Asianet Suvarna News Asianet Suvarna News

ಕಷ್ಟದಲ್ಲೂ ₹15000 ಕೋಟಿ ತೆರಿಗೆ ಸಂಗ್ರಹಿಸಿ ಪ್ರಗತಿ: ಸಿಎಂ ಬಸವರಾಜ ಬೊಮ್ಮಾಯಿ

ಪ್ರವಾಹ, ಕೋವಿಡ್‌ನಂತಹ ಸವಾಲುಗಳ ನಡುವೆಯೂ ಮುಖ್ಯಮಂತ್ರಿಯಾಗಿ ಆರ್ಥಿಕತೆ ಕುಸಿತವನ್ನು ಸರಿದೂಗಿಸುವ ಪ್ರಯತ್ನ ಮಾಡಿದ್ದು, ವಿವಿಧ ಮೂಲಗಳಿಂದ 15 ಸಾವಿರ ಕೋಟಿ ರು.ಗಿಂತ ಹೆಚ್ಚು ತೆರಿಗೆ ಸಂಗ್ರಹಿಸಿ ಆರ್ಥಿಕ ಪ್ರಗತಿ ಸಾಧಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

15000 crore collection progress despite difficulties says CM Basavaraja Bommai rav
Author
First Published Feb 21, 2023, 12:54 AM IST | Last Updated Feb 21, 2023, 12:54 AM IST

ವಿಧಾನಸಭೆ (ಫೆ.21) : ಪ್ರವಾಹ, ಕೋವಿಡ್‌ನಂತಹ ಸವಾಲುಗಳ ನಡುವೆಯೂ ಮುಖ್ಯಮಂತ್ರಿಯಾಗಿ ಆರ್ಥಿಕತೆ ಕುಸಿತವನ್ನು ಸರಿದೂಗಿಸುವ ಪ್ರಯತ್ನ ಮಾಡಿದ್ದು, ವಿವಿಧ ಮೂಲಗಳಿಂದ 15 ಸಾವಿರ ಕೋಟಿ ರು.ಗಿಂತ ಹೆಚ್ಚು ತೆರಿಗೆ ಸಂಗ್ರಹಿಸಿ ಆರ್ಥಿಕ ಪ್ರಗತಿ ಸಾಧಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಸೋಮವಾರ ರಾಜ್ಯಪಾಲರ ಭಾಷಣ(Governor's Speech)ದ ವಂದನಾ ನಿರ್ಣಯ ಮೇಲಿನ ಚರ್ಚೆಗೆ ಉತ್ತರ ನೀಡಿದ ಅವರು ಸರ್ಕಾರ ಸಾಧನೆಗಳ ಕುರಿತು ವಿಸ್ತೃತವಾಗಿ ವಿವರಿಸಿದರು.

ಸುಳ್ಳಿನ ಸುಳಿಯೇ ಕಾಂಗ್ರೆಸ್ಸಿಗೆ ಮಾರಕವಾಗಲಿದೆ: ಸಿಎಂ ಕಿಡಿ

ತಾವು ಮುಖ್ಯಮಂತ್ರಿ(CM of Karnataka)ಯಾದ ವೇಳೆ ಸುತ್ತಲೂ ಸವಾಲುಗಳಿದ್ದವು. ಪ್ರವಾಹ(Flood), ಕೋವಿಡ್‌(Covid)ನಂತಹ ಸಮಸ್ಯೆಗಳನ್ನು ಎದುರಿಸಬೇಕಾಗಿತ್ತು. ಸವಾಲುಗಳ ನಡುವೆಯೂ ರಾಜ್ಯದ ಆರ್ಥಿಕತೆಯನ್ನು ಸುಧಾರಣೆ ಮಾಡಲಾಗಿದೆ. ತೆರಿಗೆ ವಂಚಕರನ್ನು ಪತ್ತೆ ಮಾಡುವುದರ ಜತೆಗೆ ಎಲ್ಲಾ ಮೂಲಗಳಿಂದ ಬರಬೇಕಾದ ಆದಾಯಕ್ಕೆ ವಿಶೇಷ ಗಮನ ಹರಿಸಿದ ಪರಿಣಾಮ ರಾಜಸ್ವ ಸಂಗ್ರಹದಲ್ಲಿ ಹೆಚ್ಚಳ ಕಂಡುಬಂದಿದೆ. ಕೋವಿಡ್‌ ವೇಳೆ ಅನ್ಯ ರಾಜ್ಯಗಳಲ್ಲಿ ಸರ್ಕಾರಿ ನೌಕರರ ವೇತನವನ್ನು ಸ್ಥಗಿತಗೊಳಿಸಲಾಗಿತ್ತು. ಆದರೆ, ರಾಜ್ಯವು ವೇತನವನ್ನು ಸ್ಥಗಿತಗೊಳಿಸಲಿಲ್ಲ. ಆರ್ಥಿಕ ಶಿಸ್ತು ತರಲು ಪ್ರಯತ್ನ ಮಾಡಲಾಯಿತು. ಸುದೈವದಿಂದ ಆರ್ಥಿಕತೆ ಸುಸ್ಥಿತಿಗೆ ಬರಲು ಆರಂಭವಾಯಿತು. ರಾಜ್ಯವು ಪುಟಿದೆದ್ದಿದ್ದು, ಆರ್ಥಿಕವಾಗಿ ಸದೃಢವಾಗಿದೆ ಎಂದು ನುಡಿದರು.

ರೈತರ ಪರವಾಗಿ ಹಲವು ಯೋಜನೆಗಳನ್ನು ಜಾರಿಗೊಳಿಸಲಾಗಿದೆ. ಬಜೆಟ್‌ನಲ್ಲಿಯೂ ರೈತರಿಗೆ ಯೋಜನೆಗಳನ್ನು ಪ್ರಕಟಿಸಲಾಗಿದೆ. ರೈತಶಕ್ತಿ ಯೋಜನೆ ಮೂಲಕ 53 ಲಕ್ಷ ರೈತರಿಗೆ 383 ಕೋಟಿ ರು.ನಷ್ಟುವಿವಿಧ ರೂಪದ ಸಾಲ ಒದಗಿಸಲಾಗಿದೆ. ಕಳೆದ ವರ್ಷ 20 ಸಾವಿರಕ್ಕಿಂತ ಹೆಚ್ಚು ರೈತರಿಗೆ ಸಾಲ ಒದಗಿಸಲಾಗಿದೆ. ಮಾಚ್‌ರ್‍ ತಿಂಗಳ ವೇಳೆಗೆ 30 ಸಾವಿರಕ್ಕಿಂತ ಹೆಚ್ಚು ರೈತರಿಗೆ ಸಾಲ ಒದಗಿಸುವ ಗುರಿಯನ್ನಿಟ್ಟುಕೊಳ್ಳಲಾಗಿದೆ. ಯಶಸ್ವಿನಿ ಯೋಜನೆಗೆ 300 ಕೋಟಿ ರು. ಮೀಸಲಿಡಲಾಗಿದೆ. ರೈತರಿಗಾಗಿ ಈ ಯೋಜನೆಯನ್ನು ಮರು ಜಾರಿಗೊಳಿಸಲಾಗಿದೆ ಎಂದು ಮಾಹಿತಿ ನೀಡಿದರು.

ಹೆಣ್ಣು ಮಕ್ಕಳಿಗೆ ವಿಶೇಷ ಕ್ಲಿನಿಕ್‌:

ರಾಜ್ಯದಲ್ಲಿ 438 ಕ್ಲಿನಿಕ್‌ಗಳನ್ನು ಆರಂಭಿಸಲು ಸರ್ಕಾರ ತೀರ್ಮಾನಿಸಿದ್ದು, ಈವರೆಗೆ 260ಕ್ಕೂ ಹೆಚ್ಚು ಕ್ಲಿನಿಕ್‌ಗಳನ್ನು ಪ್ರಾರಂಭಿಸಲಾಗಿದೆ. 150 ಕ್ಲಿನಿಕ್‌ಗಳನ್ನು ಈ ತಿಂಗಳ ವೇಳೆಗೆ ಪ್ರಾರಂಭಿಸಲಾಗುವುದು. ಕ್ಲಿನಿಕ್‌ಗಳಲ್ಲಿ ಉಚಿತ ಔಷಧಿ ನೀಡುವ ವ್ಯವಸ್ಥೆಯನ್ನು ಮಾಡಲಾಗುವುದು. ಇನ್ನು ಹೆಣ್ಣು ಮಕ್ಕಳಿಗೆ ವಿಶೇಷ ಕ್ಲಿನಿಕ್‌ ಪ್ರಾರಂಭಿಸಲಾಗುತ್ತಿದ್ದು, ಆಯುಷ್‌ಮತಿ ಎಂಬ ಹೆಸರಲ್ಲಿ ಆರಂಭಿಸಲಾಗುವುದು. 250ಕ್ಕೂ ಹೆಚ್ಚು ಕ್ಲಿನಿಕ್‌ಗಳನ್ನು ಪ್ರಾರಂಭಿಸಲಾಗುವುದು. ಇನ್ನು ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಮರೀನಾ (ಮೀನು ಪ್ರವಾಸೋದ್ಯಮ) ಯೋಜನೆಗೆ ಜಾರಿಗೆ ತರಲಾಗಿದೆ. ಉಡುಪಿ ಜಿಲ್ಲೆ ಬೈಂದೂರಿನಲ್ಲಿ ರಾಜ್ಯದ ಮೊದಲ ಮರೀನಾ ತಲೆ ಎತ್ತಲಿದೆ. ಇದಲ್ಲದೇ, ರಾಜ್ಯಕ್ಕೆ ವಾಣಿಜ್ಯ ವಿಮಾನ ಉತ್ಪಾದನಾ ಘಟಕ ತರುವ ನಿಟ್ಟಿನಲ್ಲಿ ಸರ್ಕಾರವು ಪ್ರಯತ್ನ ನಡೆಸಿತು ಎಂದು ಎಂದು ವಿವರಿಸಿದರು.

ಮುಖ್ಯಮಂತ್ರಿಗಳ ಭಾಷಣದ ಬಳಿಕ ರಾಜ್ಯಪಾಲರ ಭಾಷಣದ ವಂದನಾ ನಿರ್ಣಯಕ್ಕೆ ಸದನದಲ್ಲಿ ಅಂಗೀಕಾರ ನೀಡಲಾಯಿತು. ರಾಜ್ಯ ಸರ್ಕಾರವು ಜನರ ಸಮಸ್ಯೆಗಳಿಗೆ ಸ್ಪಂದಿಸದೆ ಜನ ವಿರೋಧಿಯಾಗಿದೆ. ಬಡವರಿಗೆ ರೇಷನ್‌ ಕಾರ್ಡ್‌ ನೀಡಲು ಸಾಧ್ಯವಾಗಿಲ್ಲ. ಸರ್ಕಾರವು ಆಡಳಿತ ನಿರ್ವಹಣೆಯಲ್ಲಿ ವಿಫಲವಾಗಿದೆ ಎಂದು ಆರೋಪಿಸಿ ಪ್ರತಿಪಕ್ಷ ಕಾಂಗ್ರೆಸ್‌ ಸದಸ್ಯರು ಸಭಾತ್ಯಾಗ ಮಾಡಿದರು.

Kuvempu Airport: ಶಿವಮೊಗ್ಗ ಏರ್‌ಪೋರ್ಟ್‌ ಗೆ ಕುವೆಂಪು ಹೆಸರು: ಸಂಪುಟ ಸಭೆ ನಿರ್ಧಾರ...

ಕಳೆದ ಹಲವು ವರ್ಷಗಳಿಂದ ಶಾಲಾ ಕೊಠಡಿಗಳ ದುಸ್ಥಿತಿ ಹೇಳತೀರದು. ಈಗ ರಾಜ್ಯದ ಇತಿಹಾಸದಲ್ಲಿಯೇ ಎಂಟು ಸಾವಿರ ಶಾಲಾ ಕೊಠಡಿಗಳನ್ನು ನಿರ್ಮಿಸುವ ಕಾರ್ಯ ನಡೆಯುತ್ತಿದ್ದು, ಜೂನ್‌ ವೇಳಗೆ ಪೂರ್ಣಗೊಳಿಸುವಂತೆ ಸೂಚಿಸಲಾಗಿದೆ. ಎಲ್ಲಾ ವರ್ಗದವರಿಗೆ ವಸತಿ ಸೌಲಭ್ಯ ಒದಗಿಸಲಾಗಿದೆ. ಎಸ್‌ಸಿ/ಎಸ್‌ಟಿ ವಿದ್ಯಾರ್ಥಿಗಳಿಗೆ ರಾಜ್ಯದ ಐದು ಕಡೆ ಮೆಗಾ ಹಾಸ್ಟೆಲ್‌ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗಿದೆ. ಡಿಜಿಟಲೀಕರಣ ಮೂಲಕ ವಿಶ್ವವಿದ್ಯಾಲಯಗಳನ್ನು ಆರಂಭಿಸಲಾಗಿದೆ. ಶ್ರಮಿಕ ವರ್ಗದ ಮಕ್ಕಳ ಶಿಕ್ಷಣಕ್ಕೆ ಒತ್ತು ನೀಡಲಾಗಿದೆ. 8ನೇ ತರಗತಿಯಿಂದ ಪಿಜಿವರೆಗೆ ವಿದ್ಯಾಭ್ಯಾಸ ಮಾಡುವ ವಿದ್ಯಾರ್ಥಿನಿಯರಿಗೆ ಮತ್ತು ಎಸ್‌ಎಸ್‌ಎಲ್‌ಸಿ ನಂತರದಿಂದ ಪಿಜಿವರೆಗೆ ವಿದ್ಯಾಭ್ಯಾಸ ಮಾಡುವ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಲಾಗುತ್ತಿದೆ ಎಂದು ಹೇಳಿದರು.

Latest Videos
Follow Us:
Download App:
  • android
  • ios