ನವದೆಹಲಿ(ಅ. 04): ನ್ಯಾ| ಲೋಧಾ ನೇತೃತ್ವದ ಸಮಿತಿಯು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ)ಯ ಬ್ಯಾಂಕ್ ಅಕೌಂಟ್'ಗಳನ್ನು ಮುಟ್ಟುಗೋಲು ಹಾಕಿಕೊಂಡ ಬೆಳವಣಿಗೆಯು ಮುಂಬರುವ ಕ್ರಿಕೆಟ್ ವೇಳಾಪಟ್ಟಿ ಮೇಲೆ ಪರಿಣಾಮ ಬೀರಿದೆ. ಪ್ರಸಕ್ತ ನಡೆಯುತ್ತಿರುವ ನ್ಯೂಜಿಲೆಂಡ್ ವಿರುದ್ಧದ ಕ್ರಿಕೆಟ್ ಸರಣಿಗಳು ರದ್ದಾಗುವ ಸಾಧ್ಯತೆ ಇದೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ. ಭಾರತ ಮತ್ತು ನ್ಯೂಜಿಲೆಂಡ್ ನಡುವೆ ಈಗಾಗಲೆ ಎರಡು ಟೆಸ್ಟ್ ಪಂದ್ಯಗಳು ನಡೆದಿದ್ದು, ಸರಣಿಯಲ್ಲಿ ಇನ್ನೊಂದು ಪಂದ್ಯ ಬಾಕಿ ಇದೆ. ಟೆಸ್ಟ್ ಸರಣಿ ಬಳಿಕ ಐದು ಪಂದ್ಯಗಳ ಏಕದಿನ ಕ್ರಿಕೆಟ್ ಸರಣಿ ನಡೆಯಲು ನಿಗದಿಯಾಗಿದೆ. ಈ ಎಲ್ಲ ಪಂದ್ಯಗಳನ್ನು ತಾನು ಅನಿವಾರ್ಯವಾಗಿ ರದ್ದುಗೊಳಿಸಬೇಕಾಗಬಹುದು ಎಂದು ಹಿರಿಯ ಬಿಸಿಸಿಐ ಅಧಿಕಾರಿಯೊಬ್ಬರು ಹೇಳಿರುವುದಾಗಿ ಇಂಡಿಯನ್ ಎಕ್ಸ್'ಪ್ರೆಸ್ ಪತ್ರಿಕೆ ವರದಿ ಮಾಡಿದೆ. ಅಷ್ಟೇ ಅಲ್ಲ, ಮುಂದಿನ ವರ್ಷ ಇಂಗ್ಲೆಂಡ್'ನಲ್ಲಿ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತೀಯ ತಂಡ ಭಾಗವಹಿಸದೇ ಹೋಗಬಹುದು ಎಂದು ಬಿಸಿಸಿಐ ಅಧ್ಯಕ್ಷ ಅನುರಾಗ್ ಠಾಕೂರ್ ತಿಳಿಸಿರುವುದೂ ಕೂಡ ವರದಿಯಾಗಿದೆ. ಮೂಲಗಳ ಪ್ರಕಾರ, ಲೋಧಾ ಸಮಿತಿ ಹಾಗೂ ಬಿಸಿಸಿಐ ನಡುವಿನ ಬಿಕ್ಕಟ್ಟು ಬಗೆಹರಿಯದೇ ಹೋಗುವವರೆಗೂ ಭಾರತದ ಹಾಗೂ ಭಾರತದಲ್ಲಿ ಯಾವುದೇ ಅಧಿಕೃತ ಕ್ರಿಕೆಟ್ ಪಂದ್ಯಗಳು ನಡೆಯದೇ ಹೋಗಬಹುದೆನ್ನಲಾಗಿದೆ.

Add Asianetnews Kannada as a Preferred SourcegooglePreferred

"ನ್ಯಾ| ಲೋಧಾ ಸಮಿತಿಯಿಂದ ದೇಶದ ಕ್ರಿಕೆಟ್'ನ ಹಾಗೂ ಬಿಸಿಸಿಐನ ಘನತೆಗೆ ಕುಂದುಂಟಾಗಿದೆ. ಬಿಸಿಸಿಐನ ದಿನನಿತ್ಯದ ಚಟುವಟಿಕೆಯಲ್ಲಿ ತಲೆತೂರಿಸುವ ಅಧಿಕಾರವನ್ನು ಸಮಿತಿ ನೀಡಿಲ್ಲ. ಆಟಗಾರರಿಗೆ ಹಣ ನೀಡದೇ ಆಟ ಹೇಗೆ ಆಡಿಸುವುದು. ಹೀಗಾಗಿ ಎಲ್ಲ ಕ್ರಿಕೆಟ್ ಪಂದ್ಯಗಳನ್ನು ರದ್ದುಗೊಳಿಸುವುದು ಅನಿವಾರ್ಯವಾಗಬಹುದು" ಎಂದು ಬಿಸಿಸಿಐ ಮೂಲಗಳು ತಿಳಿಸಿರುವುದು ಎನ್'ಡಿಟಿವಿಯಲ್ಲಿ ವರದಿಯಾಗಿದೆ.

ಲೋಧಾ ಪ್ರತಿಕ್ರಿಯೆ:
ಆಟಗಾರರಿಗೆ ಹಣ ನೀಡಬೇಡಿರಿ ಎಂದು ತಾನೆಲ್ಲೂ ಸೂಚಿಸಿಲ್ಲವೆಂದು ನ್ಯಾ| ಲೋಧಾ ಅವರು ಸ್ಪಷ್ಟಪಡಿಸಿದ್ದಾರೆ. "ರಾಜ್ಯ ಕ್ರಿಕೆಟ್ ಸಂಸ್ಥೆಗಳಿಗೆ ದೊಡ್ಡ ಮೊತ್ತದ ಹಣ ಬಿಡುಗಡೆ ಮಾಡುವುದನ್ನು ನಿಲ್ಲಿಸಬೇಕೆಂದು ನಾವು ಈಮೇಲ್'ನಲ್ಲಿ ಸ್ಪಷ್ಟವಾಗಿ ತಿಳಿಸಿದ್ದೆವು. ನಿತ್ಯದ ವ್ಯವಹಾರಗಳಲ್ಲಿ ಹಣದ ವಹಿವಾಟು ಮಾಡಬಾರದು ಎಂದು ನಾವು ಎಲ್ಲೂ ಹೇಳಿರಲಿಲ್ಲ. ಕ್ರಿಕೆಟ್ ಸರಣಿ ಆಯೋಜಿಸುವುದು ಮಾಮೂಲಿಯ ವ್ಯವಹಾರವೇ" ಎಂದು ಎನ್'ಡಿಟಿವಿಗೆ ಜಸ್ಟಿಸ್ ಲೋಧಾ ಹೇಳಿದ್ದಾರೆ.