ಸತ್ಯಜಿತ್‌ಗೆ ನೆರವಿಗೆ ನಿಂತ ಕಾಗೆಮೊಟ್ಟೆಚಿತ್ರತಂಡ ಮೊದಲ ದಿನದ ಮೊದಲ ಶೋ ಗಳಿಕೆ ಸತ್ಯಜಿತ್‌ಗೆ ನೀಡಲು ನಿರ್ಧಾರ

ಕಳೆದ ವಾರ ಬಿಡುಗಡೆಯಾದ ‘ಕಾಗೆಮೊಟ್ಟೆ’(Kagemotte) ಚಿತ್ರ ಯಶಸ್ವಿಯಾಗಿ ಪ್ರದರ್ಶನಗೊಳ್ಳುತ್ತಿದೆ ಎಂದು ಚಿತ್ರತಂಡ ಹೇಳಿಕೊಂಡಿದೆ. ಈ ಸಂದರ್ಭದಲ್ಲಿ ಚಿತ್ರದ ಪ್ರಮುಖ ಪಾತ್ರದಲ್ಲಿ ನಟಿಸಿರುವ ಹಿರಿಯ ನಟ ಸತ್ಯಜಿತ್‌(Sathyajith) ಅನಾರೋಗ್ಯದಿಂದ ಆಸ್ಪತ್ರೆ ಸೇರಿದ್ದು, ಅವರ ಚಿಕಿತ್ಸೆಗೆ(Treatment) ತಮ್ಮ ಕೈಲಾದಷ್ಟುನೆರವು ನೀಡಲು ‘ಕಾಗೆಮೊಟ್ಟೆ’ ಚಿತ್ರತಂಡ ನಿರ್ಧರಿಸಿದೆ.

‘ನಮ್ಮ ಸಿನಿಮಾ ಬಿಡುಗಡೆ ಆಗಿರುವ ತ್ರಿವೇಣಿ ಚಿತ್ರಮಂದಿರದ ಮೊದಲ ದಿನದ ಮೊದಲ ಶೋನ ಗಳಿಕೆ ಎಷ್ಟುಬಂದಿದೆಯೋ ಅಷ್ಟೂಹಣವನ್ನು ಸತ್ಯಜಿತ್‌ ಅವರಿಗೆ ನೀಡುತ್ತಿದ್ದೇವೆ. ಸಿನಿಮಾ ಮಾಡುವಾಗ ಇದ್ದ ನಂಬಿಕೆ ಈಗ ನಿಜವಾಗಿದೆ.

ಚಿತ್ರಮಂದಿರಗಳಿಗೆ ಬರುವ ಪ್ರೇಕ್ಷಕರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ನಾವು ನಿರೀಕ್ಷೆ ಮಾಡಿದ್ದು ಶೇ.30ರಷ್ಟುಪ್ರೇಕ್ಷಕರನ್ನು. ಈಗ ಶೇ.40ರಷ್ಟುಪ್ರೇಕ್ಷಕರು ಥಿಯೇಟರ್‌ಗಳಿಗೆ ಬರುತ್ತಿದೆ’ ಎಂದು ಹೇಳಿಕೊಳ್ಳುತ್ತಾರೆ ನಿರ್ದೇಶಕ ಚಂದ್ರಹಾಸ್‌. ಗುರುರಾಜ್‌ ಜಗ್ಗೇಶ್‌, ಹೇಮಂತ್‌, ಮಾದೇಶ್‌, ತನುಜಾ, ಸತ್ಯಜಿತ್‌, ಶರತ್‌ ಲೋಹಿತಾಶ್ವ, ಸೌಜನ್ಯ, ಸರ್ದಾರ್‌ ಸತ್ಯ ನಟನೆಯ ಚಿತ್ರವಿದು.

ಹಿರಿಯ ನಟ ಸತ್ಯಜಿತ್ ಹಾರ್ಟ್‌ ಸ್ಟ್ರೋಕ್ ಹಾಗೂ ಲಿವರ್ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ. ಸತ್ಯಜಿತ್ ಅವರ ಆರೋಗ್ಯ ಹದಗೆಟ್ಟಿದ್ದು, ಬೋರಿಂಗ್ ಆಸ್ಪತ್ರೆಯಲ್ಲಿ ಐಸಿಯುನಲ್ಲ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ನಾಲ್ಕು ವರ್ಷಗಳ ಹಿಂದೆ ಗ್ಯಾಂಗ್ರಿನ್‌ನಿಂದ ಎರಡು ಕಾಲುಗಳನ್ನು ಕಳೆದುಕೊಂಡಿದ್ದರು.

ಸತ್ಯಜಿತ್ ವಿರುದ್ಧ ಮಗಳು ಅಖ್ತರ್ ಸ್ವಲೇಹಾ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು ಸುದ್ದಿಯಾಗಿತ್ತು. ನಮ್ಮ ತಂದೆ ಹಣಕ್ಕಾಗಿ ಪೀಡಿಸುತ್ತಿದ್ದಾರೆ. ಮನೆಗೆ ರೌಡಿಗಳನ್ನು ಬಿಟ್ಟು ಬೆದರಿಕೆ ಹಾಕಿಸುತ್ತಿದ್ದಾರೆ. ನಾವು ತಿಂಗಳಿಗೆ 1 ಲಕ್ಷ ರೂ ಕೊಟ್ಟರೂ, ಇನ್ನಷ್ಟು ಹಣಕ್ಕೆ ಡಿಮ್ಯಾಂಡ್ ಇಟ್ಟಿದ್ದಾರೆ ಎಂದು ಮಗಳು ಸ್ವಲೇಹಾ ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.