ಕನ್ನಡ ಹೋರಾಟಗಾರರ ಬಗ್ಗೆ ಅವಹೇಳನಕಾರಿ ಪದ ಬಳಕೆಗೆ ವಿರೋಧ.ಪೆಂಟಗನ್‌ ಸಿನಿಮಾದ ಒಂದು ಕಥೆಗೆ ರೂಪೇಶ್‌ ರಾಜಣ್ಣ ಆಕ್ಷೇಪ

ಗುರುರಾಜ ದೇಶಪಾಂಡೆ ನಿರ್ಮಾಣದಲ್ಲಿ ಐವರು ನಿರ್ದೇಶಕರ ಆ್ಯಂಥಾಲಜಿ ‘ಪೆಂಟಗನ್‌’ ಸಿನಿಮಾದ ಒಂದು ಕತೆಯ ಟೀಸರ್‌ ಬಿಡುಗಡೆಯಾಗಿದೆ. ಇದನ್ನು ಗುರುರಾಜ ದೇಶಪಾಂಡೆ ನಿರ್ದೇಶಿಸಿದ್ದಾರೆ. ಈ ಭಾಗದಲ್ಲಿ ಕನ್ನಡ ಹೋರಾಟಗಾರರ ಬಗ್ಗೆ ರೋಲ್‌ಕಾಲ್‌ ಎಂಬ ಅವಹೇಳನಕಾರಿ ಪದ ಬಳಕೆ ಆಗಿದೆ ಎಂದು ಈ ಸಿನಿಮಾದಲ್ಲಿ ನಟಿಸಿರುವ ಕನ್ನಡ ಹೋರಾಟಗಾರ ರೂಪೇಶ್‌ ರಾಜಣ್ಣ ಹಾಗೂ ಅಶ್ವಿನಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

Add Asianetnews Kannada as a Preferred SourcegooglePreferred

‘ಈ ಟೀಸರ್‌ ನೋಡುತ್ತಿದ್ದರೆ ನಿರ್ದೇಶಕರು ಆಧಾರವಿಲ್ಲದೇ ಕನ್ನಡ ಹೋರಾಟಗಾರರ ಬಗ್ಗೆ ಅವಹೇಳನದ ಮಾತು ಹೇಳಿದಂತಿದೆ. ಅವರಲ್ಲಿ ದಾಖಲೆಗಳಿದ್ದರೆ ಆ ವ್ಯಕ್ತಿಯ ಹೆಸರನ್ನೇ ಬಳಸಲಿ. ಗಾಳಿಯಲ್ಲಿ ಗುಂಡು ಹಾರಿಸುವಂಥಾ ಪ್ರವೃತ್ತಿ ಯಾಕೆ?’ ಎಂದು ಟೀಸರ್‌ ಬಿಡುಗಡೆ ಬಳಿಕ ರೂಪೇಶ್‌ ಪ್ರಶ್ನಿಸಿದರು. ಇದಕ್ಕೆ ಸಾಥ್‌ ನೀಡಿದ ನಟಿ ಅಶ್ವಿನಿ, ‘ನೆಲ, ಭಾಷೆ ಮೇಲಿನ ಪ್ರೀತಿಗಾಗಿ ಅನೇಕ ಅವಮಾನ ಎದುರಿಸಿದ್ದೇವೆ. ಬೂಟುಗಾಲಿನ ಒದೆತವನ್ನೂ ತಿನ್ನುತ್ತೀವಿ. ನಾವು ರೋಲ್‌ಕಾಲ್‌ ಮಾಡೋರಲ್ಲ. ಈ ಪದಬಳಕೆಗೆ ಸ್ಪಷ್ಟನೆ ಕೊಡಿ’ ಎಂದು ಆಕ್ರೋಶ ವ್ಯಕ್ತಪಡಿಸಿದರು. ಕೊನೆಗೆ ರೂಪೇಶ್‌ ಹಾಗೂ ಅಶ್ವಿನಿ ಅವರಿಗೆ ಸಿನಿಮಾ ತೋರಿಸಿ ಸ್ಪಷ್ಟಚಿತ್ರಣ ನೀಡೋದಾಗಿ ಗುರುರಾಜ ದೇಶಪಾಂಡೆ ಹೇಳುವ ಮೂಲಕ ಈ ಪ್ರಕರಣಕ್ಕೆ ತಾತ್ಕಾಲಿಕ ರಿಲೀಫ್‌ ಸಿಕ್ಕಿತು.

ಟ್ವಿಟರ್ ಸಸ್ಪೆಂಡ್ ಆದದ್ದು ದೈವದ ಬಗ್ಗೆ ಬರೆದ ಪೋಸ್ಟ್‌ನಿಂದಲ್ಲ; ಊಹಾಪೋಹಗಳಿಗೆ ನಟ ಕಿಶೋರ್ ಬ್ರೇಕ್

ಟೀಸರ್‌ ಬಗ್ಗೆ ಸ್ಪಷ್ಟನೆ ನೀಡಿದ ಗುರುರಾಜ ದೇಶಪಾಂಡೆ, ‘ಟೀಸರ್‌ನಲ್ಲಿ ಸಾಮಾನ್ಯ ಜನರ ಪ್ರಶ್ನೆಗಳನ್ನು ನೀಡಲಾಗಿದೆ. ಇದಕ್ಕೆ ಉತ್ತರ ಸಿನಿಮಾದಲ್ಲಿ ಸಿಗಲಿದೆ. ಬೇರೆ ಬೇರೆ ಇಲಾಖೆಗಳ ಭ್ರಷ್ಟತೆ ಬಗ್ಗೆ ಪ್ರಶ್ನಿಸಿದರೆ ಸುಮ್ಮನಿರುವವರು ಹೋರಾಟಗಾರರನ್ನು ಪ್ರಶ್ನಿಸಿದಾಗ ತಗಾದೆ ತೆಗೆಯೋದ್ಯಾಕೆ? ಅವರಲ್ಲೂ ಎಲ್ಲರೂ ಸಾಚಾಗಳಾಗಿ ಇರೋದಿಲ್ಲವಲ್ಲ’ ಎಂದರು.

ಕನ್ನಡ ಹೋರಾಟಗಾರನಾಗಿ ಮುಖ್ಯಪಾತ್ರದಲ್ಲಿ ನಟಿಸಿರುವ ನಟ ಕಿಶೋರ್‌, ‘ಟೀಸರ್‌ ಆಗಲಿ ಸಿನಿಮಾ ಆಗಲಿ ನಮ್ಮನ್ನು ಕೆಣಕುವಂತಿರಬೇಕು. ಈ ಸಿನಿಮಾದಲ್ಲೊಂದು ಫ್ರೆಶ್‌ ಕತೆ ಇದೆ. ಕನ್ನಡ ಮಾತಾಡೋ ಪ್ರತಿಯೊಬ್ಬನೂ ಕನ್ನಡ ಹೋರಾಟಗಾರನೇ. ನಾವು ಮೊದಲು ಮನುಷ್ಯರಾಗಬೇಕು. ನಮ್ಮ ಅಸ್ಮಿತೆ ಕನ್ನಡ. ಹೀಗಾಗಿ ನಾನೂ ಕನ್ನಡವೇ. ಇಂಥಾ ಪ್ರಜ್ಞೆಯುಳ್ಳ ಸಿನಿಮಾ ತಂಡ ಕನ್ನಡ ಹೋರಾಟಗಾರರಿಗೆ ಅವಮಾನ ಮಾಡೋ ಕೆಲಸ ಮಾಡಲ್ಲ. ಈ ಚಿತ್ರದ ಭಾಗವಾಗೋದಕ್ಕೆ ಹೆಮ್ಮೆ ಇದೆ’ ಎಂದರು.

ಸಾಯಿ ಪಲ್ಲವಿಯಿಂದ ಮಾಧ್ಯಮದವರು ಕಲಿಯುವುದು ಸಾಕಷ್ಟಿದೆ; ನಟ ಕಿಶೋರ್

ಬೈಕ್‌ ಏರಿ ಬಂದ ಕಿಶೋರ್‌

ಟೀಸರ್‌ ಲಾಂಚ್‌ಗೆ ಬಹುಭಾಷಾ ನಟ ಕಿಶೋರ್‌ ಬೈಕ್‌ ಏರಿ ಬಂದಿದ್ದು ಕುತೂಹಲಕ್ಕೆ ಕಾರಣವಾಯ್ತು. ‘ಕಿಶೋರ್‌ ಬಹಳ ಸಿಂಪಲ್‌ ಮನುಷ್ಯ. ನಾವು ನೀಡುವ ವಾಹನ ವ್ಯವಸ್ಥೆ ನಿರಾಕರಿಸಿ ಬೈಕ್‌ನಲ್ಲಿ ಶೂಟಿಂಗ್‌ಗೆ ಬರುತ್ತಿದ್ದರು. ಕ್ಯೂನಲ್ಲಿ ನಿಂತು ಊಟ ತಗೊಂಡು ತಾವೇ ಪ್ಲೇಟ್‌ ತೊಳೆದು ಇಡುತ್ತಿದ್ದರು. ಅವರಂಥಾ ನಟ ಹೀಗೆ ಮಾಡಿದಾಗ ನಾವು ಹೇಗಿರಬೇಕೆಂದು ತೋಚದೆ ಪೇಚಾಡುತ್ತಿದ್ದೆವು’ ಎಂದು ಕಿಶೋರ್‌ ಸಿಂಪ್ಲಿಸಿಟಿ ಬಗ್ಗೆ ಗುರುರಾಜ್‌ ದೇಶಪಾಂಡೆ ಹೇಳಿದರು.