ಚಿತ್ರೋತ್ಸವಕ್ಕೆ ದುಂದುವೆಚ್ಚ: ಆರೋಪಕ್ಕೆ ಸಚಿವ ಜಗದೀಶ್ ಶೆಟ್ಟರ್ ಉತ್ತರ!
31ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಹೊಣೆಯನ್ನು ಪ್ರೈವೇಟ್ ಕಂಪನಿಯೊಂದಕ್ಕೆ ವಹಿಸಿದ್ದು, ಕಾರ್ಯಕ್ರಮಕ್ಕೆ ದುಂದು ವೆಚ್ಚ ಮಾಡಲಾಗುತ್ತಿದೆ ಎಂದು ಸಿಎಂ ಬಳಿ ದೂರು ನೀಡಲಾಗಿತ್ತು. ಈ ವಿಚಾರ ಬಗ್ಗೆ ಸಚಿವ ಜಗದೀಶ್ ಶೆಟ್ಟರ್ ಸದನದಲ್ಲಿ ಉತ್ತರಿಸಿದ್ದಾರೆ.
ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಪ್ರತೀ ವರ್ಷವೂ ದೊಡ್ಡ ಮಟ್ಟದಲ್ಲಿ ಹೆಸರು ಮಾಡುತ್ತದೆ. 50ಕ್ಕೂ ಹೆಚ್ಚು ದೇಶಗಳಿಂದ ಸುಮಾರು 200 ಅತ್ಯುತ್ತಮ ಚಿತ್ರಗಳನ್ನು ಈ ಉತ್ಸವದಲ್ಲಿ ಪ್ರದರ್ಶಿಸಲಾಗುತ್ತದೆ. 31ನೇ ಚಲನಚಿತ್ರೋತ್ಸವ ಇದೇ ಮಾರ್ಚ್ 24ರಿಂದ 31ರವರೆಗೆ ನಡೆಯಬೇಕಿತ್ತು. ಆದ, ಇದೇ ಮೊದಲ ಬಾರಿಗೆ ಚಲನ ಚಿತ್ರೋತ್ಸವಕ್ಕೆ ಅನೇಕ ರೀತಿಯಲ್ಲಿ ಅಡೆತಡೆಗಳು ಎದುರಾಗುತ್ತಿರುವುದು.
ಈ ಬಾರಿ ನಡೆಯುತ್ತಿರುವ ಚಿತ್ರೋತ್ಸವ ಉದ್ಘಾಟನೆ ಹಾಗೂ ಇಡೀ ಸಮಾರಂಭಕ್ಕೆ ಮೂರು ಕೋಟಿ ಬಜೆಟ್ ಮೀಸಲಿಡಲಾಗಿದೆ. ಕಾರ್ಯಕ್ರಮದ ಉಸ್ತುವಾರಿ ಖಾಸಗಿ ಸಂಸ್ಥೆಗೆ ನೀಡಲಾಗಿದೆ. ಈ ವಿಚಾರದ ಬಗ್ಗೆ ಸಿಎಂ ಯಡಿಯೂರಪ್ಪ ಅವರಿಗೆ ಕನ್ನಡ ಚಲನಚಿತ್ತರ ನಿರ್ದೇಶಕರು ಪತ್ರ ಬರೆಯುವ ಮೂಲಕ ಬೇಸರದ ಸಂಗತಿ ಹಂಚಿಕೊಂಡಿದ್ದರು. ಈ ಚಿತ್ರೋತ್ಸವವನ್ನು ಕನ್ನಡ ಚಲನಚಿತ್ರ ಅಕಾಡೆಮಿಯೇ ನಡೆಸಬೇಕು ಎಂದೂ ಮನವಿ ಮಾಡಿಕೊಳ್ಳಲಾಗಿತ್ತು. ಈ ವಿಚಾರದ ಬಗ್ಗೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಸಚಿವ ಜಗದೀಶ್ ಶೆಟ್ಟರ್ ಮಾತನಾಡಿದ್ದು, ಸದನದಲ್ಲಿ ಉತ್ತರಿಸಿದ್ದಾರೆ.
ಚಲನಚಿತ್ರೋತ್ಸವದ ದುಂದುವೆಚ್ಚಕ್ಕೆ ಕಡಿವಾಣ: ಸಿಎಂಗೆ ಮನವಿ
ಈ ಕಾರ್ಯಕ್ರಮವನ್ನು ಆಯೋಜಿಸಲು ಹೊರಗುತ್ತಿಗೆ ನೀಡುವುದರುಂದ ಸುಖಾ ಸುಮ್ಮನೆ ಹೆಚ್ಚು ವೆಚ್ಚವಾಗುತ್ತಿದೆ. ಇಂತಹ ಅದ್ಧೂರಿ ಕಾರ್ಯಕ್ರಮಗಳಿಗೆ ಬಾಲಿವುಡ್ ಕಲಾವಿದರನ್ನು ಕರೆಯಿಸಿ ಅವರಿಗೆ ಕೋಟ್ಯಾಂತರ ರೂ. ಸಂಭಾವನೆ ನೀಡಲಾಗುತ್ತಿದೆ. ಈ ರೀತಿ ಕಲಾವಿದರಿಗೆ ಕೋಟಿಗಟ್ಟಲೆ ನೀಡುವ ಅವಶ್ಯಕತೆ ಏನಿದೆ? ಇದರ ಬದಲಾಗಿ ವಿಧಾನಸೌಧದ ಬ್ಯಾಕ್ವೆಂಟ್ ಹಾಲಿನಲ್ಲಿ ಸರಳವಾಗಿ ಕಾರ್ಯಕ್ರಮ ಆಯೋಜಿಸಿ, ಎಂದು ವಿಧಾನ ಪರಿಷತ್ ಸದಸ್ಯ ಮೋಹನ್ ಕುಮಾರ್ ಕೊಂಡಜ್ಜಿ ಸಲಹೆ ನೀಡಿದ್ದರು.
ಇದಕ್ಕೆ ಉತ್ತರಿಸಿದ ಶೆಟ್ಟರ್ ಅವರು ಕೆಲವೊಂದು ಕಾರ್ಯಕ್ರಮಗಳನ್ನು ಗುಣಮಟ್ಟಕ್ಕೆ ತಕ್ಕಂತೆ ಮಾಡಬೇಕಾಗುತ್ತದೆ. ಉದಾಹರಣೆ ಏರ್ ಶೋ ಗಳಂಥ ಕಾರ್ಯಕ್ರಮಗಗಳಿಗೆ ವೆಚ್ಚದ ನೆಪ ಹೇಳಲು ಆಗುವುದಿಲ್ಲ. ಆದರೂ ಸದಸ್ಯರು ಎತ್ತಿರುವ ಈ ಪ್ರಶ್ನೆ ಬಗ್ಗೆ ಸರಕಾರ ಪರಿಶೀಲಿಸುತ್ತದೆ,' ಎಂದು ಪರಿಷತ್ನಲ್ಲಿ ಶೆಟ್ಟರ್ ಉತ್ತರಿಸಿದ್ದಾರೆ.