ಸಲಹಾ ಮಂಡಳಿಯ ಸದಸ್ಯರಾದ ಸೌರವ್ ಗಂಗೂಲಿ ಅವರ ಪ್ರಬಲ ವಿರೋಧದ ನಡುವೆಯೂ ರವಿ ಶಾಸ್ತ್ರಿಯವರನ್ನು ಆಯ್ಕೆ ಮಾಡಲಾಗಿದೆ.

ನವದೆಹಲಿ(ಸೆ.15): ತಮಗೆ ಕೋಚ್ ಸ್ಥಾನ ಕೈತಪ್ಪಲು ಕಾರಣ ಏನೆಂಬುದನ್ನು ಭಾರತ ತಂಡದ ಸ್ಫೋಟಕ ಮಾಜಿ ಆಟಗಾರ ವೀರೇಂದ್ರ ಸೆಹ್ವಾಗ್ ಸತ್ಯ ಬಿಚ್ಚಿಟ್ಟಿದ್ದಾರೆ.

ಹಿಂದಿ ವಾಹಿನಿ 'ಇಂಡಿಯಾ ಟಿವಿ'ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಅವರು, ಭಾರತ ತಂಡದ ಕೋಚ್ ಸ್ಥಾನಕ್ಕೆ ಅರ್ಜಿ ಸಲ್ಲಿಸಲು ನನಗೆ ಆಸಕ್ತಿಯೂ ಇರಲಿಲ್ಲ ಅದರ ಬಗ್ಗೆ ಯೋಚಿಸಿಯೂ ಇರಲಿಲ್ಲ. ತಂಡದ ಕೋಚ್ ಆಫರ್ ಸ್ಥಾನ ನೀಡುವುದಾಗಿ ಸ್ವತಃ ಬಿಸಿಸಿಐ'ನ ಕಾರ್ಯದರ್ಶಿಯಾದ(ಉಸ್ತುವಾರಿ) ಅಮಿತಾಭ್ ಚೌಧರಿ ಹಾಗೂ ಕ್ರೀಡಾಭಿವೃದ್ಧಿ ವ್ಯವಸ್ಥಾಪಕರಾದ ಎಂ.ವಿ. ಶ್ರೀಧರ್ ನನ್ನ ಬಳಿ ಬಂದು ಕೋಚ್ ಸ್ಥಾನ ನಿಮಗೆ ನೀಡುವುದಾಗಿ ಆಫರ್ ನೀಡಿದ್ದರು.

ಅಲ್ಲದೇ ವಿರಾಟ್ ಕೊಹ್ಲಿ ಬಳಿ ಈ ಬಗ್ಗೆ ಚರ್ಚಿಸಿದಾಗ ಕೊಹ್ಲಿ ಸಹ ಅರ್ಜಿ ಸಲ್ಲಿಸಿ ನಾನು ನಿಮಗೆ ಬೆಂಬಲಿಸುತ್ತೇನೆ ಎಂದಿದ್ದರು. ಆನಂತರವೇ ನಾನು ಅರ್ಜಿ ಸಲ್ಲಿಸಿದ್ದು. ರವಿ ಶಾಸ್ತ್ರಿಯವರು ಈ ಮೊದಲು 'ನಾನು ಕೋಚ್ ಸ್ಥಾನಕ್ಕೆ ಅರ್ಜಿ ಸಲ್ಲಿಸುವುದಿಲ್ಲವೆಂದು. ಹಿಂದೊಮ್ಮೆ ಮಾಡಿದ್ದ ತಪ್ಪನ್ನು ಮತ್ತೊಮ್ಮೆ ಮಾಡುವುದಿಲ್ಲ' ಎಂದು ಹೇಳಿದ್ದರು.

ಆದರೆ ಅನಂತರ ನಡೆದಿದ್ದು ನನಗೆ ಮಾಡಿದ ಘೋರ ಅನ್ಯಾಯವೇ ಸರಿ. ಸಲಹಾ ಮಂಡಳಿಯ ಸದಸ್ಯರಾದ ಸೌರವ್ ಗಂಗೂಲಿ ಅವರ ಪ್ರಬಲ ವಿರೋಧದ ನಡುವೆಯೂ ರವಿ ಶಾಸ್ತ್ರಿಯವರನ್ನು ಆಯ್ಕೆ ಮಾಡಲಾಗಿದೆ. ಕೊನೆಗೆ ಬಿಸಿಸಿಐ ನನಗೆ ಕೋಚ್ ಆಗಲು ಪ್ರೋತ್ಸಾಹವೇ ನೀಡಲಿಲ್ಲ. ಕೊಹ್ಲಿ ಅವರ ಅಣತಿಯಂತೆ ಶಾಸ್ತ್ರಿಯವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ. ಹೀಗೆ ಬಿಸಿಸಿಐ ನೇರವಾಗಿ ನನಗೆ ಮೋಸ ಮಾಡಿದರೆ, ಕೊಹ್ಲಿ ಪರೋಕ್ಷವಾಗಿ ಎಸಗಿದರು. ಇನ್ನೆಂದು ಕೋಚ್ ಸ್ಥಾನಕ್ಕೆ ಅರ್ಜಿ ಸಲ್ಲಿಸುವುದಿಲ್ಲ' ಎಂದು ಸಂದರ್ಶನದಲ್ಲಿ ತಿಳಿಸಿದ್ದಾರೆ.