ಈ ಕಥೆ ವಿಭಿನ್ನವಾಗಿದೆ ಎನ್ನುವುದಕ್ಕಿಂತ ಹೆಚ್ಚು ನೈಜವಾಗಿದೆ ಮತ್ತು ಮನಸ್ಸಿಗೆ ಬಹಳ ಹತ್ತಿರವಾಗುವಂತಿದೆ ಎಂಬ ಕಾರಣಕ್ಕೆ ಒಪ್ಪಿಕೊಂಡೆ. ಗ್ಯಾಂಗ್‍ಸ್ಟರ್ ಕಥೆಯಾದರೂ, ಚಿತ್ರದಲ್ಲಿ ಒಳ್ಳೆಯ ಮೌಲ್ಯಗಳಿವೆ ಎಂದರು ವಸಿಷ್ಠ ಸಿಂಹ.

ವಸಿಷ್ಠ ಸಿಂಹ ಅವರ ಹೊಸ ಸಿನಿಮಾ ‘ಕಡಲ್‌ ಕೋಟೆ’ ಸೆಟ್ಟೇರಿದೆ. ಧರ್ಮೇಂದ್ರ ನಿರ್ಮಿಸುತ್ತಿರುವ, ರಂಜಿತ್‌ ಕುಮಾರ್‌ ಗೌಡ ನಿರ್ದೇಶಿಸುತ್ತಿರುವ ಚಿತ್ರವಿದು. ಈ ಚಿತ್ರದ ಮುಹೂರ್ತ ಇತ್ತೀಚೆಗೆ, ಸುರತ್ಕಲ್‍ನ ಶ್ರೀ ಕ್ಷೇತ್ರ ಗಣೇಶಪುರದ ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ಪೂಜೆ ಆಗುವ ಮೂಲಕ ಸೆಟ್ಟೇರಿದೆ.

ರಂಜಿತ್‌ ಕುಮಾರ್‌ ಗೌಡ, ‘ಇದೊಂದು ಕರಾವಳಿ ಪ್ರದೇಶದಲ್ಲಿ ನಡೆಯುವ ಗ್ಯಾಂಗ್‍ಸ್ಟರ್‌ ಕತೆ. ದುಡ್ಡಿನ ಹಿಂದೆ ಮನುಷ್ಯ ಬಿದ್ದರೆ, ಅವನ ಜೀವನದಲ್ಲಿ ಏನೆಲ್ಲಾ ಘಟಿಸುತ್ತದೆ ಹಾಗೂ ಹಾರ್ಬರ್‌ನಲ್ಲಿ ನಡೆಯುವ ಶೋಷಣೆ ಮತ್ತು ಸಂಘರ್ಷ, ಇದರ ನಡುವೆ ಬೆಂಕಿಯಲ್ಲಿ ಅರಳಿದ ಹೂವು ಎನ್ನುವಂತೆ ನಾಯಕ ಹೇಗೆ ಎದ್ದು ಬರುತ್ತಾನೆ ಎಂದು ಈ ಚಿತ್ರದಲ್ಲಿ ಹೇಳುತ್ತಿದ್ದೇವೆ. ನೈಜ ಘಟನೆಗಳನ್ನು ಆಧರಿಸಿ ಈ ಕತೆ ಮಾಡಿದ್ದೇವೆ’ ಎಂದು ಹೇಳಿದರು.

ಹೆಚ್ಚು ನೈಜವಾಗಿದೆ

ವಸಿಷ್ಠ ಸಿಂಹ, ಈ ಚಿತ್ರದಲ್ಲಿ ಪ್ರತಿಯೊಂದು ಪಾತ್ರವನ್ನೂ ಬಹಳ ಅಚ್ಚುಕಟ್ಟಾಗಿ ಬರೆದಿದ್ದಾರೆ ಮತ್ತು ಒಳ್ಳೆಯ ಬರವಣಿಗೆಯೇ ನಾನು ಈ ಚಿತ್ರ ಒಪ್ಪಿಕೊಳ್ಳುವುದಕ್ಕೆ ಮುಖ್ಯ ಕಾರಣ. ಈ ಸುತ್ತಮುತ್ತಲಿನ ಭಾಗದಲ್ಲಿ ನಡೆದ ಹಲವಾರು ಘಟನೆಗಳನ್ನಾಧರಿಸಿ ಈ ಕಥೆ ಮಾಡಿದ್ದಾರೆ. ಈ ಕಥೆ ವಿಭಿನ್ನವಾಗಿದೆ ಎನ್ನುವುದಕ್ಕಿಂತ ಹೆಚ್ಚು ನೈಜವಾಗಿದೆ ಮತ್ತು ಮನಸ್ಸಿಗೆ ಬಹಳ ಹತ್ತಿರವಾಗುವಂತಿದೆ ಎಂಬ ಕಾರಣಕ್ಕೆ ಒಪ್ಪಿಕೊಂಡೆ. ಗ್ಯಾಂಗ್‍ಸ್ಟರ್ ಕಥೆಯಾದರೂ, ಚಿತ್ರದಲ್ಲಿ ಒಳ್ಳೆಯ ಮೌಲ್ಯಗಳಿವೆ. ಬಹಳ ದಿನಗಳ ನಂತರ ನಾನು ಒಂದು ಮಾಸ್ ಪಾತ್ರವನ್ನು ಮಾಡುತ್ತಿದ್ದೇನೆ. ರವಿಶಂಕರ್ ಅವರ ಜೊತೆಗೆ ಇದು ನನ್ನ ಮೂರನೆಯ ಚಿತ್ರ. ಅವರ ಜೊತೆಗೆ ನಟಿಸುತ್ತಿರುವುದು ಬಹಳ ಖುಷಿಯ ವಿಷಯ ಎಂದರು.

ನಟ ರವಿಶಂಕರ್ ಈ ಚಿತ್ರದಲ್ಲಿ ಸೂತ್ರಧಾರನ ಪಾತ್ರ ಮಾಡುತ್ತಿದ್ದಾರೆ. ರಂಜಿತ್‍ ಈ ಕಥೆ ಹೇಳಿದಾಗ, ನನಗೆ ಅವರ ಕ್ಲಾರಿಟಿ ಬಹಳ ಇಷ್ಟವಾಯಿತು. ಇದರಲ್ಲಿ ಬಹಳ ಮುಖ್ಯವಾದ ಪಾತ್ರವಿದೆ. ನಾನೇನು ಪಾತ್ರ ಮಾಡುತ್ತಿದ್ದೇನೆ ಎಂದು ಹೇಳಿಬಿಟ್ಟರೆ, ಕಥೆ ಬಿಟ್ಟುಕೊಟ್ಟಂತಾಗುತ್ತದೆ. ನನ್ನ ಪಾತ್ರದ ಮೂಲಕ ಇಡೀ ಕಥೆ ನಡೆಯುತ್ತದೆ. ಇದು ನನಗೆ ಇನ್ನೊಂದು ಒಳ್ಳೆಯ ಚಿತ್ರವಾಗುತ್ತದೆ ಎಂಬ ನಂಬಿಕೆ ಇದೆ ಎಂದು ಹೇಳಿದರು. ನಾಯಕಿಯಾಗಿ ಸುಷ್ಮಿತಾ ಭಟ್‌ ನಟಿಸಲಿದ್ದಾರೆ. ರವಿಶಂಕರ್‌, ಅಚ್ಯುತ್‌ ಕುಮಾರ್‌, ಸ್ವರಾಜ್‌ ಶೆಟ್ಟಿ, ಶರತ್‌ ಲೋಹಿತಾಶ್ವ, ತಾರಾ, ಬಲರಾಜವಾಡಿ, ಯಶ್‌ ಶೆಟ್ಟಿ ಪ್ರಮುಖ ಪಾತ್ರದಲ್ಲಿ ನಟಿಸಲಿದ್ದಾರೆ.