Asianet Suvarna News Asianet Suvarna News

'ನಮ್ಮೊಲವಿನ ಪರಮಾತ್ಮ ಶಾಶ್ವತ': ಯೋಗರಾಜ್ ಭಟ್

ಪುನೀತ್ ಅಕಾಲಿಕ ನಿಧನಕ್ಕೆ, ವಿಕಟಕವಿ ಯೋಗರಾಜ್ ಭಟ್ 'ಕರುನಾಡ ರಾಜರತ್ನನಿಗೆ ಗೀತ ನಮನ' ಎಂಬ ವಿಶೇಷವಾದ ಹಾಡೊಂದನ್ನು ಬರೆದಿದ್ದಾರೆ. ಆ ಹಾಡಿಗೆ ವಿ.ಹರಿಕೃಷ್ಣ ಅವರು ಸಂಗೀತ ಸಂಯೋಜಿಸಿದ್ದು, ಪುನರ್ವಸು ಭಟ್ ದನಿಯಲ್ಲಿ ಮೂಡಿಬಂದಿದೆ.

TRIBUTE SONG from Yogaraj Bhat for Puneeth death
Author
Bangalore, First Published Oct 31, 2021, 1:39 PM IST

ಬೆಂಗಳೂರು(ಅ.31): ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ (Puneeth Rajkumar) ಅಕಾಲಿಕ ಅಗಲಿಕೆ ಕನ್ನಡ ಚಿತ್ರರಂಗಕ್ಕೆ (Sandalwood) ಬರಸಿಡಿಲು ಬಡಿದಂತೆ ಮಾಡಿದೆ.  ಎಲ್ಲ ವರ್ಗದ ಜನರು ಸರಳ ಜೀವಿಗೆ ಅಂತಿಮ ನಮನ ಸಲ್ಲಿಸಿದ್ದಾರೆ. ರಾಜ್‌ಕುಮಾರ್ ಕುಟುಂಬದಿಂದ ಬಂದಿರುವ ಪ್ರತಿಭಾವಂತ ನಟನಾಗಿದ್ದ ಪುನೀತ್, ಅಪಾರ ಅಭಿಮಾನಿಗಳನ್ನು ಸಂಪಾದಿಸಿದ್ದರು. ಕನ್ನಡ ಚಿತ್ರರಂಗದ ತಾರೆಯರು ಸೇರಿದಂತೆ ಅನೇಕ ಸೆಲೆಬ್ರಿಟಿಗಳು ಪುನೀತ್ ಅಗಲಿಕೆ ಬಗ್ಗೆ ನೋವನ್ನು ಹೊರಹಾಕುತ್ತಿದ್ದಾರೆ. 

ಶಂಕರನ ನಂತರ ಅತೀವ ನೋವು ಕೊಟ್ಟ ಅಗಲಿಕೆ: ಅನಂತ್‌ ನಾಗ್‌

ಪುನೀತ್ ಅಕಾಲಿಕ ನಿಧನಕ್ಕೆ, ವಿಕಟಕವಿ ಯೋಗರಾಜ್ ಭಟ್ (Yogaraj Bhat) 'ಕರುನಾಡ ರಾಜರತ್ನನಿಗೆ ಗೀತ ನಮನ' ಎಂಬ ವಿಶೇಷವಾದ ಹಾಡೊಂದನ್ನು ಬರೆದಿದ್ದಾರೆ. ಆ ಹಾಡಿಗೆ ವಿ.ಹರಿಕೃಷ್ಣ (V.Harikrishna) ಅವರು ಸಂಗೀತ ಸಂಯೋಜಿಸಿದ್ದು, ಪುನರ್ವಸು ಭಟ್ (Punarvasu Bhat) ದನಿಯಲ್ಲಿ ಮೂಡಿಬಂದಿದೆ. ಪಂಚರಂಗಿ ಯೂಟ್ಯೂಬ್ ಚಾನೆಲ್‌ನಲ್ಲಿ ಹಾಡು ಬಿಡುಗಡೆಯಾಗಿದೆ. ಹಾಡಿನ ಸಾಲುಗಳು ಹೀಗಿವೆ.

ಉಸಿರು ಪೂರ್ತಿ ಹೋದರೂ 
ಹೆಸರು ಪೂರ್ತಿ ನೆನಪಿದೆ..
ನೀನು ಇರದೆ ಹೋದರೂ 
ನಿನ್ನ ನಗೆಯ ಬೆಳಕಿದೆ..
ಮನೆಯ ಮುದ್ದು ಕೂಸಿಗೆ 
ನಾಡ ನಮನ...
ಖಂಡಿತ ಮರಣವಿದಲ್ಲ 
ಜನಿಸಿದೆ ನೀನಿಂದು..
ನಮ್ಮೊಲವಿನ  ಪರಮಾತ್ಮ
ಶಾಶ್ವತ ನೀನೆಂದು..
ಉಸಿರು ಮಾತ್ರ ಹೋಗಿದೆ 
ಹೆಸರು ಪೂರ್ತಿ ನೆನಪಿದೆ
ಬಾಳ ಪಯಣ ಮುಗಿದರು
ಸ್ಮೃತಿಯ ಪಯಣ ಮುಗಿವುದೆ..?
ಬೆಳ್ಳಿ ಪರದೇ ಚುಕ್ಕಿಗೆ
ನಲ್ಮೆ ನಮನ..
 


ಯೋಗರಾಜ್ ಭಟ್ 'ಪರಮಾತ್ಮ' ಚಿತ್ರದ 'ಜೊತೆಗಿರದ ಜೀವ  ಎಂದೆಂದಿಗೂ ಜೀವಂತ' ಎಂಬ ಕೊನೆಯಲ್ಲಿ ಬರುವ ಸಾಲೊಂದನ್ನು ಉಲ್ಲೇಖಿಸಿ, ನಿಮ್ಮನ್ನು ಕೊನೆಯ ಬಾರಿ ಇವತ್ತು ಬಳಿನಿಂತು ನೋಡಿ, ಭುಜ ಮುಟ್ಟಿದಾ ನನಗೆ ಅನ್ನಿಸಿದ್ದು ಇಷ್ಟೆ.. ಸಾವಲ್ಲ ಇದು ನಿಮ್ಮ ಹುಟ್ಟು.. ದೇಹ ಹೋಗಬಹುದು ಸ್ನೇಹ ಹೋದೀತೆ? ಸತತವಾಗಿ ಈ ನಾಡಿಗೆ ನಿತ್ಯ ನೂತನವಾಗಿ ನೆನಪಾಗುತ್ತ ಇನ್ನಷ್ಟು ನಳನಳಿಸುವ ಕನ್ನಡ ಚೈತನ್ಯವಾಗಿ ಶಾಶ್ವತವಾಗಿ ಬಾಳುತ್ತೀರಿ ನೀವು...  ಕುಟುಂಬಕ್ಕೆ ಸಕಲ ಕನ್ನಡಿಗರ ಶ್ರೀರಕ್ಷೆ ಇದೆ. ಆಪ್ತನಾಗಿ..ತಮ್ಮ ಅಭಿಮಾನಿಯಾಗಿ ಇನ್ನೇನು ಅನ್ನಲಿ? ನಮನ ಹೋಗಿ ಬನ್ನಿ... ಎಂದು ಪುನೀತ್‌ ಅವರನ್ನು ನೆನಪಿಸಿಕೊಳ್ಳುತ್ತಾ ಯೋಗರಾಜ್‌ ಭಟ್‌ ಅವರು ಪತ್ರವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು.

ಪುನೀತ್ ನಿಧನಕ್ಕೆ ಆನಂದ್ ಆಡಿಯೋ ಯೂಟ್ಯೂಬ್‌ ಚಾನೆಲ್‌ನಿಂದ ವಿಶೇಷ ಹಾಡು

ಇನ್ನು ನಟ ಪುನೀತ್ ರಾಜ್ ಕುಮಾರ್‌ಗೆ ಹೃದಯಾಘಾತ ಸಂಭವಿಸಿ, ಬೆಂಗಳೂರಿನ ವಿಕ್ರಂ ಆಸ್ಪತ್ರೆಗೆ (Vikram Hospital) ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಅವರು ಇಹಲೋಕ ತ್ಯಜಿಸಿದರು. ಪುನೀತ್ ಅವರು ಬಾಲನಟನಾಗಿ ಕನ್ನಡ ಚಿತ್ರರಂಗ ಪ್ರವೇಶಿಸಿದ್ದರು. ಎರಡು ದಿನ ಕಂಠೀರವ ಸ್ಟೇಡಿಯಂನಲ್ಲಿ ಪುನೀತ್‌ ರಾಜ್‌ಕುಮಾರ್‌ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಭಾರತೀಯ ಚಿತ್ರರಂಗದ ಗಣ್ಯರು, ರಾಜಕಾರಣಿಗಳು ಸೇರಿದಂತೆ ಅನೇಕ ಅಭಿಮಾನಿಗಳು ಪಾರ್ಥಿವ ಶರೀರದ ದರ್ಶನ ಪಡೆದರು. ಇಂದು ಬೆಳಿಗ್ಗೆ ಕಂಠೀರವ ಸ್ಟುಡಿಯೋದಲ್ಲಿ ತಾಯಿ ಪಾರ್ವತಮ್ಮನವರ ಸಮಾಧಿ ಪಕ್ಕದಲ್ಲೇ ಅಂತ್ಯಸಂಸ್ಕಾರ ನಡೆಸಲಾಯಿತು. ಈಡಿಗ ಸಂಪ್ರದಾಯದಂತೆ ಅಂತಿಮ ವಿಧಿ-ವಿಧಾನ ನಡೆಸಲಾಯಿತು. ರಾಘವೇಂದ್ರ ರಾಜ್​ಕುಮಾರ್​ ಮಗ ವಿನಯ್​ ರಾಜ್​ಕುಮಾರ್​ ಅಂತಿಮ ಸಂಸ್ಕಾರ ನೆರವೇರಿಸಿದರು. 

"

Follow Us:
Download App:
  • android
  • ios