Asianet Suvarna News Asianet Suvarna News

'ಬಂಧನ 2' ಸಿನಿಮಾ ಶೂಟಿಂಗ್ ನಿಲ್ಲಿಸಲು ನಾನೇ ಹೇಳಿದ್ದು; ಸಂಚಲನ ಸೃಷ್ಟಿಸಿದ ಆದಿತ್ಯ ಹೇಳಿಕೆ!

ಮುಖ್ಯವಾಗಿ ನಾನು ಬಂಧನ ಸಿನಿಮಾ ಬಗ್ಗೆ ಹೇಳಬೇಕು ಎಂದರೆ, ಅದೊಂದು ಕಲ್ಟ್. ಅದನ್ನು ಮತ್ತೆ ರೀಮೇಕ್ ಮಾಡಲಾಗದು. ಆದರೆ, ನನ್ನ ತಂದೆಯವರೇ 'ಬಂಧನ 2' ಮಾಡಬಹುದು, ಮಾಡೋಣ ಅಂತ ಶುರು ಮಾಡಿದ್ವಿ.

Sandalwood actor Aditya talks about Bandhana 2 movie and its discontinuation srb
Author
First Published May 3, 2024, 4:19 PM IST | Last Updated May 3, 2024, 4:19 PM IST

ಸ್ಯಾಂಡಲ್‌ವುಡ್ ನಟ ಆದಿತ್ಯ ( Aditya) ಸಂದರ್ಶನವೊಂದು ಸದ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಎಸ್‌ವಿ ರಾಜೇಂದ್ರ ಸಿಂಗ್ ಬಾಬು ನಿರ್ದೇಶನ, ವಿಷ್ಣುವರ್ಧನ್-ಸುಹಾಸಿನಿ ನಟನೆಯ 'ಬಂಧನ' ಚಿತ್ರವು 1984 ರಂದು (24 August 1984) ಬಿಡುಗಡೆಯಾಗಿ ಸೂಪರ್ ಹಿಟ್ ದಾಖಲಿಸಿತ್ತು. ಆ ಸಿನಿಮಾದಲ್ಲಿ ಡಾ ಹರೀಶ್‌ ಪಾತ್ರದಲ್ಲಿ ನಟ ವಿಷ್ಣುವರ್ಧನ್ ನಟನೆ ಜನಮೆಚ್ಚುಗೆ ಗಳಿಸಿತ್ತು. ಬಂಧನ ಚಿತ್ರವು ಸಾಕಷ್ಟು ಗಳಿಕೆ ಮಾಡಿದ್ದಷ್ಟೇ ಅಲ್ಲ, ಅಂದು ಹಲವು ದಾಖಲೆಗಳನ್ನು ಮುರಿದಿತ್ತು. ಅದರ ಮುಂದಿನ ಭಾಗ 'ಬಂಧನ 2' ಬರಲಿದೆ ಎಂದು ಬಹಳಷ್ಟು ಬಾರಿ ಆಗಾಗ ಸುದ್ದಿಯಾಗುತ್ತಲೇ ಇತ್ತು. 

ಆ ಬಗ್ಗೆ ನಟ, 'ಬಂಧನ' ಸಿನಿಮಾ ನಿರ್ದೇಶಕ ಎಸ್‌ವಿ ರಾಜೇಂದ್ರ ಸಿಂಗ್ ಬಾಬು ಮಗ ನಟ ಆದಿತ್ಯ ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ. 'ನನ್ನ ತಂದೆ ನಿರ್ದೇಶನ ಮಾಡಿದ್ದ ಹಲವು ಚಿತ್ರಗಳು ಹಾಗೂ ಕನ್ನಡದಲ್ಲಿ ಬೇರೆಯವರು ಮಾಡಿರುವ ಹಲವಾರು ಸಿನಿಮಾಗಳು ಅಂದಿನ ಕಾಲದಲ್ಲಿ ಅಪಾರ ಜನಮೆಚ್ಚುಗೆ ಗಳಿಸಿದ್ದವು. ಅವುಗಳನ್ನು ಈಗ ರೀಮೇಕ್ ಮಾಡುವುದಾಗಲೀ ಅಥವಾ ಅದರ ಸೀಕ್ವೆಲ್ ಮಾಡುವುದಾಗಲೀ ತುಂಬಾ ಕಷ್ಟ. ಅಂಥವುಗಳನ್ನು ಮೂಲ ಚಿತ್ರದ ನಿರ್ದೇಶಕರೇ ಮಾಡಿದರೆ ಸರಿ, ಮಿಕ್ಕವರು ಅವುಗಳನ್ನು ಟಚ್ ಮಾಡುವುದು ಅಷ್ಟು ಸಮಂಝಸವಲ್ಲ ಎನ್ನುವುದು ನನ್ನ ಭಾವನೆ. 

ಮುಖ್ಯವಾಗಿ ನಾನು ಬಂಧನ ಸಿನಿಮಾ ಬಗ್ಗೆ ಹೇಳಬೇಕು ಎಂದರೆ, ಅದೊಂದು ಕಲ್ಟ್. ಅದನ್ನು ಮತ್ತೆ ರೀಮೇಕ್ ಮಾಡಲಾಗದು. ಆದರೆ, ನನ್ನ ತಂದೆಯವರೇ 'ಬಂಧನ 2' ಮಾಡಬಹುದು, ಮಾಡೋಣ ಅಂತ ಶುರು ಮಾಡಿದ್ವಿ. ಆದರೆ, ಎರಡು ದಿನಗಳಷ್ಟೇ ಶೂಟ್ ಮಾಡಿದ್ದು. ಬಳಿಕ ನಾನೇ ನನ್ನ ತಂದೆಯವರಿಗೆ 'ಬೇಡ' ಎಂದು ಹೇಳಿಬಿಟ್ಟೆ. ಯಾಕೋ ನನಗೆ ಈ ಸಿನಿಮಾ ಮುಂದುವರೆಸುವುದು ಬೇಡ ಅನ್ನಿಸಿಬಿಟ್ಟಿತು. 'ಬಂಧನ 2' ಸಿನಿಮಾ ಮಾಡುವ ಮೂಲಕ ನಾವು ಈ ಮೊದಲು ಮಾಡಿದ್ದ 'ಬಂಧನ' ಸಿನಿಮಾಗೆ ಕೆಟ್ಟ ಹೆಸರು ತರಬಹುದು ಎಂದು ಅನ್ನಿಸಿತು. ಅದಕ್ಕೇ ಬೇಡವೇ ಬೇಡ  ಅಂದು ಬಿಟ್ಟೆ' ಎಂದರು.

ಅಂದಹಾಗೆ, ಆದಿತ್ಯ ನಾಯಕ ನಟರಾಗಿ ನಟಿಸಿರುವ 'ಕಾಂಗರೂ' ಸಿನಿಮಾ ಈ ಶುಕ್ರವಾರ (03 ಮೇ 2024) ಬಿಡುಗಡೆಯಾಗಿದೆ. ಆರೋಹ ಪ್ರೊಡಕ್ಷನ್ಸ್ ಲಾಂಛನದಲ್ಲಿ ನಿರ್ಮಾಣದ ಈ ಸಿನಿಮಾವನ್ನು ಕಿಶೋರ್ ಮೇಗಳಮನೆ ನಿರ್ದೇಶನ ಮಾಡಿದ್ದಾರೆ. ಚೆನ್ನಕೇಶವ ಬಿಸಿ, ನರಸಿಂಹಮೂರ್ತಿ ಚಕ್ರಭಾವಿ, ರಮೇಶ್‌ ಬಂಡೆ, ಸ್ವಾಮಿ ಚಕ್ರಭಾವಿ, ರವಿ ಕೀಲಾರ ಮಂಡ್ಯ ಹಾಗೂ ಕೆಜಿಆರ್ ಗೌಡ ಎಂಬವರು ಈ ಸಿನಿಮಾಕ್ಕೆ ಬಂಡವಾಳ ಹೂಡಿದ್ದಾರೆ. ಕಾಂಗರೂ ಸಿನಿಮಾದಲ್ಲಿ ಆದಿತ್ಯ ಜೋಡಿಯಾಗಿ ರಂಜನಿ ರಾಘವನ್ ಅಭಿನಯಿಸಿದ್ದಾರೆ. ಬೆಂಗಳೂರು, ಕೊಪ್ಪ ಹಾಗೂ ಹೊರನಾಡು, ಶೃಂಗೇರಿ, ಚಿಕ್ಕಮಗಳೂರು ಮುಂತಾದ ಕಡೆ ಸಿನಿಮಾದ ಶೂಟಿಂಗ್‌ ಮಾಡಲಾಗಿದೆ. 

Latest Videos
Follow Us:
Download App:
  • android
  • ios