ಚೆನ್ನೈ ಕ್ರೀಡಾಂಗಣದಲ್ಲಿ ಪ್ರೇಕ್ಷಕರ ಗ್ಯಾಲರಿ ವಿವಾದ ಹೈದ್ರಾಬಾದ್, ಬೆಂಗ್ಳೂರು ಅಂಗಣ ಕಾಯ್ದಿಟ್ಟ ಬಿಸಿಸಿಐ

ನವದೆಹಲಿ: ಐಪಿಎಲ್ 12ನೇ ಆವೃತ್ತಿಯ ಪ್ಲೇ-ಆಫ್ ಹಾಗೂ ಫೈನಲ್ ಪಂದ್ಯದ ಆತಿಥ್ಯ ಚೆನ್ನೈ ಕೈ ತಪ್ಪುವ ಸಾಧ್ಯತೆಯಿದೆ. ಒಂದೊಮ್ಮೆ ಇಲ್ಲಿನ ಚೆಪಾಕ್ ಕ್ರೀಡಾಂಗಣದ ಪ್ರೇಕ್ಷಕರ ಗ್ಯಾಲರಿ ವಿವಾದ ಬಗೆ ಹರಿಯದಿದ್ದರೆ ಅಂತಿಮ ಸುತ್ತಿನ ಐಪಿಎಲ್ ಪಂದ್ಯಗಳನ್ನು ಬೇರೆಡೆಗೆ ಸ್ಥಳಾಂತರಿಸಲು ಬಿಸಿಸಿಐ ತೀರ್ಮಾನಿಸಿದ್ದು, ಈ ಹಿನ್ನೆಲೆಯಲ್ಲಿ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣ ಹಾಗೂ ಹೈದರಾಬಾದ್‌ನ ರಾಜೀವ್ ಗಾಂಧಿ ಕ್ರೀಡಾಂಗಣವನ್ನುಕಾಯ್ದಿಟ್ಟ ಸ್ಥಳವನ್ನಾಗಿ ಸೋಮವಾರ ಬಿಸಿಸಿಐ ಆಯ್ಕೆ ಮಾಡಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ತಮಿಳುನಾಡು ಕ್ರಿಕೆಟ್ ಸಂಸ್ಥೆಯು (ಟಿಎನ್‌ಸಿಎ) ಚೆಪಾಕ್ ಕ್ರೀಡಾಂಗಣದ ಐ, ಜೆ ಹಾಗೂ ಕೆ ಪ್ರೇಕ್ಷಕರ ಗ್ಯಾಲರಿಗೆ 2012ರಿಂದ ಸ್ಥಳೀಯ ಮುನಿಸಿಪಲ್ ಕಾರ್ಪೋರೇಷನ್‌ನಿಂದ ಯೋಗ್ಯತಾ ಪ್ರಮಾಣ ಪತ್ರ ಪಡೆದಿಲ್ಲ. ಈ ಹಿನ್ನೆಲೆಯಲ್ಲಿ ಈ 3 ಗ್ಯಾಲರಿಗಳಿಗೆ ಸದ್ಯಕ್ಕೆ ಪ್ರೇಕ್ಷಕರಿಗೆ ಪ್ರವೇಶ ತಡೆಹಿಡಿಯಲಾಗಿದೆ

ವಿಶೇಷವೆಂದರೆ ಈ ಬಾರಿ ಐಪಿಎಲ್ ಉದ್ಘಾಟನಾ ಪಂದ್ಯ ಇದೇ ಚೆಪಾಕ್ ಅಂಗಳದಲ್ಲಿ ನಡೆದಿತ್ತು. ಆ ವೇಳೆ ಯಾವುದೇ ಚಕಾರ ಎತ್ತದ ಬಿಸಿಸಿಐ, ಇದೀಗ ಏಕೆ ಈ ತಕರಾರು ತೆಗೆದಿದೆ ಎಂಬ ಪ್ರಶ್ನೆ ಕಾಡುತ್ತಿದೆ

‘ಒಂದೊಮ್ಮೆ ಚೆಪಾಕ್ ಅಂಗಳದ ಪ್ರೇಕ್ಷಕರ ಗ್ಯಾಲರಿ ವಿವಾದ ಬಗೆ ಹರಿಯದಿದ್ದರೆ 2 ಪ್ಲೇ-ಆಫ್ ಪಂದ್ಯಗಳು, ಎಲಿಮಿನೇಟರ್ ಹಾಗೂ ಫೈನಲ್ ಪಂದ್ಯವನ್ನು ಮತ್ತೊಂದು ಕ್ರೀಡಾಂಗಣಕ್ಕೆ ಸ್ಥಳಾಂತರಿಸಲು ಚಿಂತಿಸಲಾಗಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರು ಹಾಗೂ ಹೈದರಾಬಾದ್ ಕ್ರೀಡಾಂಗಣಗಳನ್ನು ಮುಂಚಿತವಾಗಿಯೇ ಕಾಯ್ದಿಟ್ಟ ಸ್ಥಳವನ್ನಾಗಿ ಗುರುತಿಸಲಾಗಿದೆ’ ಎಂದು ಹೆಸರು ಹೇಳಲಿಚ್ಚಿಸದ ಬಿಸಿಸಿಐ ಅಧಿಕಾರಿಯೊಬ್ಬರು ಸೋಮವಾರ ಹೇಳಿದ್ದಾರೆ.