Asianet Suvarna News Asianet Suvarna News

ಕಂಠೀರವ ಅಥ್ಲೀಟ್‌ಗಳಿಗೆ ಮೈದಾನವೇ ಜಿಮ್‌!

ಬೆಂಗಳೂರಿನ ಹೃದಯ ಭಾಗದಲ್ಲಿರುವ ಶ್ರೀ ಕಂಠೀರವ ಕ್ರೀಡಾಂಗಣದ ಅವ್ಯವಸ್ಥೆ ಮತ್ತೊಮ್ಮೆ ಬಯಲಾಗಿದೆ. ಮುರು​ಕಲು ಜಿಮ್‌ ಒಡೆದು, ಹೊಸ ಜಿಮ್‌ ನಿರ್ಮಿ​ಸ​ಲಾ​ಗಿದೆಯಾದರೂ, ಉದ್ಘಾ​ಟನೆಗೆ ಯಾರೂ ಗಣ್ಯ​ವ್ಯ​ಕ್ತಿ​ಗಳು ಸಿಕ್ಕಿಲ್ಲ ಎನ್ನುವ ಕಾರಣಕ್ಕೆ ಜಿಮ್‌ಗೆ ಬೀಗ ಹಾಕ​ಲಾ​ಗಿದೆ. ಹೀಗಾಗಿ ಅಥ್ಲೀಟ್‌ಗಳು ಮೈದಾನದಲ್ಲೇ ಅಭ್ಯಾಸ ನಡೆಸುವ ಪರಿಸ್ಥಿತಿ ಬಂದೊದಗಿದೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ... 

Bengaluru Kanteerava Stadium becomes Gym for Athletes
Author
Bengaluru, First Published Sep 20, 2019, 4:11 PM IST

ಬೆಂಗಳೂರು[ಸೆ.20]: ಕಳೆದ ಕೆಲ ತಿಂಗ​ಳಲ್ಲಿ ಕರ್ನಾ​ಟ​ಕದಲ್ಲಿ ಸರ್ಕಾರ ಬದ​ಲಾ​ಯಿತು, ಆದರೆ ಕಂಠೀ​ರವ ಕ್ರೀಡಾಂಗಣದ ಸ್ಥಿತಿ ಬದ​ಲಾ​ಗ​ಲಿಲ್ಲ. ಇಲ್ಲಿನ ಸಮಸ್ಯೆಗಳು ಹಾಗೇ ಉಳಿ​ದಿವೆ. ಕಳೆದ 6 ತಿಂಗ​ಳು​ಗ​ಳಿಂದ ಇಲ್ಲಿನ ಕ್ರೀಡಾ​ಪ​ಟು​ಗ​ಳಿಗೆ ಜಿಮ್‌ಗೆ ಪ್ರವೇಶ ಸಿಗು​ತ್ತಿ​ಲ್ಲ. ಸುವರ್ಣ ನ್ಯೂಸ್.ಕಾಂ ಸಹೋದರ ಸಂಸ್ಥೆ ‘ಕ​ನ್ನ​ಡ​ಪ್ರಭ’ ಸರಣಿ ವರದಿ ಪ್ರಕ​ಟಿ​ಸಿದ ಬಳಿಕ, ಮುರು​ಕಲು ಜಿಮ್‌ ಅನ್ನು ಒಡೆದು ಹಾಕಿ, ಹೊಸದಾಗಿ ವ್ಯವಸ್ಥೆ ಮಾಡುವ ಭರ​ವಸೆಯನ್ನು ರಾಜ್ಯ ಕ್ರೀಡಾ ಇಲಾಖೆ ನೀಡಿತ್ತು. ಆದರೆ ಭರ​ವಸೆ ಈಡೇ​ರಿಲ್ಲ. ಕ್ರೀಡಾ​ಪ​ಟು​ಗಳು ಕ್ರೀಡಾಂಗಣದೊಳಗಿರುವ ಟರ್ಫ್(ಹುಲ್ಲು ಹಾಸು) ಮೇಲೆ ವೇಟ್‌ ಟ್ರೈನಿಂಗ್‌ ನಡೆ​ಸು​ತ್ತಿ​ದ್ದಾರೆ.

ಗುಂಡಿಬಿದ್ದ ಟ್ರ್ಯಾಕ್‌ನಲ್ಲಿ ದಸರಾ ಕೂಟ!

ಮುರು​ಕಲು ಜಿಮ್‌ ಒಡೆದು, ಹೊಸ ಜಿಮ್‌ ನಿರ್ಮಿ​ಸ​ಲಾ​ಗಿದೆಯಾದರೂ, ಉದ್ಘಾ​ಟನೆಗೆ ಯಾರೂ ಗಣ್ಯ​ವ್ಯ​ಕ್ತಿ​ಗಳು ಸಿಕ್ಕಿಲ್ಲ ಎನ್ನುವ ಕಾರಣಕ್ಕೆ ಜಿಮ್‌ಗೆ ಬೀಗ ಹಾಕ​ಲಾ​ಗಿದೆ. ಮಲ್ಟಿಜಿಮ್‌ಗೆ ಹೋಗಲು ದುಡ್ಡಿಲ್ಲ. ಹಳೆಯ ಜಿಮ್‌ನ ಸಾಮಾಗ್ರಿಗಳು ನೂತನ ಜಿಮ್‌ನಲ್ಲಿ ಸೇರಿ​ಕೊಂಡಿವೆ. ಹೀಗಾಗಿ ಕೋಚ್‌ಗಳ ಬಳಿ ಇರುವ ಕೆಲವೇ ಸಾಮಾಗ್ರಿಗಳನ್ನು ಬಳಸಿಕೊಂಡು ಅಥ್ಲೀಟ್‌ಗಳು ಅಭ್ಯಾಸ ನಡೆಸುತ್ತಿದ್ದಾರೆ. ಕ್ರೀಡಾ ಖಾತೆಯನ್ನೂ ಹೊಂದಿ​ರುವ ಮುಖ್ಯ​ಮಂತ್ರಿ ಬಿ.ಎಸ್‌.ಯ​ಡಿ​ಯೂ​ರಪ್ಪ ಅವರು ಈ ಸಮ​ಸ್ಯೆಯತ್ತ ಗಮನ ಹರಿ​ಸ​ಬೇಕು ಎಂದು ಅಥ್ಲೀಟ್‌ಗಳು ಹಾಗೂ ಕೋಚ್‌ಗಳು ಕೇಳಿ​ಕೊಂಡಿ​ದ್ದಾರೆ.

ಕಂಠೀರವದಲ್ಲಿ ಫುಟ್ಬಾಲ್‌ ವಿರೋಧಿಸಿ ಪ್ರತಿಭಟನೆ

ಬಗೆಹರಿ​ಯದ ಮಲ್ಟಿಜಿಮ್‌ ಸಮ​ಸ್ಯೆ!: ಕಂಠೀ​ರವದಲ್ಲಿ ಸುಸ​ಜ್ಜಿತ ಮಲ್ಟಿಜಿಮ್‌ ಇದೆಯಾದರೂ, ಅಲ್ಲಿ ಅಭ್ಯಾಸ ನಡೆ​ಸಲು ಕ್ರೀಡಾ​ಪ​ಟು​ಗಳು ಮಾಸಿಕ .2000 ಶುಲ್ಕ ಪಾವ​ತಿ​ಸ​ಬೇಕು. ‘ಕ​ನ್ನ​ಡ​ಪ್ರಭ’ ವರದಿ ಬಳಿಕ ಲೆಕ್ಕ​ಪತ್ರ ಸಮಿತಿ ಮುಖ್ಯಸ್ಥ, ಹಾಲಿ ಸಚಿವ ಆರ್‌.ಅಶೋಕ್‌ ಕ್ರೀಡಾಂಗಣಕ್ಕೆ ದಾಳಿ ನಡೆಸಿದ್ದ ವೇಳೆ ಮಲ್ಟಿಜಿಮ್‌ ಶುಲ್ಕವನ್ನು ಕಡಿತಗೊಳಿ​ಸ​ಲಾ​ಗು​ತ್ತದೆ. ಕ್ರೀಡಾ​ಪ​ಟು​ಗ​ಳಿಗೆ ಸಹ​ಕಾ​ರಿ​ಯಾ​ಗು​ವಂತೆ ವ್ಯವಸ್ಥೆ ಮಾಡ​ಲಾ​ಗು​ತ್ತದೆ ಎಂದು ಕ್ರೀಡಾ ಇಲಾಖೆ ಅಧಿ​ಕಾ​ರಿ​ಗಳು ಭರ​ವಸೆ ನೀಡಿ​ದ್ದರು. ಆ ಭರ​ವಸೆಯೂ ಹಾಗೇ ಉಳಿ​ದಿದೆ. ಒಂದು ಕಡೆ ಗುಂಡಿ ಬಿದ್ದಿ​ರುವ ಸಿಂಥೆ​ಟಿಕ್‌ ಟ್ರ್ಯಾಕ್‌, ಮತ್ತೊಂದೆಡೆ ಜಿಮ್‌ ಸಮಸ್ಯೆ, ಜತೆಗೆ ಕ್ರೀಡಾಂಗಣವನ್ನು ಫುಟ್ಬಾಲ್‌ಗೆ ನೀಡ​ಬಾರದು ಎನ್ನುವ ಹೋರಾಟ. ಯುವ ಹಾಗೂ ಬಡ ಅಥ್ಲೀಟ್‌ಗಳು ಸಮಸ್ಯೆಯ ನಡುವೆಯೇ ಅಭ್ಯಾಸ ನಡೆ​ಸುವ ಸ್ಥಿತಿ ಮುಂದು​ವ​ರಿ​ದಿದೆ. ಅ. 22 ರಿಂದ ರಾಷ್ಟ್ರೀಯ ಅಂತರ ಜಿಲ್ಲಾ ಕ್ರೀಡಾಕೂಟ ಹಾಗೂ ನ. 2ರಿಂದ ಕಿರಿಯರ ರಾಷ್ಟ್ರೀಯ ಕೂಟಕ್ಕಾಗಿ ಅಥ್ಲೀಟ್‌ಗಳು ಸಿದ್ಧಗೊಳ್ಳಬೇಕಿದೆ. ಇದಕ್ಕಾಗಿ ಕ್ರೀಡಾ​ಪ​ಟು​ಗಳು ಫಿಟ್ನೆಸ್‌ ಅಭ್ಯಾಸ ನಡೆ​ಸಲು ಜಿಮ್‌ನ ಅಗ​ತ್ಯ​ವಿದೆ. ಸರಿ​ಯಾದ ವ್ಯವಸ್ಥೆ ಇಲ್ಲದೆ ಕ್ರೀಡಾ​ಪ​ಟು​ಗಳು ಸಿಕ್ಕ ಜಾಗ​ದಲ್ಲೇ ಅಭ್ಯಾಸ ನಡೆ​ಸು​ತ್ತಿ​ದ್ದಾರೆ.

’ನಾನು 100, 200 ಮೀ. ಓಟಗಾರ. ವಾರದಲ್ಲಿ 2 ದಿನ ಭಾರ ಎತ್ತುವ ಅಭ್ಯಾಸ ನಡೆಸಿದರೆ ಮಾತ್ರ ಕಾಲಿಗೆ ಹೆಚ್ಚಿನ ಸಾಮರ್ಥ್ಯ ದೊರೆಯಲಿದೆ. ಆದರೆ ಕಳೆದ 6 ತಿಂಗಳಿಂದ ಸರಿಯಾದ ಅಭ್ಯಾಸ ನಡೆ​ಸಲು ಸಾಧ್ಯ​ವಾ​ಗಿಲ್ಲ. ಮಲ್ಟಿಜಿಮ್‌ಗೆ ಹೋದರೆ ಹಣ ಕೇಳ್ತಾರೆ. ಹೀಗಾಗಿ ಗೊಂದಲದಲ್ಲಿದ್ದೇನೆ’.

- ಹೆಸರು ಹೇಳಲಿಚ್ಛಿಸದ ಅಥ್ಲೀಟ್‌

’ಪೋಲ್‌ ವಾಲ್ಟ್‌ನಲ್ಲಿ ರಾಷ್ಟ್ರೀಯ ಕೂಟದಲ್ಲಿ ಭಾಗವಹಿಸಿದ್ದೇನೆ. ಮುಂದಿನ ದಿನಗಳಲ್ಲಿ ಅಂ.ರಾ. ಕೂಟದಲ್ಲಿ ಭಾಗವಹಿಸುವ ಉತ್ಸಾಹವಿದೆ. ಕಳೆದ ಕೆಲ ತಿಂಗಳಿಂದ ಜಿಮ್‌ನಲ್ಲಿ ವೇಟ್‌ ಟ್ರೈನಿಂಗ್‌ ನಡೆಸಲು ಸಾಧ್ಯವಾಗದೆ ಉತ್ಸಾಹ ಕುಂದುತ್ತಿದೆ’.

- ಹೆಸರು ಹೇಳಲಿಚ್ಚಿಸದ ಅಥ್ಲೀಟ್‌

’ಕ್ರೀಡಾಂಗಣದ ಹರಕಲು ಜಿಮ್‌ನಲ್ಲಿ ಆದರೂ ಕ್ರೀಡಾಪಟುಗಳು ಅಭ್ಯಾಸ ಮಾಡುತ್ತಿದ್ದರು ಎನ್ನುವ ಸಮಾಧಾನವಿತ್ತು. ಇದೀಗ ಕ್ರೀಡಾಪಟುಗಳು ಜಿಮ್‌ ಇಲ್ಲದೇ ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ. ಇಂತಹ ಪರಿ​ಸ್ಥಿತಿ ಬಂದಿ​ರು​ವುದು ಶೋಚನಿಯ’.

- ರಮೇಶ್‌, ಅಥ್ಲೆಟಿಕ್ಸ್‌ ಕೋಚ್‌
 

ವರದಿ: ಧನಂಜಯ ಎಸ್‌.ಹ​ಕಾ​ರಿ

Follow Us:
Download App:
  • android
  • ios