ಕನಸು ನನಸಾಗಿ ಐದು ವರ್ಷ: ಕುತೂಹಲದ ಪೋಸ್ಟರ್ ಶೇರ್ ಮಾಡಿದ ರಿಷಬ್ ಶೆಟ್ಟಿ
`ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಕಾಸರಗೋಡು' ಚಿತ್ರಕ್ಕೆ ಐದು ವರ್ಷಗಳಾಗಿದ್ದು, ಈ ಸಂದರ್ಭದಲ್ಲಿ ರಿಷಬ್ ಶೆಟ್ಟಿ ಅವರು ವಿಶೇಷ ಪೋಸ್ಟ್ ಶೇರ್ ಮಾಡಿಕೊಂಡಿದ್ದಾರೆ.
ಸ್ಯಾಂಡಲ್ವುಡ್ ಸ್ಟಾರ್ ರಿಷಬ್ ಶೆಟ್ಟಿ ಇತ್ತೀಚಿನ ದಿನಗಳಲ್ಲಿ ಬಹಳ ಸುದ್ದಿಯಲ್ಲಿರುವ ನಟ. ಈ ಹಿಂದೆ ಅವರು ಹಲವಾರು ಚಿತ್ರಗಳಲ್ಲಿ ನಟಿಸಿದ್ದರೂ, ಚಿತ್ರಗಳನ್ನು ನಿರ್ದೇಶನ ಮಾಡಿದ್ದರೂ, ಅವರು ಕರ್ನಾಟಕದಲ್ಲಿ ಮಾತ್ರವಲ್ಲದೇ ವಿದೇಶಗಳಲ್ಲಿಯೂ ಮಿಂಚಿದ್ದು ಕಾಂತಾರಾ ಚಿತ್ರದಿಂದಾಗಿದೆ. ನಟನಾಗಿ, ನಿರ್ದೇಶಕನಾಗಿ, ನಿರ್ಮಾಪಕನಾಗಿ ಗುರುತಿಸಿಕೊಂಡಿರುವ ರಿಷಬ್ ಶೆಟ್ಟಿ ಅವರ ಖ್ಯಾತಿ ವಿಶ್ವಮಟ್ಟಕ್ಕೆ ಹಬ್ಬಿ ವರ್ಷಗಳೇ ಕಳೆದಿವೆ. ಆದರೆ ಕಾಂತಾರ ಚಿತ್ರ ಸೃಷ್ಟಿಸಿರೋ ಹಲ್ಚಲ್ ಅಷ್ಟಿಷ್ಟಲ್ಲ. ಇತ್ತೀಚಿನ ದಿನಗಳಲ್ಲಿ ವಾಸ್ತವಕ್ಕೆ ಹತ್ತಿರವಲ್ಲದ, ಕಾಲ್ಪನಿಕ ಕಥೆಗಳನ್ನೇ ಇಟ್ಟುಕೊಂಡು ನೂರಾರು ಕೋಟಿ ಸುರಿದು, ದೊಡ್ಡ ದೊಡ್ಡ ತಾರಾಬಳಗವನ್ನು ಹಾಕಿಕೊಂಡು ಮಾಡುವ ಚಿತ್ರಗಳ ಸಂಖ್ಯೆ ಹೆಚ್ಚುತ್ತಿವೆ. ಇವುಗಳ ಪೈಕಿ ಕೆಲವೊಂದು ಬ್ಲಾಕ್ಬಸ್ಟರ್ ಎಂದು ಸಾಬೀತಾಗುವುದೂ ಇದೆ. ಅದೇ ಇನ್ನೊಂದೆಡೆ ನೂರಾರು ಕೋಟಿ ರೂಪಾಯಿ ಬಂಡವಾಳ ಹಾಕಿರುವ ಚಿತ್ರಗಳು ತೋಪೆದ್ದು ಹೋಗುವುದೂ ಇದೆ. ಇಂಥ ಸ್ಥಿತಿಯಲ್ಲಿ, ಅತ್ಯಂತ ಕಡಿಮೆ ಬಂಡವಾಳದ ಚಿತ್ರಗಳೂ ಜಗತ್ಪ್ರಸಿದ್ಧ ಆಗಬಹುದು ಎನ್ನುವುದನ್ನು ತೋರಿಸಿಕೊಟ್ಟವರು ರಿಷಬ್ ಶೆಟ್ಟಿ.
ಇಂತಿಪ್ಪ ನಟನಿಗೆ ಆಗಸ್ಟ್ 23 ತುಂಬಾ ಮಹತ್ವದ ದಿನ. ಹೌದು ಕುಂದಾಪುರದಲ್ಲಿ ಜನಿಸಿದ ಇವರು ಬೆಂಗಳೂರಿನ ಸರಕಾರಿ ಚಿತ್ರ ಮತ್ತು ದೂರದರ್ಶನ ಸಂಸ್ಥೆಯಲ್ಲಿ ಚಿತ್ರ ನಿರ್ದೇಶನದಲ್ಲಿ ಡಿಪ್ಲೋಮಾ ಹೊಂದಿದ್ದಾರೆ. ನಂತರ ಕೆಲಕಾಲ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ ಇವರು ಹಾಗೇ ಕೆಲವು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ರಂಗಭೂಮಿ ಹಿನ್ನಲೆಯಿಂದ ಬಂದ ಇವರು ಯಕ್ಷಗಾನ ಕಲೆಯಲ್ಲೂ ಪರಿಣಿತಿ ಪಡೆದಿದ್ದಾರೆ. ಆರಂಭದಲ್ಲಿ ನಟನಾಗಿದ್ದ ಅವರು, `ರಿಕ್ಕಿ' ಚಿತ್ರದಿಂದ ಚಿತ್ರ ನಿರ್ದೇಶನಕ್ಕೆ ಇಳಿದರು. `ಕಿರಿಕ್ ಪಾರ್ಟಿ'ಯಂತಹ ಸೂಪರ್ ಹಿಟ್ ಚಿತ್ರವನ್ನೂ ಕೊಟ್ಟರು. ಆದರೆ ಇವರ ಕನಸು ನನಸಾಗಿದ್ದು, ಕೇರಳದ ಕಾಸರಗೋಡುವಿನಲ್ಲಿ ಕನ್ನಡ ಶಾಲೆಗಳ ಪರಿಸ್ಥಿತಿ ಕುರಿತು ನಿರ್ದೇಶಿಸಿದ ಚಿತ್ರ `ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಕಾಸರಗೋಡು'. (Sarkari Hiriya Prarthamika Shale) ಈ ಚಿತ್ರ ಪ್ರೇಕ್ಷಕ ಮತ್ತು ವಿಮರ್ಶಕರಿಂದ ವ್ಯಾಪಕ ಮನ್ನಣೆ ಪಡೆಯಿತು. ಕನಸು ಕಂಡ ಭಾಷೆಯಲ್ಲಿ ಮಗುವಿಗೆ ಶಿಕ್ಷಣ ಸಿಗಬೇಕೆಂಬ ಆಶಯ, ಕನಸು ಕಂಡ ಕಥೆಯನ್ನು ಜಗಕ್ಕೆ ಹೇಳಬೇಕೆಂಬ ಆಕಾಂಕ್ಷೆ, ಇದೆರಡೂ ಒಂದಾಗಿ ಕನಸೊಂದು ಸಿನಿಮಾವಾಗಿ ತೆರೆ ಮೇಲೆ ಮೂಡಿದ ಆ ದಿನಕ್ಕೆ ಈಗ ಐದು ವರ್ಷ. ಹೌದು. ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಕಾಸರಗೋಡು ಚಿತ್ರಕ್ಕೆ ಐದು ವರ್ಷ ಮುಗಿದಿದ್ದು, ಈ ಕುರಿತು ಸಂಭ್ರಮವನ್ನು ರಿಷಬ್ ಶೆಟ್ಟಿ ಇನ್ಸ್ಟಾಗ್ರಾಮ್ನಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ಹೆಣ್ಮಕ್ಳು ಕೆಲ್ಸಕ್ಕೆ ಹೋಗೋದು ಇದ್ಕೇನಾ? ಲಾಂಡ್ರಿವಾಲಾ ಜತೆಗಿನ ಅನುಭವ ಬಿಚ್ಚಿಟ್ಟ ನಟಿ ಮಾಳವಿಕಾ ಅವಿನಾಶ್
ರಿಷಬ್ ಶೆಟ್ಟಿ (Rishab Shetty) ಅವರು ನಟನಾಗಿ, ನಿರ್ದೇಶಕನಾಗಿ, ನಿರ್ಮಾಪಕನಾಗಿ ಗುರುತಿಸಿಕೊಂಡಿದ್ದಾರೆ. ‘ಕಾಂತಾರ’ ಚಿತ್ರದಿಂದ ಅವರ ಖ್ಯಾತಿ ವಿಶ್ವಮಟ್ಟಕ್ಕೆ ಹಬ್ಬಿದೆ. ಅವರ ಮುಂದಿನ ಚಿತ್ರಗಳ ಬಗ್ಗೆ ನಿರೀಕ್ಷೆ ಹೆಚ್ಚಿದೆ. ರಿಷಬ್ ಶೆಟ್ಟಿ ಅವರು ನಡೆದುಬಂದ ಹಾದಿಯನ್ನು ಮರೆತಿಲ್ಲ. ಇಂದು (ಆಗಸ್ಟ್ 23) ಅವರಿಗೆ ವಿಶೇಷ ದಿನ. ರಿಷಬ್ ವೃತ್ತಿ ಜೀವನಕ್ಕೆ ಮೈಲೇಜ್ ನೀಡಿದ ‘ಸಹಿಪ್ರಾ ಶಾಲೆ ಕಾಸರಗೋಡು’ ಚಿತ್ರ ತೆರೆಗೆ ಬಂದು ಐದು ವರ್ಷಗಳು ಕಳೆದಿವೆ. ಆ ಬಗ್ಗೆ ರಿಷಬ್ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ.
ಮಕ್ಕಳು ಕಡಿಮೆ ಇರುವ ಕನ್ನಡ ಮಾಧ್ಯಮ ಶಾಲೆಗಳನ್ನು ಮುಚ್ಚುವ ಆದೇಶ ಬಂದಿತ್ತು. ಇದರಿಂದ ಅನೇಕ ಮಕ್ಕಳಿಗೆ ಸಮಸ್ಯೆ ಆಯಿತು. ಇನ್ನು ಗಡಿ ಭಾಗದಲ್ಲಿ ಮಾತೃಭಾಷೆಯಲ್ಲಿ (mother tongue) ಶಿಕ್ಷಣ ಸಿಗುತ್ತಿಲ್ಲ ಎನ್ನುವ ಆರೋಪ ಕೇಳಿ ಬಂತು. ಈ ಸಮಸ್ಯೆಗಳನ್ನು ಇಟ್ಟುಕೊಂಡು ರಿಷಬ್ ಶೆಟ್ಟಿ ಅವರು ‘ಸಹಿಪ್ರಾ ಶಾಲೆ ಕಾಸರಗೋಡು’ ಚಿತ್ರವನ್ನು ತೆರೆಗೆ ತಂದಿದ್ದರು. ಇನ್ನೊಂದು ಕುತೂಹಲದ ಅಂಶವೆಂದರೆ ಈ ಚಿತ್ರದಲ್ಲಿ ಮಕ್ಕಳೇ ಹೈಲೈಟ್. ಬಹುತೇಕ ಮಕ್ಕಳೇ ನಟಿಸಿದ್ದಾರೆ. ಪ್ರಮೋದ್ ಶೆಟ್ಟಿ, ಅನಂತ್ ನಾಗ್ ಮೊದಲಾದವರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಈ ಚಿತ್ರಕ್ಕೆ ಅಭೂತಪೂರ್ವ ಪ್ರತಿಕ್ರಿಯೆ ಸಿಕ್ಕಿತು. ರಾಜ್ಯ ಹಾಗೂ ರಾಷ್ಟ್ರ ಪ್ರಶಸ್ತಿಗೂ ಭಾಜನವಾಯಿತು. ಈ ಚಿತ್ರದ ಮೂಲಕ ತಮ್ಮ ಕನಸನ್ನು ನನಸು ಮಾಡಿಕೊಂಡಿದ್ದುದಾಗಿ ರಿಷಬ್ ಹೇಳಿದ್ದಾರೆ. ಈ ಚಿತ್ರಕ್ಕೆ ಐದು ವರ್ಷ ತುಂಬಿದ ಹಿನ್ನೆಲೆಯಲ್ಲಿ ರಿಷಬ್ ಅವರು ಮೇಕಿಂಗ್ ಹಾಗೂ ಸಿನಿಮಾದ ಕೆಲ ಪ್ರಮುಖ ದೃಶ್ಯಗಳನ್ನು ಜೋಡಿಸಿ ವಿಡಿಯೋ ಮಾಡಿ ಶೇರ್ ಮಾಡಿಕೊಂಡಿದ್ದಾರೆ.
ವ್ಹಾ ವ್ಹಾ ಮೈಸೂರು ದೋಸೆಯೇ... ತುಪ್ಪದ ಬೆಡಗಿ ರಾಗಿಣಿ ದ್ವಿವೇದಿ ವಿಡಿಯೋ ವೈರಲ್