*  ಕೊಯಮತ್ತೂರಿನ ಸೂಲೂರು ವಾಯುನೆಲೆ ತಲುಪಿದ ಬೈಕ್‌ ರ್‍ಯಾಲಿ*  ಮಣ್ಣು ಉಳಿಸುವಲ್ಲಿ ತಡ ಮಾಡಿದರೆ ಹಾನಿ ಖಚಿತ: ಸದ್ಗುರು ಎಚ್ಚರಿಕೆ*  ಮಣ್ಣಿನ ಹಾನಿ ತಡೆದು ಮುಂದಿನ ತಲೆ ಮಾರಿಗೆ ನೀಡಬೇಕಾಗಿರುವ ನಮ್ಮೆಲ್ಲರ ಜವಾಬ್ದಾರಿ 

ಬೆಂಗಳೂರು(ಜೂ.22): ಮಣ್ಣು ಉಳಿಸುವ ನಿಟ್ಟಿನಲ್ಲಿ ಮುಂದಿನ ಒಂದು ದಶಕದಲ್ಲಿ ಮಹತ್ವದ ಬದಲಾವಣೆಯಾಗಬೇಕಿದ್ದು, ತಡ ಮಾಡಿದಷ್ಟು ಹೆಚ್ಚಿನ ಹಾನಿಯನ್ನು ಅನುಭವಿಸಬೇಕಾಗುತ್ತದೆ. ಈ ನಿಟ್ಟಿನಲ್ಲಿ ಸರ್ಕಾರಕ್ಕೆ ಅಗತ್ಯ ಕ್ರಮಕೈಗೊಳ್ಳುವಂತೆ ಸಾರ್ವಜನಿಕರು ಒತ್ತಾಯಿಸಬೇಕು ಎಂದು ಈಶಾ ಫೌಂಡೇಶನ್‌ ಸದ್ಗುರು ತಿಳಿಸಿದರು.

Add Asianetnews Kannada as a Preferred SourcegooglePreferred

ಕೊಯಂಬತ್ತೂರಿನ ಸುಲೂರು ವಾಯುನೆಲೆಯಲ್ಲಿ ನಡೆದ ಮಣ್ಣು ಉಳಿಸಿ ಅಭಿಯಾನ 100 ನೇ ದಿನ ಹಾಗೂ ವಿಶ್ವ ಯೋಗ ದಿನದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಣ್ಣಿನ ಹಾನಿಯನ್ನು ತಡೆದು ಮುಂದಿನ ತಲೆ ಮಾರಿಗೆ ನೀಡಬೇಕಾಗಿರುವ ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಸದ್ಯ ಮಣ್ಣಿನ ರಕ್ಷಣೆಯ ತುರ್ತು ಸಂದರ್ಭದಲ್ಲಿ ನಾವೆಲ್ಲಾ ಇದ್ದೇವೆ. ಮುಂದಿನ 10 ರಿಂದ 15 ವರ್ಷಗಳಲ್ಲಿ ಮಣ್ಣಿನ ಸಂರಕ್ಷಣೆ ಸಾಧ್ಯವಾಗದಿದ್ದರೆ ಮತ್ತೆಂದೂ ಸಾಧ್ಯವಾಗುವುದಿಲ್ಲ. ಭಾರತ ಪ್ರಜಾಪ್ರಭುತ್ವ ರಾಷ್ಟ್ರವಾಗಿದ್ದು, ಮಣ್ಣಿನ ಸಂರಕ್ಷಣೆ ನಿಟ್ಟಿನಲ್ಲಿ ಅಗತ್ಯ ಕಾರ್ಯಕ್ರಮ ಜಾರಿಗೊಳಿಸುವ ನಿಟ್ಟಿನಲ್ಲಿ ಸರ್ಕಾರಗಳನ್ನು ಸಾರ್ವಜನಿಕರು ಒತ್ತಾಯಿಸಬೇಕು ಎಂದು ಕರೆಕೊಟ್ಟರು.

ಬೆಂಗಳೂರಿನ ಅರಮನೆ ಮೈದಾನದಲ್ಲಿ 'ಮಣ್ಣು ಉಳಿಸಿ' ಸಮಾವೇಶ

ಆನ್‌ಲೈನ್‌ ಮೂಲಕ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌, ಸದ್ಗುರುಗಳ ಮಣ್ಣು ಉಳಿಸಿ ಅಭಿಯಾನದ ಮೂಲಕ ವಿಶ್ವವನ್ನು ಒಂದೇ ಕುಟುಂಬದಂತೆ ಒಗ್ಗೂಡಿಸಿದ್ದಾರೆ. ಮಣ್ಣು ನಮ್ಮ ಸಮಾಜ ಮತ್ತು ಸಂಸ್ಕೃತಿಯ ಆತ್ಮ ಇದ್ದಂತೆ. ಅಂತಹ ಮಣ್ಣನ್ನು ಸಂರಕ್ಷಿಸುವುದು ಮಾನವ ನಾಗರಿಕತೆಯನ್ನು ರಕ್ಷಿಸಿದಂತೆ. ಅಭಿಯಾನಕ್ಕೆ ನನ್ನ ಸಂಪೂರ್ಣ ಬೆಂಬಲವಿದೆ ಎಂದು ತಿಳಿಸಿದರು.

ಅಭಿಯಾನಕ್ಕೆ 100 ದಿನ:

ಮಣ್ಣು ಉಳಿಸಿ ಅಭಿಯಾನದ ಭಾಗವಾಗಿ ಸದ್ಗುರು ಕೈಗೊಂಡಿದ್ದ ಬೈಕ್‌ ಯಾತ್ರೆ 100 ದಿನಗಳನ್ನು ಪೂರ್ಣಗೊಳಿಸಿದೆ. ಮಾಚ್‌ರ್‍ ಮೂರನೇ ವಾರ ಯೂರೋಪ್‌ನಿಂದ ಬೈಕ್‌ ಯಾತ್ರೆ ಆರಂಭವಾಗಿದ್ದು, ಯುರೋಪ್‌, ಮಧ್ಯಏಷ್ಯಾದ 27 ದೇಶಗಳು, ಭಾರತದ 10 ರಾಜ್ಯಗಳಿಗೆ ತೆರಳಿ ಸದ್ಯ ತಮಿಳುನಾಡು ತಲುಪಿದೆ. ಈವರೆಗೂ 74 ದೇಶಗಳು, ಭಾರತದಲ್ಲಿ ಕರ್ನಾಟಕ ಸೇರಿದಂತೆ 10 ರಾಜ್ಯಗಳು ಮಣ್ಣನ್ನು ಉಳಿಸುವ ಕ್ರಮಗಳನ್ನು ಕೈಗೊಳ್ಳಲು ಒಪ್ಪಿವೆ.