Asianet Suvarna News Asianet Suvarna News

ಶೂನ್ಯ ನೆರಳಿನ ದಿನ ನಿಮ್ಮೂರಲ್ಲಿ ಯಾವಾಗ ಗೊತ್ತಾ?

  • ಶೂನ್ಯ ನೆರಳಿನ ದಿನ ಎಂದರೇನು?
  • ಶೂನ್ಯ ನೆರಳಿನ ದಿನ ಸಂಭವಿಸೋದು ಹೇಗೆ?
  • ನಿಮ್ಮೂರಲ್ಲಿ ಯಾವಾಗ ಸಂಭವಿಸುತ್ತೆ ಗೊತ್ತಾ?
when is the day of zero shadow in your city akb
Author
Udupi, First Published Apr 26, 2022, 4:43 PM IST | Last Updated Apr 26, 2022, 4:43 PM IST

ಉಡುಪಿ:  ಶೂನ್ಯ ನೆರಳಿನ ದಿನ. ವರ್ಷದಲ್ಲಿ ಎರಡು ದಿನ ಮಧ್ಯಾಹ್ನ ಸೂರ್ಯ ನೇರ ನೆತ್ತಿಯ ಮೇಲೆ ಬಂದು ಕೆಲ ಕ್ಷಣ ನೆರಳು ಕಾಣುವುದಿಲ್ಲ. ಇದನ್ನು ' ಝೀರೋ ಶಾಡೋ ಡೇ' ಎನ್ನುತ್ತಾರೆ. ಸೂರ್ಯ ನ ಸುತ್ತ ತಿರುಗುವ ಭೂಮಿ ತನ್ನ ಅಕ್ಷಕ್ಕೆ 23.5 ಡಿಗ್ರಿ ವಾಲಿಕೊಂಡಿರುವುದೇ ಇದಕ್ಕೆ ಕಾರಣ. ಇದನ್ನು ಯಾವುದೇ ಮರ  ಕಟ್ಟಡ ಗಳ ನೆರಳಿನಿಂದ ಈ ದಿನ ಮಧ್ಯಾಹ್ನ ಗಮನಿಸಬಹುದು.

ಈ ರೀತಿಯ ಶೂನ್ಯ ನೆರಳಿನ ದಿನ, ಭೂಮಿಯ ಎಲ್ಲಾ ಪ್ರದೇಶದಲ್ಲಿ ಸಂಭವಿಸುವುದಿಲ್ಲ. ಮಕರ ಸಂಕ್ರಾಂತಿ ವೃತ್ತದಿಂದ ಕರ್ಕಾಟಕ ಸಂಕ್ರಾಂತಿ ವೃತ್ತದ ವರೆಗಿನ ಭೂ ಭಾಗದಲ್ಲಿ ಮಾತ್ರ ವರ್ಷ ಕ್ಕೆ ಎರಡು ದಿನ ಶೂನ್ಯ ನೆರಳಿನ ದಿನವಾಗಿರುತ್ತೆ. ಈ ಎರಡು ವೃತ್ತಗಳ ಹೊರಗಿರುವ ಭೂ ಭಾಗದಲ್ಲಿ ಸೂರ್ಯ (Sun) ಎಂದೂ ನೇರ ಬರುವುದೇ ಇಲ್ಲ. 

ಶೂನ್ಯ ನೆರಳಿನ ದಿನ (zero shadow day) ಸಂಭವಿಸೋದು ಹೇಗೆ?

ಮುಂಬರುವ  ದಿನಗಳಲ್ಲಿ  ಸೂರ್ಯನು  ಆಕಾಶದಲ್ಲಿ ಉತ್ತರ ದಿಕ್ಕಿನತ್ತ  ಚಲಿಸುವಾಗ, ನೀವು ಇರುವ  ಸ್ಥಳಕ್ಕೆ  ಅವಲಂಬಿತವಾಗಿ  ಸೂರ್ಯನು  ಖಮಧ್ಯದ  ಮೂಲಕ  ಅಂದರೆ  ನೆತ್ತಿಯ ನೇರದಲ್ಲಿ  ಹಾದು ಹೋಗುತ್ತಾನೆ. ನೀವು ನಿಂತಿರುವ ಸ್ಥಳದಿಂದ  ನೆತ್ತಿಯ ಮೇಲಿರುವ ಬಿಂದುವನ್ನು ಖಮಧ್ಯ(Zenith)  ಎನ್ನುತ್ತಾರೆ . ಭೂಮಿಯು ಗೋಳಾಕಾರದಲ್ಲಿರುವುದರಿಂದ ಈ ಬಿಂದುವು ಆಕಾಶಕ್ಕೆ ಸಂಬಂಧಿಸಿದಂತೆ ಸ್ಥಳದಿಂದ ಸ್ಥಳಕ್ಕೆ ಬದಲಾಗುತ್ತದೆ.

ನಗರದಲ್ಲಿ ಶೂನ್ಯ ನೆರಳು ದಿನ : ನಿಮ್ಮ ನೆರಳು ನಿಮಗೆ ಕಾಣಲ್ಲ
ಬೇರೆ ಯಾವುದೇ ಸಮಯದಲ್ಲಿ, ಸೂರ್ಯನು ನಿಮ್ಮನ್ನು ಒಂದು ಕೋನದಲ್ಲಿ ಎದುರಿಸುತ್ತಿದ್ದರೆ, ನಿಮ್ಮ ನೆರಳು ನಿಮ್ಮ ಸುತ್ತಲಿನ ನೆಲದ ಮೇಲೆ ಬೀಳುತ್ತದೆ. ಸೂರ್ಯನು ಆಕಾಶದಲ್ಲಿ ಮೇಲೇರುತ್ತಿದ್ದಂತೆ , ನೆರಳಿನ ಉದ್ದವು ಕಡಿಮೆಯಾಗುತ್ತದೆ ಮತ್ತು ಈ ದಿನ, ಸೂರ್ಯನು ನಿಮ್ಮ ತಲೆಯ ಮೇಲೆ ನಿಖರವಾಗಿ ಇರುವಾಗ, ನಿಮ್ಮ ನೆರಳು  ನೇರವಾಗಿ ನಿಮ್ಮ ಕೆಳಗಿರುತ್ತದೆ . ನೀವು ನಿಮ್ಮ ನೆರಳಿನ (shadow) ಮೇಲೆಯೇ ನಿಂತಿರುವುದರಿಂದ ಈ ನೆರಳು ನಿಮಗೆ ಗೋಚರಿಸುವುದಿಲ್ಲ  ಇದನ್ನು  ಶೂನ್ಯ ನೆರಳು ಎನ್ನುತ್ತೇವೆ(Zero Shadow) ಎಂದು ಖ್ಯಾತ ಖಗೋಳ ವಿಜ್ಞಾನಿ ಡಾ.ಎ.ಪಿ.ಭಟ್  (A P Bhat) ಮಾಹಿತಿ ನೀಡಿದ್ದಾರೆ.

Zero Shadow Day Karnataka: ಈ ದಿನದಂದು ನಿಮ್ಮ ಜಿಲ್ಲೆಯಲ್ಲಿ ನೆರಳೇ ಕಾಣಿಸಲ್ಲ: ಏನಿದರ ಮರ್ಮ?
 

ಭೂಮಿಯು 23.5 ಡಿಗ್ರಿ ಕೋನದಲ್ಲಿ ಬಾಗಿರುವುದರಿಂದ  (ಗ್ಲೋಬ್ಗಳನ್ನು ತಯಾರಿಸಿದಂತೆ), ಭೂಮಿಯು ಸೂರ್ಯನ ಸುತ್ತ ಚಲಿಸುವಾಗ, ಸೂರ್ಯನು ಉತ್ತರದಿಂದ ದಕ್ಷಿಣಕ್ಕೆ ಚಲಿಸುವಂತೆ ಕಾಣುತ್ತದೆ. ಕರ್ಕಾಟಕ ಸಂಕ್ರಾಂತಿ ವೃತ್ತ ಹಾಗೂ ಮಕರ ಸಂಕ್ರಾಂತಿ ವೃತ್ತದ ನಡುವೆ ವಾಸಿಸುವ ಎಲ್ಲ ಜನರಿಗೆ ವರ್ಷದ ಎರಡು ದಿನಗಳಲ್ಲಿ ಸೂರ್ಯನು   ಉತ್ತುಂಗದಲ್ಲಿ ಕಾಣಿಸಿಕೊಳ್ಳುತ್ತಾನೆ . ಈ ಎರಡು ದಿನಗಳು ಪ್ರತಿ ವರ್ಷ ಏಪ್ರಿಲ್-ಮೇ ಮತ್ತು ಆಗಸ್ಟ್‌ನಲ್ಲಿ ಸಂಭವಿಸುತ್ತವೆ. ಆಗಸ್ಟ್  ತಿಂಗಳು ಮಳೆಗಾಲವಾಗಿದ್ದರಿಂದ , ಬೇಸಿಗೆಗಾಲವಾದ ಏಪ್ರಿಲ್ ತಿಂಗಳಿನಲ್ಲಿ ಈ ಶೂನ್ಯ ನೆರಳಿನ ದಿನಗಳನ್ನು  ನೋಡುವ  ಸಾಧ್ಯತೆ ಹೆಚ್ಚಿರುತ್ತದೆ . ಯಾವುದೇ ಉಪಕರಣಗಳನ್ನು  ಬಳಸದೆ ಗಮನಿಸಬಹುದಾದ ಸುಲಭವಾದ ಖಗೋಳ ವಿದ್ಯಮಾನಗಳಲ್ಲಿ (Astronomical phenomenon) ಇದು ಒಂದು ಅನ್ನೋದು ಗಮನಾರ್ಹ ಸಂಗತಿಯಾಗಿದೆ.

ಮಂಗಳೂರಿನ ಜನರು ಏಪ್ರಿಲ್ 24 ರಂದು ಮಧ್ಯಾಹ್ನ 12: 28 ಕ್ಕೆ ಮತ್ತು ಏಪ್ರಿಲ್ 25 ರಂದು ಉಡುಪಿಯಲ್ಲಿ ಮಧ್ಯಾಹ್ನ 12: 29 ಕ್ಕೆ ಶೂನ್ಯ ನೆರಳಿನ   ವಿದ್ಯಮಾನವನ್ನು  ವೀಕ್ಷಿಸಿದ್ದಾರೆ. ಬೆಂಗಳೂರಿನಲ್ಲಿ  ಈ  ವಿದ್ಯಮಾನವನ್ನು ಏಪ್ರಿಲ್ 24 ರಂದು ಮಧ್ಯಾಹ್ನ 12: 18 ಕ್ಕೆ ಗಮನಿಸಲಾಗಿದೆ. ಕುಂದಾಪುರ, ತೀರ್ಥಹಳ್ಳಿ, ಗೌರಿಬಿದನೂರ್‌ನಲ್ಲಿ ಇಂದು ನಡೆದಿದೆ.

ಉಳಿದಂತೆ ಕರ್ನಾಟಕದಲ್ಲಿ  ಶೂನ್ಯ ನೆರಳಿನ  ದಿನದ ದಿನಾಂಕಗಳು ಹೀಗಿವೆ

27 ಏಪ್ರಿಲ್: ಭಟ್ಕಳ , ಶಿವಮೊಗ್ಗ, ಚನ್ನಗಿರಿ

28 ಏಪ್ರಿಲ್: ಹೊನ್ನವರ, ಕುಮ್ಟ , ಶಿಕಾರಿಪುರ, ಚಿತ್ರದುರ್ಗ

29 ಏಪ್ರಿಲ್: ಗೋಕರ್ಣ, ಶಿರಸಿ , ರಾಣೆಬೆನ್ನೂರು , ದಾವಣಗೆರೆ

30 ಏಪ್ರಿಲ್: ಕಾರವಾರ , ಹಾವೇರಿ

01 ಮೇ: ಹುಬ್ಬಳ್ಳಿ , ಹೊಸಪೇಟೆ , ಬಳ್ಳಾರಿ

02 ಮೇ: ಧಾರವಾಡ, ಗದಗ 

03 ಮೇ: ಬೆಳಗಾವಿ, ಸಿಂಧನೂರ್

04 ಮೇ: ಗೋಕಾಕ್, ಬಾಗಲಕೋಟೆ , ರಾಯಚೂರು

06 ಮೇ: ಯಾದಗಿರಿ 
07 ಮೇ: ವಿಜಯಪುರ
09 ಮೇ: ಕಲ್ಬುರ್ಗಿ
10 ಮೇ: ಹುಮ್ನಾಬಾದ್
11 ಮೇ: ಬೀದರ್


ಮೇಲಿನ ಸ್ಥಳದ ನೆರಳುಗಳು ಪೂರ್ವಕ್ಕೆ ಮಧ್ಯಾಹ್ನ 12:15 ರಿಂದ ಮತ್ತು ರಾಜ್ಯದ ಪಶ್ಚಿಮ ಭಾಗಗಳಿಗೆ ಮಧ್ಯಾಹ್ನ 12:35 ರ ನಡುವೆ ಒಂದು ನಿಮಿಷ ಕಣ್ಮರೆಯಾಗುತ್ತವೆ. ಶೂನ್ಯ ನೆರಳನ್ನು  ಗಮನಿಸಲು, ವಸ್ತುವು  ಸಿಲಿಂಡರ್, ಕ್ಯೂಬ್ ಅಥವಾ ಶಂಕುವಿನಂತೆ  ಮೇಲಿನಿಂದ ಕೆಳಕ್ಕೆ ಸಮಾನ ಅಥವಾ ಹೆಚ್ಚುತ್ತಿರುವ ಅಗಲವನ್ನು ಹೊಂದಿರಬೇಕು. ಮನುಷ್ಯರ ದೇಹದ ಮೇಲ್ಭಾಗವು , ಕೆಳಭಾಗಕ್ಕಿಂತ ವಿಶಾಲವಾಗಿದ್ದರಿಂದ ಸ್ವಲ್ಪ ಪ್ರಮಾಣದಲ್ಲಿ ನೆರಳನ್ನು ಉಂಟು ಮಾಡುತ್ತದೆ , ಹಾಗೂ ಇದು ಶೂನ್ಯ ನೆರಳಿನ ದಿನದಂದು   ಅತ್ಯಲ್ಪ ಪ್ರಮಾಣದಲ್ಲಿ ಕಾಣುತ್ತದೆ . 

Latest Videos
Follow Us:
Download App:
  • android
  • ios