ಐಎಸ್ಎಲ್ ಫೈನಲ್: ಬೆಂಗಳೂರಿಗೆ ಈ ಸಲವೂ ಕಪ್ ಮಿಸ್, ಮೋಹನ್ ಬಗಾನ್ ಚಾಂಪಿಯನ್

Synopsis
ಕೋಲ್ಕತಾದಲ್ಲಿ ನಡೆದ ಐಎಸ್ಎಲ್ ಫೈನಲ್ನಲ್ಲಿ ಬೆಂಗಳೂರು ಎಫ್ಸಿ ತಂಡವು ಮೋಹನ್ ಬಗಾನ್ ಸೂಪರ್ ಜೈಂಟ್ಸ್ ವಿರುದ್ಧ ಸೋತಿದೆ. ಈ ಮೂಲಕ ಬಗಾನ್ ತಂಡವು ಎರಡನೇ ಬಾರಿಗೆ ಟ್ರೋಫಿ ಗೆದ್ದುಕೊಂಡಿದೆ.
ಕೋಲ್ಕತಾ: ಬೆಂಗಳೂರು ಎಫ್ಸಿ ತಂಡಕ್ಕೆ ಈ ಬಾರಿಯೂ ಟ್ರೋಫಿ ಕೈತಪ್ಪಿದೆ. ಶನಿವಾರ ನಡೆದ 11ನೇ ಆವೃತ್ತಿಯ ಇಂಡಿಯನ್ ಸೂಪರ್ ಲೀಗ್(ಐಎಸ್ಎಲ್) ಫುಟ್ಬಾಲ್ ಟೂರ್ನಿಯ ಫೈನಲ್ನಲ್ಲಿ ಬಿಎಫ್ಸಿಗೆ, ಮೋಹನ್ ಬಗಾನ್ ಸೂಪರ್ ಜೈಂಟ್ಸ್ ವಿರುದ್ಧ 1-2 ಗೋಲುಗಳ ಸೋಲು ಎದುರಾಯಿತು. ಬಗಾನ್ 2ನೇ ಬಾರಿ ಟ್ರೋಫಿ ಮುಡಿಗೇರಿಸಿಕೊಂಡಿತು.
ಬಗಾನ್ ಕೋಲ್ಕತಾದ ತನ್ನ ತವರು ಕ್ರೀಡಾಂಗಣದಲ್ಲಿ ಆಡಿದರೂ, ಪಂದ್ಯದ ಬಹುತೇಕ ಸಮಯ ಬಿಎಫ್ಸಿ ಚೆಂಡಿನ ಮೇಲೆ ಹಿಡಿತ ಸಾಧಿಸಿತ್ತು. ಮೊದಲಾರ್ಧ ಗೋಲು ರಹಿತ ಮುಕ್ತಾಯಗೊಂಡ ಬಳಿಕ 49ನೇ ನಿಮಿಷದಲ್ಲಿ ಬಗಾನ್ ಆಟಗಾರ ಆಲ್ಬೆರ್ಟೊ ರೋಡ್ರಿಗಸ್ರ ಕಾಲಿಗೆ ತಾಗಿದ ಚೆಂಡು ಬಿಎಫ್ಸಿ ಗೋಲು ಪೆಟ್ಟಿಗೆಗೆ ಸೇರಿತು. ಉಚಿತ ಗೋಲಿನೊಂದಿಗೆ ಬಿಎಫ್ಸಿ ಮುನ್ನಡೆ ಸಾಧಿಸಿದರೂ, ಬಳಿಕ ಬಗಾನ್ ಆಕ್ರಮಣಕಾರಿ ಆಟವಾಡಿತು.
Presenting you the #ISL 2024-25 Cup Winners! 💚❤️#MBSGBFC #LetsFootball #ISLFinal #ISLPlayoffs #MBSG pic.twitter.com/XUiNG5i217
— Indian Super League (@IndSuperLeague) April 12, 2025
72ನೇ ನಿಮಿಷದಲ್ಲಿ ಬಿಎಫ್ಸಿಯ ಚಿಂಗ್ಲೆನ್ಸಾನ ಸಿಂಗ್ರ ಕೈಗೆ ಚೆಂಡು ತಾಗಿದ ಕಾರಣ, ಬಗಾನ್ಗೆ ಪೆನಾಲ್ಟಿ ಅವಕಾಶ ಸಿಕ್ಕಿತು. ಇದನ್ನು ಸಮರ್ಥವಾಗಿ ಬಳಸಿಕೊಂಡ ಜೇಸನ್ ಕಮ್ಮಿಂಗ್ಸ್ ಗೋಲು ಬಾರಿಸಿದರು. ಬಳಿಕ ನಿಗದಿತ ಅವಧಿ(90 ನಿಮಿಷ) ಮುಕ್ತಾಯಕ್ಕೆ ಇತ್ತಂಡಗಳು 1-1ರಲ್ಲಿ ಸಮಬಲ ಸಾಧಿಸಿದವು. ಫಲಿತಾಂಶ ನಿರ್ಧರಿಸಲು ಹೆಚ್ಚುವರಿ ಸಮಯ ನೀಡಲಾಯಿತು. 96ನೇ ನಿಮಿಷದಲ್ಲಿ ಗೋಲು ಹೊಡೆದ ಜೆಮೀ ಮ್ಯಾಕ್ಲರೆನ್ ಬಗಾನ್ಗೆ ಗೆಲುವು ತಂದುಕೊಟ್ಟರು.
ಸೈಟು, ಕೆಲಸ ರಿಜೆಕ್ಟ್ ಮಾಡಿ 4 ಕೋಟಿ ಪಡೆದ ವಿನೇಶ್ ಫೋಗಟ್!
ಬೆಂಗಳೂರು 3ನೇ ಬಾರಿ ರನ್ನರ್-ಅಪ್
ಬೆಂಗಳೂರು ತಂಡ ಐಎಸ್ಎಲ್ನಲ್ಲಿ 4 ಬಾರಿ ಫೈನಲ್ ಆಡಿದೆ. 2018-19ರಲ್ಲಿ ಟ್ರೋಫಿ ಗೆದ್ದಿದ್ದರೆ, ಮೂರು ಬಾರಿ ರನ್ನರ್-ಅಪ್ ಆಗಿವೆ. ತಂಡ 2017-18, 2022-23 ಹಾಗೂ 2024-25ರಲ್ಲಿ ಸೋತಿದೆ. 2023ರ ಫೈನಲ್ನಲ್ಲಿ ಬಗಾನ್ ವಿರುದ್ಧ ಸೋತು ಟ್ರೋಫಿ ತಪ್ಪಿಸಿಕೊಂಡಿತ್ತು.
2031ರ ಎಎಫ್ಸಿ ಏಷ್ಯನ್ ಕಪ್ ಆತಿಥ್ಯಕ್ಕೆ ಭಾರತ ಬಿಡ್
ನವದೆಹಲಿ: 2031ರ ಎಎಫ್ಸಿ ಏಷ್ಯನ್ ಕಪ್ ಆತಿಥ್ಯ ವಹಿಸಲು ಭಾರತವು ಬಿಡ್ ಸಲ್ಲಿಸಿದೆ ಎಂದು ಅಖಿಲ ಭಾರತೀಯ ಫುಟ್ಬಾಲ್ ಫೆಡರೇಶನ್(ಎಐಎಫ್ಎಫ್) ಹೇಳಿದೆ. ಬಿಡ್ ಸಲ್ಲಿಕೆಗೆ ಮಾ.31ರಂದು ಕೊನೆಯ ದಿನವಾಗಿತ್ತು. ಒಟ್ಟು 7 ದೇಶಗಳು ಆತಿಥ್ಯಕ್ಕೆ ಆಸಕ್ತಿ ತೋರಿ ಬಿಡ್ ಸಲ್ಲಿಸಿವೆ.
ಭಾರತ ಹೊರತಾಗಿ ಆಸ್ಟ್ರೇಲಿಯಾ, ದಕ್ಷಿಣ ಕೊರಿಯಾ, ಯುಎಇ, ಇಂಡೋನೇಷ್ಯಾ, ಕುವೈತ್ ಬಿಡ್ ಸಲ್ಲಿಸಿವೆ. ಜೊತೆಗೆ ಕಿರ್ಗಿಸ್ತಾನ್, ತಜಿಕಿಸ್ತಾನ್ ಮತ್ತು ಉಜ್ಬೇಕಿಸ್ಯಾನ್ ಜಂಟಿಯಾಗಿ ಬಿಡ್ ಸಲ್ಲಿಸಿವೆ. ಈ ಪೈಕಿ ಆಸ್ಟ್ರೇಲಿಯಾ, ಯುಎಇ, ದಕ್ಷಿಣ ಕೊರಿಯಾ ಮತ್ತು ಕುವೈತ್ ಈ ಹಿಂದೆ ಏಷ್ಯನ್ ಕಪ್ ಆಯೋಜಿಸಿದ್ದವು. ಭಾರತ ಇದುವರೆಗೆ ಟೂರ್ನಿಗೆ ಆತಿಥ್ಯ ವಹಿಸಿಲ್ಲ.
ಬೆಂಗಳೂರಿನಲ್ಲಿ RCB ಸೋಲಿಗೆ ಸಿದ್ದರಾಮಯ್ಯರನ್ನು ಟ್ರೋಲ್ ಮಾಡಿದ ನೆಟ್ಟಿಗರು!
ಬೆಂಗ್ಳೂರು ಚೆಸ್: ಪ್ರಣವ್ಗೆ 4ನೇ ಸುತ್ತಿನಲ್ಲೂ ಜಯ
ಬೆಂಗಳೂರು: 2ನೇ ಆವೃತ್ತಿಯ ಬೆಂಗಳೂರು ಓಪನ್ ಚೆಸ್ ಟೂರ್ನಿಯಲ್ಲಿ ಕರ್ನಾಟಕದ ಪ್ರಣವ್ ಆನಂದ್ ಸತತ 4ನೇ ಗೆಲುವು ಸಾಧಿಸಿದ್ದಾರೆ. ಶನಿವಾರ 3ನೇ ಸುತ್ತಿನಲ್ಲಿ ಗ್ರ್ಯಾಂಡ್ಮಾಸ್ಟರ್ ಪ್ರಣವ್, ಡಬ್ಲ್ಯೂಜಿಎಂ ಮೇರಿ ಆನ್ ಗೋಮ್ಸ್ ವಿರುದ್ಧ ಗೆಲುವು ಸಾಧಿಸಿದರು. ಬಳಿಕ 4ನೇ ಸುತ್ತಿನಲ್ಲಿ ಸಾಹಿಲ್ ಡೇ ಅವರನ್ನು ಮಣಿಸಿದರು. ದೀಪನ್ ಚಕ್ರವರ್ತಿ, ಪಂತ್ಸುಲಿಯಾ, ಸಂಕೇತ್ ಚಕ್ರವರ್ತಿ, ರಾಜೇಶ್ 4 ಸುತ್ತುಗಳ ಬಳಿಕ ತಲಾ 4 ಅಂಕಗಳನ್ನು ಹೊಂದಿದ್ದಾರೆ.
ವಿಶ್ವ ಬಿಲಿಯಾರ್ಡ್ಸ್: ಬೆಳ್ಳಿ ಗೆದ್ದ ಭಾರತದ ಪಂಕಜ್
ನವದೆಹಲಿ: ಐರ್ಲೆಂಡ್ನ ಕಾರ್ಲೋದಲ್ಲಿ ನಡೆದ ಡಬ್ಲ್ಯೂಬಿಎಲ್ ವಿಶ್ವ ಮ್ಯಾಚ್ಪ್ಲೇ ಬಿಲಿಯಾರ್ಡ್ಸ್ ಚಾಂಪಿಯನ್ಶಿಪ್ನಲ್ಲಿ ಭಾರತದ ಪಂಕಜ್ ಅಡ್ವಾಣಿ ಸೋತು ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟುಕೊಂಡರು. ಬೆಸ್ಟ್ ಆಫ್ 15ರ ಸ್ಪರ್ಧೆಯಲ್ಲಿ ಪಂಕಜ್ ಆರಂಭದಲ್ಲಿ 2-0 ಅಂತರದಲ್ಲಿ ಬ್ರಿಟನ್ನ ಡೇವಿಡ್ ಕಾಸಿಯರ್ ವಿರುದ್ಧ ಮುನ್ನಡೆ ಸಾಧಿಸಿದ್ದರು. ಬಳಿಕ ಡೇವಿಡ್ ಪಂದ್ಯದ ಮೇಲೆ ಹಿಡಿತ ಸಾಧಿಸಿ 8-7 ಅಂತರದಲ್ಲಿ ಗೆಲುವು ಪಡೆದರು. ಇನ್ನು ಅಡ್ವಾಣಿ ಭಾನುವಾರದಿಂದ ಆರಂಭವಾಗಲಿರುವ ಐಬಿಎಸ್ಎಫ್ ವಿಶ್ವಕಪ್ನಲ್ಲಿ ಸ್ಪರ್ಧಿಸಲಿದ್ದು, ತಾವು 2016ರಿಂದಲೂ ಸತತವಾಗಿ ಗೆಲ್ಲುತ್ತಿರುವ ಪ್ರಶಸ್ತಿ ಉಳಿಸಿಕೊಳ್ಳುವ ತವಕದಲ್ಲಿದ್ದಾರೆ.