ಗರಿಷ್ಠ ಮೊತ್ತಕ್ಕೆ ಹರಾಜಾದ ಅಭಿಮನ್ಯು ಮಿಥುನ್ ಕೆಪಿಎಲ್ ಆಡೋದು ಡೌಟ್
ಕರ್ನಾಟಕ ಪ್ರಿಮಿಯರ್ ಲೀಗ್ ಹರಾಜಿನಲ್ಲಿ ಗರಿಷ್ಠ ಮೊತ್ತಕ್ಕೆ ವೇಗಿ ಅಭಿಮನ್ಯು ಮಿಥುನ್ ಅವರನ್ನ ಖರೀದಿಸಿದ ಶಿವಮೊಗ್ಗ ಲಯನ್ಸ್ ತಂಡಕ್ಕೆ ಇದೀಗ ಆತಂಕ ಶುರುವಾಗಿದೆ. ಅಷ್ಟಕ್ಕೂ ಶಿವಮೊಗ್ಗ ತಂಡದ ಆತಂಕಕ್ಕೆ ಕಾರಣವೇನು? ಇಲ್ಲಿದೆ ವಿವರ.
ಬೆಂಗಳೂರು(ಜು.23): ಕರ್ನಾಟಕ ಪ್ರಿಮಿಯರ್ ಲೀಗ್ ಟೂರ್ನಿಗೆ ಫ್ರಾಂಚೈಸಿಗಳ ತಯಾರಿ ಆರಂಭಗೊಂಡಿದೆ. ಈಗಾಗಲೇ ಕೆಪಿಎಲ್ ಹರಾಜಿನಲ್ಲಿ ಅಳೆದು ತೂಗಿ ಆಟಗಾರರನ್ನ ಖರೀದಿಸಿರುವ ಮಾಲೀಕರು ಟೂರ್ನಿಯನ್ನ ಎದುರು ನೋಡುತ್ತಿದ್ದಾರೆ.
ಈ ಬಾರಿಯ ಕೆಪಿಎಲ್ ಹರಾಜಿನಲ್ಲಿ ವೇಗಿ ಅಭಿಮನ್ಯು ಮಿಥುನ್ ಗರಿಷ್ಠ ಮೊತ್ತಕ್ಕೆ ಬಿಕರಿಯಾಗಿದ್ದರು. ಮಿಥುನ್ 8.30 ಲಕ್ಷ ರೂಪಾಯಿಗೆ ಶಿವಮೊಗ್ಗ ಲಯನ್ಸ್ ಪಾಲಾಗಿದ್ದರು. ಹರಾಜಿನಲ್ಲಿ ಅನುಭವಿ ವೇಗಿಯನ್ನ ಜಿದ್ದಿಗಿ ಬಿದ್ದು ಖರೀದಿಸಿದ ಶಿವಮೊಗ್ಗ ಲಯನ್ಸ್ಗೆ ಇದೀಗ ಆತಂಕ ಶುರುವಾಗಿದೆ. ಯಾಕೆಂದರೆ ಅಭಿಮನ್ಯು ಮಿಥುನ್ ಕೆಪಿಎಲ್ ಟೂರ್ನಿ ಆಡೋದು ಅನುಮಾನವಾಗಿದೆ.
ಇದನ್ನು ಓದಿ: ಕೆಪಿಎಲ್ ಹರಾಜಿನ ಬಳಿಕ 7 ತಂಡಗಳು ಹೇಗಿದೆ? ಇಲ್ಲಿದೆ ಸಂಪೂರ್ಣ ವಿವರ
ಆಗಸ್ಟ್ 17 ರಿಂದ ಆರಂಭಗೊಳ್ಳಲಿರುವ ದುಲೀಪ್ ಟ್ರೋಫಿಗಾಗಿ ಬಿಸಿಸಿಐ ತಂಡವನ್ನ ಆಯ್ಕೆ ಮಾಡಿದೆ. ಇಂಡಿಯಾ ರೆಡ್ ತಂಡದಲ್ಲಿ ಅಭಿಮನ್ಯು ಮಿಥುನ್ ಸ್ಥಾನ ಪಡೆದಿದ್ದಾರೆ. ತಮಿಳುನಾಡಿನ ದಿಂಡುಗಲ್ನಲ್ಲಿ ನಡೆಯಲಿರುವ ದುಲೀಪ್ ಟ್ರೋಫಿಯಲ್ಲಿ ಮಿಥುನ್ ಪಾಲ್ಗೊಳ್ಳಲಿದ್ದಾರೆ.
ಇದನ್ನು ಓದಿ: ಕೆಪಿಎಲ್ ಹರಾಜು 2018: ಗರಿಷ್ಠ ಮೊತ್ತಕ್ಕೆ ಸೇಲಾದ ಐವರು ಕ್ರಿಕೆಟಿಗರು!
ಕೆಪಿಎಲ್ ಟೂರ್ನಿ ಆಗಸ್ಟ್ 15 ರಿಂದ ಆರಂಭಗೊಳ್ಳಲಿದೆ. ಹೀಗಾಗಿ ಮಿಥುನ್ ಕೆಪಿಎಲ್ ಟೂರ್ನಿ ಆಡೋದು ಅನುಮಾನ. ದುಲೀಪ್ ಟ್ರೋಫಿ ಸರಣಿ ಇಂಡಿಯಾ ಬ್ಲೂ, ಇಂಡಿಯಾ ರೆಡ್ ಹಾಗೂ ಇಂಡಿಯಾ ಗ್ರೀನ್ ಮೂರು ತಂಡಗಳ ನಡುವೆ ನಡೆಯಲಿದೆ.
ಇದನ್ನು ಓದಿ: ಕೆಪಿಎಲ್ ಹರಾಜು 2018: ಅಚ್ಚರಿ ಮೂಡಿಸಿದ ಆಟಗಾರರಿವರು