ಟೀಂ ಇಂಡಿಯಾಗೆ ಸರಣಿ ಜಯದ ಗುರಿ: ಭಾರೀ ಮಳೆ ಮುನ್ಸೂಚನೆ
ಭಾರತ-ದಕ್ಷಿಣ ಆಫ್ರಿಕಾ ನಡುವಿನ ಮೂರನೇ ಹಾಗೂ ಅಂತಿಮ ಟಿ20 ಪಂದ್ಯಕ್ಕೆ ಬೆಂಗಳೂರಿನ ಎಂ.ಚಿನ್ನಸ್ವಾಮಿ ಮೈದಾನ ಆತಿಥ್ಯ ವಹಿಸಿದೆ. ಈ ಪಂದ್ಯಕ್ಕೀಗ ಮಳೆಭೀತಿ ಎದುರಾಗಿದೆ. ಇದರ ನಡುವೆಯೂ ಟೀಂ ಇಂಡಿಯಾ ಸರಣಿ ಜಯದತ್ತ ಕಣ್ಣಿಟ್ಟಿದೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ..
ಬೆಂಗಳೂರು[ಸೆ.22]: ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಗೆ ಮುನ್ನ ಟಿ20 ಸರಣಿ ವಶಪಡಿಸಿಕೊಳ್ಳುವ ಉತ್ಸಾಹದಲ್ಲಿರುವ ಭಾರತ ತಂಡ, ಭಾನುವಾರ ಇಲ್ಲಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ 3ನೇ ಟಿ20 ಪಂದ್ಯದಲ್ಲಿ ಗೆಲುವಿನ ಲೆಕ್ಕಾಚಾರದಲ್ಲಿದೆ.
3 ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯ ಮಳೆಯಿಂದ ರದ್ದಾದ ಬಳಿಕ, ಮೊಹಾಲಿಯಲ್ಲಿ ನಡೆದಿದ್ದ 2ನೇ ಪಂದ್ಯದಲ್ಲಿ ಭಾರತ 7 ವಿಕೆಟ್ಗಳ ಭರ್ಜರಿ ಗೆಲುವು ಸಾಧಿಸಿ 1-0 ಮುನ್ನಡೆ ಪಡೆದುಕೊಂಡಿತ್ತು. ಸೋಲನ್ನೇ ಕಾಣದೆ ವೆಸ್ಟ್ಇಂಡೀಸ್ ಪ್ರವಾಸವನ್ನು ಮುಗಿಸಿಬಂದಿದ್ದ ವಿರಾಟ್ ಕೊಹ್ಲಿ ಪಡೆ, ಅ.2ರಿಂದ ದ.ಆಫ್ರಿಕಾ ವಿರುದ್ಧ ಟೆಸ್ಟ್ ಸರಣಿಗೆ ಅಜೇಯವಾಗಿ ಕಾಲಿಡಲು ಎದುರು ನೋಡುತ್ತಿದೆ.
#INDvSA ಬೆಂಗಳೂರು ಪಂದ್ಯ; ಮಳೆ ಬರುತ್ತಾ? ಬಿಸಿಲು ಇರುತ್ತಾ?
2020ರ ಟಿ20 ವಿಶ್ವಕಪ್ಗೆ ಬಲಿಷ್ಠ ತಂಡ ಕಟ್ಟುವ ಕಾರ್ಯ ಆರಂಭಿಸಿರುವ ಭಾರತ ತಂಡದ ಆಡಳಿತ, ಹಲವು ಹೊಸ ಪ್ರಯೋಗಗಳಿಗೆ ಮುಂದಾಗಿದೆ. ರಿಷಭ್ ಪಂತ್ಗೆ ಅಗತ್ಯಕ್ಕಿಂತ ಹೆಚ್ಚಿನ ಅವಕಾಶಗಳನ್ನು ನೀಡಲಾಗುತ್ತಿದ್ದು, ದೆಹಲಿಯ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ತಂಡದ ನಿರೀಕ್ಷೆ ಉಳಿಸಿಕೊಳ್ಳುವಲ್ಲಿ ಸತತ ವೈಫಲ್ಯ ಕಾಣುತ್ತಿದ್ದಾರೆ. ಬೆಂಗಳೂರು ಪಂದ್ಯ ಪಂತ್ ಪಾಲಿಗೆ ಬಹುತೇಕ ಕೊನೆ ಅವಕಾಶವಾಗಲಿದೆ.
ಭಾರತದ ಅಗ್ರ ಮೂವರು ಬ್ಯಾಟ್ಸ್ಮನ್ಗಳಾದ ರೋಹಿತ್ ಶರ್ಮಾ, ಶಿಖರ್ ಧವನ್ ಹಾಗೂ ವಿರಾಟ್ ಕೊಹ್ಲಿ ಮೇಲೆ ಭಾರೀ ನಿರೀಕ್ಷೆ ಇದೆ. ಕೊಹ್ಲಿಯ ಐಪಿಎಲ್ ತವರು ಮೈದಾನವಾಗಿರುವ ಕಾರಣ, ಸಹಜವಾಗಿಯೇ ಬೆಂಗಳೂರು ಅಭಿಮಾನಿಗಳು ಭಾರತದ ನಾಯಕನಿಂದ ದೊಡ್ಡ ಇನ್ನಿಂಗ್ಸ್ ನಿರೀಕ್ಷೆ ಮಾಡುತ್ತಿದ್ದಾರೆ. ಶ್ರೇಯಸ್ ಅಯ್ಯರ್ ಭರವಸೆ ಹೆಚ್ಚಿಸಿದ್ದು, ಹಾರ್ದಿಕ್, ಕೃನಾಲ್ ಪಾಂಡ್ಯರ ಆಲ್ರೌಂಡ್ ಆಟ ಫಲಿತಾಂಶದ ಮೇಲೆ ಪರಿಣಾಮ ಬೀರಲಿದೆ.
INDvSA T20: ಬೆಂಗಳೂರು ಪಂದ್ಯಕ್ಕೆ ಬದಲಾವಣೆ; ಕನ್ನಡಿಗನಿಗೆ ಸ್ಥಾನ?
ಕೆಳ ಕ್ರಮಾಂಕದ ಆಟಗಾರರಿಂದಲೂ ಉಪಯುಕ್ತ ರನ್ ಕೊಡುಗೆ ಎದುರು ನೋಡುತ್ತಿರುವ ಭಾರತ, ಕುಲ್ದೀಪ್ ಯಾದವ್ ಹಾಗೂ ಯಜುವೇಂದ್ರ ಚಹಲ್ರನ್ನು ಸರಣಿಯಿಂದ ಹೊರಗಿಟ್ಟಿದೆ. ವೇಗಿಗಳಾದ ದೀಪಕ್ ಚಹಾರ್ ಹಾಗೂ ನವ್ದೀಪ್ ಸೈನಿ, ಆರಂಭಿಕ ಸ್ಪೆಲ್ಗಳಲ್ಲಿ ಮಾತ್ರವಲ್ಲದೆ ಡೆತ್ ಓವರ್ಗಳಲ್ಲೂ ರನ್ ನಿಯಂತ್ರಿಸುವ ಸಾಮರ್ಥ್ಯ ಹೊಂದಿದ್ದಾರೆ. ಚಿನ್ನಸ್ವಾಮಿ ಕ್ರೀಡಾಂಗಣದ ಬ್ಯಾಟಿಂಗ್ ಸ್ನೇಹಿ ಪಿಚ್ನಲ್ಲಿ ಸ್ಪಿನ್ನರ್ಗಳಿಗೂ ನೆರವು ಸಿಗಲಿದ್ದು, ಭಾರತ ಈ ಪಂದ್ಯಕ್ಕೆ ಲೆಗ್ ಸ್ಪಿನ್ನರ್ ರಾಹುಲ್ ಚಹಾರ್ರನ್ನು ಆಡಿಸಬಹುದು.
ಡಿ ಕಾಕ್ ಮೇಲೆ ಒತ್ತಡ: ಅನುಭವದ ಕೊರತೆ ಎದುರಿಸುತ್ತಿರುವ ದಕ್ಷಿಣ ಆಫ್ರಿಕಾ ತನ್ನ ನಾಯಕ ಹಾಗೂ ಸ್ಫೋಟಕ ಬ್ಯಾಟ್ಸ್ಮನ್ ಕ್ವಿಂಟನ್ ಡಿ ಕಾಕ್ ಮೇಲೆ ಅವಲಂಬಿತಗೊಂಡಿದೆ. ಕಳೆದ ಪಂದ್ಯದಲ್ಲಿ ಅಂ.ರಾ.ಟಿ20ಗೆ ಪಾದಾರ್ಪಣೆ ಮಾಡಿದ ತೆಂಬ ಬವುಮಾ ಭರವಸೆ ಮೂಡಿಸಿದ್ದಾರೆ. ಆದರೆ ಹಿರಿಯ ಬ್ಯಾಟ್ಸ್ಮನ್ ಡೇವಿಡ್ ಮಿಲ್ಲರ್ ಹಾಗೂ ತಾರಾ ವೇಗಿ ಕಗಿಸೋ ರಬಾಡ ಜವಾಬ್ದಾರಿಯುತ ಪ್ರದರ್ಶನ ತೋರಿದರೆ ಮಾತ್ರ, ದ.ಆಫ್ರಿಕಾ ಸರಣಿಯಲ್ಲಿ 1-1ರಲ್ಲಿ ಸಮಬಲ ಸಾಧಿಸಲು ಸಾಧ್ಯ.
ಅಡ್ಡಿಯಾಗಲಿದೆಯೇ ಮಳೆ?
ಭಾನುವಾರ ಬೆಂಗಳೂರಲ್ಲಿ ಗಡುಗು ಸಹಿತ ಭಾರೀ ಮಳೆಯಾಗುವ ಮುನ್ಸೂಚನೆ ಇದೆ. ಈಗಾಗಲೇ ಧರ್ಮಶಾಲಾದಲ್ಲಿ ನಡೆಯಬೇಕಿದ್ದ ಮೊದಲ ಪಂದ್ಯ ಮಳೆಯಿಂದಾಗಿ ರದ್ದಾಗಿತ್ತು. ಈ ಪಂದ್ಯಕ್ಕೂ ಮಳೆ ಅಡ್ಡಿಪಡಿಸಿ ಫಲಿತಾಂಶ ಹೊರಬೀಳದಿದ್ದರೆ ಭಾರತ ಸರಣಿ ವಶಪಡಿಸಿಕೊಳ್ಳಲಿದೆ.
ಪಿಚ್ ರಿಪೋರ್ಟ್
‘ಬ್ಯಾಟಿಂಗ್ ಸ್ವರ್ಗ’ ಎಂದೇ ಕರೆಯಲ್ಪಡುವ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ರನ್ ಹೊಳೆ ಹರಿಯಲಿದೆ. ಆದರೆ ಮಳೆ ಮುನ್ಸೂಚನೆ ಇರುವ ಕಾರಣ, ಪಂದ್ಯ ನಡೆಯುವ ಬಗ್ಗೆ ಅನುಮಾನವಿದೆ. ಮಳೆ ಕೆಲ ಗಂಟೆಗಳ ಕಾಲ ಬಿಡುವು ಕೊಟ್ಟರೂ ಸಬ್-ಏರ್ ವ್ಯವಸ್ಥೆ ಇರುವ ಕಾರಣ ಪಂದ್ಯ ನಡೆಸಲು ಅವಕಾಶ ಸಿಗಲಿದೆ.
ಒಟ್ಟು ಮುಖಾಮುಖಿ: 14
ಭಾರತ: 09
ದ.ಆಫ್ರಿಕಾ: 05
ಸಂಭವನೀಯ ಆಟಗಾರರ ಪಟ್ಟಿ
ಭಾರತ : ರೋಹಿತ್, ಧವನ್, ಕೊಹ್ಲಿ (ನಾಯಕ), ಶ್ರೇಯಸ್, ಪಂತ್, ಹಾರ್ದಿಕ್, ಜಡೇಜಾ, ಕೃನಾಲ್, ವಾಷಿಂಗ್ಟನ್/ರಾಹುಲ್ ಚಹಾರ್, ದೀಪಕ್, ಸೈನಿ
ದ.ಆಫ್ರಿಕಾ: ಡಿ ಕಾಕ್ (ನಾಯಕ), ಡುಸ್ಸೆನ್, ಬವುಮ, ಬ್ಯುರನ್, ರೀಜಾ, ಮಿಲ್ಲರ್, ನೋರ್ಟೆ, ಫೆಲುಕ್ವಾಯೋ, ಪ್ರಿಟೋರಿಯಸ್, ರಬಾಡ, ಶಮ್ಸಿ.
ಪಂದ್ಯ ಆರಂಭ: ಸಂಜೆ 7ಕ್ಕೆ
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್ 1