ಬೂಮ್ರಾ ಗಾಯದ ಬಗ್ಗೆ ಆತಂಕ ಬೇಡ: ಬಿಸಿಸಿಐ
ಡೆಲ್ಲಿ ವಿರುದ್ದದ ಪಂದ್ಯದಲ್ಲಿ ಗಾಯಕ್ಕೆ ತುತ್ತಾಗಿದ್ದ ಜಸ್ಪ್ರೀತ್ ಬುಮ್ರಾ ಕುರಿತು ಬಿಸಿಸಿಐ ಪ್ರಕಟಣೆ ಹೊರಡಿಸಿದೆ. ಬುಮ್ರಾ ಗಾಯದ ಕುರಿತು ಆತಂಕ ಪಡುವ ಅಗತ್ಯವಿಲ್ಲ ಎಂದು ಬಿಸಿಸಿಐ ಹೇಳಿದೆ. ಹಾಗಾದರೆ ಬುಮ್ರಾ ಮುಂದಿನ ಪಂದ್ಯಕ್ಕೆ ಕಣಕ್ಕಿಳಿಯುತ್ತಾರಾ? ಇಲ್ಲಿದೆ ವಿವರ.
ಮುಂಬೈ(ಮಾ.26): ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಭಾನುವಾರ ವಾಂಖೇಡೆ ಕ್ರೀಡಾಂಗಣದಲ್ಲಿ ನಡೆದ ಪಂದ್ಯದ ವೇಳೆ ಎಡಭುಜಕ್ಕೆ ಗಾಯ ಮಾಡಿಕೊಂಡು ಮೈದಾನ ತೊರೆದಿದ್ದ ಮುಂಬೈ ಇಂಡಿಯನ್ಸ್ ವೇಗಿ ಜಸ್ಪ್ರೀತ್ ಬೂಮ್ರಾ, ಆತಂಕ ಸೃಷ್ಟಿಸಿದ್ದರು. ಏಕದಿನ ವಿಶ್ವಕಪ್ನಲ್ಲಿ ಬೂಮ್ರಾ ನಿರ್ಣಾಯಕ ಪಾತ್ರ ವಹಿಸಲಿದ್ದು, ಅವರ ಮೇಲೆ ತಂಡ ಹೆಚ್ಚು ಅವಲಂಬಿತಗೊಂಡಿದೆ. ಈ ಹಿನ್ನೆಲೆಯಲ್ಲಿ ಭಾನುವಾರದ ಘಟನೆ ಎಲ್ಲರಲ್ಲೂ ಆತಂಕ ಮೂಡಿಸಿತ್ತು. ಆದರೆ ಸೋಮವಾರ ಬಿಸಿಸಿಐ ಅಧಿಕಾರಿಯೊಬ್ಬರು ಬೂಮ್ರಾ ಗಾಯದ ಪ್ರಮಾಣ ದೊಡ್ಡ ಮಟ್ಟದಲ್ಲ. ಅವರು ಗುಣಮುಖರಾಗುತ್ತಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ.
ಇದನ್ನೂ ಓದಿ: IPL 2019: ಮುಂಬೈ VS ಡೆಲ್ಲಿ ಪಂದ್ಯಕ್ಕೆ ವಿಶೇಷ ಅತಿಥಿ!
ಭಾನುವಾರ ರಾತ್ರಿಯೇ ಮುಂಬೈ ಇಂಡಿಯನ್ಸ್ ತಂಡದ ಫಿಸಿಯೋ ನಿತಿನ್ ಪಟೇಲ್ಗೆ ಭಾರತ ತಂಡದ ಫಿಸಿಯೋ ಪ್ಯಾಟ್ರಿಕ್ ಫರ್ಹಾರ್ಟ್ ಕರೆ ಮಾಡಿ ಪರಿಸ್ಥಿತಿ ವಿಚಾರಿಸಿದರು ಎನ್ನಲಾಗಿದೆ. ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಸಹ ಆತಂತಗೊಂಡಿದ್ದರು ಎಂದು ಮಾಧ್ಯಮಗಳು ವರದಿ ಮಾಡಿವೆ.
ಇದನ್ನೂ ಓದಿ: ಐಪಿಎಲ್: RCB ಬೆಂಗಳೂರು ಪಂದ್ಯಕ್ಕೆ ಮೆಟ್ರೋದಿಂದ ಶುಭಸುದ್ದಿ..!
ಸೋಮವಾರ ಬೆಳಗ್ಗೆ ಬೂಮ್ರಾರನ್ನು ಕೆಲ ಸ್ಕಾ್ಯನ್ಗಳಿಗೆ ಒಳಪಡಿಸಲಾಯಿತು. ವರದಿಗಳು ಹೊರಬಂದಿದ್ದು ಯಾವುದೇ ಆತಂಕವಿಲ್ಲ. ಮುಂದಿನ ಪಂದ್ಯದಲ್ಲಿ ಅವರು ಆಡಲಿದ್ದಾರೆ ಎಂದು ಮುಂಬೈ ತಂಡದ ಅಧಿಕಾರಿ ತಿಳಿಸಿದ್ದಾರೆ. ಮಾ.28ರಂದು ಆರ್ಸಿಬಿ ವಿರುದ್ಧ ಪಂದ್ಯವನ್ನಾಡಲು ಮುಂಬೈ ತಂಡ ಸೋಮವಾರ ಬೆಂಗಳೂರಿಗೆ ಆಗಮಿಸಿತು. ಆದರೆ ಬೂಮ್ರಾ ಮುಂಬೈನಲ್ಲೇ ಉಳಿದರು. ಅವರು ಮಂಗಳವಾರ ತಂಡ ಕೂಡಿಕೊಳ್ಳುವ ನಿರೀಕ್ಷೆ ಇದೆ.