ಕೋಲ್ಕತ್ತಾದಲ್ಲಿ ನಡೆದ ಐಎಸ್‌ಎಲ್ ಫೈನಲ್‌ನಲ್ಲಿ ಬೆಂಗಳೂರು ಎಫ್‌ಸಿ ಅಭಿಮಾನಿಗಳು ಮತ್ತು ಮಾಲೀಕ ಪಾರ್ಥ್ ಜಿಂದಾಲ್ ಮೇಲೆ ಪಟಾಕಿ ಎಸೆದ ಘಟನೆಯನ್ನು ಬಿಎಫ್‌ಸಿ ಗಂಭೀರವಾಗಿ ಪರಿಗಣಿಸಿದೆ. ಈ ಕುರಿತು ಎಐಎಫ್‌ಎಫ್ ಮತ್ತು ಎಫ್‌ಎಸ್‌ಡಿಎಲ್ ಗೆ ದೂರು ದಾಖಲಿಸಿದೆ. ಘಟನೆಯಲ್ಲಿ ಹಲವರು ಗಾಯಗೊಂಡಿದ್ದು, ಪಾರ್ಥ್ ಜಿಂದಾಲ್ ಅವರಿಗೂ ಗಾಯಗಳಾಗಿವೆ. ಭವಿಷ್ಯದಲ್ಲಿ ಇಂತಹ ಘಟನೆಗಳು ನಡೆಯದಂತೆ ಕಠಿಣ ಕ್ರಮ ಕೈಗೊಳ್ಳುವಂತೆ ಬಿಎಫ್‌ಸಿ ಒತ್ತಾಯಿಸಿದೆ.

ಬೆಂಗಳೂರು (ಏ.13): ಕಳೆದ ಶನಿವಾರ ಕೋಲ್ಕತ್ತಾದ ಸಾಲ್ಟ್ ಲೇಕ್ ಕ್ರೀಡಾಂಗಣದಲ್ಲಿ ನಡೆದ ಇಂಡಿಯನ್ ಸೂಪರ್ ಲೀಗ್ 2024-25 ಫೈನಲ್ ಪಂದ್ಯದಲ್ಲಿ ಮೋಹನ್ ಬಗಾನ್ ಸೂಪರ್ ಜೈಂಟ್ ವಿರುದ್ಧದ ಪಂದ್ಯದ ವೇಳೆ ಬೆಂಗಳೂರು ಎಫ್‌ಸಿ ತಂಡದ ಅಭಿಮಾನಿಗಳು ಹಾಗೂ ಮಾಲೀಕ ಪಾರ್ಥ್‌ ಜಿಂದಾಲ್‌ ಮೇಲೆ ಪಟಾಕಿ ತೂರಿದ ಘಟನೆಯನ್ನು ಬಿಎಫ್‌ಸಿ ಗಂಭೀರವಾಗಿ ಪರಿಗಣಿಸಿದೆ. 

Add Asianetnews Kannada as a Preferred SourcegooglePreferred

ಫ್ಯಾನ್ಸ್‌ ಹಾಗೂ ಮಾಲೀಕರ ಮೇಲೆ ಪಟಾಕಿ ಸಿಡಿಸಿದ ಘಟನೆಯ ಬಗ್ಗೆ ಅಖಿಲ ಭಾರತ ಫುಟ್‌ಬಾಲ್ ಫೆಡರೇಶನ್ (ಎಐಎಫ್‌ಎಫ್) ಮತ್ತು ಫುಟ್‌ಬಾಲ್ ಸ್ಪೋರ್ಟ್ಸ್ ಡೆವಲಪ್‌ಮೆಂಟ್ ಲಿಮಿಟೆಡ್ (ಎಫ್‌ಎಸ್‌ಡಿಎಲ್) ಗೆ ಔಪಚಾರಿಕ ದೂರು ದಾಖಲಿಸಿದೆ. ಐಎಸ್‌ಎಲ್‌ ಫೈನಲ್‌ ಗೆದ್ದ ಬೆನ್ನಲ್ಲಿಯೇ ಮೋಹನ್‌ ಬಗಾನ್‌ ತಂಡದ ಅಭಿಮಾನಿಗಳು ಸ್ಟೇಡಿಯಂನಲ್ಲಿಯೇ ಪಟಾಕಿ ಸಿಡಿಸಿದ್ದರು.

ಈ ವೇಳೆ ಕೆಲವು ಅಭಿಮಾನಿಗಳು ಬೆಂಗಳೂರು ಎಫ್‌ಸಿ ತಂಡದ ಬೆಂಬಲಿಗರು ಇದ್ದ ಗ್ಯಾಲರಿಯತ್ತ ಪಟಾಕಿ ಎಸೆದಿದ್ದರು. ಈ ವೇಳೆ ಹಲವರು ಗಾಯಗೊಂಡಿದ್ದು, ಒಬ್ಬ ಅಭಿಮಾನಿಯ ಕಣ್ಣಿಗೆ ಗಾಯವಾಗಿ, ವೈದ್ಯಕೀಯ ಚಿಕಿತ್ಸೆ ಅಗತ್ಯವಾಗಿತ್ತು ಎಂದು ಕ್ಲಬ್‌ ತಿಳಿಸಿದೆ. ಗಾಯಗೊಂಡವರಲ್ಲಿ ಕ್ಲಬ್ ಮಾಲೀಕ ಪಾರ್ಥ್ ಜಿಂದಾಲ್ ಕೂಡ ಒಬ್ಬರಾಗಿದ್ದಾರೆ. ಅವರಿಗೆ ಸುಟ್ಟಗಾಯಗಳು ಮತ್ತು ಮೂಗೇಟುಗಳು ಆಗಿದ್ದವು. ನಂತರ ಪಾರ್ಥ್‌ ಜಿಂದಾಲ್ ಘಟನೆಯ ವಿವರಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಲ್ಲದೆ, ಸ್ಥಳದಲ್ಲಿ ಸಾಕಷ್ಟು ಭದ್ರತೆಯ ಕೊರತೆಯ ಬಗ್ಗೆ ಕಳವಳ ವ್ಯಕ್ತಪಡಿಸಿದರು.

"ಇದು ಕೇವಲ ಅಜಾಗರೂಕತೆಯ ಕೃತ್ಯವಲ್ಲ, ಬದಲಾಗಿ ನಮ್ಮ ಅಭಿಮಾನಿಗಳು ಮತ್ತು ಅಧಿಕಾರಿಗಳ ಸುರಕ್ಷತೆಗೆ ನೇರ ಬೆದರಿಕೆಯಾಗಿದೆ" ಎಂದು ಕ್ಲಬ್ ಕಠಿಣ ಪದಗಳ ಹೇಳಿಕೆಯಲ್ಲಿ ದಾಳಿಯನ್ನು ಖಂಡಿಸಿದೆ.

ಸೂಕ್ತ ಕ್ರಮ ಕೈಗೊಳ್ಳುವುದನ್ನು ಖಚಿತಪಡಿಸಿಕೊಳ್ಳಲು ಬಿಎಫ್‌ಸಿ ಈಗ ಎಐಎಫ್‌ಎಫ್ ಮತ್ತು ಎಫ್‌ಎಸ್‌ಡಿಎಲ್ ಜೊತೆ ಕೆಲಸ ಮಾಡುತ್ತಿದೆ. ಭವಿಷ್ಯದಲ್ಲಿ ಇಂತಹ ಘಟನೆಗಳನ್ನು ತಡೆಗಟ್ಟಲು ಕಠಿಣ ಪರಿಣಾಮಗಳು ಮತ್ತು ಸುಧಾರಿತ ಸುರಕ್ಷತಾ ಪ್ರೋಟೋಕಾಲ್‌ಗಳಿಗೆ ಕ್ಲಬ್ ಕರೆ ನೀಡಿದೆ. "ಇಂತಹ ಕ್ರಮಗಳು ಜೀವಗಳಿಗೆ ಅಪಾಯವನ್ನುಂಟುಮಾಡುವುದಲ್ಲದೆ, ನಮ್ಮ ಸುಂದರ ಆಟದ ಮನೋಭಾವಕ್ಕೆ ವಿರುದ್ಧವಾಗಿವೆ" ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ. "ಕ್ರೀಡಾಂಗಣಗಳು ಈಗ ಮತ್ತು ಯಾವಾಗಲೂ ಸುರಕ್ಷಿತ ಸ್ಥಳವಾಗಿರಬೇಕು. ಇಂತಹ ಕೃತ್ಯಗಳಿಗೆ ಫುಟ್‌ಬಾಲ್‌ನಲ್ಲಿ ಅಥವಾ ಎಲ್ಲಿಯೂ ಸ್ಥಾನವಿಲ್ಲ' ಎಂದು ಕ್ಲಬ್‌ ತಿಳಿಸಿದೆ.

ಭಾರತೀಯ ಫುಟ್‌ಬಾಲ್‌ನಲ್ಲಿ ಅಭಿಮಾನಿಗಳ ಸುರಕ್ಷತಾ ಮಾನದಂಡಗಳು ಮತ್ತು ಹೊಣೆಗಾರಿಕೆಗೆ ಒಂದು ಪೂರ್ವನಿದರ್ಶನವನ್ನು ಸ್ಥಾಪಿಸುವುದು ಕ್ಲಬ್‌ನ ದೂರಿನ ಗುರಿಯಾಗಿದೆ.

ಪಾರ್ಥ್ ಜಿಂದಾಲ್ ಹಲವು ವರ್ಷಗಳಿಂದ ಬೆಂಗಳೂರು ಎಫ್‌ಸಿ ಪಂದ್ಯಗಳಲ್ಲಿ ನಿಯಮಿತವಾಗಿ ಕಾಣಿಸಿಕೊಳ್ಳುತ್ತಾರೆ. ಮೋಹನ್ ಬಗಾನ್ ಸೂಪರ್ ಜೈಂಟ್ಸ್ ವಿರುದ್ಧದ ತಂಡದ ಫೈನಲ್‌ನಲ್ಲಿ ಸಾಲ್ಟ್ ಲೇಕ್‌ ಸ್ಟೇಡಿಯಂನಲ್ಲಿ ಹಾಜರಿದ್ದರು. ಪಂದ್ಯದ ದ್ವಿತೀಯಾರ್ಧದಲ್ಲಿ ಬಿಎಫ್‌ಸಿ ಮುನ್ನಡೆ ಸಾಧಿಸಿದ್ದರೂ, ಹೆಚ್ಚುವರಿ ಸಮಯದಲ್ಲಿ ಮೋಹನ್ ಬಗಾನ್ ವಿರುದ್ಧ ಬೆಂಗಳೂರು 2-1 ಗೋಲುಗಳಿಂದ ಸೋಲನುಭವಿಸಿತು.

ಐಎಸ್‌ಎಲ್ ಫೈನಲ್: ಬೆಂಗಳೂರಿಗೆ ಈ ಸಲವೂ ಕಪ್‌ ಮಿಸ್‌, ಮೋಹನ್‌ ಬಗಾನ್‌ ಚಾಂಪಿಯನ್

"ನನ್ನ ಹುಡುಗರು ಬೆಂಗಳೂರು ಎಫ್‌ಸಿಗೆ ನಾನು ಚಿಯರ್ ಮಾಡುತ್ತಿರುವಾಗ ಕ್ರೀಡಾಂಗಣದಲ್ಲಿ ಪಟಾಕಿ ಸಿಡಿಸಲಾಗಿದೆ. ಕೋಲ್ಕತ್ತಾದಲ್ಲಿ ನಡೆಯುವ ಐಎಸ್‌ಎಲ್ ಫೈನಲ್‌ನಲ್ಲಿ ನಾವು ನಿರೀಕ್ಷಿಸಬಹುದಾದ ಭದ್ರತೆ ಇದೇನಾ?" ಎಂದು ಪಾರ್ಥ್ ಜಿಂದಾಲ್ ಶನಿವಾರ ಪಂದ್ಯದ ಸಂದರ್ಭದಲ್ಲಿ ಟ್ವೀಟ್ ಮಾಡಿದ್ದಾರೆ.

ISL: ಗೋವಾ ವಿರುದ್ಧ ಬಿಎಫ್‌ಸಿ ರೋಚಕ ಜಯ! 4ನೇ ಸಲ ಬೆಂಗಳೂರು ಫೈನಲ್‌ಗೆ ಲಗ್ಗೆ

Scroll to load tweet…