'ಸರ್ಕಾರು ವಾರಿ ಪಾಟ' ಚಿತ್ರದ ಬಿಡುಗಡೆ ದಿನಾಂಕ ಟ್ವೀಟ್ ಮಾಡಿದ ಚಿತ್ರತಂಡ
ನಟ 'ಪ್ರಿನ್ಸ್' ಮಹೇಶ್ ಬಾಬು ಅವರ 'ಸರ್ಕಾರು ವಾರಿ ಪಾಟ' ಚಿತ್ರ ಮುಂದಿನ ವರ್ಷ ಏಪ್ರಿಲ್ 1 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ ಎಂಬ ಸುದ್ದಿಯನ್ನು ಚಿತ್ರತಂಡ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ.
ಟಾಲಿವುಡ್ ಸೂಪರ್ ಸ್ಟಾರ್ ಮಹೇಶ್ ಬಾಬು (Mahesh Babu) ಅಭಿನಯದ ಬಹು ನಿರೀಕ್ಷಿತ 'ಸರ್ಕಾರು ವಾರಿ ಪಾಟ' (Sarkaru Vaari Paata) ಚಿತ್ರದ ಫಸ್ಟ್ಲುಕ್ ಹಾಗೂ ಬ್ಲಾಸ್ಟರ್ ಟೀಸರ್ ಈಗಾಗಲೇ ಬಿಡುಗಡೆಯಾಗಿ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. ಇದೀಗ ಚಿತ್ರತಂಡ ಚಿತ್ರದ ಬಿಡುಗಡೆ ದಿನಾಂಕವನ್ನು ಘೋಷಿಸಿ, ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದಾರೆ. ಹೌದು! 'ಸರಿಲೇರು ನೀಕೆವ್ವರು' (Sarileru Neekevvaru) ಚಿತ್ರದಿಂದ ಯಶಸ್ಸನ್ನು ಪಡೆದುಕೊಂಡಿರುವ ನಟ 'ಪ್ರಿನ್ಸ್' ಮಹೇಶ್ ಬಾಬು ಅವರ ಈ ಚಿತ್ರ ಮುಂದಿನ ವರ್ಷ ಏಪ್ರಿಲ್ 1 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ ಎಂಬ ಸುದ್ದಿಯನ್ನು ಚಿತ್ರತಂಡ ಸಾಮಾಜಿಕ ಜಾಲತಾಣದಲ್ಲಿ (Social Media) ಹಂಚಿಕೊಂಡಿದೆ.
ಇತ್ತಿಚೆಗಷ್ಟೇ ಚಿತ್ರದ ನಾಯಕ ಮಹೇಶ್ ಬಾಬು ಹುಟ್ಟುಹಬ್ಬದ ಪ್ರಯುಕ್ತ 'ಸರ್ಕಾರು ವಾರಿ ಪಾಟ' ಚಿತ್ರತಂಡ, ಚಿತ್ರದ ಟೀಸರ್ನ್ನು ಬಿಡುಗಡೆ ಮಾಡಿತ್ತು. ಈ ಟೀಸರ್ ಅನ್ನು 'ಸರ್ಕಾರು ವಾರಿ ಪಾಟ ಬರ್ತ್ಡೇ ಬ್ಲಾಸ್ಟರ್' (Sarkaru Vaari Paata Birthday Blaster) ಎಂದು ಚಿತ್ರತಂಡ ಕರೆದುಕೊಂಡಿದೆ. ಹಾಗೆಯೇ ಯೂಟ್ಯೂಬ್ನಲ್ಲಿ ಈ ಟೀಸರ್ ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಧೂಳೆಬ್ಬಿಸಿತ್ತು. ಮಹೇಶ್ ಬಾಬು ಅವರಿಗೆ ಈ ಚಿತ್ರದ ಮೇಲೆ ಸಿಕ್ಕಾಪಟ್ಟೆ ಭರವಸೆ ಇದೆ. 'ಗೀತಾ ಗೋವಿಂದಂ'ಗೆ ನಿರ್ದೇಶನ ಮಾಡಿದ್ದ ಪರಶುರಾಮ್ ಪೆಟ್ಲಾ (Parasuram Petla) 'ಸರ್ಕಾರು ವಾರಿ ಪಾಟ' ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ.
ಟಾಲಿವುಡ್ ಕ್ಯೂಟ್ ಮಹೇಶ್ ಬಾಬು ಬಾಯ್ ಬಗ್ಗೆ ನಿಮಗೆ ತಿಳಿಯದ ಸಂಗತಿಗಳಿವು..!
'ಅಲಾ ವೈಕುಂಠಪುರಮುಲೋ', 'ಯುವರತ್ನ' ಖ್ಯಾತಿಯ ಎಸ್. ತಮನ್ (S.Thaman) ಈ ಸಿನಿಮಾಕ್ಕೆ ಸಂಗೀತ ಸಂಯೋಜಿಸುತ್ತಿದ್ದಾರೆ. ವಿಶೇಷವೆಂದರೆ ಚಿತ್ರದ ನಿರ್ಮಾಣವನ್ನು ಮಹೇಶ್ ಬಾಬು ಅವರ ಜಿಎಂಬಿ ಎಂಟರ್ಟೈನ್ಮೆಂಟ್, ಮೈತ್ರಿ ಮೂವೀ ಮೇಕರ್ಸ್, 14 ರೀಲ್ಸ್ ಪ್ಲಸ್ ಸಂಸ್ಥೆಗಳು ಜಂಟಿಯಾಗಿ ಮಾಡುತ್ತಿದ್ದು, ನವೀನ್ ಯೆರ್ನೇನಿ, ವೈ.ರವಿಶಂಕರ್, ರಾಮ್ ಅಚಂತ ಮತ್ತು ಗೋಪಿ ಅಚಂತ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಆರ್.ಮಧಿ ಕ್ಯಾಮೆರಾ ಕೈಚಳಕ, ಮಾರ್ತಾಂಡ್.ಕೆ.ವೆಂಕಟೇಶ್ ಸಂಕಲನ ಸೇರಿದಂತೆ ರಾಮ-ಲಕ್ಷ್ಮಣ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ.
ಈ ಮೊದಲು 'ಸರ್ಕಾರು ವಾರಿ ಪಾಟ' 2022ರ ಜನವರಿ 13ರಂದು ಬಿಡುಗಡೆಯಾಗಲಿದೆ ಎನ್ನಲಾಗಿತ್ತು. ಆದರೆ ಕೋವಿಡ್ ವೈರಸ್ ಕಾರಣದಿಂದಾಗಿ ಚಿತ್ರೀಕರಣ ದೀರ್ಘಕಾಲ ಮುಂದೂಡಲ್ಪಟ್ಟಿತ್ತು. ಈಗಾಗಲೇ ಎರಡೂ ಹಂತದ ಶೂಟಿಂಗ್ ಮಕ್ತಾಯವಾಗಿದ್ದು ಪೋಸ್ಟ್ ಪ್ರೊಡಕ್ಷನ್ ಕೆಲಸ ನಡೆಯುತ್ತಿದೆ. ಚಿತ್ರದಲ್ಲಿ ಮಹೇಶ್ ಬಾಬುಗೆ ಜೋಡಿಯಾಗಿ ಮೊದಲ ಬಾರಿಗೆ ಕೀರ್ತಿ ಸುರೇಶ್ (Keerthy Suresh) ನಟಿಸುತ್ತಿದ್ದು, ಇನ್ನೋರ್ವ ನಾಯಕಿ ಚಿತ್ರದಲ್ಲಿ ಇರುವುದಾಗಿ ಚಿತ್ರತಂಡ ತಿಳಿಸಿದೆ. ವೆನ್ನೆಲಾ ಕಿಶೋರ್, ಸುಬ್ಬರಾಜ್ ಸೇರಿದಂತೆ ಮುಂತಾದವರ ತಾರಾಬಳಗ ಚಿತ್ರದಲ್ಲಿದೆ. ಈಗಾಗಲೇ ಈ ಚಿತ್ರದ ಡಿಜಿಟಲ್ ಹಾಗೂ ಸ್ಯಾಟಲೈಟ್ ಹಕ್ಕುಗಳು 35 ಕೋಟಿ ರೂ.ಗಳಿಗೆ ಮಾರಾಟವಾಗಿವೆ ಎಂಬ ಮಾಹಿತಿ ಕೇಳಿಬಂದಿದೆ.
ಕೊನೆಗೂ ಮಹೇಶ್ ಬಾಬು ಅವರಿಗೆ ಕನ್ನಡ ಹೇಳಿಕೊಟ್ಟ ರಶ್ಮಿಕಾ ಮಂದಣ್ಣ!
ಇನ್ನು, ಮಹೇಶ್ ಬಾಬು ಕೊನೆಯದಾಗಿ 'ಸರಿಲೇರು ನೀಕೆವ್ವರು' ಚಿತ್ರದಲ್ಲಿ ಆರ್ಮಿ ಆಫೀಸರ್ ಆಗಿ ಕಾಣಿಸಿಕೊಂಡಿದ್ದರು. ಚಿತ್ರಕ್ಕೆ ಅನಿಲ್ ರವಿಪುಡಿ (RaviPudi) ಆಕ್ಷನ್ ಕಟ್ ಹೇಳಿದ್ದರು. ಶ್ರೀ ವೆಂಕಟೇಶ್ವರ ಕ್ರಿಯೇಷನ್ಸ್ನಲ್ಲಿ ಎ.ಕೆ.ಎಂಟರ್ಟೈನ್ಮೆಂಟ್ ಮತ್ತು ಜಿಎಮ್ಬಿ ಎಂಟರ್ಟೈನ್ಮೆಂಟ್ ಜಂಟಿಯಾಗಿ ಚಿತ್ರಕ್ಕೆ ಬಂಡವಾಳ ಹೂಡಿದ್ದರು. ರತ್ನವೇಲು ಛಾಯಾಗ್ರಹಣ ಹಾಗೂ ದೇವಿಶ್ರೀ ಪ್ರಸಾದ್ (DeviSri Prasad) ಸಂಗೀತ ಸಂಯೋಜನೆ ಈ ಚಿತ್ರದಲ್ಲಿತ್ತು. ರಶ್ಮಿಕಾ ಮಂದಣ್ಣ, ವಿಜಯಶಾಂತಿ, ಪ್ರಕಾಶ್ ರಾಜ್, ಸಂಗೀತಾ, ರಾಜೇಂದ್ರ ಪ್ರಸಾದ್ ಸೇರಿದಂತೆ ಮುಂತಾದವರು ಚಿತ್ರದ ತಾರಾಬಳಗದಲ್ಲಿದ್ದರು. ಈ ಚಿತ್ರವು 'ಮೇಜರ್ ಅಜಯ್ ಕೃಷ್ಣ' (Major Ajay Krishna) ಎಂಬ ಶೀರ್ಷಿಕೆಯಲ್ಲಿ ಕನ್ನಡಕ್ಕೆ ಡಬ್ ಆಗಿತ್ತು.