ಮೂಡುಬಿದಿರೆಯ ಆಳ್ವಾಸ್ ಶಾಲೆಯಲ್ಲಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಮೊದಲ ಖಗೋಳ ವಿಜ್ಞಾನ ಪ್ರಯೋಗಾಲಯವನ್ನು 'ಚಂದ್ರಮಾನವ' ಖ್ಯಾತಿಯ ಡಾ. ಮೈಲ್ಸ್ವಾಮಿ ಅನ್ನಾದುರೈ ಉದ್ಘಾಟಿಸಿದರು. ಈ ಪ್ರಯೋಗಾಲಯವು ಭಾರತದ ಭವಿಷ್ಯದ ಬಾಹ್ಯಾಕಾಶ ಸಾಧನೆಗಳಿಗೆ ದೃಢ ಹೆಜ್ಜೆಯಾಗಬಲ್ಲದು ಎಂದು ಅವರು ಆಶಯ ವ್ಯಕ್ತಪಡಿಸಿದರು.

ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಳ್ವಾಸ್ ಶಾಲೆಯಲ್ಲಿ ನಿರ್ಮಿಸಲಾದ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಮೊದಲ ಖಗೋಳ ವಿಜ್ಞಾನ ಪ್ರಯೋಗಾಲಯ ಶನಿವಾರ ಲೋಕಾರ್ಪಣೆಗೊಂಡಿತು. ಭಾರತದ ಚಂದ್ರಮಾನವ ಎಂದು ಖ್ಯಾತಿ ಪಡೆದಿರುವ ಪದ್ಮಶ್ರೀ ಪುರಸ್ಕೃತ ಡಾ. ಮೈಲ್ಸ್ವಾಮಿ ಅನ್ನಾದುರೈ ಪ್ರಯೋಗಾಲಯ ಉದ್ಘಾಟಿಸಿ ಮಾತನಾಡಿ, ಇದು ಕೇವಲ ಖಗೋಳ ಪ್ರಯೋಗಾಲಯವಲ್ಲ, ಇದು ನಮ್ಮ ಬಾಹ್ಯಾಕಾಶ ಸಾಧನೆಯತ್ತ ಭವಿಷ್ಯದ ದೃಢ ಹೆಜ್ಜೆಯಾಗಬಲ್ಲದು ಎಂದು ಆಶಿಸಿದರು.

ನ್ಯಾವಿಗೇಶನ್ ವ್ಯವಸ್ಥೆ

ಭಾರತವು ಇಂದು ಉಪಗ್ರಹ ಸಂವಹನದಿಂದ ನ್ಯಾವಿಗೇಶನ್ ವ್ಯವಸ್ಥೆ, ದೂರ ಸಂವಹನ, ಚಂದ್ರಯಾನ, ಮಂಗಳಯಾನ ಮುಂತಾದ ಸಾಧನೆಗಳ ಮೂಲಕ ಜಗತ್ತನ್ನು ತನ್ನತ್ತ ಸೆಳೆಯುತ್ತಿದೆ ಎಂದರು. ಶ್ರೀ ಮಹಾವೀರ ಕಾಲೇಜಿನ ಅಮೆಚೂರ್ ಆಸ್ಟ್ರೋನಾಮರ್ಸ್ ಕ್ಲಬ್‌ನ ಸಂಯೋಜಕ ಡಾ. ರಮೇಶ್ ಭಟ್ ಮಾತನಾಡಿ, ಬಾಹ್ಯಾಕಾಶ ಸಾಧನೆಯಲ್ಲಿ ಅಮೇರಿಕವು ಸಾಧಿಸದ ಹಂತವನ್ನೂ, ಭಾರತವು ತಲುಪಿದುದು ನಮ್ಮ ವಿಜ್ಞಾನಿಗಳ ಗುಣಮಟ್ಟಕ್ಕೆ ಸಾಕ್ಷಿ ಎಂದರು.

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ

ಅಧ್ಯಕ್ಷತೆ ವಹಿಸಿ ಮಾತನಾಡಿದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ವಿವೇಕ್ ಆಳ್ವ, ಜೀವನದಲ್ಲಿ ಯಶಸ್ಸು ಸಾಧಿಸಲು ಪ್ರತಿಷ್ಟಿತ ಸಂಸ್ಥೆಗಳಲ್ಲೇ ಶಿಕ್ಷಣ ಪಡೆಯಬೇಕೆಂದೇನಿಲ್ಲ. ಅನೇಕ ವಿಜ್ಞಾನಿಗಳು ಗ್ರಾಮೀಣ ಹಿನ್ನೆಲೆಯಿಂದ ಬಂದು ತಮ್ಮ ಶ್ರೇಷ್ಠತೆ ಮೆರೆದಿದ್ದಾರೆ ಎಂದರು. ಡಾ. ಮೈಲ್ಸ್ವಾಮಿ ಅನ್ನಾದುರೈಯನ್ನು ಆಳ್ವಾಸ್ ಸಂಸ್ಥೆಯ ಪರವಾಗಿ ಸನ್ಮಾನಿಸಲಾಯಿತು.

ಮಂಗಳೂರಿನ ಸೇನಾ ನೇಮಕಾತಿ ಅಧಿಕಾರಿಗಳು, ಕರ್ನಲ್ ಸೋಮು ಮಹಾರಾಜ್, ಮೇಜರ್ ಅಭಿಜಿತ್ ಸಿಂಗ್, ನವ್ರಾಸ್ ಸ್ಪೇಸ್‌ಲ್ಯಾಬ್‌ನ ರವೀಂದ್ರನಾಥ್ ನಾಡೆಲ್ಲ ಹಾಗೂ ಶ್ರವಣ್, ಶಾಲೆಯ ಆಡಳಿತಾಧಿಕಾರಿ ಪ್ರೀತಮ್ ಕುಂದರ್, ಮೆಂಟರ್ ಅಶ್ವಿನ್ ಪೈ, ಪ್ರಾಂಶುಪಾಲೆ ಶೈಲಜಾ ಬೋಳ ಹೆಗ್ಡೆ ಇದ್ದರು. ಪ್ರಾಂಶುಪಾಲ ಮೊಹಮದ್ ಶಫಿ ಶೇಖ್ ಸ್ವಾಗತಿಸಿ, ಉಪನ್ಯಾಸಕ ವಿರನ್ ನಿರೂಪಿಸಿದರು.