ಫೆ.15ರಂದು ಭಾರತ ವಿರುದ್ಧ ಶ್ರೀಲಂಕಾದ ಕೊಲಂಬೊದಲ್ಲಿ ನಿಗದಿಯಾಗಿರುವ ಟಿ20 ವಿಶ್ವಕಪ್ ಪಂದ್ಯವನ್ನು ಬಹಿಷ್ಕರಿಸುವುದಾಗಿ ಪಾಕಿಸ್ತಾನ ಘೋಷಿಸಿದ ಬೆನ್ನಲ್ಲೇ, ಇದರಿಂದಾಗುವ ಪರಿಣಾಮ ಹಾಗೂ ಆರ್ಥಿಕ ನಷ್ಟವನ್ನು ಅಂದಾಜಿಸಲಾಗುತ್ತಿದೆ
ನವದೆಹಲಿ: ಫೆ.15ರಂದು ಭಾರತ ವಿರುದ್ಧ ಶ್ರೀಲಂಕಾದ ಕೊಲಂಬೊದಲ್ಲಿ ನಿಗದಿಯಾಗಿರುವ ಟಿ20 ವಿಶ್ವಕಪ್ ಪಂದ್ಯವನ್ನು ಬಹಿಷ್ಕರಿಸುವುದಾಗಿ ಪಾಕಿಸ್ತಾನ ಘೋಷಿಸಿದ ಬೆನ್ನಲ್ಲೇ, ಇದರಿಂದಾಗುವ ಪರಿಣಾಮ ಹಾಗೂ ಆರ್ಥಿಕ ನಷ್ಟವನ್ನು ಅಂದಾಜಿಸಲಾಗುತ್ತಿದೆ. ವರದಿಗಳ ಪ್ರಕಾರ, ಭಾರತ-ಪಾಕ್ ಪಂದ್ಯ ನಡೆಯದಿದ್ದರೆ ಬರೋಬ್ಬರಿ ₹2200 ಕೋಟಿ ನಷ್ಟವಾಗಲಿದೆ ಎಂದು ತಿಳಿದುಬಂದಿದೆ.
ಪಾಕ್ ಕ್ರಿಕೆಟ್, ಬಿಸಿಸಿಐ, ಶ್ರೀಲಂಕಾ, ಟೂರ್ನಿಯ ಪ್ರಾಯೋಜಕರು, ಜಾಹೀರಾತುದಾರರಿಗೂ ಅನ್ವಯ
ಈ ನಷ್ಟ ಐಸಿಸಿಗೆ ಮಾತ್ರವಲ್ಲದೆ ಪಾಕ್ ಕ್ರಿಕೆಟ್, ಬಿಸಿಸಿಐ, ಶ್ರೀಲಂಕಾ, ಟೂರ್ನಿಯ ಪ್ರಾಯೋಜಕರು, ಜಾಹೀರಾತುದಾರರಿಗೂ ಅನ್ವಯಿಸಲಿದೆ.
ಕ್ರಿಕೆಟ್ನಲ್ಲಿ ಪಂದ್ಯದ ಪ್ರಸಾರ ಹಕ್ಕು, ಜಾಹೀರಾತು, ಪ್ರಾಯೋಜಕತ್ವ, ಟಿಕೆಟ್ ಆದಾಯ ಮತ್ತು ಕಾನೂನುಬದ್ಧ ಬೆಟ್ಟಿಂಗ್(ಭಾರತದ ಹೊರಗಡೆ) ಸೇರಿ ಹಲವು ವಿಧದಲ್ಲಿ ಆದಾಯ ಸಿಗಲಿದೆ. ಒಂದು ವೇಳೆ ಭಾರತ-ಪಾಕ್ ಪಂದ್ಯ ರದ್ದಾದರೆ, ಬರೀ ಜಾಹೀರಾತು ಆದಾಯದಲ್ಲೇ 200ರಿಂದ 250 ಕೋಟಿ ರು. ನಷ್ಟ ಸಂಭವಿಸಬಹುದು ಎಂದು ಅಂದಾಜಿಸಲಾಗಿದೆ. ಈ ಪಂದ್ಯದ ವೇಳೆ ಪ್ರಸಾರವಾಗುವ ಪ್ರತಿ 10 ಸೆಕೆಂಡ್ಗಳ ಜಾಹೀರಾತಿಗೆ ಬ್ರಾಡ್ಕಾಸ್ಟರ್ಗಳು 25ರಿಂದ 40 ಲಕ್ಷ ರು. ಶುಲ್ಕ ವಿಧಿಸುತ್ತಾರೆ. ಅಲ್ಲದೆ, ಭಾರತ-ಪಾಕ್ ದೇಶಗಳ ಕ್ರಿಕೆಟ್ ಮಂಡಳಿಗಳು ನೇರ ಮತ್ತು ಪರೋಕ್ಷ ಆದಾಯದಲ್ಲಿ ತಲಾ ₹200 ಕೋಟಿ ಹಣವನ್ನು ತಕ್ಷಣವೇ ಕಳೆದುಕೊಳ್ಳಲಿದೆ.
ಪಂದ್ಯ ರದ್ದಾದರೆ ಪ್ರಾಯೋಜಕರು, ಪ್ರಸಾರಕರಿಗೆ ಐಸಿಸಿ ನಷ್ಟ ಪರಿಹಾರ ನೀಡಬೇಕಾಗುತ್ತದೆ. ಟಿಕೆಟ್ ಮಾರಾಟದ ಮೂಲಕ ಬರಬೇಕಿದ್ದ ಹಣ ಕೈತಪ್ಪಲಿದೆ. ಪಂದ್ಯ ಆಯೋಜನೆ ಹೊಣೆ ಹೊತ್ತಿದ್ದ ಲಂಕಾ ಕ್ರಿಕೆಟ್ ಮಂಡಳಿ ಐಸಿಸಿ ಬಳಿ ಪರಿಹಾರ ಕೇಳಬಹುದು. ಮತ್ತೊಂದೆಡೆ ಐಸಿಸಿ ಸದಸ್ಯ ದೇಶಗಳಿಗೂ ಇದರ ಪರಿಣಾಮ ತಟ್ಟಲಿದೆ. ವಾರ್ಷಿಕ ಆದಾಯದಲ್ಲಿ ಕಡಿತಗೊಳ್ಳಲಿದ್ದು, ಈ ಆದಾಯವನ್ನೇ ನಂಬಿಕೊಂಡಿರುವ ವಿಂಡೀಸ್, ಸ್ಕಾಟ್ಲೆಂಡ್, ಜಿಂಬಾಬ್ವೆ, ನಮೀಬಿಯಾ, ಆಫ್ಘನ್ ಸೇರಿದಂತೆ ಹಲವು ಮಂಡಳಿಗಳೂ ನಷ್ಟ ಅನುಭವಿಸಲಿದೆ.
ನಷ್ಟ ಯಾರಿಗೆ? ಏಕೆ?
- ಭಾರತದ ವಿರುದ್ಧ ಫೆ.15ರ ವಿಶ್ವಕಪ್ ಟಿ20 ಪಂದ್ಯ ಬಹಿಷ್ಕಾರ: ಪಾಕ್ ಸರ್ಕಾರ ಬೆದರಿಕೆ
- ಇದು ಅಂತಿಮವೇ ಆದರೆ ಪ್ರಸಾರ ಹಕ್ಕು, ಜಾಹೀರಾತು, ಟಿಕೆಟ್ ಆದಾಯ ಭಾರಿ ಖೋತಾ
- ಬರೀ ಜಾಹೀರಾತು ಆದಾಯದಲ್ಲೇ 200ರಿಂದ 250 ಕೋಟಿ ರು. ನಷ್ಟ ಸಂಭವಿಸಬಹುದು
- ಪಂದ್ಯ ರದ್ದಾದರೆ ಪ್ರಾಯೋಜಕರು, ಪ್ರಸಾರಕರಿಗೆ ಐಸಿಸಿ ನಷ್ಟ ಪರಿಹಾರ ನೀಡಬೇಕು
- ಪಂದ್ಯದ ಆಯೋಜಕ ಲಂಕಾ ಕ್ರಿಕೆಟ್ ಮಂಡಳಿ ಐಸಿಸಿ ಬಳಿ ಪರಿಹಾರ ಕೇಳಬಹುದು
- ಐಸಿಸಿ ವಾರ್ಷಿಕ ಆದಾಯಕ್ಕೂ ಕೊಕ್ಕೆ. ಈ ಆದಾಯ ನಂಬಿದ್ದ ಅನೇಕ ದೇಶಗಳಿಗೆ ಹಾನಿ
- ಈ ಪಂದ್ಯದ ಆದಾಯವನ್ನೇ ನಂಬಿದ್ದ ವಿಮಾನ/ಹೋಟೆಲ್ ಉದ್ಯಮಕ್ಕೂ ಭಾರಿ ನಷ್ಟ


