1 Year After Pahalgam Terror Attack ಕಳೆದ ವರ್ಷ ಕಾಶ್ಮೀರದ ಪಹಲ್ಗಾಂನಲ್ಲಿ ನಡೆದ ಭಯೋತ್ಪಾದಕರ ದಾಳಿಯಲ್ಲಿ ಮೃತಪಟ್ಟ ಶಿವಮೊಗ್ಗದ ಉದ್ಯಮಿ ಮಂಜುನಾಥ್‌ರ ಕುಟುಂಬ ಇನ್ನೂ ಆಘಾತದಲ್ಲಿದೆ. ಘಟನೆಯ ಒಂದು ವರ್ಷದ ನಂತರ, ಪತ್ನಿ ಪಲ್ಲವಿ ಕುಟುಂಬದ ಜವಾಬ್ದಾರಿ ಹೊತ್ತಿದ್ದು, ನೋವನ್ನು ಮರೆಯಲು ಯತ್ನ.

ಗೋಪಾಲ್ ಯಡಗೆರೆ

ಶಿವಮೊಗ್ಗ (ಏ.22): ಕಳೆದ ವರ್ಷ ಇದೇ ಸಮಯದಲ್ಲಿ ಕಾಶ್ಮೀರದ ಪಹಲ್ಗಾಂನಲ್ಲಿ ನಡೆದ ಭಯೋತ್ಪಾದಕರ ದಾಳಿಯಲ್ಲಿ ಮೃತಪಟ್ಟಿದ್ದ ಶಿವಮೊಗ್ಗದ ಉದ್ಯಮಿ ಮಂಜುನಾಥ್‌ರ ಕುಟುಂಬ, ಇನ್ನೂ ಆ ಆಘಾತದಿಂದ ಹೊರಬಂದಿಲ್ಲ. ಆದರೆ ಕುಟುಂಬ ನಿರ್ವಹಣೆಯ ಅನಿವಾರ್ಯತೆ ಮತ್ತು ಏಕೈಕ ಪುತ್ರನ ಭವಿಷ್ಯದ ಕಾರಣ ಮಂಜುನಾಥ್ ಪತ್ನಿ ಪಲ್ಲವಿ ಕುಟುಂಬದ ಪೋಷಣೆಯ ಜವಾಬ್ದಾರಿ ಹೊತ್ತಿದ್ದಾರೆ.

2025ರ ಏ. 22ರ ಮಟ ಮಟ ಮಧ್ಯಾಹ್ನ 2.40ರ ಸುಮಾರಿಗೆ ಪಹಲ್ಗಾಂನಲ್ಲಿ ಉಗ್ರರ ದಾಳಿ ನಡೆದಿತ್ತು. ಘಟನೆಗೆ ಒಂದು ವರ್ಷ ಸಂದ ಹಿನ್ನೆಲೆಯಲ್ಲಿ ಮಾಧ್ಯಮಗಳ ಸಂದರ್ಶನ ಅಥವಾ ಭೇಟಿಯ ಬಗ್ಗೆ ಪಲ್ಲವಿ ಒಪ್ಪದೆ ದೂರ ಉಳಿದಿದ್ದಾರೆ. ಯಾರೂ ಮಾಧ್ಯಮದವರು ನಮ್ಮ ಮನೆ ಬಳಿ ಬಾರದಂತೆ ಮನವಿ ಮಾಡಿದ್ದಾರೆ. ತಮ್ಮ ಜೊತೆ ಮಾತ್ರವಲ್ಲ, ತಮ್ಮ ಕುಟುಂಬದ ಹಿರಿಯರ ಜೊತೆ ಕೂಡ ಯಾರೂ ಮಾತನಾಡುವುದು ಬೇಡ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರಲ್ಲದೆ, ನಾನೂ ಕೂಡ ಯಾರೊಂದಿಗೂ ಈ ವಿಷಯ ಮಾತನಾಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಘಟನೆಯ ನೆನಪು:

ಪುತ್ರ ಅಭಿಜೇಯ ದ್ವಿತೀಯ ಪಿಯುಸಿಯಲ್ಲಿ ಶೇ.97 ಅಂಕ ಪಡೆದಿದ್ದರು. ಇದನ್ನು ಸಂಭ್ರಮಿಸಲು ಕುಟುಂಬ ಸಹಿತ ಕಾಶ್ಮೀರದ ಪ್ರವಾಸ ಕೈಗೊಂಡಿದ್ದರು. ಕುಟುಂಬ ಸ್ನೇಹಿತರಾಗಿದ್ದ ಗಣೇಶ್ ಅವರ ಜೊತೆ ಈ ಪ್ರವಾಸ ಯೋಜಿಸಿದ್ದರೂ, ಅದು ಸಾಧ್ಯವಾಗದೆ ಒಂದು ವಾರ ತಡವಾಗಿ ಮಂಜುನಾಥ್ ಕುಟುಂಬದ ಪ್ರವಾಸ ನಿಗದಿಯಾಗಿತ್ತು. ಅತ್ತ ಗಣೇಶ್ ಪ್ರವಾಸಕ್ಕೆ ಹೋಗಿ ವಾಪಸ್ಸು ಬಂದಿದ್ದರು. ಆದರೆ ಒಂದು ವಾರ ತಡವಾಗಿ ಹೋದ ಮಂಜುನಾಥ್ ಮತ್ತೆ ಹಿಂತಿರುಗಿ ಬರಲೇ ಇಲ್ಲ.