2016ರ ಐಪಿಎಲ್ ವೀಕ್ಷಕ ವಿವರಣೆಯಿಂದ ಭೋಗ್ಲೆ ಅವರನ್ನು ಹೊರಗಿಡಲಾಗಿತ್ತು. ಆದರೆ, ಬಿಸಿಸಿಐನ ಈ ಕ್ರಮ ಕ್ರಿಕೆಟ್ ಪ್ರೇಮಿಗಳ ಕೆಂಗಣ್ಣಿಗೆ ಗುರಿಯಾಗಿತ್ತು.

ನವದೆಹಲಿ(ಮಾ.14): ಬರೋಬ್ಬರಿ ಒಂದು ವರ್ಷದ ಬಳಿಕ ಜನಪ್ರಿಯ ಕ್ರಿಕೆಟ್ ವಿಶ್ಲೇಷಕ ಹಾಗೂ ಪಂದ್ಯ ವೀಕ್ಷಕ ವಿವರಣೆಗಾರ ಹರ್ಷ ಭೋಗ್ಲೆ ಮತ್ತೆ ತಮ್ಮ ಕಾಯಕಕ್ಕೆ ಹಿಂದಿರುಗಲಿದ್ದು, ಕ್ರಿಕೆಟ್ ಅಭಿಮಾನಿಗಳನ್ನು ಮುದಗೊಳಿಸಲಿದ್ದಾರೆ ಎಂದು ‘ಮುಂಬೈ ಮಿರರ್’ ಪತ್ರಿಕೆ ವರದಿ ಮಾಡಿದೆ.

Add Asianetnews Kannada as a Preferred SourcegooglePreferred

ಕಳೆದ ವರ್ಷ ಐಸಿಸಿ ಟಿ20 ವಿಶ್ವಕಪ್ ವೇಳೆ ಭಾರತೀಯ ಆಟಗಾರರ ವಿರುದ್ಧ ಕಟುವಾದ ಪದ ಪ್ರಯೋಗ ಮಾಡಿದ್ದ ಭೋಗ್ಲೆ ವಿರುದ್ಧ ಬಾಲಿವುಡ್ ನಟ ಅಮಿತಾಭ್ ಬಚ್ಚನ್ ಟ್ವೀಟ್ ಮಾಡಿದ್ದರು. ಬಚ್ಚನ್ ಅವರ ಟ್ವೀಟ್ ಅನ್ನು ರೀಟ್ವೀಟ್ ಮಾಡಿದ್ದ ಧೋನಿ, ವಿರಾಟ್ ಕೊಹ್ಲಿ ಬಿಸಿಸಿಐ ಬಳಿ ಭೋಗ್ಲೆ ವಿರುದ್ಧ ತಮ್ಮ ಅಸಮಾಧಾನ ತೋಡಿಕೊಂಡಿದ್ದರು.

ಇದರಿಂದ 2016ರ ಐಪಿಎಲ್ ವೀಕ್ಷಕ ವಿವರಣೆಯಿಂದ ಭೋಗ್ಲೆ ಅವರನ್ನು ಹೊರಗಿಡಲಾಗಿತ್ತು. ಆದರೆ, ಬಿಸಿಸಿಐನ ಈ ಕ್ರಮ ಕ್ರಿಕೆಟ್ ಪ್ರೇಮಿಗಳ ಕೆಂಗಣ್ಣಿಗೆ ಗುರಿಯಾಗಿತ್ತು.

ಅಂದಹಾಗೆ ಭಾರತ ಮತ್ತು ಪಾಕಿಸ್ತಾನ ನಡುವಣದ ದ್ವಿಪಕ್ಷೀಯ ಬಿಕ್ಕಟ್ಟಿನಿಂದಾಗಿ ರಮೀಜ್ ರಾಜಾ, ವಕಾರ್ ಯೂನಿಸ್ ಹಾಗೂ ಶೋಯೆಬ್ ಅಖ್ತರ್ ಈ ಬಾರಿಯ ಐಪಿಎಲ್ ವೀಕ್ಷಕ ವಿವರಣೆಗಾರರ ಪಟ್ಟಿಯಿಂದ ಕೈಬಿಡಲ್ಪಟ್ಟಿದ್ದು, ಭೋಗ್ಲೆ ಪುನರಾಗಮನಕ್ಕೆ ಹಾದಿ ಸಿದ್ಧವಾಗಿದೆ ಎನ್ನಲಾಗಿದೆ.