Asianet Suvarna News Asianet Suvarna News

Davis Cup 2023: ಭಾರತದ ಕಮ್‌ಬ್ಯಾಕ್‌ಗೆ ನೆರವಾದ ಸುಮಿತ್ ನಗಾಲ್‌

ಉಭಯ ತಂಡಗಳು ಮೊದಲ ದಿನ 1-1ರಲ್ಲಿ ಸಮಬಲ ಸಾಧಿಸಿದ್ದು, 2ನೇ ದಿನವಾದ ಭಾನುವಾರ ಬಹುನಿರೀಕ್ಷಿತ ಡಬಲ್ಸ್‌ ಪಂದ್ಯ ನಡೆಯಲಿದೆ. ವಿದಾಯದ ಪಂದ್ಯವಾಡುತ್ತಿರುವ ರೋಹನ್‌ ಬೋಪಣ್ಣ ಭಾರತಕ್ಕೆ ಮುನ್ನಡೆ ಒದಗಿಸುವ ವಿಶ್ವಾಸದಲ್ಲಿದ್ದು, 2 ರಿವರ್ಸ್‌ ಸಿಂಗಲ್ಸ್‌ ಪಂದ್ಯಗಳು ಸಹ ನಿಗದಿಯಾಗಿದೆ.

Davis Cup Sumit Nagal leads India fightback to end Day One against Morocco kvn
Author
First Published Sep 17, 2023, 7:53 AM IST

ಲಖನೌ(ಸೆ.17): ಯುವ ಟೆನಿಸಿಗ ಸುಮಿತ್‌ ನಗಾಲ್‌ ಮೊರಾಕ್ಕೊ ವಿರುದ್ಧದ ಡೇವಿಸ್‌ ಕಪ್‌ ವಿಶ್ವ ಗುಂಪು-2ರ ಪಂದ್ಯದಲ್ಲಿ ಭಾರತ ಆರಂಭಿಕ ಹಿನ್ನಡೆಯಿಂದ ಚೇತರಿಸಿಕೊಳ್ಳಲು ನೆರವಾದರು. ಶಶಿಕುಮಾರ್‌ ಮುಕುಂದ್‌ ಮೊದಲ ಸಿಂಗಲ್ಸ್‌ ಪಂದ್ಯದಲ್ಲಿ ಗಾಯಗೊಂಡು ಪಂದ್ಯವನ್ನು ಬಿಟ್ಟುಕೊಟ್ಟ ಬಳಿಕ, 2ನೇ ಸಿಂಗಲ್ಸ್‌ ಪಂದ್ಯವನ್ನು ನಗಾಲ್‌ ಸುಲಭವಾಗಿ ಗೆದ್ದರು.

ಉಭಯ ತಂಡಗಳು ಮೊದಲ ದಿನ 1-1ರಲ್ಲಿ ಸಮಬಲ ಸಾಧಿಸಿದ್ದು, 2ನೇ ದಿನವಾದ ಭಾನುವಾರ ಬಹುನಿರೀಕ್ಷಿತ ಡಬಲ್ಸ್‌ ಪಂದ್ಯ ನಡೆಯಲಿದೆ. ವಿದಾಯದ ಪಂದ್ಯವಾಡುತ್ತಿರುವ ರೋಹನ್‌ ಬೋಪಣ್ಣ ಭಾರತಕ್ಕೆ ಮುನ್ನಡೆ ಒದಗಿಸುವ ವಿಶ್ವಾಸದಲ್ಲಿದ್ದು, 2 ರಿವರ್ಸ್‌ ಸಿಂಗಲ್ಸ್‌ ಪಂದ್ಯಗಳು ಸಹ ನಿಗದಿಯಾಗಿದೆ.

ರಣ್ವೀರ್-ದೀಪಿಕಾ ನಟಿಸಿದ ನೂರಾರು ಕೋಟಿ ಸಿನಿಮಾದಲ್ಲಿ ಈ ಸ್ಟಾರ್ ಕ್ರಿಕೆಟಿಗನ ಮಗಳಿದ್ದಾಳೆ!

ಶನಿವಾರ ಮಧ್ಯಾಹ್ನ ಕೆಲ ಕಾಲ ಮಳೆ ಸುರಿದ ಕಾರಣ ಮೊದಲ ದಿನದಾಟ ತಡವಾಗಿ ಆರಂಭಗೊಂಡಿತು. ಸ್ಥಳೀಯ ವಾತಾವರಣ ಆಟಗಾರರ ದೈಹಿಕ ಕ್ಷಮತೆಯನ್ನು ಪರೀಕ್ಷಿಸಿತು. 3 ಗಂಟೆ 5 ನಿಮಿಷಗಳ ಕಾಲ ಅಂಕಣದಲ್ಲಿ ಸೆಣಸಿದ ಬಳಿಕ ಶಶಿಕುಮಾರ್‌ ಮುಕುಂದ್‌ ಸ್ನಾಯು ಸೆಳತದಿಂದ ಪಂದ್ಯವನ್ನು ಮೊರಾಕ್ಕೊದ ಯಾಸಿನ್‌ ದಿಮಿಗೆ ಬಿಟ್ಟುಕೊಡಲು ನಿರ್ಧರಿಸಿದರು. ಟೈ ಬ್ರೇಕರ್‌ನಲ್ಲಿ ಮುನ್ನಡೆ ಪಡೆದು ಮೊದಲ ಸೆಟ್‌ ಅನ್ನು 7-6 ಗೇಮ್‌ಗಳಲ್ಲಿ ವಶಪಡಿಸಿಕೊಂಡ ಭಾರತೀಯ ಆಟಗಾರ, 2ನೇ ಸೆಟ್‌ನಲ್ಲಿ 4-2 ಗೇಮ್‌ಗಳಲ್ಲಿ ಮುಂದಿದ್ದರೂ 5-7ರಲ್ಲಿ ಸೆಟ್‌ ಸೋತರು. 3ನೇ ಸೆಟ್‌ನಲ್ಲಿ ಯಾಸಿನ್‌ 4-1ರಲ್ಲಿ ಮುಂದಿದ್ದಾಗ, ಮುಕುಂದ್‌ ಪಂದ್ಯದಿಂದ ಹೊರನಡೆದರು.

ಒತ್ತಡದೊಂದಿಗೆ ಕಣಕ್ಕಿಳಿದ ವಿಶ್ವ ನಂ.156, 2019ರ ಯುಎಸ್‌ ಓಪನ್‌ ಗ್ರ್ಯಾನ್‌ ಸ್ಲಾಂನ ಮೊದಲ ಸುತ್ತಿನಲ್ಲಿ ರೋಜರ್‌ ಫೆಡರರ್‌ ವಿರುದ್ಧ ಒಂದು ಸೆಟ್‌ ಗೆದ್ದಿದ್ದ ಸುಮಿತ್‌ ನಗಾಲ್‌, ವಿಶ್ವ ರ್‍ಯಾಂಕಿಂಗ್‌ನಲ್ಲಿ 779ನೇ ಸ್ಥಾನದಲ್ಲಿರುವ ಆದಂ ಮೌಂದಿರ್‌ ವಿರುದ್ಧ 6-3, 6-3 ಸೆಟ್‌ಗಳಲ್ಲಿ ನಿರಾಯಾಸವಾಗಿ ಗೆದ್ದರು.

ಆಫ್ಘಾನ್ ಕ್ರಿಕೆಟಿಗ ರಶೀದ್ ಖಾನ್ ಜತೆ ಪೋಸ್ ಕೊಟ್ಟ ರಣ್ಬೀರ್ ಕಪೂರ್, ಆಲಿಯಾ ಭಟ್..! ಫೋಟೋ ವೈರಲ್

ಭಾನುವಾರ ರೋಹನ್‌ ಬೋಪಣ್ಣ ಹಾಗೂ ಯೂಕಿ ಭಾಂಬ್ರಿಗೆ ಎಲ್ಲಿಯಟ್‌ ಬೆನ್‌ಚೆಟ್ರಿಟ್‌ ಹಾಗೂ ಯೂನೆಸ್‌ ಲಲಾಮಿ ಸವಾಲು ಎದುರಾಗಲಿದೆ. ರಿವರ್ಸ್‌ ಸಿಂಗಲ್ಸ್‌ನ ಮೊದಲ ಪಂದ್ಯದಲ್ಲಿ ಯಾಸಿನ್‌ ವಿರುದ್ಧ ನಗಾಲ್‌ ಸೆಣಸಲಿದ್ದಾರೆ. ಈ ಎರಡು ಪಂದ್ಯಗಳಲಲಿ ಭಾರತ ಗೆದ್ದರೆ, 2ನೇ ರಿವರ್ಸ್‌ ಸಿಂಗಲ್ಸ್‌ ಪಂದ್ಯ ಆಡುವ ಅವಶ್ಯಕತೆ ಎದುರಾಗುವುದಿಲ್ಲ. ಈ ಹಣಾಹಣಿಯಲ್ಲಿ ಭಾರತ ಜಯಿಸಿದರೆ, ವಿಶ್ವ ಗುಂಪು-1 ಪ್ಲೇ-ಆಫ್‌ ಹಂತಕ್ಕೆ ಪ್ರವೇಶ ಪಡೆಯಲಿದೆ.

ರಾಜ್ಯ ಅಥ್ಲೆಟಿಕ್ಸ್: ಚಿನ್ನ ಗೆದ್ದ ಅಭಿನ್‌, ಕೀರ್ತನಾ

ಬೆಂಗಳೂರು: ನಗರದ ಕಂಠೀರವ ಕ್ರೀಡಾಂಗಣದಲ್ಲಿ ಶನಿವಾರ ಆರಂಭಗೊಂಡ ಕರ್ನಾಟಕ ರಾಜ್ಯ ಅಥ್ಲೆಟಿಕ್ಸ್‌ ಕೂಟದಲ್ಲಿ ಉಡುಪಿಯ ಅಭಿನ್‌ ದೇವಾಡಿಗ ಹಾಗೂ ಕೀರ್ತನಾ ಕ್ರಮವಾಗಿ ಪುರುಷ ಹಾಗೂ ಮಹಿಳೆಯರ 200 ಮೀ. ಓಟದಲ್ಲಿ ಚಿನ್ನ ಗೆದ್ದಿದ್ದಾರೆ. ಅಭಿನ್‌ 20.90 ಸೆಕೆಂಡ್‌ಗಳಲ್ಲಿ ಕ್ರಮಿಸಿದರೆ, ಕೀರ್ತನಾ 24.68 ಸೆಕೆಂಡ್‌ಗಳಲ್ಲಿ ಗುರಿ ತಲುಪಿದರು. 

ಇದೇ ವೇಳೆ ಪುರುಷರ 400 ಮೀ. ಹರ್ಡಲ್ಸ್‌ನಲ್ಲಿ ಉಡುಪಿಯ ಅಮರನಾಥ್‌, ಡಿಸ್ಕಸ್‌ ಎಸೆತದಲ್ಲಿ ಉತ್ತರ ಕನ್ನಡದ ನಾಗೇಂದ್ರ, ಲಾಂಗ್‌ಜಂಪ್‌ನಲ್ಲಿ ಬೆಂಗಳೂರಿನ ಆರ್ಯಾ, ಶಾಟ್‌ಪುಟ್‌ನಲ್ಲಿ ಮೈಸೂರಿನ ರಾಹುಲ್‌ ಕಶ್ಯಪ್‌ ಚಿನ್ನ ಗೆದ್ದರು. ಮಹಿಳೆಯರ ವಿಭಾಗದ ಲಾಂಗ್‌ಜಂಪ್‌ನಲ್ಲಿ ಮೂಡುಬಿದರೆ ಆಳ್ವಾಸ್‌ ಕಾಲೇಜಿನ ಶ್ರಿ ದೇವಿಕಾ, 800 ಮೀ. ಓಟದಲ್ಲಿ ಫ್ಯುಶನ್ ಕ್ಲಬ್‌ನ ಅರ್ಪಿತಾ, 5000 ಮೀ. ಓಟದಲ್ಲಿ ಆಳ್ವಾಸ್‌ನ ಚೈತ್ರಾ ದೇವಾಡಿಗ, 400 ಮೀ. ಹರ್ಡಲ್ಸ್‌ನಲ್ಲಿ ಆಳ್ವಾಸ್‌ನ ದೀಕ್ಷಿತಾ ಚಾಂಪಿಯನ್‌ ಎನಿಸಿಕೊಂಡರು.
 

Follow Us:
Download App:
  • android
  • ios