ಸಿಎಸ್'ಕೆ ತೊರೆಯಲು ಮನಸೇ ಬರಲಿಲ್ಲ..! ಇದು ಧೋನಿ ಮನದಾಳದ ಮಾತು
‘2 ವರ್ಷಗಳ ಬಳಿಕ ನಾವು ಆಡುತ್ತಿದ್ದರೂ ಅಭಿಮಾನಿಗಳ ಸಂಖ್ಯೆ ಇಳಿಮುಖವಾಗಿಲ್ಲ. ಕಾರಣ ಯಾವ ಆಟಗಾರರು ಕಳಂಕಕ್ಕೆ ಗುರಿಯಾಗಿರಲಿಲ್ಲ’ ಎಂದಿದ್ದಾರೆ.
ಚೆನ್ನೈ(ಜ.20): 11ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್'ಗೆ ವೇದಿಕೆ ಸಿದ್ಧಗೊಳ್ಳುತ್ತಿದ್ದು, 2 ವರ್ಷಗಳ ನಿಷೇಧದ ಬಳಿಕ ಚೆನ್ನೈ ಸೂಪರ್ ಕಿಂಗ್ಸ್ ಲೀಗ್'ಗೆ ಮರಳಿದೆ.
ಈ ವೇಳೆ ಸಿಎಸ್'ಕೆ ತನ್ನ ಹಿಂದಿನ ಆವೃತ್ತಿಗಳ ನಾಯಕ ಮಹೇಂದ್ರ ಸಿಂಗ್ ಧೋನಿ, ಸುರೇಶ್ ರೈನಾ ಹಾಗೂ ರವೀಂದ್ರ ಜಡೇಜಾರನ್ನು ಉಳಿಸಿಕೊಂಡಿದೆ. ಈ ಸಂದರ್ಭದಲ್ಲಿ ಮಾತನಾಡಿರುವ ಧೋನಿ, ‘ಅನೇಕ ಫ್ರಾಂಚೈಸಿಗಳು ತಮ್ಮ ತಂಡ ಸೇರುವಂತೆ ಪ್ರಸ್ತಾಪ ಇರಿಸಿದ್ದರು. ಆದರೆ, ಸಿಎಸ್'ಕೆ ಹೊರತು ಪಡಿಸಿ ಇನ್ಯಾವುದೇ ತಂಡ ಸೇರ್ಪಡೆಗೊಳ್ಳಲು ಮನಸು ಒಪ್ಪಲಿಲ್ಲ. ಚೆನ್ನೈ ನನ್ನ 2ನೇ ತವರು. ಹೀಗಾಗಿ ಉಳಿದ ತಂಡಗಳ ಪ್ರಸ್ತಾಪ ತಿರಸ್ಕರಿಸಿದೆ’ ಎಂದು ಹೇಳಿದ್ದಾರೆ. ‘2 ವರ್ಷಗಳ ಬಳಿಕ ನಾವು ಆಡುತ್ತಿದ್ದರೂ ಅಭಿಮಾನಿಗಳ ಸಂಖ್ಯೆ ಇಳಿಮುಖವಾಗಿಲ್ಲ. ಕಾರಣ ಯಾವ ಆಟಗಾರರು ಕಳಂಕಕ್ಕೆ ಗುರಿಯಾಗಿರಲಿಲ್ಲ’ ಎಂದಿದ್ದಾರೆ.
ಅಶ್ವಿನಿರನ್ನು ಹಿಂಪಡೆಯುತ್ತೇವೆ: ‘ಆರ್.ಅಶ್ವಿನಿ ಅವರನ್ನು ರೀಟೈನ್ ಮಾಡಿಕೊಳ್ಳದೇ ಇರಬಹುದು. ಆದರೆ, ನಮ್ಮ ಬಳಿ 2 ರೈಟ್ ಟು ಮ್ಯಾಚ್ ಕಾರ್ಡ್ ಅವಕಾಶವಿದೆ. ಅಶ್ವಿನ್'ರನ್ನು ಉಳಿಸಿಕೊಳ್ಳಲು ಎಷ್ಟು ಸಾಧ್ಯವೋ ಅಷ್ಟು ಪ್ರಯತ್ನ ಪಡುತ್ತೇವೆ. ಅಶ್ವಿನ್ ಮಾತ್ರವಲ್ಲ ಈ ಹಿಂದೆ ತಂಡದಲ್ಲಿದ್ದ ಆಟಗಾರರನ್ನು ಮರಳಿ ಪಡೆಯಲು ಯತ್ನಿಸುತ್ತೇವೆ’ ಎಂದು ಹೇಳಿದ್ದಾರೆ.
ಸಿಎಸ್'ಕೆಗೆ ಫ್ಲೆಮಿಂಗ್ ಕೋಚ್: ನ್ಯೂಜಿಲೆಂಡ್'ನ ಮಾಜಿ ನಾಯಕ ಸ್ಟೀಫನ್ ಫ್ಲೆಮಿಂಗ್ ಅವರನ್ನು ಮತ್ತೊಮ್ಮೆ ಸಿಎಸ್'ಕೆ ತಂಡದ ಪ್ರಧಾನ ಕೋಚ್ ಆಗಿ ಆಯ್ಕೆ ಮಾಡಲಾಗಿದೆ. ಈ ಮೊದಲು ತಂಡದ ಕೋಚ್ ಆಗಿದ್ದ ಫ್ಲೆಮಿಂಗ್, ಕಳೆದೆರಡು ವರ್ಷ ಧೋನಿಯಿದ್ದ ಪುಣೆ ತಂಡದ ಕೋಚ್ ಆಗಿದ್ದರು. ಭಾರತ ತಂಡದ ಮಾಜಿ ವೇಗಿ, ಸ್ಥಳೀಯ ತಾರೆ ಲಕ್ಷ್ಮೀಪತಿ ಬಾಲಾಜಿ ತಂಡದ ಬೌಲಿಂಗ್ ಕೋಚ್ ಆಗಿ ನೇಮಕಗೊಂಡಿದ್ದಾರೆ.