ಇಂಡೋ-ಕಿವೀಸ್ ಏಕದಿನ: ಸರಣಿ ಗೆಲುವಿನತ್ತ ಕೊಹ್ಲಿ ಬಾಯ್ಸ್ ಚಿತ್ತ!
ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ 3ನೇ ಏಕದಿನ ಪಂದ್ಯ ಹಲವು ಕುತೂಹಲಗಳಿಗೆ ಎಡೆಮಾಡಿಕೊಟ್ಟಿದೆ. ಒಂದೆಡೆ ಸರಣಿ ಗೆಲುವಿಗೆ ಭಾರತ ಹೋರಾಟ ನಡೆಸಿದರೆ, ಸರಣಿ ಉಳಿಸಿಕೊಳ್ಳಲು ಕಿವೀಸ್ ಹೋರಾಡಲಿದೆ. ಮತ್ತೊಂದೆಡೆ ಟೀಂ ಇಂಡಿಯಾದಲ್ಲಿ ಕೆಲ ಬದಲಾವಣೆಗಳಾಗೋ ಸಾಧ್ಯತೆಗಳಿವೆ.
ಬೇ ಓವಲ್(ಜ.27): ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ 3ನೇ ಏಕದಿನ ಪಂದ್ಯ ಉಭಯ ತಂಡಗಳು ತುಂಬಾನೇ ಮುಖ್ಯ. ಈಗಾಗಲೇ ಆರಂಭಿಕ 2 ಪಂದ್ಯ ಗೆದ್ದಿರುವ ಟೀಂ ಇಂಡಿಯಾ ಇದೀಗ 3ನೇ ಪಂದ್ಯ ಗೆದ್ದು ಸರಣಿ ಕೈವಶ ಮಾಡೋ ತವಕದಲ್ಲಿದೆ. ಆದರೆ ಆತಿಥೇಯ ನ್ಯೂಜಿಲೆಂಡ್ಗೆ ಇದು ಮಾಡು ಇಲ್ಲವೇ ಮಡಿ ಪಂದ್ಯ.
ಇದನ್ನೂ ಓದಿ: ಕ್ರಿಕೆಟಿಗನ ನಿಂದಿಸಿದ ಪಾಕಿಸ್ತಾನ ನಾಯಕ ಸರ್ಫರಾಜ್ ಅಮಾನತು!
3ನೇ ಏಕದಿನ ಪಂದ್ಯದಲ್ಲಿ ಕಮ್ಬ್ಯಾಕ್ ಮಾಡಿ ಸರಣಿ ಉಳಿಸಿಕೊಳ್ಳಲು ನ್ಯೂಜಿಲೆಂಡ್ ರಣತಂತ್ರ ಹೂಡಿದೆ. ಹೀಗಾಗಿ ನಾಳಿನ(ಜ.28) ಪಂದ್ಯ ತೀವ್ರ ಕುತೂಹಲ ಕೆರಳಿಸಿದೆ. ಇತ್ತ ಅಮಾನತು ಶಿಕ್ಷೆಯಿಂದ ಹೊರಬಂದಿರುವ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಟೀಂ ಇಂಡಿಯಾ ಸೇರಿಕೊಂಡಿದ್ದಾರೆ. ಆದರೆ ಪಾಂಡ್ಯ ಆಡೋ ಹನ್ನೊಂದರ ಬಳಗದಲ್ಲಿ ಕಾಣಿಸಿಕೊಳ್ತಾರ ಅನ್ನೋದು ಕುತೂಹಲ ಮೂಡಿಸಿದೆ.
ನ್ಯೂಜಿಲೆಂಡ್ ವಿರುದ್ಧದ ಸರಣಿಯಲ್ಲಿ ನಾಯಕ ವಿರಾಟ್ ಕೊಹ್ಲಿಗೆ ಇದು ಅಂತಿಮ ಪಂದ್ಯ. ಇನ್ನುಳಿದ 2 ಏಕದಿನ ಹಾಗೂ 3 ಟಿ20 ಪಂದ್ಯದಿಂದ ಕೊಹ್ಲಿಗೆ ವಿಶ್ರಾಂತಿ ನೀಡಲಾಗಿದೆ. ಹೀಗಾಗಿ ಸರಣಿ ಗೆಲುವಿನೊಂದಿಗೆ ನ್ಯೂಜಿಲೆಂಡ್ ಪ್ರವಾಸಕ್ಕೆ ಗುಡ್ ಬೈ ಹೇಳಲು ಕೊಹ್ಲಿ ನಿರ್ಧರಿಸಿದ್ದಾರೆ.
ಇದನ್ನೂ ಓದಿ: ಒಂದು ಆಲ್ರೌಂಡರ್ ಸ್ಥಾನಕ್ಕೆ ಸ್ಪರ್ಧಾತ್ಮಕ ಪೈಪೋಟಿ-ಜಾಧವ್
ಬ್ಯಾಟಿಂಗ್ ಹಾಗೂ ಬೌಲಿಂಗ್ನಲ್ಲಿ ಟೀಂ ಇಂಡಿಯಾ ಕ್ರಿಕೆಟಿಗರು ಉತ್ತಮ ಫಾರ್ಮ್ನಲ್ಲಿದ್ದಾರೆ. ಹೀಗಾಗಿ ತಂಡದ ಆಯ್ಕೆಯೇ ಕಗ್ಗಂಟಾಗಿದೆ. ಕಿವೀಸ್ ವಿರುದ್ಧದ ಮೊದಲ ಪಂದ್ಯದಲ್ಲಿ ಭಾರತ 8 ವಿಕೆಟ್ ಗೆಲುವು ಸಾಧಿಸಿದ್ದರೆ, 2ನೇ ಪಂದ್ಯದಲ್ಲಿ 90 ರನ್ ಗೆಲುವು ದಾಖಲಿಸಿತ್ತು.