ್ವಿಯಾಗಿದ್ದಕ್ಕೆ ‘ಆಶಾ’ ಕೊಡುಗೆ ಅಪಾರ| ಪತ್ರಿಕಾ ಹೇಳಿಕೆಯಲ್ಲಿ ಶ್ಲಾಘಿಸಿದ ಕೇಂದ್ರ ಆರೋಗ್ಯ ಇಲಾಖೆ

42000 Asha workers map 1 59 crore homes in Karnataka for Covid
Author
Bangalore, First Published Jul 4, 2020, 11:02 AM IST

ನವದೆಹಲಿ(ಜು.04): ಕೊರೋನಾ ವಿರುದ್ಧದ ಹೋರಾಟದಲ್ಲಿ ಕರ್ನಾಟಕ ಉತ್ತಮ ಸಾಧನೆ ಮಾಡಿರುವುದಕ್ಕೆ ಆಶಾ ಕಾರ್ಯಕರ್ತೆಯರ ಕೊಡುಗೆ ಬಹಳ ದೊಡ್ಡದು ಎಂದು ಕೇಂದ್ರ ಆರೋಗ್ಯ ಇಲಾಖೆ ಮೆಚ್ಚುಗೆ ವ್ಯಕ್ತಪಡಿಸಿದೆ.

"

ಮಾನ್ಯತೆ ಪಡೆದ ಸಾಮಾಜಿಕ ಆರೋಗ್ಯ ಕಾರ್ಯಕರ್ತರು (ಆಶಾ) ಕರ್ನಾಟಕದ ಕೊರೋನಾ ಸಮರದ ಯಶಸ್ಸಿಗೆ ಪ್ರಮುಖ ಆಧಾರ ಸ್ತಂಭಗಳು. ರಾಜ್ಯದಲ್ಲಿ 42,000 ಆಶಾ ಕಾರ್ಯಕರ್ತೆಯರು ಮನೆಮನೆಗೆ ತೆರಳಿ ಸಮೀಕ್ಷೆ ನಡೆಸಿ, ಅಂತಾರಾಜ್ಯ ಪ್ರಯಾಣಿಕರನ್ನು ಸ್ಕ್ರೀನಿಂಗ್‌ ಮಾಡಿ, ವಲಸೆ ಕಾರ್ಮಿಕರು ಹಾಗೂ ಇತರರಲ್ಲಿ ಸೋಂಕು ಪತ್ತೆಹಚ್ಚುವ ಕಾರ್ಯದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ ಎಂದು ಆರೋಗ್ಯ ಇಲಾಖೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದೆ.

ಕರ್ನಾಟಕದಲ್ಲಿ ಹಿರಿಯ ನಾಗರಿಕರನ್ನು ಹಾಗೂ ಹೈ-ರಿಸ್ಕ್‌ ವರ್ಗದವರನ್ನು ಗುರುತಿಸಲು ಆಶಾ ಕಾರ್ಯಕರ್ತೆಯರ ಮೂಲಕ ಮನೆಮನೆ ಸಮೀಕ್ಷೆ ನಡೆಸಲಾಗಿದೆ. ಈ ಸಮೀಕ್ಷೆಯ ವೇಳೆ ಗಂಭೀರ ರೋಗ ಹೊಂದಿರುವವರ ಮಾಹಿತಿಯನ್ನೂ ಸಂಗ್ರಹಿಸಲಾಗಿದೆ. ಸುಮಾರು 1.59 ಕೋಟಿ ಮನೆಗಳ ಸಮೀಕ್ಷೆ ನಡೆಸಲಾಗಿದೆ. ಜೊತೆಗೆ ಆಶಾ ಕಾರ್ಯಕರ್ತೆಯರು ತಮ್ಮ ವ್ಯಾಪ್ತಿಯ ಪ್ರದೇಶದಲ್ಲಿ ಹೈ-ರಿಸ್ಕ್‌ ವರ್ಗದವರ ಜೊತೆ ನಿರಂತರವಾಗಿ ಸಂಪರ್ಕದಲ್ಲಿದ್ದುಕೊಂಡು ಅವರ ಆರೋಗ್ಯದ ಬಗ್ಗೆ ಮಾಹಿತಿ ಪಡೆಯುತ್ತಿದ್ದಾರೆ. ಕಂಟೇನ್ಮೆಂಟ್‌ ಪ್ರದೇಶದಲ್ಲಿ ದಿನಕ್ಕೊಮ್ಮೆ ಹಾಗೂ ಇತರ ಪ್ರದೇಶಗಳಲ್ಲಿ 15 ದಿನಕ್ಕೊಮ್ಮೆ ಈ ವ್ಯಕ್ತಿಗಳಿಂದ ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಇನ್‌ಫ್ಲುಯೆಂಜಾ ರೀತಿಯ ಅನಾರೋಗ್ಯ (ಐಎಲ್‌ಐ), ತೀವ್ರ ಉಸಿರಾಟದ ಸೋಂಕು (ಸಾರಿ) ಹೊಂದಿರುವವರು ಮತ್ತು ರಾಜ್ಯ ಆರೋಗ್ಯ ಇಲಾಖೆಯ ಸಹಾಯವಾಣಿಗೆ ಕರೆ ಮಾಡಿರುವವರ ಮನೆಗೆ ಭೇಟಿ ನೀಡಿ ವಿಚಾರಣೆ ನಡೆಸುತ್ತಿದ್ದಾರೆ. ಇದರಿಂದಾಗಿ ಕರ್ನಾಟಕದಲ್ಲಿ ಸೋಂಕು ದೊಡ್ಡ ಪ್ರಮಾಣದಲ್ಲಿ ಹರಡುವುದನ್ನು ತಡೆಯಲು ಸಾಧ್ಯವಾಗಿದೆ ಎಂದು ಶ್ಲಾಘಿಸಲಾಗಿದೆ.

ಸ್ಥಳೀಯ ಮಟ್ಟದಲ್ಲಿ ರೂಪಿಸಿರುವ ಗ್ರಾಮೀಣ ಕಾರ್ಯಪಡೆಯ ಭಾಗವಾಗಿ ‘ಆಶಾ’ಗಳು ಕೆಲಸ ಮಾಡುತ್ತಿದ್ದಾರೆ. ನಗರ ಪ್ರದೇಶಗಳಲ್ಲೂ ಫೀವರ್‌ ಕ್ಲಿನಿಕ್‌ ಮತ್ತು ಸ್ವಾ್ಯಬ್‌ ಸಂಗ್ರಹ ಕೇಂದ್ರಗಳಲ್ಲಿ ಇವರು ನೆರವು ನೀಡುತ್ತಿದ್ದಾರೆ. ಅಂತಾರಾಷ್ಟ್ರೀಯ ಹಾಗೂ ಅಂತಾರಾಜ್ಯ ಚೆಕ್‌ಪೋಸ್ಟ್‌ಗಳಲ್ಲೂ ಇವರು ಸ್ಕ್ರೀನಿಂಗ್‌ ತಂಡಗಳ ಜೊತೆಗೆ ಕೆಲಸ ಮಾಡುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಲಾಗಿದೆ.

Follow Us:
Download App:
  • android
  • ios