ಅಮ್ಮನ ಗರ್ಭದಲ್ಲಿ ಇರುವಾಗಲೇ ಮಗು ಗರ್ಭಧರಿಸಿರುವ ವಿಚಿತ್ರ ಕೇಸ್ ಒಂದು ಮಹಾರಾಷ್ಟ್ರದಲ್ಲಿ ನಡೆದಿದ್ದು, ಇಡೀ ವೈದ್ಯಲೋಕವನ್ನೇ ಇದು ಬೆಚ್ಚಿ ಬೀಳಿಸಿದೆ. ಏನಿದು ಪ್ರಕರಣ?
ವಿಜ್ಞಾನ, ತಂತ್ರಜ್ಞಾನ ಎಷ್ಟೇ ಮುಂದುವರೆದರೂ ಕೆಲವೊಂದು ವಿಷಯಗಳು ಮಾತ್ರ ವಿಚಿತ್ರವಾಗಿಯೇ ಉಳಿದುಬಿಡುತ್ತವೆ. ಯಾರ ಊಹೆಗೂ ನಿಲುಕದ್ದಾಗಿರುತ್ತದೆ. ವೈದ್ಯಕೀಯದಲ್ಲಿಯೂ ವೈದ್ಯರು ಇಂಥ ವಿಚಿತ್ರ ಕೇಸ್ಗಳನ್ನು ನಡೆಸುತ್ತಲೇ ಇರುತ್ತಾರೆ. ಕೊನೆಗೆ ಅದಕ್ಕೆ ಕಾರಣ ಕಂಡುಹಿಡಿದು ಅದಕ್ಕೊಂದು ವೈದ್ಯಕೀಯದ ಹೆಸರು ಇಟ್ಟರೂ, ಆ ವಿಷಯಕ್ಕೆ ಕಾರಣ ಏನು ಎನ್ನುವುದು ನಿಗೂಢವಾಗಿಯೇ ಉಳಿದುಬಿಡುತ್ತದೆ. ಇದೀಗ ಅಂಥದ್ದೇ ಒಂದು ಕೇಸ್ ಮಹಾರಾಷ್ಟ್ರದ ಬುಲ್ಧಾನಾದಲ್ಲಿ ದಾಖಲಾಗಿದೆ. ಕೆಲ ವರ್ಷಗಳ ಹಿಂದೆ ನಡೆದ ಈ ಘಟನೆ ಇದೀಗ ಮತ್ತೊಮ್ಮೆ ವೈರಲ್ ಆಗುತ್ತಿದೆ. ಈ ಘಟನೆಯಲ್ಲಿ ಹುಟ್ಟುವಾಗಲೇ ಮಗು ಗರ್ಭಧರಿಸಿಯೇ ಭೂಮಿಗೆ ಬಂದಿದೆ!
32 ವರ್ಷದ ಮಹಿಳೆಯೊಬ್ಬರು ಸೋನೋಗ್ರಫಿಗೆ ಒಳಗಾದಾಗ ಇದು ಬೆಳಕಿಗೆ ಬಮದಿದೆ. ಗರ್ಭದಲ್ಲಿ ಇರುವ ಮಗುವಿನ ಭ್ರೂಣದಲ್ಲಿ ಮತ್ತೊಂದು ಭ್ರೂಣ ಪತ್ತೆಯಾಗಿದೆ. ವೈದ್ಯಲೋಕಕ್ಕೇ ಇದು ಸವಾಲು ಎನಿಸಿದೆ. ಬಳಿಕ ತಿಳಿದದ್ದು ಏನೆಂದರೆ, ಇದು ಅವಳಿ ಶಿಶು. ಆದರೆ ಮತ್ತೊಂದು ಮಗು ಅಮ್ಮನ ಗರ್ಭದಲ್ಲಿ ಜನಿಸುವ ಬದಲು ಶಿಶುವಿನ ಗರ್ಭದಲ್ಲಿ ಸೇರಿಹೋಗಿದೆ. ತನ್ನ ಅವಳಿ ಸಹೋದರನನ್ನು ಆ ಮಗು ತನ್ನ ಗರ್ಭದಲ್ಲಿ ಹೊತ್ತಿದೆ ಎನ್ನುವುದು ತಿಳಿದಿದೆ. ಈ ಬಗ್ಗೆ ವೈದ್ಯರು ಸಾಕಷ್ಟು ಸಂಶೋಧನೆ ನಡೆಸಿದಾಗ, ವಿಶ್ವಾದ್ಯಂತ ಸುಮಾರು 200 ಪ್ರಕರಣಗಳು ಹಾಗೂ ಭಾರತದಲ್ಲಿ 15 ರಿಂದ 20 ಪ್ರಕರಣಗಳು ವರದಿಯಾಗಿರುವುದಾಗಿ ತಿಳಿದಿದೆ.
ಆರಂಭದಲ್ಲಿ ನಮಗೆ ಆಶ್ಚರ್ಯವಾಯಿತು ಮತ್ತು ನಂತರ ಸ್ಕ್ಯಾನ್ ಮಾಡಿ ಅದನ್ನು ಎಚ್ಚರಿಕೆಯಿಂದ ಮರುಪರಿಶೀಲಿಸಿದಾಗ ವಿಷಯ ಬೆಳಕಿಗೆ ಬಂತು. ಭ್ರೂಣದ ಒಳಗೇ ಇನ್ನೊಂದು ಭ್ರೂಣ ಸೇರಿರುವುದು ತಿಳಿಯಿತು ಎಂದಿದ್ದಾರೆ ಸ್ತ್ರೀರೋಗ ತಜ್ಞ ಡಾ. ಪ್ರಸಾದ್ ಅಗರ್ವಾಲ್. ವಿಚಿತ್ರ ಎಂದರೆ, ಮಹಿಳೆ 9 ತಿಂಗಳವರೆಗೆ ಹಲವು ಬಾರಿ ಪರೀಕ್ಷೆಗೆ ಒಳಗಾಗಿದ್ದರೂ ವೈದ್ಯರಿಗೆ ಇದನ್ನು ಕಂಡುಹಿಡಿಯಲು ಆಗಿರಲಿಲ್ಲ. 9ನೇ ತಿಂಗಳಿಗೆ ಮಹಿಳೆಗೆ ಪ್ರಸವ ವೇದನೆ ಶುರುವಾದಾಗಲಷ್ಟೇ ಇದು ಗುರುತಿಸಲು ಸಾಧ್ಯವಾಗಿದೆ!
"ಹಿಂದಿನ ಸೋನೋಗ್ರಫಿಯಲ್ಲಿ ಇದು ಗಮನಕ್ಕೆ ಬಂದೇ ಇರಲಿಲ್ಲ. ಏಕೆಂದರೆ ಇದು ಬಹಳ ಅಪರೂಪದ ಸ್ಥಿತಿಯಾಗಿದ್ದು, ಅಂತಹ ಸ್ಥಿತಿ ಅಸ್ತಿತ್ವದಲ್ಲಿರುತ್ತದೆ ಎಂದು ಯಾರೂ ಊಹಿಸಲೂ ಸಾಧ್ಯವಿಲ್ಲ. ಆದ್ದರಿಂದ, ನಾನು ಒಂದೆರಡು ವೈದ್ಯರಿಂದ ವಿವರವಾದ ಅಧ್ಯಯನವನ್ನು ಮಾಡಿ ಅದನ್ನು ದೃಢಪಡಿಸಿದೆ" ಎಂದು ಡಾ. ಅಗರ್ವಾಲ್ ಹೇಳಿದ್ದಾರೆ. ಈ ಸ್ಥಿತಿಯ ನಿಖರವಾದ ಕಾರಣವನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳಲಾಗಿಲ್ಲ, ಆದರೆ ಇದು ಒಂದೇ ರೀತಿಯ ಅವಳಿಗಳ ಬೆಳವಣಿಗೆಯ ಸಮಯದಲ್ಲಿ ಅಸಹಜತೆಯಿಂದ ಉಂಟಾಗುತ್ತದೆ ಎಂದು ನಂಬಲಾಗಿದೆ. ಪರಾವಲಂಬಿ ಅವಳಿ ಸ್ವತಂತ್ರವಾಗಿ ಬದುಕಲು ಸಾಧ್ಯವಿಲ್ಲವಾದ್ದರಿಂದ ಇದನ್ನು ನಿಜವಾದ ಅವಳಿ ಗರ್ಭಧಾರಣೆಯ ಬದಲು ಬೆಳವಣಿಗೆಯ ಅಸಂಗತತೆ ಎಂದು ಪರಿಗಣಿಸಲಾಗುತ್ತದೆ ಎಂದಿರುವ ವೈದ್ಯರು ಈ ಬಗ್ಗೆ ಇನ್ನಷ್ಟು ಸಂಶೋಧನೆಯ ಅಗತ್ಯ ಇದೆ ಎಂದಿದ್ದಾರೆ.
