ನಟ ದರ್ಶನ್ ತೂಗುದೀಪ ಅವರೊಂದಿಗೆ ಯಜಮಾನ ಸಿನಿಮಾದಲ್ಲಿ ನಟಿಸಿದ್ದ ರಶ್ಮಿಕಾ ಮಂದಣ್ಣ, ದರ್ಶನ್ ಅವರ ವ್ಯಕ್ತಿತ್ವದ ಬಗ್ಗೆ ಎಳೆ, ಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಅವರು ಸಿನಿಮಾ ಸೆಟ್ನಲ್ಲಿ ಮಹಿಳೆಯರೊಂದಿಗೆ ನಡೆದುಕೊಳ್ಳುವ ರೀತಿ ಹೇಗಿತ್ತು ಎಂಬುದನ್ನ ಹೇಳಿದ ವಿಡಿಯೋ ಇದೀಗ ವೈರಲ್ ಆಗುತ್ತಿದೆ.
ನಟ ದರ್ಶನ್ ತೂಗುದೀಪ ಅವರೊಂದಿಗೆ ಯಜಮಾನ ಸಿನಿಮಾದಲ್ಲಿ ನಟಿಸಿರುವ ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಅವರ ಹಳೆಯ ಸಂದರ್ಶನದ ವಿಡಿಯೋವೊಂದು ವೈರಲ್ ಆಗುತ್ತಿದೆ.
ನಟಿ ರಶ್ಮಿಕಾ ಮಂದಣ್ಣ ಕನ್ನಡ ಚಿತ್ರರಂಗದಲ್ಲಿ ನಟಿಸಿದ ಕೆಲವೇ ಕೆಲವು ಸಿನಿಮಾಗಳಲ್ಲಿ ನಟ ದರ್ಶನ್ ತೂಗುದೀಪ ಅವರೊಂದಿಗೆ ಯಜಮಾನ ಸಿನಿಮಾದಲ್ಲಿಯೂ ನಟಿಸಿದ್ದಾರೆ. ಆದರೆ, ಈ ಸಿನಿಮಾದ ಪ್ರಚಾರಕ್ಕೆ ಎಲ್ಲಿಯೂ ರಶ್ಮಿಕಾ ಮಂದಣ್ಣ ಬಂದಿರಲಿಲ್ಲ. ಇದಕ್ಕೆ ಕಾರಣ ನಟ ದರ್ಶನ್ ಎಂದು ಹೇಳಲಾಗುತ್ತಿದೆ. ಆದರೆ, ಇದಾದ ಕೆಲವು ದಿನಗಳ ನಂತರ ಪಬ್ಲಿಕ್ ಮ್ಯೂಸಿಕ್ ವಾಹಿನಿಯಿಂದ ನಡೆಸಲಾದ ಸಂದರ್ಶನವೊಂದರಲ್ಲಿ ದರ್ಶನ್ ಅವರ ವ್ಯಕ್ತಿತ್ವದ ಬಗ್ಗೆ ಬಿಚ್ಚಿಟ್ಟಿದ್ದಾರೆ.
ದರ್ಶನ್ ಪಾಪಚ್ಚಿಯಂತೆ
ದರ್ಶನ್ ಅವರು ಶೂಟಿಂಗ್ ಸೆಟ್ನಲ್ಲಿ ತುಂಬಾ ಪಾಪದವರ ಥರ ಪಾಪಚ್ಚಿಯಂತೆ ಇರುತ್ತಾರೆ. ಅವರು ನೋಡುವುದಕ್ಕೆ ಅಜಾನುಬಾಹು, ಎತ್ತರದ ವ್ಯಕ್ತಿ, ದೊಡ್ಡವ ರಂತೆ ಕಂಡರೂ ಮಾತನಾಡುವಾಗ ತುಂಬಾ ಚಿಕ್ಕ ಮಕ್ಕಳ ಹಾಗೆ ಮಾತನಾಡುತ್ತಾರೆ. ಇದು ಅವರನ್ನು ತುಂಬಾ ಹತ್ತಿರದಿಂದ ನೋಡಿದವರಿಗೆ ಗೊತ್ತಾಗುತ್ತದೆ. ನಾವು ಎಲ್ಲರೂ ತೆರೆಯ ಮೇಲೆ ಅವರನ್ನು ನೋಡಿ, ಅವರನ್ನು ನೋಡಿ ತುಂಬಾ ಸ್ಟ್ರಿಕ್ ಆಗಿರುತ್ತಾರೆ ಎಂದುಕೊಳ್ಳುತ್ತೇವೆ. ಹೀಗಾಗಿಯೇ ಅವರೊಂದಿಗೆ ಹೇಗೆ ನಡೆದುಕೊಳ್ಳಬೇಕು ಎಂದು ಗೊತ್ತಾಗದೇ ಭಯಪಡುತ್ತಾರೆ.
ಚೆನ್ನಾಗಿದ್ದೀಯಮ್ಮಾ ಎಂದು ಆತ್ಮೀಯತೆಯಿಂದ ಮಾತು
ದರ್ಶನ್ ಅವರು ಸಡನ್ ಆಗಿ ಬಂದು ನಮ್ಮ ಜೊತೆಗೆ ಮಾತನಾಡುವಾಗ 'ಚೆನ್ನಾಗಿದ್ದೀರಮ್ಮಾ' ಎಂದು ಕೇಳಿದಾಗ ಸೋ ಕ್ಯೂಟ್ ಎಂದೆನಿಸುತ್ತದೆ. ಇನ್ನು ಅವರೊಂದಿಗೆ ಶೂಟಿಂಗ್ ಮಾಡಿದ ಸಂದರ್ಭದಲ್ಲಿ ತುಂಬಾ ತಾಳ್ಮೆಯನ್ನು ಕಲಿತಿದ್ದೇನೆ. ಇನ್ನು ಬೇರೆಯವರೊಂದಿಗೆ ಹೇಗೆ ನಡೆದುಕೊಳ್ಳಬೇಕು ಎಂಬುದನ್ನು ನಾನು ಕಲಿತಿದ್ದೇನೆ. ಅಷ್ಟು ದೊಡ್ಡ ವ್ಯಕ್ತಿಯಾದರೂ ಅವರೊಂದಿಗೆ ನಾನು ಕೆಲಸ ಮಾಡುವುದಕ್ಕೆ ತುಂಬಾ ಸುಲಭವಾಯಿತು ಎಂದು ರಶ್ಮಿಕಾ ಮಂದಣ್ಣ ಹೇಳಿದ್ದಾರೆ.
ಯಜಮಾನ ಚಿತ್ರದ ಪ್ರಚಾರದಿಂದ ದೂರವಿಟ್ಟಿದ್ದ ದರ್ಶನ್
ಯಜಮಾನ ಚಿತ್ರ ಬಿಡುಗಡೆ ಸಮಯದಲ್ಲಿ ಪ್ರಚಾರ ಮಾಡುವ ತುಂಬಾ ಕಡೆ ರಶ್ಮಿಕಾ ಅವರನ್ನು ಮೀಡಿಯಾ ಮುಂದೆ ಬರಲು ದರ್ಶನ್ ಸರ್ ಬಿಡಲಿಲ್ಲ ಎನ್ನುವ ಮಾತಿದೆ. ಆದರೆ, ಇದಕ್ಕೆ ಕಾರಣ ಆಕೆಗೆ ನೋವಾಗುವ ಪ್ರಶ್ನೆ ಕೇಳಬಹುದು ಎಂದು ಮಾಧ್ಯಮಗಳಿಂದ ದೂರವಿಟ್ಟಿದ್ದರು ಎಂದು ಹೇಳಲಾಗುತ್ತದೆ. ಜೊತೆಗೆ, ರಶ್ಮಿಕಾ ಮಂದಣ್ಣ ಅವರು ರಕ್ಷಿತ್ ಶೆಟ್ಟಿಯೊಂದಿಗಿನ ಮದುವೆ ಸಂಬಂಧವನ್ನು ಕೈಬಿಟ್ಟಿದ್ದರಿಂದ ಕನ್ನಡ ಚಿತ್ರರಂಗದಲ್ಲಿ ತಪ್ಪಿತಸ್ಥೆ, ಮೋಸಗಾತಿ ಎನ್ನುವ ಪಟ್ಟ ಕಟ್ಟಿದ್ದರು. ಹೀಗಾಗಿ, ಸಿನಿಮಾ ಪ್ರಚಾರದಿಂದ ದೂರವಿರುವಂತೆ ದರ್ಶನ್ ಅವರೇ ಚಿತ್ರತಂಡಕ್ಕೆ ತಿಳಿಸಿದ್ದರು ಎಂದು ಹೇಳಲಾಗುತ್ತಿದೆ.
ರಕ್ಷಿತ್ ಶೆಟ್ಟಿಯಿಂದ ಕಿರುಕುಳ ಆಡಿಯೋ ವೈರಲ್
ಕನ್ನಡ ಚಿತ್ರರಂಗದಿಂದ ಟಾಲಿವುಡ್, ಬಾಲಿವುಡ್ನಲ್ಲಿ ಮಿಂಚಿ ನ್ಯಾಷನಲ್ ಕ್ರಶ್ ಎಂಬ ಖ್ಯಾತಿ ಪಡೆದಿರುವ ಕೊಡಗಿನ ಸುಂದರಿ ನಟಿ ರಶ್ಮಿಕಾ ಮಂದಣ್ಣ ಅವರು ನಟ ರಕ್ಷಿತ್ ಶೆಟ್ಟಿಯೊಂದಿಗೆ ಮದುವೆ ಸಂಬಂಧ ಕಡಿದುಕೊಂಡು ವಿವಾದದ ಕೇಂದ್ರಬಿಂದುವಾಗಿದ್ದರು. ಆದರೆ, ಇದೀಗ ರಶ್ಮಿಕಾ ಮಂದಣ್ಣ, ತೆಲುಗು ನಟ ವಿಜಯ್ ದೇವರೆಕೊಂಡ ಅವರನ್ನು ಮದುವೆಯಾಗಿದ್ದಾರೆ. ಇದೀಗ ನಟ ರಕ್ಷಿತ್ ಶೆಟ್ಟಿಯೇ ರಶ್ಮಿಕಾಗೆ ನೀಡುತ್ತಿದ್ದ ಕಿರುಕುಳದ ಬಗ್ಗೆ ರಶ್ಮಿಕಾ ತಾಯಿ ಮಾತನಾಡಿದ ಆಡಿಯೋ ವೈರಲ್ ಆಗಿದೆ. ಇದರ ಬೆನ್ನಲ್ಲಿಯೇ ಕನ್ನಡಿಗರು ರಶ್ಮಿಕಾ ಬೆಂಬಲಕ್ಕೆ ನಿಲ್ಲುವ ಪ್ರಯತ್ನ ಮಾಡುತ್ತಿದ್ದಾರೆ. ಇದರ ನಡುವೆ ರಶ್ಮಿಕಾ ಅವರ ಹಳೆಯ ಸಂದರ್ಶನದ ವಿಡಿಯೋಗಳು ಕೂಡ ವೈರಲ್ ಆಗುತ್ತಿವೆ.


