ಮತ್ತೆ ಕೆಎಎ ಚುನಾವಣಾ ಸಂಘರ್ಷ
ಕರ್ನಾಟಕ ಅಥ್ಲೆಟಿಕ್ಸ್ ಸಂಸ್ಥೆ (ಕೆಎಎ) ಮತ್ತೆ ಚುನಾವಣಾ ಸಂಘರ್ಷಕ್ಕೆ ಸಾಕ್ಷಿಯಾಗಿದೆ. ಸೋಮವಾರ ನಗರದ ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ನಿಯಮ ಬಾಹಿರವಾಗಿ ಚುನಾವಣೆ ಮಾಡಲು ಹೊರಟಿರುವ ರಾಜ್ಯ ಅಥ್ಲೆಟಿಕ್ಸ್ ಸಂಸ್ಥೆಯ ಉಪಾಧ್ಯಕ್ಷ ಸುನಿಲ್ ಕುಮಾರ್ ಶೆಟ್ಟಿ ಅವರ ಕ್ರಮವನ್ನು ಉಪಾಧ್ಯಕ್ಷೆ ಅಶ್ವಿನಿ ನಾಚಪ್ಪ ಮತ್ತು 15 ಜಿಲ್ಲಾ ಸಂಸ್ಥೆಗಳ ಸದಸ್ಯರು ವಿರೋಧ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು : ಕರ್ನಾಟಕ ಅಥ್ಲೆಟಿಕ್ಸ್ ಸಂಸ್ಥೆ (ಕೆಎಎ) ಮತ್ತೆ ಚುನಾವಣಾ ಸಂಘರ್ಷಕ್ಕೆ ಸಾಕ್ಷಿಯಾಗಿದೆ. ಸೋಮವಾರ ನಗರದ ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ನಿಯಮ ಬಾಹಿರವಾಗಿ ಚುನಾವಣೆ ಮಾಡಲು ಹೊರಟಿರುವ ರಾಜ್ಯ ಅಥ್ಲೆಟಿಕ್ಸ್ ಸಂಸ್ಥೆಯ ಉಪಾಧ್ಯಕ್ಷ ಸುನಿಲ್ ಕುಮಾರ್ ಶೆಟ್ಟಿ ಅವರ ಕ್ರಮವನ್ನು ಉಪಾಧ್ಯಕ್ಷೆ ಅಶ್ವಿನಿ ನಾಚಪ್ಪ ಮತ್ತು 15 ಜಿಲ್ಲಾ ಸಂಸ್ಥೆಗಳ ಸದಸ್ಯರು ವಿರೋಧ ವ್ಯಕ್ತಪಡಿಸಿದ್ದಾರೆ.
ಜುಲೈ 1, 2017ರಲ್ಲಿ ಚುನಾವಣೆ ನಡೆಯಬೇಕಿತ್ತು. ಆದರೆ ಆ ವೇಳೆ ಅನಧಿಕೃತ ವ್ಯಕ್ತಿಗಳ ಮಧ್ಯೆ ಪ್ರವೇಶದಿಂದ ಚುನಾವಣೆ ನಡೆದಿರಲಿಲ್ಲ. ಈ ಸಂಬಂಧ ತ್ಯಾಜ್ಯ ಬಗೆಹರಿಸುವಂತೆ ಹೈಕೋರ್ಟ್ ಮೊರೆ ಹೋಗಲಾಗಿತ್ತು.
ಹೈಕೋರ್ಟ್, ಸಂಸ್ಥೆಯ ಬೈಲಾ ಪ್ರಕಾರ ಚುನಾವಣೆ ನಡೆಸಬೇಕು ಎಂದು ಹೇಳಿತ್ತು. ಆದರೆ ಪ್ರಸ್ತುತ ಸಂಸ್ಥೆಯ ಉಪಾಧ್ಯಕ್ಷ ಸುನಿಲ್ ಕುಮಾರ್ ಶೆಟ್ಟಿ, ಕೆಲ ಜಿಲ್ಲಾ ಅಥ್ಲೆಟಿಕ್ಸ್ ಸಂಸ್ಥೆಗಳನ್ನು ಪರಿಗಣನೆಗೆ ತೆಗೆದುಕೊಳ್ಳದೆ, ಅನಧಿಕೃತ ಸಂಸ್ಥೆಗಳ ಹೆಸರನ್ನು ನೊಂದಾಯಿಸಿಕೊಂಡು ಚುನಾವಣೆ ನಡೆಸಲು ಮುಂದಾಗಿದ್ದಾರೆ ಎಂದು ಆರೋಪಿಸಿದರು.
ಸಂಸ್ಥೆಯ ಬೈಲಾ ಪ್ರಕಾರ ಚುನಾವಣೆ ನಡೆದರೆ ನಾವು ಚುನಾವಣೆ ಎದುರಿಸಲು ಸಿದ್ಧರಿದ್ದೇವೆ. ಆದರೆ ನಿಯಮ ಬಾಹಿರ ಚುನಾವಣೆ ನಡೆಯುವುದಕ್ಕೆ ಬಿಡುವುದಿಲ್ಲ ಎಂದಿದ್ದಾರೆ. ಕಳೆದ 14 ವರ್ಷಗಳಿಂದ ಸಂಸ್ಥೆಯ ಅಧ್ಯಕ್ಷರಾಗಿರುವ ಜಿ. ಪರಮೇಶ್ವರ್ ಯಾರ ಕೈಗೂ ಸಿಗುತ್ತಿಲ್ಲ ಎಂದಿದ್ದಾರೆ.
ಪಟ್ಟಿಯಲ್ಲಿ 7 ಜಿಲ್ಲೆಗಳ ಹೆಸರಿಲ್ಲ: ಸದ್ಯ ಸುನಿಲ್ ಸೃಷ್ಟಿಸಿರುವ ಮತದಾರರ ಪಟ್ಟಿಯಲ್ಲಿ ಗದಗ, ಹಾವೇರಿ, ಬಾಗಲಕೋಟೆ, ಧಾರವಾಡ, ದಾವಣಗೆರೆ, ಮತ್ತು ರಾಮನಗರ, ಉಡುಪಿ ಸೇರಿದಂತೆ 7 ಜಿಲ್ಲೆಗಳ ಹೆಸರನ್ನು ಚುನಾವಣಾ ಸದಸ್ಯರ ಪಟ್ಟಿಯಿಂದ ಕೈ ಬಿಡಲಾಗಿದೆ ಎಂದು ಅಶ್ವಿನಿ ಹೇಳಿದರು.